ಭಾರತ ಎಂದೆಂದಿಗೂ ಹಿಂದೂ ರಾಷ್ಟ್ರ ಎಂದು ಹೇಳಿರುವ ಬಿಜೆಪಿ ಮಾಜಿ ಶಾಸಕ ಸಿಟಿ ರವಿ ಅವರು ರಾಷ್ಟ್ರೀಯ ವೈದ್ಯಕೀಯ ಆಯೋಗ (NMC)ದ ಲೋಗೋದಲ್ಲಿ ಧನ್ವಂತರಿ ಚಿತ್ರ ಇರುವುದನ್ನು ಇಷ್ಟ ಪಡದವರು ಪಾಕಿಸ್ತಾನಕ್ಕೆ ಹೋಗಬೇಕು ಎಂದು ಹೇಳಿದ್ದಾರೆ.
ರಾಷ್ಟ್ರೀಯ ವೈದ್ಯಕೀಯ ಆಯೋಗ ತನ್ನ ಲೋಗೋವನ್ನು ಮಾರ್ಪಡಿಸಿರುವುದು ವಿವಾದಕ್ಕೆ ಕಾರಣವಾಗಿದ್ದು, ಲೋಗೋದಲ್ಲಿ ರಾಷ್ಟ್ರೀಯ ಲಾಂಛನವನ್ನು ಕೈಬಿಟ್ಟು ವಿಷ್ಣುವಿನ ಅವತಾರವಾದ ಧನ್ವಂತ್ರಿಯ ಫೋಟೋವನ್ನು ಬಳಸಲಾಗಿದೆ. ಅಲ್ಲದೆ, ಎನ್ಎಂಸಿ ಲೋಗೋದಲ್ಲಿ ಇಂಡಿಯಾ ಬದಲು ‘ಭಾರತ್‘ ಎಂದು ಬಳಕೆ ಮಾಡಿರುವುದು ಕೂಡಾ ಚರ್ಚೆಗೆ ಗ್ರಾಸವಾಗಿದೆ.
“ಭಾರತವು ಹಿಂದೂ ರಾಷ್ಟ್ರವಲ್ಲ, ಭಾರತವು ಜಾತ್ಯತೀತ ಸಂವಿಧಾನದಿಂದ ಆಡಳಿತ ನಡೆಸುತ್ತಿರುವ ದೇಶವಾಗಿದ್ದು, ಎಲ್ಲ ಧರ್ಮಗಳೂ ಸಮಾನ. ಭಾರತದ ರಾಜ್ಯಕ್ಕೆ ಯಾವುದೇ ಧರ್ಮವಿಲ್ಲ” ಎಂದು ಪತ್ರಕರ್ತೆ ಅರ್ಫಾ ಖಾನುಮ್ ಶೆರ್ವಾನಿ ಅವರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸಿಟಿ ರವಿ, “ಧನ್ವಂತರಿಯ ಚಿತ್ರದ ಬಗ್ಗೆ ಯಾರಿಗಾದರೂ ಸಮಸ್ಯೆ ಇದ್ದರೆ ಭಾರತವನ್ನು ತೊರೆದು ತಮ್ಮ ಪ್ರೀತಿಯ ಪಾಕಿಸ್ತಾನಕ್ಕೆ ಹೋಗಬೇಕು. ಭಾರತ ಹಿಂದೂ ದೇಶವಲ್ಲ ಎಂದು ಜಿಹಾದಿಗಳು ಏಕೆ ಕೂಗುತ್ತಿದ್ದಾರೆ? ಅವರ ಪೂರ್ವಜರು ಯಾರು? ಈ ಕೋಡಂಗಿಗಳಿಗೆ ಆ ಬಗ್ಗೆ ಏನಾದರೂ ಕಲ್ಪನೆ ಇದೆಯೇ? ಭಾರತ ಯಾವಾಗಲೂ ಹಿಂದೂ ರಾಷ್ಟ್ರವಾಗಿತ್ತು, ಹಾಗೂ ಶಾಶ್ವತವಾಗಿ ಹಿಂದೂ ರಾಷ್ಟ್ರವಾಗಿಯೇ ಉಳಿಯುತ್ತದೆ. ಹಂದಿಗಳು ಅಳುತ್ತಲೇ ಇರಲಿ” ಎಂದು ಬರೆದಿದ್ದಾರೆ.