ಯೋಗ ಗುರು ಬಾಬಾ ರಾಮ್ ದೇವ್ ಇತ್ತೀಚೆಗೆ ಅಲೋಪಥಿ ಚಿಕಿತ್ಸೆಯನ್ನು ಟೀಕಿಸಿ ಹೇಳಿಕೆ ನೀಡಿದ್ದರು. ಇದಕ್ಕೀಗ ಭಾರತೀಯ ವೈದ್ಯಕೀಯ ಸಂಘ(ಐಎಂಎ) ಹಾಗು ಇತರೆ ವೈದ್ಯಕೀಯ ಸಂಘಗಳುಆಕ್ರೋಶಗೊಂಡಿವೆ. ಬಾಬು ರಾಮ್ ದೇವ್ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ಒತ್ತಾಯಿಸಿ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಅವರಿಗೆ ಪತ್ರ ಬರೆಯಲಾಗಿದೆ.
ಅಲೋಪಥಿ (ಆಧುನಿಕ ವೈದ್ಯ ವಿಜ್ಞಾನ) ಎಂಬುವುದು ಅವಿವೇಕಿ ಮತ್ತು ಅಸಮರ್ಪಕ ವಿಜ್ಞಾನ, ಮೊದಲು ಹೈಡ್ರೋಕ್ಸಿಕ್ಲೂರೊಖ್ವಿನ್ ವಿಫಲವಾಯಿತು, ನಂತರ ರೆಮ್ಡಿಸಿವಿರ್, ಐವರ್ಮೆಕ್ಟಿನ್ ಹಾಗು ಪ್ಲಾಸ್ಮಾ ಥೆರಪಿ ವಿಫಲವಾಯಿತು, ನಂತರ ಆಂಟಿಬಯೋಟಿಕ್ಸ್ಗಳಾದ ಫ್ಯಾಬಿಫ್ಲೂ ಮತ್ತು ಸ್ಟೆರಾಯ್ಡ್ ಕೂಡ ವಿಫಲವಾಯಿತು ಎಂದು ಇತ್ತೀಚೆಗೆ ಬಾಬಾ ರಾಮ್ ದೇವ್ ಅಲೋಪಥಿ ಚಿಕಿತ್ಸೆಯನ್ನು ಟೀಕಿಸಿ ಹೇಳಿಕೆ ಕೊಟ್ಟಿದ್ದರು, ಜೊತೆಗೆ ಆಕ್ಸಿಜನ್ ಕೊರತೆಗಿಂತಲೂ ಅಲೋಪಥಿ ಔಷಧದಿಂದ ಲಕ್ಷಾಂತರ ಕೋವಿಡ್ ಸೋಂಕಿತರು ಸಾವನ್ನಪ್ಪಿದ್ದಾರೆಂದಿದ್ದರು.
ವೈದ್ಯರ ವಿರುದ್ಧ ಬಾಬಾ ರಾಮ್ ದೇವ್ ನೀಡುತ್ತಿರುವ ಹೇಳಿಕೆ ಖಂಡನಾರ್ಹ, ಅವರು ವೈದ್ಯರು ಹಾಗು ರೋಗಿಗಳ ನಡುವೆ ಅವಿಶ್ವಾಸ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ವಿಜ್ಞಾನದ ಬದಲು ಮೌಢ್ಯ ಹರಡುತ್ತಿದ್ದಾರೆ. ಇದು ವೈದ್ಯ ಸಮೂಹಕ್ಕೆ ಹಿನ್ನಡೆ ಮಾಡುವ ಕೆಲಸವಾಗಿದೆ. ಕೂಡಲೇ ರಾಮದೇವ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಐಎಂಎ ಒತ್ತಾಯ ಮಾಡಿದೆ.
ಕೋವಿಡ್ ವಿರುದ್ಧದ ಹೋರಾಟದಲ್ಲಿ ಅಲೋಪಥಿಕ್ ವೈದ್ಯರು ಮುಂಚೂಣಿಯಲ್ಲಿದ್ದಾರೆ. 1200 ಕ್ಕೂ ಹೆಚ್ಚು ವೈದ್ಯರು ಪ್ರಾಣ ಕಳೆದುಕೊಂಡಿದ್ದಾರೆ. ಅಂತಹವರನ್ನು ಅವಮಾನಿಸುವ ಕೆಲಸವನ್ನು ಬಾಬಾ ರಾಮ್ ದೇವ್ ಮಾಡಿದ್ದಾರೆಂದು ಐಎಂಎ ಗರಂ ಆಗಿದೆ.
ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಇವರು ನೀಡಿರುವ ದ್ವೇಷದ ಮತ್ತು ವಿಜ್ಞಾನದ ಕುರಿತಾದ ಸುಳ್ಳು ಹೇಳಿಕೆ ಇಡೀ ವೈದ್ಯಸಮೂಹವನ್ನು ಕುಗ್ಗಿಸುವಂತೆ ಮಾಡುತ್ತದೆ. ಕೋವಿಡ್ ವಿರುದ್ಧದ ಹೋರಾಟದಲ್ಲಿ ಮಾನವ ಸಮಾಜಕ್ಕೆ ನೆರವಾಗುವಂತಹ ಸಕಲ ಪ್ರಯತ್ನವನ್ನು ವೈದ್ಯರು ನಡೆಸುತ್ತಿದ್ದಾರೆಂದು ಐಎಂಎ ತಿಳಿಸಿದೆ.