ಅಯೋಧ್ಯೆ: ರಾಮಮಂದಿರ ದೇಣಿಗೆ ಹಣ ನಾಪತ್ತೆ ಪ್ರಕರಣ ದೇಶದಾದ್ಯಂತ ಸಂಚಲನ ಮೂಡಿಸಿದ್ದು, ಆರೋಪಿಗಳ ಬಂಧನ ಸೇರಿದಂತೆ ಈಗಾಗಲೇ ಕೆಲವು ಮಹತ್ವದ ಬೆಳವಣಿಗೆಗಳು ನಡೆಯುತ್ತಿದೆ. ಈ ನಡುವೆ ಇದೀಗ ರಾಮಮಂದಿರ ಬಾಲ ರಾಮನಿಗೆ ಅರ್ಪಿಸಿದ್ದ ಉಡುಗೊರೆಗಳು ನಾಪತ್ತೆಯಾಗಿವೆ ಎನ್ನುವ ಹೊಸ ಆರೋಪ ಕೇಳಿಬಂದಿದೆ.

ಅಯೋಧ್ಯೆಯ ರಾಮಮಂದಿರಕ್ಕೆ ಕಾಣಿಕೆಯಾಗಿ ನೀಡಿದ್ದ ಚಿನ್ನಲೇಪಿತ ‘ರಾಮಚರಿತಮಾನಸ’ ಪುಸ್ತಕದ ಬಗ್ಗೆ ಹೊಸ ವಿವಾದ ಎದ್ದಿದೆ. ಮಾಜಿ ಕೇಂದ್ರ ಗೃಹ ಕಾರ್ಯದರ್ಶಿ ಎಸ್. ಲಕ್ಷ್ಮಿನಾರಾಯಣ್ ಅವರು, ತಮ್ಮ ಕುಟುಂಬ ನೀಡಿದ್ದ ರಾಮಚರಿತಮಾನಸ ಪುಸ್ತಕ ಕಾಣೆಯಾಗಿದೆ ಎಂದು ಆರೋಪಿಸಿದ್ದಾರೆ.

ಅವರ ಹೇಳಿಕೆಯ ಪ್ರಕಾರ, 2024ರ ಏಪ್ರಿಲ್ನಲ್ಲಿ ಅಯೋಧ್ಯೆಗೆ ಭೇಟಿ ನೀಡಿದ್ದ ವೇಳೆ, ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರಿಗೆ 147 ಕೆಜಿ ತೂಕದ ಚಿನ್ನಲೇಪಿತ ರಾಮಚರಿತಮಾನಸ ಪುಸ್ತಕವನ್ನು ಕಾಣಿಕೆಯಾಗಿ ನೀಡಿದ್ದೆ. ಆದರೆ, ಪುಸ್ತಕ ಸ್ವೀಕರಿಸಿದ ನಂತರ ಯಾವುದೇ ರಶೀದಿ ನೀಡಿಲ್ಲ. ಹಲವು ಬಾರಿ ಭೇಟಿ ನೀಡಿ ಕೇಳಿದರೂ ರಶೀದಿ ಸಿಗಲಿಲ್ಲ ಎಂದು ಹೇಳಿದ್ದಾರೆ.

ಅದನ್ನ ರಾಮ ಮಂದಿರದ ಗರ್ಭಗುಡಿಯಲ್ಲಿ ಇಡಲಾಗುವುದು ಎಂದು ಹೇಳಿದ್ದರು, ಆದ್ರೆ ಕೊಡಲಿಲ್ಲ. 522 ಪುಟಗಳ ಈ ಚಿನ್ನಲೇಪಿತ ಪುಸ್ತಕದ ಮೌಲ್ಯ ಸುಮಾರು ₹4ರಿಂದ ₹5 ಕೋಟಿ ಬೆಲೆ ಬಾಳುತ್ತದೆ. ದಿವಂಗತ ನನ್ನ ತಾಯಿಯ ನೆನಪಿನಲ್ಲಿ ಅದನ್ನು ಕಾಣಿಕೆಯಾಗಿ ನೀಡಿದ್ದೆ. ನನ್ನ ತಾಯಿ ತಮ್ಮ ಜೀವನದ 15 ರಿಂದ 18 ವರ್ಷ ರಾಮನಾಮ ಬರೆಯುತ್ತಾ ಕಳೆದರು. ಹೀಗಾಗಿ ಆ ಪುಸ್ತಕವನ್ನು ರಾಮಮಂದಿರಕ್ಕೆ ನೀಡಿದ್ದೆ ಎಂದು ಎಸ್. ಲಕ್ಷ್ಮಿನಾರಾಯಣ್ ಹೇಳಿಕೆ ನೀಡಿದ್ದಾರೆ ಎಂದು ವರದಿಯಾಗಿದೆ. ದೇಣಿಗೆ ನಾಪತ್ತೆ ಪ್ರಕರಣದ ನಡುವೆಯೇ ಲಕ್ಷ್ಮಿನಾರಾಯಣ್ ಈ ಆರೋಪಗಳಿಗೆ ಸಂಬಂಧಿಸಿದಂತೆ ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ನಿಂದ ಅಧಿಕೃತ ಪ್ರತಿಕ್ರಿಯೆ ಇನ್ನೂ ಪ್ರಕಟವಾಗಿಲ್ಲ.






