ದೇಶದಲ್ಲಿ ಲೋಕಸಭಾ ಚುನಾವಣೆ ಅಂತ್ಯವಾಗಿದೆ. ಚುನಾವಣೆ ಮುಗಿಯುತ್ತಿದ್ದಂತೆ ಮತದಾನೋತ್ತರ ಸಮೀಕ್ಷೆಗಳ ಲೆಕ್ಕಾಚಾರ ಹೊರಬಿದ್ದಿದೆ. ಎಲ್ಲಾ ಸಮೀಕ್ಷೆಗಳಲ್ಲೂ ಹೆಚ್ಚು ಕಡಿಮೆ ಒಂದೇ ರೀತಿಯ ಮಾಹಿತಿ ಹೊರ ಬಿದ್ದಿದ್ದು, ಬಹುತೇಕ ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರ ಸತತ ಮೂರನೇ ಬಾರಿ ಕೇಂದ್ರದಲ್ಲಿ ಅಧಿಕಾರ ಹಿಡಿಯಲಿದೆ ಎನ್ನುತ್ತಿದೆ ಸರ್ವೇ ಮಾಹಿತಿ. ಆದರೆ ಚುನಾವಣೆ ಆರಂಭ ಆದ ಬಳಿಕ ಜನರ ಚಿತ್ತ ಕಾಂಗ್ರೆಸ್ ಕಡೆಗೆ ವಾಲಿದ್ದು, ಕೇಸರಿ ಬದಲು ಕಾಂಗ್ರೆಸ್ ಕಡೆಗೆ ಒಲವು ಹೆಚ್ಚಾಗಿದೆ ಅನ್ನೋ ಮಾಹಿತಿ ಇತ್ತು. ಆದರೆ ಇದೀಗ ಕಾಂಗ್ರೆಸ್ ಕೊಂಚ ಸುಧಾರಿಸಿದ್ದು, ಬಿಜೆಪಿಗೆ ಠಕ್ಕರ್ ಕೊಡುವಷ್ಟು ಶಕ್ತಿ ಬಂದಿಲ್ಲ ಎನ್ನಲಾಗ್ತಿದೆ.
![](https://pratidhvani.com/wp-content/uploads/2024/06/narendra-modi-1-1024x576.webp)
ದೆಹಲಿಯಲ್ಲಿ 7ನೇ ಹಂತದ ಚುನಾವಣೆ ಮುಗಿಯುತ್ತಿದ್ದಂತೆ ಮಲ್ಲಿಕಾರ್ಜುನ ಖರ್ಗೆ ನಿವಾಸದಲ್ಲಿ INDIA Bloc ಸಭೆ ನಡೆಸಿದ್ದು, ಕಾಂಗ್ರೆಸ್ ನೇತೃತ್ವದ ಸಭೆಯಲ್ಲಿ ಅರವಿಂದ ಕೇಜ್ರಿವಾಲ್ ಸೇರಿದಂತೆ ಬಹುತೇಕ ಘಟಾನುಘಟಿ ನಾಯಕರು ಭಾಗಿಯಾಗಿ ಚುನಾವಣಾ ಫಲಿತಾಂಶದ ಬಗ್ಗೆ ಚರ್ಚೆ ನಡೆಸಿದರು. ಸಭೆಯಲ್ಲಿ ಸೋನಿಯಾ ಗಾಂಧಿ, ವೇಣುಗೋಪಾಲ್ ಸೇರಿದಂತೆ ಸಾಕಷ್ಟು ನಾಯಕರು ಭಾಗಿಯಾಗಿ ಕಾಂಗ್ರೆಸ್ ನೇತೃತ್ವದ ಇಂಡಿಯಾ ಒಕ್ಕೂಟ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರು. ಸಭೆ ಬಳಿಕ ಮಾತನಾಡಿದ AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಇಂಡಿಯಾ ಒಕ್ಕೂಟ ಕನಿಷ್ಟ ಪಕ್ಷ 295 ಸ್ಥಾನಗಳನ್ನು ಗೆಲ್ಲಲಿದೆ ಎಂದಿದ್ದರು.
![](https://pratidhvani.com/wp-content/uploads/2024/06/pm-modi-1024x576.webp)
ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ ಶಿವಕುಮಾರ್ ಕೂಡ ಸಮೀಕ್ಷೆಗಳ ಮೇಲೆ ವಿಶ್ವಾಸವಿಲ್ಲ, ನಾವು ಡಬಲ್ ಡಿಜಿಟ್ ದಾಟುತ್ತೇವೆ ಎಂದಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ 20 ಸ್ಥಾನಗಳಲ್ಲಿ ಗೆಲುವು ಕಾಣಲಿದೆ ಎಂದು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ಸೇರಿದಂತೆ ಬಹುತೇಕ ಎಲ್ಲಾ ನಾಯಕರು ವಿಶ್ವಾಸ ವ್ಯಕ್ತಪಡಿಸಿದ್ದರು. ಆದರೆ ಸಮೀಕ್ಷೆಯಲ್ಲಿ ಅತಿ ಹೆಚ್ಚು ಎಂದರೆ 4-8 ಸ್ಥಾನಗಳಿಗೆ ಕಾಂಗ್ರೆಸ್ ಗೆಲುವಿನ ಓಟ ಸ್ಥಗಿತ ಆಗಿದೆ. ಬಿಜೆಪಿ ಜೆಡಿಎಸ್ ಮೈತ್ರಿಕೂಟ 22-24 ಸ್ಥಾನಗಳನ್ನು ನೀಡಲಾಗಿದೆ. ಹೀಗಾಗಿ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವೇ ಇದ್ದರೂ ಜನರಿಗೆ ಗ್ಯಾರಂಟಿ ಯೋಜನೆಗಳನ್ನು ಅಚ್ಚುಕಟ್ಟಾಗಿ ಕೊಟ್ಟರೂ ಮತದಾರರು ಕೈ ಹಿಡಿದಿಲ್ಲ ಎನ್ನುವಂತಾಗಿದೆ.
![](https://pratidhvani.com/wp-content/uploads/2024/06/PM-Narendra-Modi-Mangalore-Roadshow-1.jpg)
ಸಮೀಕ್ಷೆಗಳು ಸುಳ್ಳು ಎಂದು ಹೇಳಲಾಗುವುದಿಲ್ಲ. ಒಮ್ಮೊಮ್ಮೆ ಸಂಪೂರ್ಣ ಸತ್ಯ ಎಂದೂ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಯಾಕೆಂದರೆ ಲಕ್ಷಾಂತರ ಜನರ ನಡುವೆ ಸಮೀಕ್ಷೆ ನಡೆಸುವ ಸಂಸ್ಥೆಗಳು ಕೆಲವೇ ಸಾವಿರ ಜನರನ್ನು ಸಂದರ್ಶನ ಮಾಡುತ್ತಾರೆ. ಪ್ರದೇಶ ಹಾಗು ಆರ್ಥಿಕತೆ ಆಧಾರದಲ್ಲಿ ಜನರನ್ನು ವಿಂಗಡಣೆ ಮಾಡಿ ಜನರಿಂದಲೇ ಅಭಿಪ್ರಾಯ ಸಂಗ್ರಹ ಮಾಡಿರುತ್ತಾರೆ, ಹೀಗಿರುವಾಗ ಸಮೀಕ್ಷೆಗಳಲ್ಲಿ ಕೆಲವೇ ಸಾವಿರ ಜನರು ಭಾಗಿಯಾದರೂ ಅಭಿಪ್ರಾಯ ಅದೇ ರೀತಿಯಲ್ಲಿ ಹೊರ ಬೀಳುತ್ತದೆ. ಸಮೀಕ್ಷೆ ನಡೆಸುವಾಗ ಜನರೇ ಉದ್ದೇಶ ಪೂರ್ವಕವಾಗಿ ಸುಳ್ಳು ಮಾಹಿತಿ ನೀಡಿದ್ದರೆ ಮಾತ್ರ ಸಮೀಕ್ಷೆ ಉಲ್ಟಾ ಆಗುತ್ತದೆ. ಆ ರೀತಿ ಆಗಿರುವ ಸಾಕಷ್ಟು ಉದಾಹರಣೆಗಳೂ ಇವೆ. ಆದರೆ ಈ ಬಾರಿ ಎಲ್ಲಾ ಸಮೀಕ್ಷೆಗಳು ಒಂದೇ ರೀತಿ ಹೊರಬಿದ್ದಿರುವುದು ಸುಳ್ಳಾಗುತ್ತೆ ಅನ್ನೋದು ಅನುಮಾನ.
ಕೃಷ್ಣಮಣಿ