ಕಾಂಗ್ರೆಸ್ ಪಕ್ಷ ಚುನಾವಣಾ ಪೂರ್ವದಲ್ಲಿ ಘೋಷಣೆ ಮಾಡಿದ್ದ 5 ಗ್ಯಾರಂಟಿಗಳಲ್ಲಿ ಈಗಾಗಲೇ 3 ಗ್ಯಾರಂಟಿಗಳು ಜಾರಿಯಾಗಿದ್ದು, ಇಂದು ನಾಲ್ಕನೇ ಗ್ಯಾರಂಟಿ ಗೃಹಲಕ್ಷ್ಮೀ ಯೋಜನೆ ಜಾರಿ ಆಗುತ್ತಿದೆ. ಗ್ಯಾರಂಟಿಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯಲ್ಲಿ ಪ್ರತಿ ಮನೆಯ ಯಜಮಾನಿಗೆ ಪ್ರತಿ ತಿಂಗಳು 2 ಸಾವಿರ ರೂಪಾಯಿ ನಗದು ನೀಡಲಾಗುತ್ತದೆ. ಆದರೆ ಈ ಯೋಜನೆಯಲ್ಲಿ ಯಾರಿಗೆಲ್ಲಾ ಲಾಭ ಸಿಗಲಿದೆ..? ಗಂಡ ITR ಫೈಲ್ ಮಾಡಿದ್ರೂ ಯೋಜನೆ ಲಾಭ ಸಿಗಲ್ವಾ..? ಆನ್ಲೈನ್ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದಾ..? ಅನ್ನೋ ಸಾಕಷ್ಟು ಗೊಂದಲಗಳಿಗೆ ಉತ್ತರ ಸಿಗಬೇಕಿದೆ. ಇಂದು ಸಂಜೆ 5 ಗಂಟೆಯಿಂದ ಅಧಿಕೃತವಾಗಿ ಯೋಜನೆ ಜಾರಿ ಆಗಲಿದ್ದು, ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ.
ಅರ್ಜಿ ಸಲ್ಲಿಕೆ ಅಷ್ಟೆ.. ಮುಂದಿನ ತಿಂಗಳು ಹಣ ವರ್ಗ..!

ಗೃಹಲಕ್ಷ್ಮೀ ಯೋಜನೆಗೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್ ಚಾಲನೆ ನೀಡಲಿದ್ದಾರೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಈ ಬಗ್ಗೆ ಮಾತನಾಡಿದ್ದು, ಸರಳವಾಗಿ ಮಹಿಳೆಯರಿಗೆ ಯೋಜನೆ ತಲುಪಿಸಲು ಕ್ರಮ ಕೈಗೊಂಡಿದ್ದು, ಮನೆಯ ಮುಖ್ಯಸ್ಥೆಗೆ ಹಣ ತಲುಪಲಿದೆ. ಈಗಾಗಲೇ ಪಡಿತರ ಚೀಟಿಯಲ್ಲಿ ಮನೆಯ ಮುಖ್ಯಸ್ಥರೆಂದು ನಮೂದು ಆಗಿರುವ ಹೆಸರಿನ ಮಹಿಳೆಯ ಬ್ಯಾಂಕ್ ಖಾತೆಗೆ ಹಣ ತಲುಪಲಿದ್ದು, ಮಹಿಳೆಯ ಆಧಾರ್ ಕಾರ್ಡ್ ಮತ್ತು ಗಂಡನ ಆಧಾರ್ ಕಾರ್ಡ್ ಕಡ್ಡಾಯ. ಜೊತೆಗೆ ಪಡಿತರ ಚೀಟಿ ಸಲ್ಲಿಕೆ ಮಾಡಬೇಕು. ಇಂದಿನಿಂದ ಅರ್ಜಿ ಸ್ವೀಕಾರ ಮಾಡಲಿದ್ದು, ಆಗಸ್ಟ್ ತಿಂಗಳಲ್ಲಿ ಬ್ಯಾಂಕ್ ಖಾತೆಗೆ ಹಣ ಜಮಾವಣೆ ಆಗಲಿದೆ.
ಅರ್ಜಿ ಸಲ್ಲಿಕೆ ಮಾಡುವುದು ಹೇಗೆ..? ಆನ್ಲೈನ್ ಆಗುತ್ತಾ..?
ಮಹಿಳೆಯರನ್ನು ಆರ್ಥಿಕವಾಗಿ ಸ್ವಾವಲಂಬನೆ ಮಾಡಬೇಕು ಎನ್ನುವ ಉದ್ದೇಶದಿಂದ ರಾಜ್ಯ ಸರ್ಕಾರ ಈ ಯೋಜನೆ ಜಾರಿ ಮಾಡಲು ಮುಂದಾಗಿದೆ. ಪ್ರತಿ ವರ್ಷ 30 ಸಾವಿರ ಕೋಟಿ ರೂಪಾಯಿ ಯೋಜನೆ ಇದಾಗಿದ್ದು, ಎಲ್ಲಾ ಮಹಿಳೆಯರು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಕೆ ಮಾಡುವಾಗ ಗಂಡ ಟ್ಯಾಕ್ಸ್ ಪೇಯರ್ ಆದರೆ ಆಗಲೇ ಅರ್ಜಿ ತಿರಸ್ಕೃತ ಆಗಲಿದೆ. ಆಧಾರ್ ಕಾರ್ಡ್, ರೇಷನ್ ಕಾರ್ಡ್ ಅಪ್ಡೇಟ್ ಮಾಡುವಾಗಲೇ ಮೊಬೈಲ್ ನಂಬರ್ಗೆ SMS ಬರಲಿದೆ. ಒಂದು ವೇಳೆ SMS ಬಾರದಿದ್ದರೆ 81475 00500 ನಂಬರಿಗೆ ಪಡಿತರ ಚೀಟಿ ನಂಬರ್ ಮೆಸೇಜ್ ಮಾಡಬೇಕು. SMS ಮಾಡಿದ ತಕ್ಷಣ ಅವರಿಗೆ ನಿಗಧಿ ಪಡಿಸಿದ ಸ್ಥಳ, ಸಮಯ ಬರುತ್ತದೆ. ಆ ನಂತರ ಸಮಯದ ಆಧಾಯದಲ್ಲಿ ಅರ್ಜಿ ಸಲ್ಲಿಕೆ ಮಾಡಬಹುದು. ಆದರೆ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಕೆ ಅವಕಾಶ ಕೊಡದೆ ಇರುವುದು ಸಂಕಷ್ಟ ತಂದೊಡ್ಡುವ ಸಾಧ್ಯತೆ ಹೆಚ್ಚಾಗಿದೆ.

ಮನೆ ಬಾಗಿಲಿಗೆ ಬರ್ತಾರಂತೆ ಪ್ರಜಾ ಪ್ರತಿನಿಧಿ..!
ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಕೊಡುವಾಗ ಮನೆ ಮನೆ ಬಾಗಿಲಿಗೆ ಬಂದಿದ್ದರು. ಆದರೆ ಈಗ ಯೋಜನೆ ಲಾಭ ಕೊಡುವುದಕ್ಕೆ ಮಾತ್ರ ಸರತಿ ಸಾಲು ಎಂದು ವಿಪಕ್ಷಗಳು ಟೀಕೆ ಮಾಡಿದ್ದವು. ಇದೀಗ ಅದಕ್ಕೂ ಒಂದು ಉಪಾಯ ಹುಡುಕಿರುವ ಸರ್ಕಾರದ ಮನೆ ಬಾಗಿಲಿನಲ್ಲೇ ಮಹಿಳೆಯರಿಗೆ ಯೋಜನೆ ಅರ್ಜಿ ಸಲ್ಲಿಕೆ ಮಾಡಿಸಲು ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಪ್ರಜಾ ಪ್ರತಿನಿಧಿ ನೇಮಕ ಮಾಡಿರುವ ಸರ್ಕಾರ, ಮನೆ ಮನೆ ಬಾಗಿಲಿಗೆ ಹೋಗಿ, ಸರ್ಕಾರ ಕೊಟ್ಟಿರುವ ಆ್ಯಪ್ ಮೂಲಕ ದಾಖಲೆ ಗಳನ್ನು ಸಂಗ್ರಹಿಸಿ ಅರ್ಜಿ ಸಲ್ಲಿಕೆ ಮಾಡಬಹುದು. ಇಲ್ಲವೇ ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್ ಮತ್ತು ಬಾಪೂಜಿ ನಾಡ ಕಚೇರಿಗಳಲ್ಲಿ ಮಾತ್ರ ಅರ್ಜಿ ಸಲ್ಲಿಕೆಗೆ ಅವಕಾಶ ಮಾಡಿಕೊಡಲಾಗಿದೆ. ಸಂಜೆ 5 ಗಂಟೆಯಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಚಾಲನೆ ಸಿಗಲಿದ್ದು, ಆ ಬಳಿಕ ಸಾಧಕ ಬಾಧಕಗಳ ಬಗ್ಗೆ ಗೊತ್ತಾಗಲಿದೆ.
ಕೃಷ್ಣಮಣಿ