ಮೈಸೂರು :
ಮೈಸೂರಿನಲ್ಲಿ ಚುನಾವಣಾ ಅಖಾಡ ರಂಗೇರಿದೆ . ಹಳೇ ಮೈಸೂರು ಭಾಗದ ಎಲೆಕ್ಷನ್ ರಣಾಂಗಣಕ್ಕೆ ಶುಕ್ರವಾರ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ ಎಲ್ ಸಂತೋಷ್ ಎಂಟ್ರಿಯಾಗಿದ್ದಾರೆ. ಡಿಜಿಟಲ್ ಕಾರ್ಯಕರ್ತರ ಸಮ್ಮೇಳನದಲ್ಲಿ ಸಂತೋಷ್ ಭಾಗಿಯಾಗಿದ್ದು, ಮಾಹಿತಿ ತಂತ್ರಜ್ಞಾನದ ಮೂಲಕ ಮತದಾರರನ್ನ ಸೆಳೆಯೋ ನಿಟ್ಟಿನಲ್ಲಿ ಕಾರ್ಯಕರ್ತರಿಗೆ ಸಂತೋಷ್ ಹಲವು ರೀತಿಯ ಸಲಹೆಗಳನ್ನ ನೀಡಿದ್ದಾರೆ .
ಸಂತೋಷ್ ಮಾರ್ಮಿಕ ನುಡಿ..
ಸಂತೋಷ್ ಜೀ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ರು. ಪ್ರಸಕ್ತ ವಿದ್ಯಮಾನಗಳ ಕುರಿತು ಮಾತಾಡಲು ಕೋರಿದಾಗಲೂ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.ಬಿಜೆಪಿಯಲ್ಲಿ ಈಗ ಸಿಕ್ಕಾಪಟ್ಟೆ ಲೀಡರ್ಗಳಾಗಿದ್ದಾರೆ. ನಾನು ಯಾರಿಗೂ ಪ್ರತಿಸ್ಪರ್ಧಿ ಆಗಲು ಬಯಸುವುದಿಲ್ಲ ಎಂದು ಬಿ.ಎಲ್.ಸಂತೋಷ್ ಮಾರ್ಮಿಕವಾಗಿ ನುಡಿದ್ರು . ನನ್ನನ್ನು ಮಾತಾಡಿಸಲು 100 ಬಾರಿ ಯತ್ನಿಸಿದ್ದಾರೆ. ಆದ್ರೆ, ನಾನು ಮಾತಾಡಿಲ್ಲ. ನಮ್ಮಲ್ಲಿ ಮಾತಾಡಲು ಪ್ರತಾಪ್ ಸಿಂಹ ರೀತಿ ಇದ್ದಾರೆ. ಅವರೇ ಮಾತಾಡಲಿ. ನಾನು ಮಾತಾಡಿ ಯಾರಿಗೆ ಯಾಕೆ ಪ್ರತಿ ಸ್ಪರ್ಧಿಯಾಗಲಿ ಎಂದು B.L.ಸಂತೋಷ್ ಹೇಳಿಕೊಂಡರು.
ವರುಣದಲ್ಲಿ ಥಕ ಥೈ ಥಕ ಥೈ ಅಂತಾರೆ..
ವರುಣಗೆ ಬಂದು ಸಿದ್ದರಾಮಯ್ಯ ಥಕ ಥೈ ಥಕ ಥೈ ಅಂತಿದ್ದರು. ಅದನ್ನು ನಿಲ್ಲಿಸಲು ಹೈಕಮಾಂಡ್ ಸೋಮಣ್ಣ ಅವರನ್ನು ಇಲ್ಲಿಗೆ ಕಳುಹಿಸಿದೆ ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದ್ರು. ಮೈಸೂರಿನಲ್ಲಿ ನಡೆದ ಡಿಜಿಟಲ್ ಕಾರ್ಯಕರ್ತರ ಸಮ್ಮೇಳನದಲ್ಲಿ ಮಾತ್ನಾಡಿದ ಅವರು, ವರುಣ ಯಾವ ಕ್ಷೇತ್ರಕ್ಕೆ ಸೇರುತ್ತೆ ಅನ್ನೋದು ಗೊತ್ತಿಲ್ಲದಂತಾಗಿದೆ. ಸಿದ್ದರಾಮಯ್ಯಗೆ ಈಗ ಸೋಲಿನ ಭಯ ಶುರುವಾಗಿದೆ. ಅದಕ್ಕಾಗಿ ತಮ್ಮ ಮೊಮ್ಮಗನನ್ನು ಮುಂದೆ ಕರೆ ತಂದಿದ್ದಾರೆ. ಜಾತಿವಾದಿ ಕಾಂಗ್ರೆಸ್, ಜೆಡಿಎಸ್ನ ಮಟ್ಟ ಹಾಕಬೇಕಿದ್ದು, ನಾವು ಜಾತಿವಾದಿಗಳಲ್ಲ ಅನ್ನೋದನ್ನು ಸಾಬೀತುಪಡಿಸಬೇಕು. ಇತ್ತೀಚಿಗೆ ಜನರೇ ಮೊಬೈಲ್ ಹಿಡಿದು ಪತ್ರಕರ್ತರಾಗಿದ್ದು, ಯಾರು ಯಾರಿಗೆ ಬೇಕಾದರೂ ಬೈದು ವಿಡಿಯೋ ಮಾಡಬಹುದು. ಸತ್ಯಕ್ಕಿಂತ ಕಚ್ಛಾ ವಸ್ತುಗಳೇ ಜನರಿಗೆ ತಲುಪುತ್ತಿವೆ. ಸೋಷಿಯಲ್ ಮೀಡಿಯಾದಲ್ಲಿ ಪಾಸಿಟಿವ್, ನೆಗೆಟಿವ್ ಎರಡು ಇದೆ. ಟಿವಿಗಳಲ್ಲಿ ಬಾರದ ಸುದ್ದಿಗಳನ್ನು ಜನರಿಗೆ ತಲುಪಿಸಲು ಇದು ಸಹಕಾರಿಯಾಗಿದೆ. ಸೋಮಣ್ಣಗೂ ವರುಣಗೂ ಏನು ಸಂಬಂಧ ಎಂದು ಕೇಳುವ ಸಿದ್ದರಾಮಯ್ಯಗೂ ಬಾದಾಮಿ ಕ್ಷೇತ್ರಕ್ಕೂ ಏನು ಸಂಬಂಧ ಇತ್ತು. ಇಟಲಿಯ ಸೋನಿಯಾ ಗಾಂಧಿಗೂ ಬಳ್ಳಾರಿಗೂ ಏನು ಸಂಬಂಧ ಇದೆ ಎಂದು ಸಿದ್ದರಾಮಯ್ಯ ವಿರುದ್ಧ ಪ್ರತಾಪ್ ಸಿಂಹ ಕಿಡಿಕಾರಿದ್ರು.
ವರುಣ ರಣ ಕಣ ..
ಇನ್ನು, ಸಂಸದ ಪ್ರತಾಪ್ ಸಿಂಹ ಹಾಗು ಬಿಎಲ್ ಸಂತೋಷ್ ಇಬ್ಬರೂ ಪರಸ್ಪರ ಅನೇಕ ವಿಚಾರಗಳ ಕುರಿತು ಚರ್ಚೆ ನಡೆಸಿದ್ದಾರೆ . ಪ್ರಮುಖವಾಗಿ ವರುಣ ವಿಧಾನಸಭಾದ ಸ್ಥಿತಿಗತಿಗಳ ಬಗ್ಗೆ ಮಹತ್ವದ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಹಲವು ಸಲಹೆ ಸೂಚನೆಗಳನ್ನ ಸಹ ನೀಡಲಾಗಿದ್ದು , ಚುನಾವಣಾ ಪ್ರಚಾರದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಗಂಭೀರ ಚರ್ಚೆ ನಡೆದಿದೆ ಅನ್ನೋ ಮಾಹಿತಿ ಲಭ್ಯವಾಗಿದೆ.