ರಾಜ್ಯದಲ್ಲಿ ಕಳೆದ ಒಂದು ವಾರಗಳಿಂದ ಅಪರೇಷನ್ ಹಸ್ತದ ವಿಚಾರ ಬಹಳ ದೊಡ್ಡ ಮಟ್ಟದಲ್ಲಿ ಸದ್ದು ಮಾಡೋದಕ್ಕೆ ಪ್ರಾರಂಭವಾಗಿದೆ. ಅದರಲ್ಲೂ ಪ್ರಮುಖವಾಗಿ ಬಿಜೆಪಿಯ ಕೆಲ ಮುಂಚುಣಿಯ ನಾಯಕರೇ ಕೈ ಪಡೆಯನ್ನು ಸೇರಿಕೊಳ್ಳಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ ಇದರ ನಡುವೆ ಇದೀಗ ಸಚಿವ ಶಿವರಾಜ ತಂಗಡಗಿ ಅಚ್ಚರಿಯ ಹೇಳಿಕೆಯೊಂದನ್ನ ನೀಡಿದ್ದಾರೆ.
![](https://pratidhvani.com/wp-content/uploads/2023/08/shivaraj-tangadagi-101851317-1024x768.webp)
ಹೌದು .. ಈ ಕುರಿತು ಮಾತನಾಡಿರುವ ಅವರು, ʼಕಾಂಗ್ರೆಸ್ ಸರ್ಕಾರಕ್ಕೆ ಸಂಪೂರ್ಣ ಬಹುಮತವಿದೆ. ನಾವೇಕೆ ಆಪರೇಷನ್ ಮಾಡೋಣ? ಪಕ್ಷದ ಸಿದ್ಧಾಂತ ಮೆಚ್ಚಿ ಅವರಾಗೇ ಬರುವವರಿದ್ದರೆ ಅವರನ್ನು ಸ್ವಾಗತಿಸುತ್ತೇವೆ. ಬಿಜೆಪಿ ಆಪರೇಷನ್ ಕಮಲದ ಹೆಸರಲ್ಲಿ 16 ಶಾಸಕರಿಂದ ಉಪಯೋಗ ಪಡೆದುಕೊಂಡು ನಡುನೀರಿನಲ್ಲಿ ಬಿಟ್ಟಿದ್ದಾರೆʼ
ʼನಾವೀಗ ಪಕ್ಷದ ಗೇಟ್ ತೆರೆದರೆ ಬಿಜೆಪಿಯಲ್ಲಿ ಯಾರೂ ಇರೊಲ್ಲʼ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ಎಸ್.ತಂಗಡಗಿ ಹೇಳಿದರು.
![](https://pratidhvani.com/wp-content/uploads/2023/08/100537397.webp)
ಸುದ್ದಿಗಾರರೊಂದಿಗೆ ಮಾತನಾಡಿ, ಆಪರೇಷನ್ ಕಮಲ ಮಾಡಿ ಅನೈತಿಕ ಸರ್ಕಾರ ರಚನೆ ಮಾಡಿದ್ದು ಬಿಜೆಪಿ ವಿಶ್ವಾಸಘಾತುಕ ಪಕ್ಷ ಎಂದು ಟೀಕಿಸಿದರಲ್ಲದೆ, ಕಾಂಗ್ರೆಸ್ ಸರ್ಕಾರ ತನ್ನ ಆಡಳಿತದ ನೂರು ದಿನಗಳಲ್ಲೆ ಪ್ರಣಾಳಿಕೆಯಲ್ಲಿ ಹೇಳಿದ್ದ ಐದು ಗ್ಯಾರಂಟಿಗಳನ್ನು ಈಡೇರಿಸಿದೆ. ಆದರೆ, ಸರ್ಕಾರ ರಚನೆಯಾಗಿ 100 ದಿನ ಕಳೆದರೂ ಇಲ್ಲಿವರೆಗೂ ಬಿಜೆಪಿಗೆ ವಿರೋಧ ಪಕ್ಷದ ನಾಯಕನ ಆಯ್ಕೆ ಮಾಡಲಾಗಿಲ್ಲ ಎಂದು ವ್ಯಂಗ್ಯವಾಡಿದರು.