ಕರ್ನಾಟಕ ರಾಜ್ಯದಲ್ಲಿ ಆಡಳಿತ ಸಂಪೂರ್ಣವಾಗಿ ಕುಸಿದಿದೆ. ಕಳೆದೊಂದು ವರ್ಷದಲ್ಲಿ ನಡೆದಿರುವ ಚಳುವಳಿ, ಹೋರಾಟ, ಪ್ರತಿಭಟನೆಗಳು ಯಾವ ವರ್ಷವೂ ನಡೆದಿರಲಿಲ್ಲ. ಸರ್ಕಾರ ಜನರಿಗೆ ಕೊಟ್ಟ ಎಲ್ಲ ಮಾತುಗಳನ್ನೂ ತಪ್ಪಿದೆ. ರೈತರಿಗೆ, ಕಾರ್ಮಿಕರಿಗೆ, ವಿದ್ಯಾರ್ಥಿಗಳಿಗೆ, ಸರ್ಕಾರಿ ನೌಕರರಿಗೂ ಉತ್ತಮ ಆಡಳಿತ ಕೊಡಲು ಸಾಧ್ಯವಾಗಿಲ್ಲ. ಈ ಸರ್ಕಾರ ಎಲ್ಲರಿಗೂ ಒಂದಲ್ಲ ಒಂದು ರೀತಿ ಸಮಸ್ಯೆ ತಂದಿಟ್ಟಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಮೂರು ಉಪಚುನಾವಣೆ ಕ್ಷೇತ್ರಗಳಲ್ಲಿ ಪ್ರವಾಸ ಮಾಡಿ ಬಂದಿದ್ದೇನೆ. ಅಲ್ಲೆಲ್ಲ ಈ ರಾಜ್ಯದಲ್ಲಿ ಒಂದು ಬದಲಾವಣೆ ತರಬೇಕು, ಈ ಬದಲಾವಣೆ ತರದಿದ್ದರೆ ರಾಜ್ಯಕ್ಕೆ ಉತ್ತಮ ಭವಿಷ್ಯವಿಲ್ಲ ಅಂತಾ ಯುವಕರು, ರೈತರು, ಮಹಿಳೆಯರು ತೀರ್ಮಾನಿಸಿದ್ದಾರೆ. ಎಲ್ಲರಿಗೂ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಅಪಾರವಾದ ಸಿಟ್ಟಿದೆ ಎಂದಿದ್ದಾರೆ.
ಈ ಚುನಾವಣೆಯಲ್ಲಿ ಜನ ನಮಗೆ ತೋರುತ್ತಿರುವ ವಿಶ್ವಾಸ, ಪ್ರೀತಿ, ಬೆಂಬಲ, ಅಭಿಮಾನ ಎಲ್ಲ ನೋಡಿದರೆ ಮೂರೂ ಕ್ಷೇತ್ರಗಳನ್ನೂ ಗೆಲ್ಲುವುದು ಗ್ಯಾರಂಟಿ. ಈ ಚುನಾವಣೆಯಲ್ಲಿ ಬದಲಾವಣೆಯ ಸಂದೇಶ ರವಾನೆಯಾಗುವ ವಿಶ್ವಾಸವಿದೆ ಎಂದು ಹೇಳಿದ್ದಾರೆ.
ಚುನಾವಣೆಯಲ್ಲೂ ಅಕ್ರಮ
ಮಸ್ಕಿ ವಿಧಾನಸಭಾ ಉಪಚುನಾವಣೆಯಲ್ಲಿ ಪ್ರಚಾರ ಸಭೆಗೆ ಆಗಮಿಸಲು ಪ್ರತಿಯೊಬ್ಬರಿಗೂ ಬಿಜೆಪಿ 300 ರೂ. ಹಂಚುತ್ತಿರುವ ವಿಡಿಯೋ ವೈರಲ್ ಆಗಿದೆ. ಈ ವಿಚಾರದಲ್ಲಿ ಎಫ್ಐಆರ್ ಕೂಡ ಆಗಿದೆ. ಒಂದು ಮತಕ್ಕೆ ಇಷ್ಟು ಹಣ ನೀಡಬೇಕು ಎಂಬ ಬೇರೊಂದು ಪಟ್ಟಿಯನ್ನು ಸಿದ್ಧ ಮಾಡಿಟ್ಟುಕೊಂಡಿದ್ದಾರೆ. ಹೀಗಾಗಿ ಬಿಜೆಪಿ ಅಭ್ಯರ್ಥಿಯನ್ನು ಕೂಡಲೇ ಅನರ್ಹಗೊಳಿಸಬೇಕು ಎಂದು ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದಾರೆ.
ಈ ರಾಜ್ಯದ ಮುಖ್ಯಮಂತ್ರಿಗಳಾಗಿರುವ ಯಡಿಯೂರಪ್ಪನವರು ಚುನಾವಣಾ ಕ್ಷೇತ್ರಗಳಲ್ಲಿ ಜಾತಿವಾರು ಸಭೆಗಳನ್ನು ಮಾಡುತ್ತಿದ್ದಾರೆ. ಈ ಬಗ್ಗೆ ಮಾಧ್ಯಮಗಳು ವರದಿ ಮಾಡಿವೆ. ಇದು ಅವರಲ್ಲಿ ಸೋಲಿನ ಭಯ ಕಾಡುತ್ತಿರುವುದಕ್ಕೆ ಸಾಕ್ಷಿ. ಸಂವಿಧಾನಬದ್ಧವಾಗಿ ಪ್ರಮಾಣವಚನ ಸ್ವೀಕರಿಸಿ, ರಾಜ್ಯದ ಜನರಿಗೆ ಮಾತುಕೊಟ್ಟು, ಕೇವಲ ಒಂದು ಉಪಚುನಾವಣೆಗೆ ಈ ರೀತಿ ಜಾತಿ ಸಭೆಗಳನ್ನು ಮಾಡುತ್ತಿರುವುದು ಅವರಲ್ಲಿನ ಆತಂಕಕ್ಕೆ ಸಾಕ್ಷಿ ಎಂದು ಹೇಳಿದ ಡಿಕೆಶಿ, ಈ ಚುನಾವಣೆಯನ್ನು ಬಿಜೆಪಿಯು ಕೇವಲ ಹಣ, ಸರ್ಕಾರಿ ನೌಕರರ ದುರ್ಬಳಕೆಯಿಂದ ನಡೆಸುತ್ತಿದೆ. ಚುನಾವಣೆ ಸಮಯದಲ್ಲಿ ಜಾತಿವಾರು ಸಭೆ ನಡೆಸಲು ಕಾನೂನಿನಲ್ಲಿ ಅವಕಾಶವಿಲ್ಲ. ಹೀಗಾಗಿ ಚುನಾವಣಾ ಆಯೋಗ ಮುಖ್ಯಮಂತ್ರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಸಾರಿಗೆ ನೌಕರರ ಸಮಸ್ಯೆ ಬಗೆಹರಿಯಬೇಕು:
ರಾಜ್ಯದಲ್ಲಿ ಸಾರಿಗೆ ನೌಕರರ ಮುಷ್ಕರ ನಡೆಯುತ್ತಿದೆ. ಈ ನೌಕರರೆಲ್ಲ ಒಂದು ಕುಟುಂಬವಿದ್ದಹಾಗೆ. ರೈಲ್ವೇ ಹಾಗೂ ಸಾರಿಗೆ ಸಂಸ್ಥೆಗಳು ಸರ್ಕಾರದ ಆಸ್ತಿ. ಇವುಗಳನ್ನು ನಾವು ವ್ಯವಹಾರದ ದೃಷ್ಠಿಯಲ್ಲಿ ನೋಡಲು ಸಾಧ್ಯವಿಲ್ಲ. ಅವರ ಜತೆ ಸಮಸ್ಯೆ ಇದ್ದರೆ ಸರ್ಕಾರ ಕರೆದು ಮಾತನಾಡಬೇಕು. ಅವರ ನೋವು ಆಲಿಸಬೇಕು. ಆದರೆ ಈ ವಿಚಾರದಲ್ಲಿ ಪ್ರತಿಷ್ಠೆ ಯಾಕೆ? ನೌಕರರು ಹಾಗೂ ರೈತರ ವಿಚಾರದಲ್ಲಿ ಸರ್ಕಾರ ಯಾಕೆ ಪ್ರತಿಷ್ಠೆಗೆ ಬಿದ್ದಿದೆ? ಎಂದು ಅವರು ಪ್ರಶ್ನಿಸಿದ್ದಾರೆ.
ನಾವು ಯಾರ ಹತ್ತಿರವೂ ಮಾತನಾಡಲ್ಲ, ಖಾಸಗಿಯವರ ನೆರವಿನಿಂದ ನಡೆಸುತ್ತೇವೆ ಎಂಬ ಧೋರಣೆ ಯಾಕೆ? ಖಾಸಗಿಕರಣದಿಂದ ರಾಷ್ಟ್ರೀಕರಣ ಮಾಡಿದ್ದ ಸಾರಿಗೆಯನ್ನು ಈಗ ಮತ್ತೆ ಖಾಸಗಿಕರಣ ಮಾಡಲು ಹೊರಟಂತೆ ಕಾಣುತ್ತಿದೆ. ಕೆಎಸ್ ಆರ್ ಟಿಸಿ ಮತ್ತು ಬಿಎಂಟಿಸಿಯನ್ನು ಖಾಸಗಿಯವರಿಗೆ ಮಾರಲು ಎಲ್ಲ ಒಳಸಂಚು ಮಾಡಲಾಗುತ್ತಿದೆ ಎಂಬ ಅನುಮಾನ ಮೂಡಿದೆ. ಈಗಾಗಲೇ ಬಿಎಸ್ಎನ್ಎಲ್, ರೈಲ್ವೆ, ಬ್ಯಾಂಕುಗಳನ್ನು, ಏರ್ ಇಂಡಿಯಾ, ಬೆಮೆಲ್, ಪೆಟ್ರೋಲ್ ಕಂಪನಿಗಳನ್ನು ಖಾಸಗಿಯವರಿಗೆ ಮಾರಲಾಗಿದೆ. ಈಗ ಸಾರಿಗೆಯನ್ನು ಮಾರುವ ಷಡ್ಯಂತ್ರ ನಡೆಯುತ್ತಿದೆ. ಇನ್ನು ಮೈಸೂರು, ಕಲಬುರ್ಗಿ, ಧಾರವಾಡದ ನೀರು ನಿರ್ವಹಣೆ ಸಂಸ್ಥೆಗಳನ್ನು ಖಾಸಗಿಕರಣ ಮಾಡಿದ್ದು, ಎಲ್ ಅಂಡ್ ಟಿ ಕಂಪನಿಗೆ ಹಸ್ತಾಂತರಿಸಿದ್ದಾರೆ. ಅದನ್ನು ಕೇಳಿದರೆ ನಿಮ್ಮ ಕಾಲದಲ್ಲೇ ಪ್ರಸ್ತಾವನೆ ಆಗಿತ್ತು ಎಂದು ಹೇಳುತ್ತಿದ್ದಾರೆ ಎಂದಿದ್ದಾರೆ.
ನಾವು ಕೇವಲ ಆರ್ಥಿಕ ಅಂಶ ಮಾತ್ರವಲ್ಲ. ನೌಕರರು, ಪ್ರಯಾಣಿಕರ ಹಿತವನ್ನೂ ನೋಡಬೇಕಾಗುತ್ತದೆ. ಇಲ್ಲಿ ಪ್ರಯಾಣಿಕರ ಪ್ರಮಾಣ ದೊಡ್ಡದಾಗಿದೆ. ಅವರಿಗಾಗುತ್ತಿರುವ ಅನ್ಯಾಯ, ತೊಂದರೆ ಬಗ್ಗೆ ಗಮನ ಹರಿಸಬೇಕು. ಈಗ ಖಾಸಗಿಯವರು ಹೇಳಿದಷ್ಟು ಹಣ ಕೊಟ್ಟು ಪ್ರಯಾಣಿಕರು ಒಡಾಡಬೇಕಾಗಿದೆ. ಸರ್ಕಾರ ನೌಕರರ ಜತೆ ಮಾತನಾಡಿ ಅವರ ಬೇಡಿಕೆಗಳನ್ನು ಈಡೇರಿಸಿ ಪರಿಹಾರ ಕಂಡುಕೊಳ್ಳಬೇಕು. ಸಾರಿಗೆ ಸಿಬ್ಬಂದಿಗಳಿಗೆ ಸರ್ಕಾರ ಕೂಡಲೇ ಸಂಬಳ ನೀಡಬೇಕು, ನಂತರ ಅವರ ಜತೆ ಮಾತುಕತೆ ನಡೆಸಲಿ. ಅಲ್ಲಿ ಯಾರೋ ಸಭೆ ನಡೆಸುವವರನ್ನು ಬಂಧಿಸುತ್ತಾರೆ. ಯಾರೂ ಸರ್ಕಾರದ ವಿರುದ್ಧ ಧರಣಿ ಮಾಡಬಾರದೇ? ರಾಜಕೀಯ ಸಭೆಗಳಿಗೆ ಯಾಕೆ ಅನುಮತಿ ಕೊಟ್ಟಿದ್ದೀರಿ? ನಮ್ಮನ್ನು ಸೇರಿಸಿ ಹೇಳುತ್ತಿದ್ದೇನೆ. ದೇಶದ ಪ್ರತಿಯೊಬ್ಬರಿಗೂ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂವಿಧಾನದ ಮೂಲಕ ಪ್ರತಿಭಟನೆ ಹಕ್ಕನ್ನು ನೀಡಲಾಗಿದೆ. ಅದನ್ನು ಹತ್ತಿಕ್ಕುವ ಕೆಲಸ ಮಾಡಬಾರದು. ನಿಮ್ಮ ವಿರುದ್ಧ ಯಾರು ಧ್ವನಿ ಎತ್ತಬಾರದಾ? ಯಾರೆಲ್ಲ ಹೋರಾಟ ಮಾಡುತ್ತಿದ್ದಾರೋ ಅವರ ಜತೆ ಕಾಂಗ್ರೆಸ್ ಪಕ್ಷ ನಿಲ್ಲಲಿದೆ. ಎಂದು ಹೇಳಿದ್ದಾರೆ.
ನಾನು ಮೊದಲು ನಮ್ಮ ನಾಯಕರ ಜತೆ ಮಾತನಾಡಿ, ಸಾರಿಗೆ ನೌಕರರ ಜತೆ ಚರ್ಚೆ ಬಗ್ಗೆ ತೀರ್ಮಾನಿಸುತ್ತೇನೆ. ಸರ್ಕಾರದ ಈ ನಿರ್ಧಾರಗಳು ಖಾಸಗಿಕರಣಕ್ಕೆ ಅಡಿಪಾಯವಾಗುತ್ತಿವೆ. ಕಾಂಗ್ರೆಸ್ ರಾಷ್ಟ್ರೀಕರಣ ಮಾಡಿದರೆ, ಬಿಜೆಪಿ ಖಾಸಗಿಕರಣ ಮಾಡುತ್ತಿದೆ ಎಂದು ಅವರು ಹೇಳಿದ್ದಾರೆ.
ಕೊರೋನಾ ನಿರ್ವಹಣೆಯಲ್ಲಿ ವಿಫಲ:
ಕೊರೊನಾ ಪರಿಸ್ಥಿತಿ ನಿಭಾಯಿಸಲು ಸರ್ಕಾರ ವಿಫಲವಾಗಿದೆ. ಇಂತಹ ಕೆಟ್ಟ ಸರ್ಕಾರವನ್ನು ನಾವು ಈ ಹಿಂದೆ ನೋಡಿರಲಿಲ್ಲ. ಬೆಳಗಾವಿಯಲ್ಲಿ ಅಧಿವೇಶನ ನಡೆಸಬೇಕಿತ್ತು. ಅಲ್ಲಿನ ರೈತರಿಗಾದ ತೊಂದರೆಗೆ ಪರಿಹಾರ ಕೊಡಲು ಆಗಲಿಲ್ಲ. ಬೆಳಗಾವಿಯನ್ನೇ ಪ್ರತ್ಯೇಕ ರಾಜ್ಯ ಮಾಡುತ್ತೇವೆ ಎನ್ನುವವರಿಗೆ ಮಂತ್ರಿಗಿರಿ ಕೊಟ್ಟು ಇಟ್ಟುಕೊಳ್ಳುತ್ತೀರಿ. ಅವರೂ ಬೆಳಗಾವಿ ಅಧಿವೇಶನದ ಬಗ್ಗೆ ಮಾತನಾಡಲಿಲ್ಲ. ಕೊರೋನಾ ಸಂದರ್ಭದಲ್ಲಿ ಸರ್ಕಾರ 1600 ಕೋಟಿ ಪ್ಯಾಕೇಜ್ ಮೂಲಕ, ರೈತರು, ಚಾಲಕರು, ನೇಕಾರರು, ಸವಿತಾ ಸಮಾಜದವರಿಗೆ ಪರಿಹಾರ ನೀಡುವುದಾಗಿ ತಿಳಿಸಿತ್ತು. ಯಾರಿಗೆ ಕೊಟ್ಟಿದ್ದೀರಿ ಅಂತಾ ಲೆಕ್ಕ ಕೊಡಿ ಸ್ವಾಮಿ. ವರ್ಷವಾದರೂ ಅವರಿಗೆ ಪರಿಹಾರ ಕೊಡಲು ನಿಮಗೆ ಸಾಧ್ಯವಾಗಿಲ್ಲ ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಈಗ ಮತ್ತೆ ಕೊರೋನಾ ಹೆಚ್ಚಾಗುತ್ತಿರುವ ಆತಂಕಕ್ಕೆ ಜನ ಸಿಲುಕಿದ್ದಾರೆ. ನೀವು ಲಸಿಕೆ ಕೊಟ್ಟವರಿಗೂ ಮತ್ತೆ ಸೊಂಕು ಬರುತ್ತಿದೆ. 45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಕೊಡುತ್ತಿದ್ದೀರಿ. ಆದರೆ ಯುವಕರಿಗೆ ಹೆಚ್ಚು ಸೋಂಕು ತಗುಲುತ್ತಿದೆ. ಹಗಲಲ್ಲಿ ಕೊರೊನಾ ಹರಡುವುದಿಲ್ಲ, ರಾತ್ರಿ ವೇಳೆ ಹರಡುತ್ತದೆ ಅಂತಾ ನೈಟ್ ಕರ್ಫ್ಯೂ ಮಾಡುತ್ತೀರಿ. ಇದ್ಯಾವ ವಿಜ್ಞಾನ? ಕಳೆದೊಂದು ವರ್ಷದಲ್ಲಿ ನಾವು ಕೊಟ್ಟ ಯಾವ ಸಲಹೆಯನ್ನೂ ಸ್ವೀಕರಿಸಿಲ್ಲ. ಅವರಿಗೆ ಬೇಕಾದ ನಿರ್ಧಾರ ತೆಗೆದುಕೊಂಡು ವಿಫಲರಾಗಿದ್ದಾರೆ. ಈಗ ಸರ್ವಪಕ್ಷಗಳ ಸಭೆ ಯಾಕೆ ನಡೆಸುತ್ತಾರೆ? ಅವರು ನಮ್ಮ ಸಭೆ ಕರೆಯುವ ಮುನ್ನ ಅವರ ಸಂಸದರ ಸಭೆ ಕರೆದು ರಾಜ್ಯದ ಧ್ವನಿಯನ್ನು ಕೇಂದ್ರದಲ್ಲಿ ಎತ್ತುವಂತೆ ಮಾಡಲಿ ಎಂದು ಅವರು ಆಗ್ರಹಿಸಿದ್ದಾರೆ.
ಈ ಪಿಡುಗಿನಲ್ಲಿ ಉದ್ಯೋಗಿಗಿಂತ ಉದ್ಯೋಗದಾತರಿಗೆ ಹೆಚ್ಚು ತೊಂದರೆಯಾಗಿದೆ. ಯಾರಿಗಾದರೂ ಬ್ಯಾಂಕುಗಳ ಮೂಲಕ ನೆರವು ಸಿಕ್ಕಿದೆಯಾ? ಬ್ಯಾಂಕಿನವರು ಎಲ್ಲರಿಗೂ ನೋಟಿಸ್ ನೀಡುತ್ತಿದ್ದಾರೆ. ಕೇಂದ್ರ ಸರ್ಕಾರ ಒಂದು ವರ್ಷದ ಸಾಲದ ಮೇಲಿನ ಬಡ್ಡಿಯನ್ನು ರದ್ದು ಮಾಡಲು ಆಗುವುದಿಲ್ಲವೇ?
ಅವೈಜ್ಞಾನಿಕ ನಿರ್ಧಾರ:
ಸಿನಿಮಾ ಮಂದಿರದಲ್ಲಿ ಗಂಡ ಹೆಂಡತಿ ಒಂದು ಸೀಟ್ ಬಿಟ್ಟು ಒಂದು ಸೀಟ್ ನಲ್ಲಿ ಸಿನಿಮಾ ನೋಡಬೇಕಂತೆ ಬಸ್ ನಲ್ಲಿ ಅಕ್ಕಪಕ್ಕ ಕೂರಬಹುದಂತೆ, ಯಾರೂ ನಿಂತುಕೊಳ್ಳಬಾರದಂತೆ. ಎಲ್ಲರೂ ಒಟ್ಟಿಗೆ ವಿಮಾನದಲ್ಲಿ ಪ್ರಯಾಣ ಮಾಡಬಹುದಂತೆ. ಇದಕ್ಕೆಲ್ಲ ಯಾವ ವೈಜ್ಞಾನಿಕ ಆಧಾರವಿದೆ. ಇವರ ನಿರ್ಧಾರದಿಂದ ಇಡೀ ಚಿತ್ರರಂಗವೇ ಬಿದ್ದುಹೋಗಿದೆ. ಇನ್ನು ಜಿಮ್ ಹುಡುಗರು ಅವರ ಪಾಡಿಗೆ ಅವರು ವ್ಯಾಯಾಮ ಮಾಡುತ್ತಾರೆ. ಇವರು ಬಾಗಿಲು ಬಂದ್ ಮಾಡಿದರೆ, ಅವರಿಗೆ ಸಂಬಳ ಕೊಡುವವರಾರು? ಬಾಡಿಗೆ ಕಟ್ಟುವವರು ಯಾರು? ಕೊರೋನಾ ವಿಚಾರದಲ್ಲಿ ಅವರ ಚಿಂತನೆಯೇ ಬೇರೆ. ಪ್ರಧಾನಮಂತ್ರಿಗಳು ಮಹಾಭಾರತ ಯುದ್ಧ 18 ದಿನಗಳಲ್ಲಿ ಮುಗಿದಿತ್ತು, ನಾನು 21 ದಿನಗಳಲ್ಲಿ ಕೊರೋನಾ ವಿರುದ್ಧದ ಯುದ್ಧ ಮುಗಿಸುತ್ತೇನೆ ಎಂದಿದ್ದರು. ಅವರು ಚಪ್ಪಾಳೆ ಹೊಡೀರಿ ಎಂದಾಗ ಜನ ಚಪ್ಪಾಳೆ ಹೊಡೆದರು, ದೀಪ ಹಚ್ಚಿ, ಜಾಗಟೆ ಬಾರಿಸಿ ಅಂದಾಗ ಅದನ್ನೂ ಮಾಡಿದರು. ಒಂದು ವರ್ಷವಾದರೂ ಇನ್ನು ಯಾಕೆ ಸೋಂಕು ಜಾಸ್ತಿಯಾಗುತ್ತಿದೆ. ಈಗ ಪ್ರಧಾನಿಗಳು ಯಾಕೆ ಮಾತನಾಡುತ್ತಿಲ್ಲ? ಸಿಎಂ ಯಾಕೆ ಮಾತನಾಡುತ್ತಿಲ್ಲ? ನಿಮ್ಮ ಕೈಯಲ್ಲಿ ಆಡಳಿತ ನಡೆಸಲಾಗದಿದ್ದರೆ, ಅಧಿಕಾರದಿಂದ ಕೆಳೆಗಿಳಿಯಿರಿ. ರಾಜ್ಯಪಾಲರ ಆಡಳಿತ ಬರಲಿ. ನಾವು ನಮಗೆ ಅಧಿಕಾರ ಕೊಡಿ ಅಂತಾ ಹೇಳುತ್ತಿಲ್ಲ. ಕೊರೋನಾ ನಿಯಂತ್ರಣಕ್ಕೆ ಸರ್ಕಾರ ಕೈಗೊಂಡ ಕ್ರಮಗಳೇನು? ಅವರಿಗೆ ಬೇಕಾದ್ದಕ್ಕೆ ಅನುಮತಿ ಕೊಟ್ಟಿದ್ದಾರೆ ಎಂದು ಕಿಡಿಕಾರಿದ್ದಾರೆ.
ಬೆಲೆ ಏರಿಕೆ ಮೂಲಕ ಬರೆ
ಸರ್ಕಾರ ಆರ್ಥಿಕವಾಗಿ ಯಾರಿಗಾದರೂ ನೆರವು ನೀಡಿದೆಯಾ? ಎಲ್ಲ ವಸ್ತುಗಳು ದುಬಾರಿಯಾಗುತ್ತಿವೆ. ಅಡುಗೆ ಎಣ್ಣೆಯಿಂದ ಪೆಟ್ರೋಲ್, ಡೀಸೆಲ್, ಗ್ಯಾಸ್ ದರವರೆಗೆ ಎಲ್ಲವೂ ಹೆಚ್ಚಳ ಕಂಡಿವೆ. ಜನರನ್ನು ದೇವರೇ ಕಾಪಾಡಬೇಕು. ರೈತರಿಗೆ ಅಗತ್ಯ ರಸಗೊಬ್ಬರದ ಒಂದು ಬ್ಯಾಗ್ ದರ ಶೇ.80 ರಷ್ಟು ಹೆಚ್ಚಾಗಿದೆ. ಈ ವಿಚಾರದಲ್ಲಿ ಪ್ರಧಾನಮಂತ್ರಿಗಳು, ರಾಜ್ಯದ ಮುಖ್ಯಮಂತ್ರಿಗಳು ಏನು ಮಾಡುತ್ತಿದ್ದಾರೆ? ರಾಜ್ಯದಿಂದ ಆಯ್ಕೆಯಾಗಿರುವ 25 ಸಂಸದರು ಈ ಬಗ್ಗೆ ಯಾಕೆ ಧ್ವನಿ ಎತ್ತುತ್ತಿಲ್ಲ? ನಮ್ಮ ರಾಜ್ಯದಿಂದಲೇ ರಸಗೊಬ್ಬರ ಮಂತ್ರಿಯಾಗಿದ್ದಾರೆ. ಅವರು ಹಳೇ ಗೊಬ್ಬರಗಳಿಗೆ ಹಳೆ ದರದಲ್ಲಿ ಮಾರಾಟ ಮಾಡಬೇಕು ಅಂತಾ ಸಭೆ ಮಾಡಿದ್ದಾರೆ. ಕೊರೋನಾ ಪರಿಸ್ಥಿತಿಯಲ್ಲಿ ಎಷ್ಟು ಜನ ರೈತರಿಗೆ ನೀವು ಪರಿಹಾರ ಕೊಟ್ಟಿದ್ದೀರಿ ಅಂತಾ ಒಂದು ಪಟ್ಟಿ ಕೊಡಿ. ಸಾಂಪ್ರದಾಯಿಕ ವೃತ್ತಿ ಆಧರಿಸಿದವರಿಗೆ ಏನು ಕೊಟ್ಟಿದ್ದೀರಿ? ಕೇಂದ್ರದ 20 ಲಕ್ಷ ಕೋಟಿಯಲ್ಲಿ ಯಾರಿಗೆ ನೆರವಾಗಿದೆ ಜಾಹೀರಾತು ಕೊಡಿ. ಅವರು ನಮಗೆ ಲೆಕ್ಕ ಕೊಡುವುದು ಬೇಡ. ಜನರಿಗೆ ಮಾಧ್ಯಮಗಳ ಮೂಲಕ ನೀಡಲಿ. ಈ ಸರ್ಕಾರದ ವೈಫಲ್ಯ, ಈ ಸರ್ಕಾರದ ದುರಾಡಳಿತದಿಂದ ಜನರು ಅನುಭವಿಸುತ್ತಿರುವ ನೋವಿನ ವಿರುದ್ಧ ಸಿಡಿದೇಳಲು ಮೂರೂ ಕ್ಷೇತ್ರಗಳ ಉಪಚುನಾವಣೆ ಒಂದು ಉತ್ತಮ ಅವಕಾಶ ಕಲ್ಪಿಸಿದೆ. ಹೀಗಾಗಿ ಈ ಮೂರು ಕ್ಷೇತ್ರದ ಮತದಾರರು ಕಾಂಗ್ರೆಸ್ ಅಭ್ಯರ್ಥಿಗೆ ಮತ ನೀಡಿ ಗೆಲ್ಲಿಸಬೇಕು ಎಂದು ವಿನಮ್ರವಾಗಿ ಮನವಿ ಮಾಡಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.





