ಕೋವಿಡ್ ಹಿನ್ನೆಲೆಯಲ್ಲಿ ಶಾಲೆ ಪುನರಾರಂಭ ಕುರಿತಾದ ಮನವಿಯ ವಿಚಾರಣೆ ನಡೆಸಿದ ಪೀಠವು ಶಾಲೆ ಪುನಾರಂಭವಾದಾಗ ಮಕ್ಕಳಲ್ಲಿ ಸೋಂಕು ಹರಡದಂತೆ ಎಚ್ಚರವಹಿಸಬೇಕು ಎಂದು ಹೇಳಿದೆ.
ಶಾಲೆಗಳ ಬೋಧಕ ಮತ್ತು ಬೋಧಕೇತರ ಶಿಕ್ಷಕರನ್ನು ಕೊರೋನಾ ಫ್ರಂಟ್ ಲೈನ್ ಕಾರ್ಯಕರ್ತರೆಂದು ಪರಿಗಣಿಸಿ ಎಲ್ಲರಿಗೂ ಕಡ್ಡಾಯವಾಗಿ ಲಸಿಕೆ ನೀಡಲು ಕರ್ನಾಟಕ ಹೈಕೋರ್ಟ್ ಸಿಎಂ ಬೊಮ್ಮಾಯಿ ಸರ್ಕಾರಕ್ಕೆ ಖಡಕ್ ಸೂಚನೆ ಕೊಟ್ಟಿದೆ. ಬೋಧಕರು ಮತ್ತು ಬೋಧಕರೇತರರನ್ನು ಮುಂಚೂಣಿ ಕಾರ್ಯಕರ್ತರ ಪಟ್ಟಿಗೆ ಸೇರ್ಪಡೆಗೊಳಿಸುವಂತೆ ರಾಜ್ಯ ಸರ್ಕಾರಕ್ಕೆ ‘ಹೈ’ ಆದೇಶಿಸ ಸಿಕ್ಕಿದೆ. ಈವರೆಗೆ ಒಟ್ಟು ಲಸಿಕೆ ಕೊಡಮಾಡಿರುವ ಸರ್ಕಾರಿ ಮತ್ತು ಅನುದಾನಿತ ಶಾಲೆಯ ಬೋಧಕರು ಮತ್ತು ಬೋಧಕೇತರರ ಜಿಲ್ಲಾವಾರು ಪಟ್ಟಿಯನ್ನು ವರದಿ ರೂಪದಲ್ಲಿ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ನ್ಯಾಯಮೂರ್ತಿಗಳಾದ ಬಿ ವಿ ನಾಗರತ್ನ ಮತ್ತು ಪಿ ಕೃಷ್ಣ ಭಟ್ ಅವರಿದ್ದ ವಿಭಾಗೀಯ ಪೀಠ ನಿರ್ದೇಶಿಸಿದೆ.
ಕೊರೋನಾ ಕಾರಣದಿಂದ ಇನ್ನೂ ಶಾಲೆಯನ್ನು ತೆರೆಯಲು ರಾಜ್ಯ ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಶಾಲೆ ಓಪನ್ ಮಾಡುವ ಬಗ್ಗೆ ತಜ್ಞರು ಹಾಗೂ ಶಿಕ್ಷಣ ಪಂಡಿತರು ಸಲಹೆ ಸೂಚನೆಗಳನ್ನು ಕೊಡುತ್ತಿದ್ದಾರೆ. ಆದರೆ ಶಾಲೆಯನ್ನು ತೆರೆಯುವುದು ನಂತರ, ಅದಕ್ಕೂ ಮೊದಲು ಲಸಿಕೆ ಸಮರ್ಪಕ ರೀತಿಯಲ್ಲಿ ಹಂಚಿಕೆಯಾಗಬೇಕು ಎಂದು ನ್ಯಾ. ನಾಗರತ್ನ ಹಾಗೂ ನ್ಯಾ. ಕೃಷ್ಣ ಭಟ್ ಅಭಿಪ್ರಾಯಪಟ್ಟಿದೆ. ರಾಜ್ಯದಲ್ಲಿ ಕೋವಿಡ್ ಪರಿಸ್ಥಿತಿ ಮತ್ತು ತಜ್ಞರ ಅಭಿಪ್ರಾಯ ಆಧರಿಸಿ ರಾಜ್ಯ ಸರ್ಕಾರವು ಶಾಲೆ ಪುನಾರಂಭ ದಿನಾಂಕ ನಿರ್ಧರಿಸಲಿದೆ. ಈ ವಿಚಾರದಲ್ಲಿ ಇಂದೇ ಶಾಲೆಯನ್ನು ಪುನಾರಂಭಿಸಬೇಕು ಎಂದು ಸರ್ಕಾರಕ್ಕೆ ನಿರ್ದೇಶನ ನೀಡಲಾಗದು ಎಂದು ನ್ಯಾಯಾಲಯ ಹೇಳಿದೆ.
ಕೋವಿಡ್ ಪ್ರಕರಣಗಳಲ್ಲಿ ಇಳಿಕೆ ಕಂಡಾಗ ಸರ್ಕಾರವು ಎಸ್ಎಸ್ಎಲ್ಸಿ ಪರೀಕ್ಷೆ ನಡೆಸಿದೆ. ಈಗ ಕೆಲವು ಜಿಲ್ಲೆಗಳಲ್ಲಿ ಮತ್ತೆ ಕೋವಿಡ್ ಸಂಖ್ಯೆ ಹೆಚ್ಚಾಗುತ್ತಿದೆ. ಈ ಕುರಿತು ರಾಜ್ಯ ಸರ್ಕಾರವು ನಿರ್ಧಾರ ಕೈಗೊಳ್ಳಲಿದೆ. ಶಾಲೆಗಳು ಪುನರರಾಂಭವಾಗುವಾಗ ಮಕ್ಕಳಲ್ಲಿ ವೈರಸ್ ವ್ಯಾಪಿಸಬಾರದಂತೆ ಎಚ್ಚರಿಕೆ ವಹಿಸಿಕೊಳ್ಳಲು ಸರ್ಕಾರಕ್ಕೆ ಉಚ್ಛ ನ್ಯಾಯಾಲಯ ಕಿವಿ ಹಿಂಡಿದೆ.

ಶಾಲೆ ಪುನಾರಂಭ ಕುರಿತು ನಿರ್ಧರಿಸಲು ವಿಶೇಷ ಸಮಿತಿಯನ್ನು ರಚಿಸಲಾಗಿದೆ ಎಂದು ಸರ್ಕಾರವು ಹಿಂದಿನ ವಿಚಾರಣೆಯ ವೇಳೆ ನ್ಯಾಯಾಲಯಕ್ಕೆ ತಿಳಿಸಿತ್ತು. ಜುಲೈ 15ರಂದು ಸಮಿತಿಯ ಶಿಫಾರಸ್ಸುಗಳನ್ನು ರಾಜ್ಯ ಸರ್ಕಾರದ ಮುಂದೆ ಮಂಡಿಸಲಾಗಿದೆ. ಶಾಲೆ ಪುನಾರಂಭ ಕುರಿತು ಸರ್ಕಾರ ನಿರ್ಧರಿಸಲಿದೆ ಎಂದು ನ್ಯಾಯಾಲಯಕ್ಕೆ ತಿಳಿಸಲಾಗಿತ್ತು.
ಅರ್ಜಿದಾರರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲೆ ಜಯ್ನಾ ಕೊಠಾರಿ ಅವರು ಬೋಧಕರ ಜೊತೆಗೆ ಬೋಧಕೇತರರಿಗೂ ಲಸಿಕೆ ನೀಡಬೇಕು ಎಂದರು. ಭೌತಿಕವಾಗಿ ಶಾಲೆಯಲ್ಲಿ ಮಕ್ಕಳ ಹಾಜರಾತಿ ಆರಂಭವಾಗುವುದಕ್ಕೂ ಮುನ್ನ ಶಾಲೆಯನ್ನು ಸ್ಯಾನಿಟೈಸ್ ಮತ್ತು ಸ್ವಚ್ಛಗೊಳಿಸಬೇಕು. ಶಿಕ್ಷಕರು ಮತ್ತು ಸಿಬ್ಬಂದಿಗೆ ಕೋವಿಡ್ ಶಿಷ್ಟಾಚಾರದ ಕುರಿತು ವಿಶೇಷ ತರಬೇತಿ ನೀಡಬೇಕು. ಅಗತ್ಯವಾದ ಎಲ್ಲ ಕ್ರಮಗಳನ್ನೂ ಕೈಗೊಳ್ಳಬೇಕು ಎಂದು ನ್ಯಾಯಾಲಯ ಹೇಳಿದೆ. ಇದೇ ವೇಳೆ ಮಕ್ಕಳು ಭೌತಿಕವಾಗಿ ಶಾಲೆಗೆ ತೆರಳುವುದಕ್ಕೂ ಮುನ್ನ ಕೈಗೊಳ್ಳಬೇಕಾದ ಕ್ರಮಗಳ ಕುರಿತು ನಿರ್ಧರಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಜಯ್ನಾ ಕೊಠಾರಿ ಪೀಠಕ್ಕೆ ಕೋರಿದರು. ಇನ್ನು ಈ ಪ್ರಕರಣದ ವಿಚಾರಣೆಯನ್ನು ಆಗಸ್ಟ್ 12ಕ್ಕೆ ಮುಂದೂಡಲಾಗಿದೆ.



