ವಿಧಾನಸಭಾ ಚುನಾವಣೆಯಲ್ಲಿ ತೀವ್ರ ಸೋಲು ಕಂಡ ಬಳಿಕ 2024 ರ ಲೋಕಸಭಾ ಚುನಾವಣೆಯಲ್ಲಿ ಇತರೆ ಪಕ್ಷಗಳೊಂದಿಗೆ ಹೊಂದಿಕೊಳ್ಳುವ ಕುರಿತು ಮಾಜಿ ಕೇಂದ್ರ ಸಚಿವ ಪಿ ಚಿದಂಬರಂ ತಮ್ಮ ಇಂಗಿತ ವ್ಯಕ್ತಪಡಿಸಿದ್ದಾರೆ.
2024ರ ಸಾರ್ವತ್ರಿಕ ಚುನಾವಣೆಗೆ ತಮ್ಮ ಪಕ್ಷವು ಸಿದ್ಧವಾಗಿದ್ದರೂ, ಬಿಜೆಪಿಯನ್ನು ಸೋಲಿಸಲು ಹೊಂದಾಣಿಕೆ ಮಾಡಿಕೊಳ್ಳುವ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ
(ಬಿಜೆಪಿ ವಿರುದ್ಧ) ಪ್ರತಿಯೊಂದು ಪಕ್ಷವೂ ಹೊಂದಾಣಿಕೆ ಮಾಡಿಕೊಳ್ಳಬೇಕು. ಇದು ಮಮತಾ ಬ್ಯಾನರ್ಜಿ ಮತ್ತು ಅರವಿಂದ್ ಕೇಜ್ರಿವಾಲ್ಗೂ ಅನ್ವಯಿಸುತ್ತದೆ. ಹೋರಾಟವು ರಾಜ್ಯವಾರು ಇರುತ್ತದೆ. ಬಂಗಾಳದಲ್ಲಿ ನಾವು ತೃಣಮೂಲ ಕಾಂಗ್ರೆಸ್ ನಾಯಕತ್ವದಲ್ಲಿ ಹೋರಾಡಬೇಕು. ಪಂಜಾಬ್ನಲ್ಲಿ ನಾವು ಎಎಪಿ ನಾಯಕತ್ವದಡಿ ಹೋರಾಡಬೇಕು. ನಾಯಕರಾಗಿ ನೀವು ರಾಜ್ಯವಾರು ಬಿಜೆಪಿ ವಿರುದ್ಧ ಹೋರಾಡಿದರೆ ಅದನ್ನು ಸೋಲಿಸಲು ಸಾಧ್ಯವಾಗುತ್ತದೆ ಎಂದು ಚಿದಂಬರಂ ಹೇಳಿದ್ದಾರೆ.
ಹಲವು ರಾಜ್ಯಗಳಲ್ಲಿ ಕಾಂಗ್ರೆಸ್ಗೆ ಅಸ್ತಿತ್ವವೇ ಇಲ್ಲ ಎಂದು ಒಪ್ಪಿಕೊಂಡ ಚಿದಂಬರಂ, ʼಬ್ಲಾಕ್ ಕಮಿಟಿಯಿಂದ ಪಕ್ಷವನ್ನು ಪುನಃ ಸಂಘಟಿಸಬೇಕುʼ ಎಂದು ಕರೆ ನೀಡಿದ್ದಾರೆ.
ಎನ್ಡಿಟಿವಿಯೊಂದಿಗೆ ಮಾತನಾಡಿದ ಅವರು, ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಹಲವು ವರ್ಷಗಳಿಂದ ನೆಲೆ ಕಳೆದುಕೊಂಡಿದೆ ಎಂದು ನಮಗೆಲ್ಲರಿಗೂ ಗೊತ್ತಿದೆ. ನಾವು ಮೊದಲು ಪಕ್ಷವನ್ನು ಪುನಃ ಕಟ್ಟಬೇಕು, ನಂತರ ಚುನಾವಣೆ ಎದುರಿಸಬೇಕು. ಪಕ್ಷವನ್ನು ಕಟ್ಟುವುದು ಮತ್ತು ಚುನಾವಣೆಯಲ್ಲಿ ಸ್ಪರ್ಧಿಸುವುದು ಎರಡು ಒಟ್ಟಿಗೆ ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.

ಅಲ್ಲದೆ, ಕಾಂಗ್ರೆಸ್ ನಾಯಕತ್ವದೊಂದಿಗೆ ಭಿನ್ನಮತ ಹೊಂದಿರುವ ಜಿ-23 ಗುಂಪಿಗೆ ಪಕ್ಷವನ್ನು ಒಡೆಯುವ ಕೆಲಸ ಮಾಡದೆ ತಮ್ಮ ತಮ್ಮ ಕ್ಷೇತ್ರಕ್ಕೆ ಮರಳಿ ಪಕ್ಷ ಸಂಘಟನೆ ಮಾಡುವಂತೆ ಅವರು ಕರೆ ಕೊಟ್ಟಿದ್ದಾರೆ.
ಕಾಂಗ್ರೆಸ್ ಪಕ್ಷದ ಇತ್ತೀಚಿನ ವಿಧಾನಸಭಾ ಚುನಾವಣಾ ಸೋಲಿಗೆ ಗಾಂಧಿ ಕುಟುಂಬವನ್ನು ಮಾತ್ರ ಹೊಣೆಗಾರರನ್ನಾಗಿ ಮಾಡಲು ಸಾಧ್ಯವಿಲ್ಲ. ನಾನು ಗೋವಾದ ಜವಾಬ್ದಾರಿಯನ್ನು ಒಪ್ಪಿಕೊಂಡಂತೆ ಗಾಂಧಿಗಳು ಜವಾಬ್ದಾರಿಯನ್ನು ಒಪ್ಪಿಕೊಂಡರು ಮತ್ತು ಇತರರು ಇತರ ರಾಜ್ಯಗಳ ಜವಾಬ್ದಾರಿಯನ್ನು ಸ್ವೀಕರಿಸಿದರು. ಯಾರೂ ಜವಾಬ್ದಾರಿಯಿಂದ ಓಡಿಹೋಗುವುದಿಲ್ಲ. ಆದರೆ ಜವಾಬ್ದಾರಿಯು ನಾಯಕತ್ವ ಸ್ಥಾನದಲ್ಲಿರುವ ಪ್ರತಿಯೊಬ್ಬರ ಮೇಲಿದೆ, ಅದು ಬ್ಲಾಕ್, ಜಿಲ್ಲೆ, ರಾಜ್ಯ ಮತ್ತು ಎಐಸಿಸಿ (ಅಖಿಲ ಭಾರತ ಕಾಂಗ್ರೆಸ್ ಸಮಿತಿ) ಗೂ ಸೋಲಿನ ಜವಾಬ್ದಾರಿ ಇದೆ. ಎಐಸಿಸಿ ನಾಯಕತ್ವ ಮಾತ್ರ ಚುನಾವಣಾ ಸೋಲಿಗೆ ಕಾರಣ ಎಂದುಎಂದರೆ ಸಾಕಾಗುವುದಿಲ್ಲ ಎಂದು ಚಿದಂಬರಂ ತಿಳಿಸಿದ್ದಾರೆ.






