ಬೆಂಗಳೂರು : ಕಳೆದ 40 ವರ್ಷಗಳಿಂದ ಆಗದೇ ಇರುವ ಈ ವೃಂದ ಮತ್ತು ನೇಮಕಾತಿ ಪರಿಷ್ಕರಣೆಯನ್ನು ಈಗ ಒಂದು ಹಂತಕ್ಕೆ ತಂದಿದ್ದೇವೆ. ಸುಮಾರು 200 ವೃಂದಗಳಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಒಮ್ಮೆಲೆ ಇದನ್ನು ಮಾಡುವುದು ದೊಡ್ಡ ಸವಾಲು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಹೊಸ ಹೊಸ ಹುದ್ದೆಗಳ ಸೃಷ್ಟಿ ಸೇರಿದಂತೆ ಹಲವಾರು ಸಮಸ್ಯೆಗಳ ಮಧ್ಯೆಯೂ ಇದಕ್ಕೊಂದು ಸ್ವರೂಪ ನೀಡಲು ಪ್ರಯತ್ನಿಸಲಾಗುತ್ತಿದೆ. ಇನ್ನೆರಡು ತಿಂಗಳಲ್ಲಿ, ಕಳೆದ 40 ವರ್ಷಗಳಲ್ಲಿ ಆಗದೇ ಇರುವ ಕೆಲಸ ಪೂರ್ಣಗೊಳ್ಳಲಿದೆ ಎಂದು ತಿಳಿಸಿದ್ದಾರೆ.

ವಿಧಾನಪರಿಷತ್ನಲ್ಲಿಂದು ಬಿಜೆಪಿಯ ಎಸ್ ವಿ ಸಂಕನೂರ ಆರೋಗ್ಯ ಇಲಾಖೆಯ ವೈದ್ಯರ ಸಮಸ್ಯೆಗಳ ಬಗ್ಗೆ ಕೇಳಿದ್ದ ಪ್ರಶ್ನೆಗೆ ಉತ್ತರಿಸಿದ ದಿನೇಶ್ ಗುಂಡೂರಾವ್, ಬಿ, ಸಿ, ಡಿ ದರ್ಜೆಯ ಜೇಷ್ಠತಾ ಪಟ್ಟಿಯನ್ನು ಈಗಾಗಲೇ ಮಾಡಲಾಗಿದ್ದು, ಎ ವರ್ಗದ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ ಎಂದು ವಿವರಿಸಿದ್ದಾರೆ.
ಇದು ಕಳೆದ 13 ವರ್ಷಗಳಿಂದ ಬಾಕಿ ಉಳಿದಿತ್ತು. ಗ್ರಾಮೀಣ ಸೇವೆ ಸಲ್ಲಿಸಿದ ಕುರಿತು ವಿವರಗಳು ಸೇರಿದಂತೆ ಹಲವಾರು ಮಾಹಿತಿಗಳ ಕೊರತೆ ಇತ್ತು. ಅವನ್ನೆಲ್ಲ ಸರಿ ಪಡಿಸಿ ಪಟ್ಟಿ ಬಿಡುಗಡೆ ಮಾಡಲಾಗಿದ್ದು, ಪಟ್ಟಿಯಲ್ಲಿ ದೋಷ ಇದ್ದರೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ : ಇರಾನ್ ವಿರುದ್ಧ ಯುದ್ಧಕ್ಕೆ ಜಾಗತಿಕ ಬೆಂಬಲ ಕೋರಿ ನೆತನ್ಯಾಹು ಕರೆ
ವರ್ಗಾವಣೆಗೆ ಕೌನ್ಸಿಲಿಂಗ್ ಮುಖಾಂತರ ಆಗಬೇಕು ಎಂದು ದಶಕಗಳ ಹಿಂದೆಯೆ ಕಾನೂನು ಮಾಡಿದ್ದರೂ ಜಾರಿಗೆ ಬಂದಿರಲಿಲ್ಲ. ಮೆಡಿಕಲ್, ಶಿಫಾರಸ್ಸಿನ ಮುಂತಾದ ರೀತಿಯಲ್ಲಿ ವರ್ಗಾವಣೆ ನಡೆಯುತ್ತಿತ್ತು. ಕಳೆದ ವರ್ಷ 5700 ವರ್ಗಾವಣೆ ಕೌನ್ಸಿಲಿಂಗ್ ಮೂಲಕ ಮಾಡಿದ್ದೇವೆ. ಈಗ ಮತ್ತೆ ಮುಂದಿನ ತಿಂಗಳು ಕೌನ್ಸಿಲಿಂಗ್ ಮೂಲಕವೇ ಪಾರದರ್ಶಕವಾಗಿ ಮಾಡುತ್ತೇವೆ. ನಮ್ಮ ಇಲಾಖೆ ಪಾರದರ್ಶಕವಾಗಿ ಮುನ್ನೆಡಸಲು ಎಲ್ಲ ರೀತಿಯಲ್ಲಿ ಕಾರ್ಯ ನಡೆಯುತ್ತಿದೆ ಎಂದು ದಿನೇಶ್ ಗುಂಡೂರಾವ್ ಸದನಕ್ಕೆ ತಿಳಿಸಿದ್ದಾರೆ.
ಎನ್ಎಂಸಿ (National Medical Commission) ನಿಯಮಗಳ ಪ್ರಕಾರ ಡಿಎನ್ಬಿ (Diplomate of National Board)
ಕೋರ್ಸ್ ಸಹ MD/MSಗೆ ಸಮಾನವಾಗಿದೆ. DNB ಯನ್ನು ನಮ್ಮ ಆಸ್ಪತ್ರೆಗಳಲ್ಲಿಯೇ ಮಾಡಬಹುದಾಗಿದೆ. MD/MS ಓದುವವರು 3 ವರ್ಷ ಉನ್ನತ ಶಿಕ್ಷಣ ಪಡೆಯುತ್ತಿರುವ ಸಂಸ್ಥೆಯಲ್ಲಿ ಕೆಲಸ ಮಾಡುತ್ತಾರೆ. ಸರ್ಕಾರ ಪೂರ್ಣ ಪ್ರಮಾಣದ ಸಂಬಳವನ್ನೂ ನೀಡುತ್ತದೆ ಎಂದು ಹೇಳಿದ್ದಾರೆ.
ಆದರೆ ಅವರ ಸೇವೆ ನಮಗೆ ಸಿಗುವುದಿಲ್ಲ. DNB ಕೋರ್ಸ್ ಮಾಡಿದರೆ ವೈದ್ಯರ ಸೇವೆ ನಮಗೆ ದೊರೆಯುತ್ತದೆ ಎನ್ನುವ ಕಾರಣಕ್ಕೆ ಆ ರೀತಿ ಹೇಳಲಾಗಿತ್ತು. ವೈದ್ಯರು ಅದಕ್ಕೆ ಒಪ್ಪಲಿಲ್ಲ. ವೈದ್ಯರು DNB ಮಾಡಿದರೆ ಇಲಾಖೆಗೆ ಅನುಕೂಲವಾಗುತ್ತಿತ್ತು. ಆದರೂ ಸರ್ಕಾರ ಅವರ ಬೇಡಿಕೆಯನ್ನು ಒಪ್ಪಿ ಉನ್ನತ ಶಿಕ್ಷಣಕ್ಕೆ (ಎಮ್ ಡಿ/ಎಮ್ ಎಸ್) ಅವಕಾಶ ನೀಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಔಷಧ ಖರೀದಿಗೆ ಟೆಂಡರ್..
ಇನ್ನೂ ಪರಿಷತ್ ಸದಸ್ಯೆ ಹೇಮಲತಾ ನಾಯಕ್ ಅವರ ಪ್ರಶ್ನೆಗೆ ಉತ್ತರಿಸಿದ ದಿನೇಶ್ ಗುಂಡೂರಾವ್, ಕಲ್ಯಾಣ ಕರ್ನಾಟಕದ 7 ಜಿಲ್ಲೆಗಳಿಗೆ ಈಗಾಗಲೇ ಔಷಧ ಒದಗಿಸಲಾಗಿದೆ. ಔಷಧ ಖರೀದಿಯಲ್ಲಿನ ಟೆಂಡರ್ ಪ್ರಕ್ರಿಯೆಯಲ್ಲಿ ಹಲವಾರು ಮಾರ್ಪಾಡು ಮಾಡಲಾಗಿದ್ದು, 534 ಔಷಧಿಗಳಲ್ಲಿ 496 ಟೆಂಡರ್ ಕರೆದಿದ್ದು, ಸುಮಾರು 230 ಕ್ಕಿಂತ ಹೆಚ್ಚು ಔಷಧಿಗಳಿಗೆ ಅವಾರ್ಡ್ ಸಹ ಮಾಡಿದ್ದೇವೆ ಎಂದು ಹೇಳಿದ್ದಾರೆ.
ಸ್ಥಳೀಯವಾಗಿ ಖರೀದಿಸಲು ಹಣ ಬಿಡುಗಡೆ ಮಾಡಿದ್ದೇವೆ. ಸದ್ಯಕ್ಕೆ ಉಗ್ರಾಣದಲ್ಲಿ ಕೆಲವು ಔಷಧ ಇಲ್ಲದೇ ಇದ್ದರೂ, ಔಷಧದ ಕೊರತೆ ಆಗದಂತೆ ಸ್ಥಳೀಯವಾಗಿ ಖರೀದಿ ಮಾಡಲು ಹಣ ನೀಡಲಾಗಿದೆ. ಮುಂದಿನ ವರ್ಷದ (2026/27) ಔಷಧಗಳ ಖರೀದಿಗೆ ಜೂನ್ ತಿಂಗಳಲ್ಲೇ ಟೆಂಡರ್ ಪ್ರಕ್ರಿಯೆ ಪ್ರಾರಂಭಿಸಲಾಗುತ್ತದೆ. KSMCL ಆಡಳಿತವನ್ನೂ ಬಿಗಿಗೊಳಿಸಿದ್ದು IAS ಅಧಿಕಾರಿಯನ್ನು ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ. ಪಾರದರ್ಶಕವಾಗಿ ಟೆಂಡರ್ ಪ್ರಕ್ರಿಯೆ ನಡೆಸಲಾಗುತ್ತದೆ. ಹಾಗಾಗಿ ರಾಜ್ಯದಲ್ಲಿ ಔಷಧ ಕೊರತೆ ಇಲ್ಲ. ಎಲ್ಲ ಡಿಹೆಚ್ಒ ಜೊತೆ ನಿರಂತರ ಸಂಪರ್ಕದಲ್ಲಿ ಇದ್ದೇವೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.






