ಬೆಂಗಳೂರು ನಗರದ ಹೃದಯಭಾಗದಲ್ಲಿರುವ ಪ್ರತಿಷ್ಠಿತ ಹಾಗೂ ಐತಿಹಾಸಿಕ ‘ಸೆಂಚುರಿ ಕ್ಲಬ್’ ಕುರಿತು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಮಾಹಿತಿ ಹಕ್ಕು ಕಾಯ್ದೆ (RTI) ಅಡಿಯಲ್ಲಿ ಕ್ಲಬ್ ಅನ್ನು ‘ಸಾರ್ವಜನಿಕ ಪ್ರಾಧಿಕಾರ’ (Public Authority) ಎಂದು ಘೋಷಿಸಿದ್ದ ಏಕಸದಸ್ಯ ಪೀಠದ ಆದೇಶವನ್ನು ಹೈಕೋರ್ಟ್ನ ವಿಭಾಗೀಯ ಪೀಠ ಎತ್ತಿಹಿಡಿದಿದ್ದು, ಸೆಂಚುರಿ ಕ್ಲಬ್ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ವಜಾಗೊಳಿಸಿದೆ.

ಈ ತೀರ್ಪಿನೊಂದಿಗೆ ಇನ್ಮುಂದೆ ಸೆಂಚುರಿ ಕ್ಲಬ್ನ ಆಡಳಿತ, ಹಣಕಾಸು ವ್ಯವಹಾರಗಳು, ನಿಯಮಾವಳಿಗಳು ಹಾಗೂ ಇತರ ದಾಖಲೆಗಳು ಮಾಹಿತಿ ಹಕ್ಕು ಕಾಯ್ದೆಯಡಿ ಸಾರ್ವಜನಿಕರ ಪರಿಶೀಲನೆಗೆ ಲಭ್ಯವಾಗಲಿವೆ.ನ್ಯಾಯಮೂರ್ತಿ ಅನು ಶಿವರಾಮನ್ ಹಾಗೂ ನ್ಯಾಯಮೂರ್ತಿ ಟಿ. ವೆಂಕಟೇಶ್ ನಾಯಕ್ ಅವರಿದ್ದ ವಿಭಾಗೀಯ ಪೀಠ ಈ ಮಹತ್ವದ ಆದೇಶ ನೀಡಿದೆ. ಕ್ಲಬ್ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾಯಪೀಠ, ಸ್ವಾತಂತ್ರ್ಯಪೂರ್ವದಲ್ಲಿ ಸರ್ಕಾರದಿಂದ ಉಚಿತವಾಗಿ ನೀಡಲಾದ ಅಮೂಲ್ಯ ಭೂಮಿಯ ಬಳಕೆ ಸರ್ಕಾರದ ‘ಪರೋಕ್ಷ ಧನಸಹಾಯ’ (Indirect Funding)ಕ್ಕೆ ಸಮಾನವಾಗಿದೆ ಎಂದು ಸ್ಪಷ್ಟಪಡಿಸಿದೆ.

ನ್ಯಾಯಾಲಯದ ಗಮನ ಸೆಳೆದ ಪ್ರಮುಖ ಅಂಶವೆಂದರೆ, 1913ರಲ್ಲಿ ಆಗಿನ ಮೈಸೂರು ಸಂಸ್ಥಾನದ ಆಡಳಿತದ ಅವಧಿಯಲ್ಲಿ ಕಬ್ಬನ್ ಪಾರ್ಕ್ನಲ್ಲಿರುವ ಸುಮಾರು 7.5 ಎಕರೆ ಸರ್ಕಾರಿ ಭೂಮಿಯನ್ನು ಸೆಂಚುರಿ ಕ್ಲಬ್ಗೆ ಉಚಿತವಾಗಿ ನೀಡಲಾಗಿತ್ತು. ಇಂದಿನ ದಿನಗಳಲ್ಲಿ ಈ ಭೂಮಿಯ ಮೌಲ್ಯ ನೂರಾರು ಅಥವಾ ಸಾವಿರಾರು ಕೋಟಿ ರೂಪಾಯಿಗಳಷ್ಟಿರಬಹುದು ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.”ಈ ಅತ್ಯಮೂಲ್ಯ ಸರ್ಕಾರಿ ಭೂಮಿಯಿಲ್ಲದೆ ಕ್ಲಬ್ನ ಅಸ್ತಿತ್ವವೇ ಸಾಧ್ಯವಾಗುತ್ತಿರಲಿಲ್ಲ. ಸದಸ್ಯರು ಪಾವತಿಸುವ ವಾರ್ಷಿಕ ಚಂದಾ ಹಣ ಈ ಭೂಮಿಯ ಮೌಲ್ಯದ ಮುಂದೆ ಅತ್ಯಲ್ಪವಾಗಿದೆ. ಹೀಗಾಗಿ ಈ ಉಚಿತ ಭೂಮಿ ಸರ್ಕಾರದ ಪರೋಕ್ಷ ಧನಸಹಾಯವೆಂದೇ ಪರಿಗಣಿಸಬೇಕು” ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ತಿಳಿಸಿದೆ.

ಕ್ಲಬ್ನ ಎಲ್ಲಾ ಕ್ರೀಡಾ, ಸಾಮಾಜಿಕ ಹಾಗೂ ಮನರಂಜನಾ ಚಟುವಟಿಕೆಗಳು ಇದೇ ಸರ್ಕಾರಿ ಭೂಮಿಯಲ್ಲಿ ನಡೆಯುತ್ತಿರುವುದರಿಂದ, ಅದು ಸಾರ್ವಜನಿಕ ಆಸ್ತಿಯ ಪ್ರಯೋಜನ ಪಡೆಯುತ್ತಿದೆ. ಈ ಕಾರಣದಿಂದ ಮಾಹಿತಿ ಆಯೋಗ ನೀಡಿದ್ದ ಆದೇಶ ಹಾಗೂ ಏಕಸದಸ್ಯ ಪೀಠದ ತೀರ್ಪು ಕಾನೂನುಬದ್ಧವಾಗಿದ್ದು, ಅದರಲ್ಲಿ ಹಸ್ತಕ್ಷೇಪ ಮಾಡುವ ಅಗತ್ಯವಿಲ್ಲ ಎಂದು ವಿಭಾಗೀಯ ಪೀಠ ಸ್ಪಷ್ಟಪಡಿಸಿದೆ.
ಸೆಂಚುರಿ ಕ್ಲಬ್ ಪರ ವಕೀಲರು, ಕ್ಲಬ್ ಸಂಪೂರ್ಣ ಖಾಸಗಿ ಸದಸ್ಯತ್ವದ ಸಂಸ್ಥೆಯಾಗಿದ್ದು, ಅದರ ಎಲ್ಲಾ ವೆಚ್ಚಗಳನ್ನು ಸದಸ್ಯರ ಚಂದಾದ ಮೂಲಕವೇ ಭರಿಸಲಾಗುತ್ತದೆ. ಸ್ವಾತಂತ್ರ್ಯಪೂರ್ವದಲ್ಲಿ ದೊರೆತ ಭೂಮಿಯನ್ನು ಸರ್ಕಾರದ ಧನಸಹಾಯ ಎಂದು ಪರಿಗಣಿಸಲಾಗದು. ಆದ್ದರಿಂದ ಕ್ಲಬ್ನ್ನು ಸಾರ್ವಜನಿಕ ಪ್ರಾಧಿಕಾರವೆಂದು ಘೋಷಿಸುವುದು ಸರಿಯಲ್ಲ ಎಂದು ವಾದಿಸಿದ್ದರು.ಆದರೆ ಈ ವಾದವನ್ನು ಒಪ್ಪದ ನ್ಯಾಯಪೀಠ, ಸಾರ್ವಜನಿಕ ಆಸ್ತಿಯ ಉಚಿತ ಬಳಕೆ ಸ್ವತಃ ಸರ್ಕಾರದ ಪರೋಕ್ಷ ಸಹಾಯಕ್ಕೆ ಸಮಾನವಾಗುತ್ತದೆ ಎಂದು ಹೇಳಿ ಮೇಲ್ಮನವಿಯನ್ನು ವಜಾಗೊಳಿಸಿದೆ.

ಈ ಪ್ರಕರಣದ ಆರಂಭ 2012ರಲ್ಲಿ ನಡೆದಿದೆ. ಸಾಮಾಜಿಕ ಕಾರ್ಯಕರ್ತ ಎಸ್. ಉಮಾಪತಿ ಅವರು ಮಾಹಿತಿ ಹಕ್ಕು ಕಾಯ್ದೆಯಡಿ ಸೆಂಚುರಿ ಕ್ಲಬ್ನ ನಿಯಮಾವಳಿ ಹಾಗೂ ಆಡಳಿತಕ್ಕೆ ಸಂಬಂಧಿಸಿದ ದಾಖಲೆಗಳ ಮಾಹಿತಿಯನ್ನು ಕೋರಿದ್ದರು. ಆದರೆ, ತಾವು ಖಾಸಗಿ ಸಂಸ್ಥೆಯಾಗಿರುವುದರಿಂದ RTI ಕಾಯ್ದೆ ಅನ್ವಯಿಸುವುದಿಲ್ಲ ಎಂದು ಕ್ಲಬ್ ಮಾಹಿತಿ ನೀಡಲು ನಿರಾಕರಿಸಿತ್ತು.
ಇದನ್ನು ಪ್ರಶ್ನಿಸಿ ಉಮಾಪತಿ ರಾಜ್ಯ ಮಾಹಿತಿ ಆಯೋಗದ ಮೊರೆ ಹೋಗಿದ್ದರು. ವಿಚಾರಣೆ ನಡೆಸಿದ್ದ ಮಾಹಿತಿ ಆಯೋಗ, 1913ರಲ್ಲಿ ಮೈಸೂರು ಮಹಾರಾಜ ನರಸಿಂಹರಾಜ ಒಡೆಯರ್ ಹಾಗೂ ಸರ್ ಎಂ. ವಿಶ್ವೇಶ್ವರಯ್ಯ ಅವರ ಅವಧಿಯಲ್ಲಿ ಕ್ಲಬ್ಗೆ ಕಬ್ಬನ್ ಪಾರ್ಕ್ನಲ್ಲಿರುವ 7.5 ಎಕರೆ ಸರ್ಕಾರಿ ಭೂಮಿಯನ್ನು ಉಚಿತವಾಗಿ ನೀಡಲಾಗಿತ್ತು. ಇಂತಹ ಅಮೂಲ್ಯ ಸಾರ್ವಜನಿಕ ಆಸ್ತಿಯ ಉಚಿತ ಬಳಕೆ ಸರ್ಕಾರದ ಪರೋಕ್ಷ ಧನಸಹಾಯವಾಗಿರುವುದರಿಂದ ಕ್ಲಬ್ RTI ವ್ಯಾಪ್ತಿಗೆ ಬರುತ್ತದೆ ಎಂದು ಆದೇಶಿಸಿತ್ತು.
ಆ ಆದೇಶವನ್ನು ಹೈಕೋರ್ಟ್ನ ಏಕಸದಸ್ಯ ಪೀಠವೂ ಎತ್ತಿಹಿಡಿದಿತ್ತು. ಇದೀಗ ವಿಭಾಗೀಯ ಪೀಠವೂ ಅದನ್ನೇ ಸಮರ್ಥಿಸಿದ್ದು, ಸೆಂಚುರಿ ಕ್ಲಬ್ ಮೇಲ್ಮನವಿಯನ್ನು ವಜಾಗೊಳಿಸಿದೆ.ಈ ತೀರ್ಪು ಮಾಹಿತಿ ಹಕ್ಕು ಕಾಯ್ದೆಯ ವ್ಯಾಪ್ತಿಯ ಕುರಿತು ಮಹತ್ವದ ನಿದರ್ಶನವಾಗಿದ್ದು, ಸರ್ಕಾರಿ ಭೂಮಿ ಅಥವಾ ಸಾರ್ವಜನಿಕ ಸಂಪನ್ಮೂಲಗಳ ಸೌಲಭ್ಯ ಪಡೆದು ಕಾರ್ಯನಿರ್ವಹಿಸುವ ಖಾಸಗಿ ಸಂಸ್ಥೆಗಳಿಗೂ RTI ಅನ್ವಯಿಸಬಹುದೆಂಬ ಸಂದೇಶವನ್ನು ನೀಡಿದೆ.






