ನಾ ದಿವಾಕರ
ಇಡೀ ದೇಶವನ್ನು ಉನ್ಮಾದದ ಭ್ರಮಾಲೋಕದಲ್ಲಿ ತೇಲಿಸಿದ ಅಯೋಧ್ಯೆಯ ರಾಮಮಂದಿರ ಕೊನೆಗೂ ಸಾಕಾರಗೊಂಡಿದೆ. ಹಿಂದುತ್ವ ರಾಜಕಾರಣದ ಪ್ರಧಾನ ಕೆಂದ್ರಬಿಂದು ಆಗಿರುವ ಮಿಲೆನಿಯಂ ಜನಸಂಖ್ಯೆ, ಅಂದರೆ 1990-2000 ದಶಕದ ನಂತರ ಜನಿಸಿದ ಒಂದು ಬೃಹತ್ ಜನಸಮೂಹವನ್ನು ಈ ಉನ್ಮಾದ ಖಚಿತ ದಿಕ್ಕಿನಲ್ಲಿ ಕರೆದೊಯ್ಯುವ ಸಾಧ್ಯತೆಗಳಿವೆ. ಏಕೆಂದರೆ ನವಭಾರತದಲ್ಲಿ ಶೇ 40ರಷ್ಟಿರುವ ಈ ಜನಸಂಖ್ಯೆಗೆ 1992 ನೆನಪಿರುವುದಿಲ್ಲ. ಇದರ ಹಿಂದಿನ ಪೀಳಿಗೆಗೆ ಅಂದರೆ 1960-70ರ ತಲೆಮಾರಿನ ಹಿತವಲಯದ ವಯಸ್ಕರಿಗೆ 1992 ಉದ್ದೇಶಪೂರ್ವಕವಾಗಿ ವಿಸ್ಮೃತಿಗೆ ಜಾರಬಹುದಾದ ಒಂದು ವರ್ಷ. ಬದಲಾಗುತ್ತಿರುವ ಭಾರತ ಮತ್ತು ಜಗತ್ತಿನ ಅಗ್ರಮಾನ್ಯ ದೇಶವಾಗಲು ಸಜ್ಜಾಗುತ್ತಿರುವ ಅಮೃತ ಕಾಲದ ಭಾರತಕ್ಕೆ ಸಾಕ್ಷೀಭೂತರಾಗಿ ನಿಲ್ಲುವ ಈ ನವಪೀಳಿಗೆಯ ಬಹುಸಂಖ್ಯೆಯ ಜನತೆಗೆ ಅಯೋಧ್ಯೆಯಲ್ಲಿ ಭವಿಷ್ಯದ ಭಾರತ ಕಾಣುತ್ತದೆ,
![](https://pratidhvani.com/wp-content/uploads/2024/01/ram-mandir-65a3e27c67896-1024x578.webp)
ವರ್ತಮಾನದ ವೈರುಧ್ಯಗಳಾಗಲೀ, ಭೂತಕಾಲದ ದುರಂತಗಳಾಗಲೀ ಗಣನೆಗೆ ಬರುವುದಿಲ್ಲ.
1990ರಲ್ಲಿ ಅಧಿಕೃತವಾಗಿ, ಅಧಿಕಾರಯುತವಾಗಿ ಭಾರತವನ್ನು ಪ್ರವೇಶಿಸಿದ ನವ ಉದಾರವಾದಿ ಜಾಗತೀಕರಣದ ಆರ್ಥಿಕತೆ ಭಾರತೀಯ ಸಮಾಜದಲ್ಲಿದ್ದ ಪ್ರಜಾಸತ್ತಾತ್ಮಕ ಸೂಕ್ಷ್ಮತೆಯ ಪಳೆಯುಳಿಕೆಗಳನ್ನೂ ಹಂತಹಂತವಾಗಿ ಕೊನೆಗಾಣಿಸಲಾರಂಭಿಸಿದ್ದನ್ನು, ಹಿಂದುತ್ವ ರಾಜಕಾರಣದ ಉಗಮ ಮತ್ತು ಬೆಳವಣಿಗೆಗಳಲ್ಲಿ ಕಾಣಬಹುದು. 1992ರ ಬಾಬ್ರಿ ಮಸೀದಿಯ ಧ್ವಂಸ ಈ ಬೆಳವಣಿಗೆಯ ಫ್ಲ್ಯಾಶ್ ಪಾಯಿಂಟ್ ಎಂದು ಹೇಳಬಹುದು. ಚರಿತ್ರೆಯಲ್ಲಿ ಸಂಭವಿಸಿರಬಹುದಾದ ಪ್ರಮಾದಗಳನ್ನು ವರ್ತಮಾನದಲ್ಲಿ ಸರಿಪಡಿಸುವ ಒಂದು ಚಿಂತನಾವಾಹಿನಿಗೆ ಪುಷ್ಟಿ ನೀಡಿದ್ದು 1989-92ರ ನಡುವಿನ ಘಟನಾವಳಿಗಳು. ಈ ಬೆಳವಣಿಗೆಗಳ ನೇರ ಫಲಾನುಭವಿಯಾಗಿ ಬಿಜೆಪಿ ತನ್ನ ಕನಸಿನ ರಾಮಮಂದಿರವನ್ನು ನಿರ್ಮಿಸಿ, ವರ್ತಮಾನದ ಭಾರತಕ್ಕೆ ಹೊಸ ದಿಕ್ಸೂಚಿಯನ್ನು ನೀಡಲು ಸಜ್ಜಾಗಿದೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಅಂದಿಗೂ ಇಂದಿಗೂ ವಿರೋಧ ಕಾಣುವುದು ವಸ್ತುಶಃ ರಾಮಮಂದಿರ ನಿರ್ಮಾಣಕ್ಕೆ ಅಲ್ಲ ಬದಲಾಗಿ ಕೆಡವಿದ ಮಸೀದಿಯೊಂದರ ಮೇಲೆ ನಿರ್ಮಿಸಲಾಗುವ ಮಂದಿರಕ್ಕೆ.
![](https://pratidhvani.com/wp-content/uploads/2024/01/Representative-image-of-the-Ram-Mandir-being-const_1678956756994.jpg)
ಜಾತ್ಯತೀತತೆಯ ವೈರುಧ್ಯಗಳು
ಮೂಲತಃ ಇಲ್ಲಿ ಗಮನಿಸಬೇಕಾಗಿರುವುದು ಬದಲಾದ ಭಾರತದ ಹೊಸ ರಾಜಕೀಯ ವಾತಾವರಣ ಮತ್ತು ಸ್ವಾತಂತ್ರ್ಯಪೂರ್ವದಲ್ಲೇ ನಿರ್ವಚಿಸಲ್ಪಟ್ಟಿದ್ದ ಭಾರತೀಯ ಪ್ರಜಾಪ್ರಭುತ್ವದ ಸಾಂವಿಧಾನಿಕ ಆಶಯಗಳ ವಸ್ತುಸ್ಥಿತಿ. ಸ್ವಾತಂತ್ರ್ಯಾನಂತರ ಭಾರತದ ಆಳುವ ವ್ಯವಸ್ಥೆ ಅನುಸರಿಸಿಕೊಂಡು ಬಂದಿದ್ದ ಜಾತ್ಯತೀತತೆ ಇಂದು ಸಾಮಾಜಿಕ ಪರಿಶೋಧನೆಗೊಳಗಾಗಿದೆ. ಮತ ನಿರಪೇಕ್ಷತೆ ಅಥವಾ ಸರ್ವ ಧರ್ಮ ಸಮಭಾವ ಎಂಬ ಎರಡು ನೆಲೆಗಳಲ್ಲಿ ನಿರ್ವಚಿಸಲ್ಪಟ್ಟಿರುವ ಭಾರತದ ಸೆಕ್ಯುಲರಿಸಂ ವರ್ತಮಾನ ಭಾರತದಲ್ಲಿ ನಗೆಪಾಟಲಿಗೀಡಾಗುವಷ್ಟು ಅಪಭ್ರಂಶಗಳನ್ನು ಹೊತ್ತುಕೊಂಡಿದೆ. ಸರ್ಕಾರದ ನೇತೃತ್ವ ವಹಿಸುವ ಚುನಾಯಿತ ಪ್ರತಿನಿಧಿಗಳು ಸಾರ್ವಜನಿಕ ಧಾರ್ಮಿಕ ಆಚರಣೆ/ವಿಧಿವಿಧಾನಗಳಿಂದ ಅಂತರ ಕಾಯ್ದುಕೊಳ್ಳುವ ಉನ್ನತಾದರ್ಶಗಳು ಇಂದು ಸಂಪೂರ್ಣವಾಗಿ ಭಗ್ನಗೊಂಡಿರುವುದನ್ನು ಅಯೋಧ್ಯೆಯಲ್ಲೂ ಕಂಡಿದ್ದೇವೆ, ಕರ್ನಾಟಕದಲ್ಲೂ ಕಂಡಿದ್ದೇವೆ. ರಾಮಮಂದಿರ ವಿವಾದ ಸೃಷ್ಟಿಸಿದ ಪರ-ವಿರೋಧದ ಧ್ವನಿಗಳು ಅಧಿಕಾರ ರಾಜಕಾರಣದಲ್ಲಿ ತಮ್ಮ ಅಸ್ತಿತ್ವವನ್ನೇ ಕಳೆದುಕೊಂಡಿದ್ದು, ರಾಜಕೀಯವಾಗಿ ಅಯೋಧ್ಯೆಯ ರಾಮ ಇಂದು, ಎಡಪಕ್ಷಗಳನ್ನು ಹೊರತುಪಡಿಸಿ, ಎಲ್ಲ ಪಕ್ಷಗಳಿಗೂ ಆಪ್ತನಾಗಿದ್ದಾನೆ.
ಈ ನಡುವೆಯೇ ಬಿಜೆಪಿ ಮತ್ತು ಸಂಘಪರಿವಾರದ ದಶಕಗಳ ಕನಸು, ರಾಮಮಂದಿರ ನಿರ್ಮಾಣ, ಸಾಕಾರಗೊಂಡಿರುವುದು ಹಿಂದುತ್ವ ರಾಜಕಾರಣಕ್ಕೆ ಸಾಕಷ್ಟು ಪುಷ್ಟಿ ನೀಡುತ್ತದೆ. ಭಾರತದ ಉದ್ದಗಲಕ್ಕೂ ಜನಮಾನಸದಲ್ಲಿ ಒಂದು ರೂಪಕವಾಗಿ ನೆಲೆಗೊಂಡಿದ್ದ ವಾಲ್ಮೀಕಿಯ ರಾಮ ಇಂದಿಗೂ ಸಹ ಹಳ್ಳಿಗಾಡುಗಳಿಂದ ಮೆಟ್ರೋಪಾಲಿಟನ್ ನಗರಗಳವರೆಗೂ ತನ್ನ ಮೂಲ ಅಸ್ತಿತ್ವ ಉಳಿಸಿಕೊಂಡೇ ಬಂದಿದ್ದಾನೆ. ಭಾರತದ ಕಾವ್ಯಗಳಲ್ಲಿ, ರಂಗಭೂಮಿಕೆಗಳಲ್ಲಿ, ಸಾಹಿತ್ಯಕ ಅಭಿವ್ಯಕ್ತಿಯಲ್ಲಿ, ನೃತ್ಯಕಲೆ-ಚಿತ್ರಕಲೆಯಲ್ಲಿ ವಾಲ್ಮೀಕಿಯ ರಾಮ ಕಲಾತ್ಮಕ, ಕ್ರಿಯಾಶೀಲ, ಸೃಜನಶೀಲ ಅಭಿವ್ಯಕ್ತಿಗಳಿಗೆ ಒಂದು ರೂಪಕವಾಗಿ ಉಳಿದುಕೊಂಡು ಬಂದಿದ್ದಾನೆ.