ನವದೆಹಲಿ (Newdelhi): ‘2047ರ ಹೊತ್ತಿಗೆ ವಿಕಸಿತ ಭಾರತ’ (Viksit Bharat) ಸಾಧಿಸುವುದು ಕೇಂದ್ರ ಸರ್ಕಾರದ ಸಂಕಲ್ಪವಾಗಿದೆ. ಆ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra modi) ನೇತೃತ್ವದಲ್ಲಿ ಮಂತ್ರಿಮಂಡಲದ ಒಂದು ದಿನದ ಮಹತ್ವದ ಸಭೆ ನಡೆದಿದೆ.
ಸಭೆಯಲ್ಲಿ ವಿಕಸಿತ ಭಾರತ ನಿರ್ಮಾಣಕ್ಕಾಗಿ ನರೇಂದ್ರ ಮೋದಿ ಅವರು ವಿಷನ್ ಇಂಡಿಯಾ ಡಾಕ್ಯುಮೆಂಟ್ ಕೂಡ ರಿಲೀಸ್ ಮಾಡಿದ್ದಾರೆ. ಇದರಲ್ಲಿ ಭಾರತದ ಅಭಿವೃದ್ಧಿಯ ಸ್ಪಷ್ಟ ಚಿತ್ರಣ ಇದೆ ಎನ್ನಲಾಗಿದೆ.
ಹೊಸ ಸರ್ಕಾರ ರಚನೆಯಾದ ನಂತರ ‘2047ರ ಹೊತ್ತಿಗೆ ವಿಕಸಿತ ಭಾರತ’ ಗುರಿ ಸಾಧಿಸುವ ನಿಟ್ಟಿನಲ್ಲಿ ತೆಗೆದುಕೊಳ್ಳಬೇಕಾದ ತಕ್ಷಣದ ಕ್ರಮಗಳಿಗಾಗಿ 100 ದಿನಗಳ ಕಾರ್ಯಸೂಚಿಯನ್ನು ತ್ವರಿತವಾಗಿ ಅನುಷ್ಠಾನಗೊಳಿಸಲು ಹಾಗೂ ತೆಗೆದುಕೊಳ್ಳಬೇಕಾದ ಕ್ರಮಗಳು, ರೂಪಿಸಬೇಕಾದ ಯೋಜನೆಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು ಎಂದು ತಿಳಿದುಬಂದಿದೆ.
25 ವರ್ಷಗಳ ದೂರದೃಷ್ಟಿಯ ಕನಸು ನನಸಾಗಿಸುವ ದಿಸೆಯಲ್ಲಿ ಮುಂದಿನ 5 ವರ್ಷಗಳಲ್ಲಿ ಕೈಗೊಳ್ಳಬಹುದಾದ ಯೋಜನೆಗಳು, ದೇಶದ ಜನರ ಏಳಿಗೆ, ಸುಸ್ಥಿರ ಆರ್ಥಿಕತೆ ನಿರ್ಮಾಣ, ಉದ್ಯೋಗ ಸೃಷ್ಟಿ, ನಾವೀನ್ಯತೆ, ತಂತ್ರಜ್ಞಾನದ ಅಳವಡಿಕೆ ಸೇರಿ ಹಲವು ವಿಷಯಗಳ ಕುರಿತು ನರೇಂದ್ರ ಮೋದಿ ಅವರು ಮಾತನಾಡಿದ್ದು, ಸಚಿವರ ಅಭಿಪ್ರಾಯವನ್ನೂ ಸಂಗ್ರಹಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸಚಿವರೊಂದಿಗೆ ನಡೆಸಿದ ಸಭೆಯಲ್ಲಿ ನರೇಂದ್ರ ಮೋದಿ ಅವರು, ಚುನಾವಣೆಯಲ್ಲಿ ನಾವೇ ಗೆಲ್ಲುತ್ತೇವೆ. ಇದರ ಬಗ್ಗೆ ಯಾವುದೇ ಚಿಂತೆ ಬೇಡ. ಚುನಾವಣೆ ಬಳಿಕ ನಾವು ಮತ್ತೆ ಸಿಗೋಣ. ಆದರೆ, ಚುನಾವಣೆ ಸಂದರ್ಭದಲ್ಲಿ ಯಾರೂ ವಿವಾದಾತ್ಮಕ ಹೇಳಿಕೆಗಳನ್ನು ನೀಡಬಾರದು. ಕೇಂದ್ರ ಸರ್ಕಾರದ ಯೋಜನೆಗಳನ್ನು ಜನರಿಗೆ ತಿಳಿಸಬೇಕು. ಮುಂದಿನ 100 ದಿನಗಳು ಪ್ರಮುಖವಾಗಿವೆ. ನಾವು ಗೆದ್ದ ನಂತರ (ಚುನಾವಣೆ) ಮತ್ತೆ ಭೇಟಿಯಾಗುತ್ತೇವೆ ಎಂದು ಹೇಳಿದ್ದಾರೆ.
ವಿಕಸಿತ ಭಾರತಕ್ಕೆ ಯೋಜನೆಗಳೇನು?
ದೇಶದ ಏಳಿಗೆ ದೃಷ್ಟಿಯಿಂದ ತಂತ್ರಜ್ಞಾನ ಅಳವಡಿಸಿಕೊಳ್ಳುವುದು ಅತ್ಯವಶ್ಯಕವಾಗಿದ್ದು, ಇದಕ್ಕಾಗಿ ಒಂದು ಲಕ್ಷ ಕೋಟಿ ರೂಪಾಯಿ ಮೀಸಲಿಡುವುದು. ಸರ್ಕಾರದ ಹಣ ವ್ಯಯವಾಗದಂತೆ ತಡೆಯುವುದು. ಯುವಕರ ಕೌಶಲ ಅಭಿವೃದ್ಧಿ, ಪ್ರತಿಯೊಂದು ಕ್ಷೇತ್ರದಲ್ಲೂ ನಾವೀನ್ಯತೆಯ ಅಳವಡಿಕೆ. ಯುವಕರ ಸಂಖ್ಯೆ ಹೆಚ್ಚಳ, ವಯಸ್ಸಾದವರ ಸಹಭಾಗಿತ್ವ, ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಬಳಕೆ, ಆರ್ಥಿಕತೆಯ ಸ್ಥಿರತೆ ಕಾಪಾಡುವುದು, ರೈತರು, ಬಡವರ ಏಳಿಗೆಯ ದಿಸೆಯಲ್ಲಿ ಯೋಜನೆಗಳನ್ನು ರೂಪಿಸುವುದು ಸೇರಿ ಹಲವು ಕ್ರಿಯಾಯೋಜನೆಗಳನ್ನು ನರೇಂದ್ರ ಮೋದಿ ಅವರು ಪ್ರಸ್ತಾಪಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
#newdelhi #narendramodi #modi #bjp #viksitbharat