ಕರಾವಳಿ ಕಾಲೇಜುಗಳಲ್ಲಿ ಶುರುವಾದ ಹಿಜಾಬ್ ವಿರೋಧಿ ನಿಲುವು ಕರ್ನಾಟಕದಾದ್ಯಂತ ಪಸರಿಸಿದೆ. ಹಿಜಾಬ್ ಧರಿಸಿ ಬಂದರೆ ನಾವು ಕೇಸರಿ ಶಾಲು ಧರಿಸಿ ಬರುತ್ತೇವೆ ಎಂದು ಹಿಂದುತ್ವ ವಿದ್ಯಾರ್ಥಿಗಳು ಬೆದರಿಕೆ ಹಾಕುತ್ತಿದ್ದಾರೆ. ಈ ವಿದ್ಯಾರ್ಥಿಗಳ ಈ ನಡೆ ಸಂಘರ್ಷಕ್ಕೆ ಕಾರಣವಾಗಿದೆ. ತಾವು ಕಲಿಯುತ್ತಿರುವ ಕಾಲೇಜಿಗೆ ಕಲ್ಲೆಸೆದು, ಕಾಲೇಜಿನ ಧ್ವಜಸ್ತಂಭದಲ್ಲಿ ಭಗವಾಧ್ವಜ ಹಾರಿಸಿ, ಒಂಟಿ ಹುಡುಗಿಯನ್ನು ಬೆದರಿಸುವಂತೆ ಹುಡುಗರ ಗುಂಪು ಜೈ ಶ್ರೀರಾಂ ಕೂಗುತ್ತಾ ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆ ತರುವ ರೀತಿಯಲ್ಲಿ ವರ್ತಿಸಿದ್ದಾರೆ.
ಅದೇ ವೇಳೆ ಹಿಜಾಬ್ ಹಕ್ಕಿನ ಪರವಾಗಿ ನಿಂತವರು, ಉಡುಪಿ ಕಾಲೇಜಿನಲ್ಲಿ ತಿಂಗಳುಗಳ ಕಾಲ ತರಗತಿ ಪ್ರವೇಶಿಸದೆ ಹೊರಗೆ ಉಳಿದರು. ಅವರ ಪ್ರತಿಭಟನೆಯ ಸ್ವರೂಪವು ಯಾರಿಗೂ ಹಿಂಸೆಯನ್ನುಂಟು ಮಾಡುವ ರೀತಿಯಲ್ಲೋ, ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆ ತರುವ ರೀತಿಯಲ್ಲೋ ಇರಲಿಲ್ಲ. ಅದಾಗ್ಯೂ, ಕಾನೂನು ಪಾಲಕರ ಕಣ್ಣು ಹಿಂದುತ್ವವಾದಿ ವಿದ್ಯಾರ್ಥಿಗಳ ಕಡೆಗೆ ಚಲಿಸದೆ ಹಿಜಾಬ್ ಹಕ್ಕಿನ ಪರವಾಗಿ ಪ್ರತಿಭಟಿಸಿದ ವಿದ್ಯಾರ್ಥಿಗಳನ್ನು ಗುರಿ ಮಾಡುತ್ತಿದೆ.
ಇಲ್ಲಿ ಹಿಜಾಬ್ ಧರಿಸಿ ಬಂದಿರುವುದಕ್ಕೆ ಸಂಘರ್ಷಗಳನ್ನು ಸೃಷ್ಟಿಸಿದ್ದು ಹಿಂದುತ್ವವಾದಿ ವಿದ್ಯಾರ್ಥಿಗಳು ಮೇಲ್ನೋಟಕ್ಕೆ ಕಂಡು ಬಂರುತ್ತಿದ್ದರೂ, ಹಿಜಾಬ್ ಹಕ್ಕನ್ನು ಕೇಳಿದ ವಿದ್ಯಾರ್ಥಿನಿಯರ ಹಿಂದೆ ಸಿಎಫ್ಐ ಇದೆಯೇ, ರಾಜ್ಯದಲ್ಲಿ ಅಶಾಂತಿ ತೋರಲು ಸಿಎಫ್ಐ ಕುಮ್ಮಕ್ಕು ನೀಡಿದೆಯೇ ಎಂಬ ಮಾದರಿಯಲ್ಲಿ ತನಿಖೆ ನಡೆಯುತ್ತಿದೆ.
ಹಿಜಾಬ್ ಹಕ್ಕಿನ ಬೇಡಿಕೆಯಿಟ್ಟ ವಿದ್ಯಾರ್ಥಿನಿಯರ ಹಿಂದೆ ದೇಶದ್ರೋಹಿ ಸಂಘಟನೆಗಳ ಕೈವಾಡವಿದೆಯೆಂದು ಗೃಹ ಸಚಿವರು ಹೇಳಿಕೆ ನೀಡಿದರೆ, ಇತರೆ ಬಿಜೆಪಿ ಜನಪ್ರತಿನಿಧಿಗಳು ಹಿಜಾಬ್ ಬೇಕಾದರೆ ಪಾಕಿಸ್ತಾನಕ್ಕೆ ಹೋಗಿ, ಇದು ನಮ್ಮ(ಹಿಂದೂಗಳ) ದೇಶ ಎಂದು ಮಾತನಾಡಿ, ಮುಸ್ಲಿಮರನ್ನು ಪರಕೀಯರೆಂಬಂತೆ ಬಿಂಬಿಸುತ್ತಿದ್ದಾರೆ.
ಹಿಂದುತ್ವವಾದಿಗಳು ಹಾಗೂ ತನಿಖಾ ಸಂಸ್ಥೆಗಳು ಮುಸ್ಲಿಂ ಸಂಘಟನೆಗಳನ್ನು ಹೀಗೆ ಗುರಿ ಮಾಡುವುದರಲ್ಲಿ ಆಶ್ಚರ್ಯವೇನಿಲ್ಲ. ಆದರೆ, ಪ್ರಗತಿಪರ ವಲಯದಲ್ಲಿ ಈಗ ನಡೆಯುತ್ತಿರುವ ʼಪೊಲಿಟಿಕಲ್ ಕರೆಕ್ಟ್ನೆಸ್ʼ ಬಗೆಗಿನ ಚರ್ಚೆ ಬಹುಸಂಖ್ಯಾತ ಪ್ರಗತಿಪರರ ಜೊಳ್ಳನ್ನು ಬಯಲುಗೊಳಿಸಿದೆ. ಸಂಘಪರಿವಾರದ ವಿರುದ್ಧ ಸಿಎಫ್ಐ, ಪಿಎಫ್ಐ ಅಥವಾ ಎಸ್ಡಿಪಿಐ ಮಾಡುವ ಹೋರಾಟಗಳನ್ನು ಅವರು ಅನುಮಾನದಿಂದ ನೋಡುತ್ತಾರೆ. ಬೆಂಕಿಯೊಂದಿಗಿನ ಸರಸ ಎಂಬಂತೆ ಹೇಳುತ್ತಲೇ, ಅದರಿಂದ ಮುಸ್ಲಿಮರಿಗೆ ಮತ್ತಷ್ಟು ಸಮಸ್ಯೆ ಎಂದು ಹೇಳುತ್ತಿದ್ದಾರೆ.

ಹಿಜಾಬ್ ಅನ್ನು ನಿಷೇಧಿಸಬೇಕೆಂದು ಬಯಸುವ ಹಿಂದೂ ಮೂಲಭೂತವಾದಿಗಳಂತೆ, ಎಡ ಮತ್ತು ಪ್ರಗತಿಪರ ಹಿಂದೂಗಳು ಎಂದು ಕರೆಯಲ್ಪಡುವವರು ಕೂಡ ಹಿಂದುತ್ವದ ಕಾಲದಲ್ಲಿ ರಾಜಕೀಯ ಪ್ರಸ್ತುತತೆಗಾಗಿ ತಮ್ಮ ಹೋರಾಟದಲ್ಲಿ ಮುಸ್ಲಿಮರು ಹೇಗಾದರೂ ತಮ್ಮ ಧಾರ್ಮಿಕ ಚಿಹ್ನೆಗಳನ್ನು ಕಳಚಿಕೊಳ್ಳಬೇಕೆಂದು ಬಯಸುತ್ತಾರೆ. ಅಂದರೆ, ಬಹುತ್ವದ ಪರಿಕಲ್ಪನೆಯಲ್ಲಿ ಹಿಂದುತ್ವವನ್ನು ಸೋಲಿಸಲು ಸಾಧ್ಯವಾಗುವುದಿಲ್ಲವೆಂದು ಇವರು ತೀರ್ಮಾನಿಸಿಯೇ ಬಿಟ್ಟಿದ್ದಾರೆ.
ಈ ಪ್ರಕರಣವಂತೂ ನಿಜವಾದ ಕಾಳಜಿ ಇರುವ ಪ್ರಗತಿಪರರನ್ನು ಮತ್ತು ಅಲ್ಪಸಂಖ್ಯಾತರ ಮೇಲೆ ಅನುಕಂಪದಿಂದ ಕಾಳಜಿ ವಹಿಸುವ ಪ್ರಗತಿಪರರನ್ನು ಪ್ರತ್ಯೇಕಿಸಿದೆ. ಈ ಅನುಕಂಪ ಇರುವ ಪ್ರಗತಿಪರರು ಮುಸ್ಲಿಮರು ಹೇಗೆ ಮಾತಾಡಬೇಕೆಂದು ಷರಾ ಬರೆಯುತ್ತಾರೆ. ಹಿಂದುತ್ವ ಕಾಲದಲ್ಲಿ ನಿಮ್ಮ ಅಸ್ಮಿತೆಗಳೊಂದಿಗೆ ರಾಜಿ ಮಾಡಿ ಎಂದು ಸುಧಾರಣೆ ಬೋಧಿಸುತ್ತಿದ್ದಾರೆ. ಶೋಷಿತ ಸಮುದಾಯ ʼಪೊಲಿಟಿಕಲಿ ಕರೆಕ್ಟ್ನೆಸ್ʼನೊಂದಿಗೆ ಮಾತಾಡಬೇಕೆಂದು ಬಯಸುತ್ತಾರೆ. ಆದರೆ, ಈ ಪ್ರಗತಿಪರರಿಗೆ ಮತ್ತು ಶೋಷಿತರಿಗೆ ರಾಜಕೀಯ ಭಾಷೆಗಳು ದೊರೆತ ಪ್ರಿವಿಲೇಜ್ಗಳನ್ನು ಅರ್ಥ ಮಾಡಿಕೊಳ್ಳದೆ ವೈಚಾರಿಕ ಸಂವಾದವನ್ನು ಶೋಷಿತರೊಂದಿಗೆ ನಿರೀಕ್ಷಿಸುತ್ತಿದ್ದಾರೆ.
ಇಲ್ಲಿ ಭಾಷೆ, ಸಂವಾದ, ಡಿಬೇಟ್, ಚರ್ಚೆಗಳೆಲ್ಲವೂ ಕ್ಯಾಪಿಟಲ್ ಇರುವ ಸಮುದಾಯಗಳಿಗೆ ದಂಡಿಯಾಗಿ ಲಭಿಸಿದೆ. ಅದರಿಂದ ಲಭ್ಯವಾದ ಸ್ಪೇಸ್ನಲ್ಲಿ ನಿಂತುಕೊಂಡು ಪ್ರಗತಿಪರರು ಮುಸ್ಲಿಮರು ಹೀಗೆಯೇ ಮಾತಾಡಬೇಕೆಂದು ಬಯಸುತ್ತಾರೆ. ಮುಸ್ಲಿಮರಲ್ಲಿ ಎಷ್ಟು ಮಂದಿಗೆ ಈ ರಾಜಕೀಯ ಪರಿಭಾಷೆಗಳ ಬಗ್ಗೆ ಅರಿವಿದೆ? ಕನ್ನಡ ಸಾಹಿತ್ಯವಲಯಗಳಲ್ಲಿ, ಪ್ರಗತಿಪರ ವಲಯಗಳಲ್ಲಿ ಇನ್ನೂ ಯಾಕೆ ಮುಸ್ಲಿಮರ ಸಂಖ್ಯೆ 10-15 ರಲ್ಲೇ ಇದೆ? ಈ ಅನ್-ಪ್ರಿವಿಲೇಜ್ ಸಮುದಾಯದೊಂದಿಗೆ ಸಂವಾದ ಮಾಡುವಾಗ ಅವರಿಗೆ ದೊರೆತಿರುವ ಶಿಕ್ಷಣದ ಮಟ್ಟ ಏನಿದೆ? ಅವರ ತಲ್ಲಣಗಳನ್ನು ಹೇಳುವ ನುಡಿಗಟ್ಟು ಅವರಲ್ಲಿದೆಯಾ ಎನ್ನುದನ್ನೆಲ್ಲಾ ನೋಡಬೇಕಾಗುತ್ತದೆ.
ಅದನ್ನು ಬಿಟ್ಟು ದೇಶದಲ್ಲಿ ನೂರು ವರ್ಷಗಳ ಇತಿಹಾಸ ಇರುವ ಸಂಘಪರಿವಾರವನ್ನು ಮತ್ತು 2005 ರ ಬಳಿಕ ಹುಟ್ಟಿಕೊಂಡ ಪಿಎಫ್ಐ ಅಂತಹ ಸಂಘಟನೆಗಳನ್ನು ಒಂದೇ ತಕ್ಕಡಿಯಲ್ಲಿ ತುಲನೆ ಮಾಡುವುದು ʼಬ್ಯಾಲೆನ್ಸಿಂಗ್ ವಾದʼ ಆಗುತ್ತದೆಯೇ ಹೊರತು, ಅಲ್ಪಸಂಖ್ಯಾತ ಹಕ್ಕಿನ ಪರವಾದ ನಿಜದ ಕಾಳಜಿಯಾಗಿರುವುದಿಲ್ಲ.
ಅಷ್ಟಕ್ಕೂ ಬಹುಸಂಖ್ಯಾತ ಕೋಮುವಾದ ಮತ್ತು ಅಲ್ಪಸಂಖ್ಯಾತ ಕೋಮುವಾದವನ್ನು ಒಂದೇ ರೀತಿ ತೂಗುವುದೇ ರಾಜಕೀಯ ಅಪ್ರಬುಧ್ಧತೆ. ಅದರಲ್ಲೂ, ಬಹುಸಂಖ್ಯಾತ ಕೋಮುವಾದ ದೇಶದ ಆಡಳಿತದಲ್ಲಿ, ಕಾರ್ಯಾಂಗದಲ್ಲಿ, ನ್ಯಾಯಾಂಗದಲ್ಲಿ, ಶಿಕ್ಷಣ, ಮಾಧ್ಯಮ ಕ್ಷೇತ್ರಗಳಲ್ಲಿ ಭದ್ರವಾಗಿ ಕುಳಿತಿರುವಾಗ ಯಾವುದೇ ಅಧಿಕಾರ ಬಲವೂ ಇಲ್ಲದ, ಮಾಧ್ಯಮಗಳೂ ಇಲ್ಲದ ಸದಾ ಅನುಮಾನಾಸ್ಪದವಾಗಿರುವ ಸಮುದಾಯದ ಸಂಘಟನೆಗಳನ್ನು ಸೂಪರ್ ಪವರ್ ಹಿಂದುತ್ವದೊಂದಿಗೆ ತುಲನೆ ಮಾಡುವುದೇ ಹಾಸ್ಯಾಸ್ಪದ.
ಈ ಹಿನ್ನೆಲೆಯಲ್ಲಿ ಕನ್ನಡದ ಹಿರಿಯ ಕವಿ, ಲೇಖಕ ವಸಂತ ಬನ್ನಾಡಿ ಅವರು ಸಿಎಫ್ಐ ನಡೆವಳಿಕೆಗಳಲ್ಲಿ ತಕರಾರುಗಳನ್ನು ಇಟ್ಟುಕೊಂಡೇ ನೀಡಿರುವ ಹೇಳಿಕೆ ಹೆಚ್ಚು ಪ್ರಸ್ತುತ.
“’ಮುಸ್ಲಿಮ್ ಹುಡುಗಿಯರಿಗೆ ಶಿಕ್ಷಣ ಸಿಗಬೇಕಾದ್ದು ಮುಖ್ಯ ಎಂಬ ʼಪೊಲಿಟಿಕಲಿ ಕರೆಕ್ಟ್’ ಕರೆ ನೀಡುವವರಿಗೆ, ಮುಸ್ಲಿಂ ಹುಡುಗಿಯರು ಬಾಳಿ ಬದುಕಬೇಕಾದ ನೆಮ್ಮದಿಯ ವಾತಾವರಣ ಇಲ್ಲಿರಬೇಕಾದ್ದೂ ಮುಖ್ಯ ಎಂಬುದರ ಅರಿವಿಲ್ಲವೇ? ಹೇಳಿದ್ದೆಲ್ಲವನ್ನೂ ಕೇಳಿಸಿಕೊಂಡು ತಗ್ಗಿ ಬಗ್ಗಿ ನಡೆದರೆ ಎಲ್ಲವೂ ಸರಿ ಹೋಗಿಬಿಡುತ್ತದೆಯೇ? ವೈಚಾರಿಕ ಪ್ರಜ್ಞೆಯೂ ಜೊತೆ ಜೊತೆಗೆ ಅರಳಬೇಕಲ್ಲವೇ?”
ಹೊಸ ನುಡಿಗಟ್ಟುನ್ನು ಸೃಷ್ಟಿಸುವ ಶಕ್ತಿಯನ್ನೇ ಲೇಖಕರೂ ಬಿಜೆಪಿಯೇತರ ರಾಜಕೀಯ ಪಕ್ಷಗಳ ವಕ್ತಾರರೂ ಇಂದು ಕಳೆದುಕೊಳ್ಳುತ್ತಿದ್ದಾರೆ. ಎರಡೂ ಕಡೆಯ ಮತಾಂಧರನ್ನು ನಾವು ದೂರ ಇಡಬೇಕು ಎಂಬ ಅದೇ ಹಳೆಯ ಮಾತನ್ನು ಹೇಳುವ ಸಮಯ ಇದಲ್ಲ ಮತ್ತು ಇದು ಬರೀ ಮತಾಂಧತೆಯ ಪ್ರಶ್ನೆಯಲ್ಲ ಎಂದಿರುವುದು.
ಪ್ಯಾಲೆಸ್ತೀನ್ ವಿಷಯದಲ್ಲಿ ಕೂಡ ಇಸ್ರೇಲ್ ವಿರುದ್ಧ ಹೋರಾಡುತ್ತಿರುವವರು ಮುಸ್ಲಿಂ ಮತಾಂಧರು ಮಾತ್ರ ಎಂಬ ಚಿಂತನೆಯನ್ನು ಹರಿಯಬಿಡಲಾಗಿತ್ತಲ್ಲವೇ? ಆದರೆ ಅಲ್ಲಿನ ಕವಿಗಳು,ಲೇಖಕರು ಹೇಗೆ ಹೊಸ ನುಡಿಗಟ್ಟಿನಲ್ಲಿ, ಭಾಷೆಯಲ್ಲಿ ಮಾತನಾಡತೊಡಗಿದರು ಎಂಬುದು ನಮಗೆ ಗೊತ್ತಿಲ್ಲವೇ? ಬಹುಶಃ ಗೊತ್ತಿಲ್ಲ. ಗೊತ್ತಿದ್ದರೆ ಇದು ಎರಡೂ ಕಡೆಯ ಮತಾಂಧರ ಹೋರಾಟ ಎಂಬ ಹಳೆಯ ಸರಕನ್ನು ಈಗ ಇವರೆಲ್ಲ ಹೊರತೆಗೆಯತ್ತಿರಲಿಲ್ಲ.
ಪ್ಯಾಲೇಸ್ತೀನಿ ಲೇಖಕರನ್ನು ಇಂದಿಗೂ ಕಾಡುತ್ತಿರುವುದು ತಾವು ತಮ್ಮ ಸ್ವಂತ ನೆಲೆ ಕಳೆದುಕೊಂಡಿರುವ ದುಃಖ. ಇಂದಿನ ಭಾರತ ಸಂದರ್ಭದಲ್ಲಿ ಮುಸ್ಲಿಂಮರು ಎದುರಿಸುತ್ತಿರುವುದೂ ‘ನೀವು ಈ ನೆಲದವರಲ್ಲ’ಎಂಬ ದುಷ್ಟ ಮಾತುಗಳನ್ನು. ಅದನ್ನು ಹಿಂದೂ ರಾಷ್ಟ್ರವಾದಿಗಳು ಒಕ್ಕೊರಲಿಂದ ಹೇಳುತ್ತಿರುವ ಬೆಂಕಿಯಂತಹ ವಾಸ್ತವವನ್ನು. ವಿದ್ಯಾರ್ಥಿಗಳ ಬಾಯಿಂದಲೂ ಅದನ್ನುಅವರು ಹೇಳಿಸುತ್ತಿದ್ದಾರಲ್ಲವೇ?
ಅಲ್ಲಿ ಕಾಣಿಸುತ್ತಿರುವುದು,’ನೀವು ನಮ್ಮ ಮಾತುಗಳನ್ನು ಕೇಳಿಕೊಂಡು ಎರಡನೆಯ ದರ್ಜೆ ಪ್ರಜೆಗಳಾಗಿ ಬದುಕಾದ್ದು’ ಎಂಬ ಠೇಂಕಾರವಲ್ಲವೇ?ಇದನ್ನು ಗ್ರಹಿಸದೇ ಏನು ಮಾತನಾಡಿದರೂ ಅವು ಒಣ ಮಾತುಗಳಷ್ಟೇ. ಶಿಶುನಾಳ ಶರೀಫ ಮತ್ತು ಗೋವಿಂದ ಭಟ್ಟರ ಸೌಹಾರ್ದ ಸಂಬಂಧದ ಬಗ್ಗೆ ಹೇಳಿಕೊಂಡು ಉಪದೇಶ ಕೊಡುವ ಸಂದರ್ಭವೇ ಇದು?
ಕಳೆದ ಮೂವತ್ತು ವರ್ಷಗಳಿಂದ ಅದರಲ್ಲೂ ಕಳೆದ ಏಳು ವರ್ಷಗಳಿಂದ ಭಾರತದಲ್ಲಿ ಏನಾಯಿತು ಎಂಬುದರ ಕುರಿತ ಪ್ರಖರ ತಿಳುವಳಿಕೆ ಇಂದಿನ ಅವಶ್ಯಕತೆ. ಆ ಹಿನ್ನೆಲೆಯಲ್ಲಿ ನಮ್ಮ ಮಾತುಗಳು ಹೊರಡಬೇಕಾಗಿದೆ.” -ವಸಂತ ಬಿ ಬನ್ನಾಡಿ

(ವಸಂತ ಬನ್ನಾಡಿಯವರ ಸಂಪೂರ್ಣ ಬರೆಹಕ್ಕಾಗಿ ಈ ಲಿಂಕ್ ಕ್ಲಿಕ್ ಮಾಡಿ.)
ಯಹೂದಿ ಕುಟುಂಬದಲ್ಲಿ ಜನಿಸಿ, ನಾಝಿ ಹತ್ಯಾಕಾಂಡದಲ್ಲಿ ಬದುಕುಳಿದ ರಾಜಕೀಯ ತತ್ವಜ್ಞಾನಿ, 20 – 21 ನೇ ಶತಮಾನದ ರಾಜಕೀಯ ಸಿದ್ಧಾಂತಗಳ ಮೇಲೆ ಪ್ರಭಾವ ಬೀರಿದ ಲೇಖಕಿ ಹನ್ನಾ ಅರೆಂಡ್ಟ್ ಅವರ ಈ ಹೇಳಿಕೆಯೂ ತುಂಭಾ ಮುಖ್ಯವೆನಿಸುತ್ತದೆ.
“ಒಬ್ಬರು ಯಹೂದಿ ಅನ್ನುವ ಕಾರಣಕ್ಕೆ ದಾಳಿಗೊಳಗಾದರೆ, ಅದನ್ನು ಯಹೂದಿಯಾಗಿಯೇ ಎದುರಿಸಬೇಕು ಹೊರತು, ಜರ್ಮನ್ನಾಗಿಯೋ, ವಿಶ್ವ ನಾಗರಿಕನಾಗಿಯೋ ಅಥವಾ ಮನುಷ್ಯನ ಹಕ್ಕುಗಳ ಎತ್ತಿಹಿಡಿಯುವವನಾಗಿಯೋ ಅಲ್ಲ” – ಹನ್ನಾ ಅರೆಂಡ್ಟ್

ಒಟ್ಟಾರೆ, ಈ ಹಿಜಾಬ್ ಪ್ರಕರಣದ ಕಾರಣದಿಂದಾದರೂ ಕರ್ನಾಟಕ ಪ್ರಗತಿಪರ ವಲಯದಲ್ಲಿ ರಾಜಕೀಯ ಸಿದ್ದಾಂತಗಳ ಬಗ್ಗೆ ಚರ್ಚೆಗಳಾಗಲಿ, ಸಿದ್ದಾಂತಗಳ ವಿಮರ್ಷೆಗಳಾಗಲಿ. ಬಹುಸಂಖ್ಯಾತ ಕೋಮುವಾದದ ವಿರುದ್ಧ ಜಾತ್ಯಾತೀತ ಮನಸ್ಸುಗಳ ಪ್ರಬಲ ನುಡಿಗಟ್ಟು ಸೃಷ್ಟಿಸುವಂತಾಗಲಿ.
ಸೂ: ಲೇಖನದ ನಿಲುವು, ಅಭಿಪ್ರಾಯ ಲೇಖಕರ ಸ್ವಂತದ್ದು






