‘ಬಿಗ್ ಬಾಸ್ ಕನ್ನಡ ಸೀಸನ್ 12’ರ ವಿಜೇತ ಹಾಗೂ ‘ಗಿಲ್ಲಿ ನಟ’ ಎಂದೇ ಜನಪ್ರಿಯರಾಗಿರುವ ನಟರಾಜ್ ಅವರು ತಮ್ಮ ಅಭಿಮಾನಿಗಳಿಗೆ ಸಿಹಿಸುದ್ದಿಯೊಂದನ್ನು ನೀಡಿದ್ದಾರೆ. ಇದುವರೆಗೆ ರಿಯಾಲಿಟಿ ಶೋಗಳು ಮತ್ತು ಹಾಸ್ಯ ಪಾತ್ರಗಳ ಮೂಲಕ ಪ್ರೇಕ್ಷಕರ ಮನಗೆದ್ದಿದ್ದ ಗಿಲ್ಲಿ ನಟ, ಇದೀಗ ಮೊದಲ ಬಾರಿಗೆ ಪೂರ್ಣಪ್ರಮಾಣದ ನಾಯಕ ನಟನಾಗಿ ಬೆಳ್ಳಿತೆರೆಗೆ ಪದಾರ್ಪಣೆ ಮಾಡುತ್ತಿದ್ದಾರೆ.ಗಿಲ್ಲಿ ನಟ ಅಭಿನಯದ ಹೊಸ ಚಿತ್ರದ ಘೋಷಣೆ ಆಗಿದ್ದು, ಚಿತ್ರದ ಮುಹೂರ್ತ ಸಮಾರಂಭಕ್ಕೆ ಸಕಲ ಸಿದ್ಧತೆಗಳು ನಡೆಯುತ್ತಿವೆ. ವಿಶೇಷವೆಂದರೆ, ಸ್ಯಾಂಡಲ್ವುಡ್ನ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಯಾಗಿರುವ ಕೆವಿಎನ್ ಪ್ರೊಡಕ್ಷನ್ಸ್ ಈ ಚಿತ್ರಕ್ಕೆ ಬೆಂಬಲ ನೀಡುತ್ತಿದೆ.

ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಟಾಕ್ಸಿಕ್’ ಹಾಗೂ ದಳಪತಿ ವಿಜಯ್ ನಟನೆಯ ‘ಜನ ನಾಯಗನ್’ ಸೇರಿದಂತೆ ಹಲವು ಬಹುಭಾಷಾ ಚಿತ್ರಗಳನ್ನು ನಿರ್ಮಿಸಿರುವ ಕೆವಿಎನ್ ಪ್ರೊಡಕ್ಷನ್ಸ್, ಹೊಸ ಪ್ರತಿಭೆಗಳಿಗೆ ಅವಕಾಶ ನೀಡುವ ತನ್ನ ಪರಂಪರೆಯನ್ನು ಮುಂದುವರಿಸಿದೆ. “ಹೊಸ ಪ್ರತಿಭೆಗಳಿಗೆ ನಾವು ಸದಾ ಬೆಂಬಲವಾಗಿ ನಿಲ್ಲುತ್ತೇವೆ. ಉತ್ತಮ ಕಥೆ ಮತ್ತು ಗುಣಮಟ್ಟದ ಸಿನಿಮಾ ನಿರ್ಮಾಣವಾಗಲಿ ಎಂಬುದು ನಮ್ಮ ಆಶಯ” ಎಂದು ಸಂಸ್ಥೆಯ ಮುಖ್ಯಸ್ಥ ಕೆ. ವೆಂಕಟ್ ನಾರಾಯಣ ತಿಳಿಸಿದ್ದಾರೆ.

ಕೆವಿಎನ್ ಪ್ರೊಡಕ್ಷನ್ಸ್ ಅರ್ಪಿಸುತ್ತಿರುವ ಈ ಚಿತ್ರವನ್ನು ಸಂಸ್ಥೆಯ ಕಾರ್ಯಕಾರಿ ನಿರ್ಮಾಪಕರಾದ ನವೀನ್ ಮತ್ತು ಹರೀಶ್ ಜಂಟಿಯಾಗಿ ನಿರ್ಮಿಸುತ್ತಿದ್ದಾರೆ. ಗಿಲ್ಲಿ ನಟ ಅವರ ಜನ್ಮದಿನವಾದ ಜೂನ್ 21ರಂದು ಚಿತ್ರದ ಮುಹೂರ್ತ ನಡೆಯಲಿದ್ದು, ಅದನ್ನು ಘೋಷಿಸುವ ವಿಭಿನ್ನ ಪ್ರೋಮೋ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಚಿತ್ರಕ್ಕೆ ನಿರ್ದೇಶಕ ಚಂದ್ರಮೋಹನ್ ಆ್ಯಕ್ಷನ್-ಕಟ್ ಹೇಳಲಿದ್ದಾರೆ. ಈ ಹಿಂದೆ ಚಿಕ್ಕಣ್ಣ ನಟನೆಯ ‘ಬೊಂಬೆ ಮಿಠಾಯಿ’, ‘ಡಬಲ್ ಇಂಜಿನ್’, ‘ಫಾರೆಸ್ಟ್’ ಹಾಗೂ ಸತೀಶ್ ನೀನಾಸಂ ಅಭಿನಯದ ‘ಬ್ರಹ್ಮಚಾರಿ’ ಚಿತ್ರಗಳನ್ನು ನಿರ್ದೇಶಿಸಿದ್ದ ಅವರು, ಇದೀಗ ಗಿಲ್ಲಿ ನಟ ಜೊತೆಗೂಡಿ ಹೊಸ ಕಾಮಿಡಿ ಎಂಟರ್ಟೇನರ್ ಚಿತ್ರವನ್ನು ಪ್ರೇಕ್ಷಕರ ಮುಂದೆ ತರುತ್ತಿದ್ದಾರೆ.ಮಂಡ್ಯ ಶೈಲಿಯ ಹಾಸ್ಯ ಮತ್ತು ಮನರಂಜನೆಯ ಅಂಶಗಳಿಂದ ಕೂಡಿರುವ ಈ ಸಿನಿಮಾ ಪಕ್ಕಾ ಫ್ಯಾಮಿಲಿ ಎಂಟರ್ಟೇನರ್ ಆಗಿರಲಿದೆ ಎನ್ನಲಾಗಿದೆ. ಚಿತ್ರದ ಶೀರ್ಷಿಕೆ, ನಾಯಕಿ ಹಾಗೂ ಇತರ ಕಲಾವಿದರ ವಿವರಗಳನ್ನು ಚಿತ್ರತಂಡ ಶೀಘ್ರದಲ್ಲೇ ಅಧಿಕೃತವಾಗಿ ಪ್ರಕಟಿಸಲಿದೆ.ಬಿಗ್ ಬಾಸ್ ಟ್ರೋಫಿ ಗೆದ್ದ ಬಳಿಕ ಗಿಲ್ಲಿ ನಟ ಅವರಿಗೆ ಸಿಕ್ಕಿರುವ ಈ ದೊಡ್ಡ ಅವಕಾಶದಿಂದ ಅಭಿಮಾನಿಗಳು ಸಂಭ್ರಮದಲ್ಲಿದ್ದು, ಅವರ ನಾಯಕನಾಗಿ ಮೊದಲ ಹೆಜ್ಜೆ ಹೇಗಿರಲಿದೆ ಎಂಬ ಕುತೂಹಲ ಹೆಚ್ಚಾಗಿದೆ.






