ಸರಿಸುಮಾರು ಒಂದೂವರೆ ವರ್ಷಗಳಿಂದ ಮುಚ್ಚಿದ್ದ ಶಾಲೆಗಳು ದೇಶಾದ್ಯಂತ ಈಗ ಪುನರಾರಂಭಗೊಂಡಿವೆ. ಕೇಂದ್ರ ಸರ್ಕಾರ Standard Operating Procedure (SOP) ಅನ್ನು ಎಲ್ಲಾ ರಾಜ್ಯಗಳಿಗೂ ಕಳುಹಿಸಿದ್ದು ಅದರ ಪ್ರಕಾರವೇ ದೇಶದ ಬಹುತೇಕ ರಾಜ್ಯಗಳಲ್ಲಿ ಶಾಲೆ ಪುನರಾರಂಭಗೊಂಡಿವೆ. ಕರ್ನಾಟಕದಲ್ಲಿ ಆಗಸ್ಟ್ 23ರಿಂದ 9ರಿಂದ 12ನೇ ತರಗತಿಯವರೆಗಿನ ಮಕ್ಕಳಿಗೆ ಮತ್ತು ಸಪ್ಟೆಂಬರ್ 6 ರಿಂದ 6ರಿಂದ 8ರ ವರೆಗಿನ ತರಗತಿಯ ಮಕ್ಕಳಿಗೆ ತರಗತಿಗಳು ಆರಂಭಗೊಂಡಿವೆ. ಸದ್ಯ1 ರಿಂದ 5ರ ವರೆಗಿನ ತರಗತಿಗಳನ್ನು ಪುನರಾರಂಭಿಸುವ ಬಗ್ಗೆ ಸರ್ಕಾರ ಯಾವ ತೀರ್ಮಾನಕ್ಕೆ ಬಂದಿಲ್ಲವಾದರೂ ಶೀಘ್ರವೇ ಈ ಮಕ್ಕಳಿಗೂ ಶಾಲೆ ಪುನರಾರಂಭಗೊಳ್ಳಬಹುದು ಎಂದು ನಿರೀಕ್ಷಿಸಲಾಗಿದೆ.
ಮಕ್ಕಳ ಭಾಷಾ ಜ್ಞಾನ, ತಿಳುವಳಿಕೆ, ಕಲಿಕಾ ಮಟ್ಟ ಆನ್ಲೈನ್ ಶಿಕ್ಷಣದಿಂದಾಗಿ ಕುಸಿಯುತ್ತಿದೆ ಮತ್ತು ತಮ್ಮದೇ ವಯಸ್ಸಿನವರ ಒಡನಾಟವಿಲ್ಲದೆ ಅವರ ಮಾನಸಿಕ ಬೆಳವಣಿಗೆ ಕುಂಠಿತವಾಗುತ್ತಿದೆ ಎನ್ನುವ ಶಿಕ್ಷಣ ತಜ್ಞರ ಅಭಿಮತ ಮತ್ತು ದೇಶದ ಹಳ್ಳಿಗಾಡಿನ ಹಾಗೂ ಬಡ ಮಕ್ಕಳಿಗೆ ಆನ್ಲೈನ್ ಶಿಕ್ಷಣ ಪಡೆದುಕೊಳ್ಳಲು ಸಾಧ್ಯವಾಗದೇ ಅವರ ಇಡೀ ಶೈಕ್ಷಣಿಕ ಬದುಕೇ ಅಡಕತ್ತರಿಯಲ್ಲಿ ಸಿಕ್ಕಿದಂತಾಗಿದ್ದ ಹಿನ್ನೆಲೆಯಲ್ಲಿ ಸರ್ಕಾರವು ಶಾಲೆಗಳನ್ನು ತೆರೆಯಲು ನಿರ್ಧರಿಸಿತ್ತು.
ಅಲ್ಲದೆ ಅಚ್ಚರಿಯ ಬೆಳವಣಿಗೆ ಎಂಬಂತೆ 2021ನೇ ಸಾಲಿನಲ್ಲಿ ಕರ್ನಾಟಕವೂ ಸೇರಿದಂತೆ ರಾಷ್ಟ್ರಾದ್ಯಂತ ಸರ್ಕಾರಿ ಶಾಲೆಗಳಿಗೆ ದಾಖಲಾದ ಮಕ್ಕಳ ಸಂಖ್ಯೆ ಹೆಚ್ಚಿದೆ. ಕೋವಿಡ್ ಮತ್ತು ಲಾಕ್ಡೌನ್ನಿಂದಾಗಿ ಉದ್ಯೋಗ ಕಳೆದುಕೊಂಡು ಆರ್ಥಿಕ ಸಂಕಷ್ಟಕ್ಕೀಡಾದ ಮಧ್ಯಮ ಮತ್ತು ಕೆಳ ಮಧ್ಯಮ ವರ್ಗದ ಜನರು ತಮ್ಮ ಮಕ್ಕಳನ್ನು ಖಾಸಗಿ ಶಾಲೆ ಬಿಡಿಸಿ ಸರ್ಕಾರಿ ಶಾಲೆಗೆ ದಾಖಲು ಮಾಡಿದ್ದೇ ಈ ಏರಿಕೆಗೆ ಮುಖ್ಯ ಕಾರಣ.
ಕರ್ನಾಟಕದ ಸಾರ್ವಜನಿಕ ಶಿಕ್ಷಣ ಇಲಾಖೆಯು ನೀಡಿದ ಮಾಹಿತಿಯ ಪ್ರಕಾರ ರಾಜ್ಯದಲ್ಲಿ 15,189 ಸರ್ಕಾರಿ ಪ್ರಾಥಮಿಕ ಶಾಲೆಗಳು ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಹೆಚ್ಚಳವನ್ನು ದಾಖಲಿಸಿವೆ. ಕೆಲವು ಶಾಲೆಗಳಲ್ಲಿ ವಿದ್ಯಾರ್ಥಿಗಳ ಹೆಚ್ಚಳವು 10% ರಷ್ಟಿದ್ದರೆ, ಹಲವಾರು ಶಾಲೆಗಳು 100% ಹೆಚ್ಚಳವನ್ನು ವರದಿ ಮಾಡಿವೆ. ಆದರೆ ಈಗ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಎದುರಾಗಿದ್ದು ಮಕ್ಕಳಿಗೆ ಕಲಿಸುವವರೇ ಇಲ್ಲದಂತಾಗಿದೆ.
ರಾಜ್ಯಾದ್ಯಂತ ಸರ್ಕಾರಿ ಶಾಲೆಗಳು ಎಲ್ಲಾ ಹಂತಗಳಲ್ಲೂ ಶಿಕ್ಷಕರ ಕೊರತೆಯನ್ನು ಎದುರಿಸುತ್ತಿವೆ. ಹಲವಾರು ಶಾಲೆಗಳಲ್ಲಿ ಕೆಲವು ವಿಷಯಗಳನ್ನು ಭೋದಿಸಲು ಶಿಕ್ಷಕರ ಕೊರತೆಯಿದ್ದು ಇದು ಲಭ್ಯವಿರುವ ಶಿಕ್ಷಕರ ಮೇಲೆ ಅನಗತ್ಯ ಒತ್ತಡ ಹೇರುತ್ತಿದೆ, ಇದು ಅವರ ಭೋದನಾ ಕ್ರಮದ ಮೇಲೂ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ.
ಶಿಕ್ಷಣ ಇಲಾಖೆಯಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ, ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ 41,000ಕ್ಕೂ ಹೆಚ್ಚು ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಪ್ರಾಥಮಿಕ ಶಾಲೆಗಳಲ್ಲಿ 1,88,540 ಹುದಗದೆಗಳು ಮಂಜೂರಾಗಿದ್ದರೆ 25,813 ಹುದ್ದೆಗಳು ಖಾಲಿ ಉಳಿದಿವೆ. ಪ್ರೌಢಶಾಲೆಗಳಲ್ಲಿ 52,630 ಹುದ್ದೆಗಳು ಮಂಜೂರಾಗಿದ್ದರೆ 15,907 ಹುದ್ದೆಗಳು ಖಾಲಿ ಇವೆ.
ಈ ವರ್ಷ ಪ್ರಾಥಮಿಕ ಶಾಲೆಗಳಲ್ಲಿ 5,000 ಹುದ್ದೆಗಳನ್ನು ಭರ್ತಿ ಮಾಡಲು ರಾಜ್ಯ ಸರ್ಕಾರ ಒಪ್ಪಿಕೊಂಡಿದ್ದರೂ, ಉಳಿದವುಗಳಿಗೆ ಶಾಲೆಗಳು ಅತಿಥಿ ಶಿಕ್ಷಕರನ್ನು ಅವಲಂಬಿಸಬೇಕಾಗಿದೆ. ಸಾರ್ವಜನಿಕ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು “ಪ್ರತಿವರ್ಷ ಇದೇ ಪರಿಸ್ಥಿತಿ ಇರುತ್ತದೆ. ಸ್ಥಳೀಯ ಮಟ್ಟದಲ್ಲಿ ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳಲು ಅಧಿಕಾರಿಗಳಿಗೆ ಮುಕ್ತ ಅವಕಾಶ ನೀಡಲಾಗಿದೆ” ಎಂದು ಹೇಳಿರುವುದಾಗಿ ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.
ಶಿಕ್ಷಕರ ಕೊರತೆ ಒಂದು ಕಡೆಯಾದರೆ ಬಹುತೇಕ ಸರ್ಕಾರಿ ಶಾಲೆಗಳಲ್ಲಿ ಭೋದಕೇತರ ಸಿಬ್ಬಂದಿಗಳೇ ಇಲ್ಲ. ಕೆಲವು ಕಡೆ ದೈಹಿಕ ಶಿಕ್ಷಕರನ್ನೂ ನೇಮಿಸಲಾಗಿಲ್ಲ. ಒಬ್ಬರೇ ದೈಹಿಕ ಶಿಕ್ಷಕರು ಎರಡು ಶಾಲೆಗಳಲ್ಲಿ ಕೆಲಸ ಮಾಡುವುದೂ ಇದೆ. ಪಾಲಕರು ಖಾಸಗಿ ಶಾಲೆಯ ಕಡೆ ಆಕರ್ಷಿತರಾಗಲು ಸರ್ಕಾರಿ ಶಾಲೆಗಳ ಇಂತಹ ಅವ್ಯವಸ್ಥೆಗಳೂ ಕಾರಣವಾಗಿದ್ದವು. ಹೀಗಾಗಿಯೇ ಕಳೆದ ಕೆಲವು ವರ್ಷಗಳಿಂದಲೂ ಮಕ್ಕಳ ಕೊರತೆಯಿಂದ ಅಲ್ಲಲ್ಲಿ ಸರ್ಕಾರಿ ಶಾಲೆಗಳನ್ನು ಮುಚ್ಚಲಾಗುತ್ತಿತ್ತು. ಆದರೆ ಇದರಿಂದ ಬಡ ಮಕ್ಕಳಿಗೆ ತೊಂದರೆಯಾಗುತ್ತದೆ, ಎಷ್ಟೇ ಕಷ್ಟವಾದರೂ ಶಾಲೆ ಮುಚ್ಚಿಸಬಾರದು, ಬದಲಾಗಿ ಸರ್ಕಾರಿ ಶಾಲೆಗಳ ವ್ಯವಸ್ಥೆಯನ್ನು ಬಲಪಡಿಸಬೇಕು ಎಂಬ ಆಗ್ರಹಗಳು ಶಿಕ್ಷಣ ತಜ್ಞರಿಂದ ಸರ್ಕಾರಕ್ಕೆ ಸಲ್ಲಿಕೆಯಾಗುತ್ತಲೇ ಇತ್ತು.
ಇದೀಗ ಕೋವಿಡ್ ಕಾರಣದಿಂದಾರೂ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಹೆಚ್ಚಿದೆ. ಸದ್ಯಕ್ಕೆ ತಮ್ಮ ಮಕ್ಕಳ ಕಲಿಕೆಗಾಗಿ ಬಡ ಜನರ ಆಶಾವಾದವಾಗಿ ಉಳಿದಿರುವುದು ಇಂತಹ ಶಾಲೆಗಳು ಮಾತ್ರ. ಪಾಲಕರು ತಮ್ಮ ಆರ್ಥಿಕ ಸ್ಥಿತಿ ಸುಧಾರಿಸುತ್ತದ್ದಂತೆ ಮತ್ತೆ ಖಾಸಗಿ ಶಾಲೆಯ ಕದ ತಟ್ಟದಂತೆ ಸರ್ಕಾರಿ ಶಾಲೆಯನ್ನು ಬಲಪಡಿಸುವ ಕೆಲಸವನ್ನು ಸರ್ಕಾರ ಆದ್ಯತೆಯ ಮೇಲೆ ಕೈಗೆತ್ತಿಕೊಳ್ಳಲಿ.