ಭೂತಾನ್ ದೇಶದಿಂದ ಸುಂಕವಿಲ್ಲದೆ 17ಸಾವಿರ ಮೆಟ್ರಿಕ್ ಟನ್ ಹಸಿ ಅಡಿಕೆ ಪ್ರತಿವರ್ಷ ಆಮದು ಮಾಡಿಕೊಳ್ಳಲು ಅನುಕೂಲವಂತೆ ಕೇಂದ್ರ ಸರ್ಕಾರ ತಿದ್ದುಪಡಿ ತಂದಿದ್ದು ಅಡಕೆ ಬೆಳೆಗಾರರನ್ನ ಸಂಕಷ್ಟಕ್ಕೆ ದೂಡಿದೆ ಎಂದು ರಾಜ್ಯ ರೈತ ಸಂಘ ಆರೋಪಿಸಿದೆ.
ರೈತಸಂಘದ ರಾಜ್ಯಾಧ್ಯಕ್ಷ ಹೆಚ್ ಆರ್ ಬಸವರಾಜಪ್ಪ ನೇತೃತ್ವದಲ್ಲಿ ಶಿವಮೊಗ್ಗದಲ್ಲಿಂದು ರೈತರು ಬೃಹತ್ ಪ್ರತಿಭಟನಾ ಜಾಥಾ ಹಮ್ಮಿಕೊಂಡಿದ್ದರು. ಶಿವಮೊಗ್ಗ ಬಸ್ ನಿಲ್ದಾಣದಿಂದ ಮೆರವಣಿಗೆ ಹೊರಟು ಜಿಲ್ಲಾಧಿಕಾರಿಗಳ ಕಚೇರಿ ಎದುರು ಸಭೆ ನಡೆಸಿ ಕೇಂದ್ರ ಸರ್ಕಾರಕ್ಕೆ ಜಿಲ್ಲಾಧಿಕಾರಿಗಳ ಮಖಾಂತರ ಮನವಿ ಸಲ್ಲಿಸಿದರು.
ಸದ್ಯ 17 ಮೆಟ್ರಿಕ್ ಟನ್ ಇದ್ದು, ಮುಂದಿನ ದಿನಗಳಲ್ಲಿ 50 ಸಾವಿರ ಮೆಟ್ರಿಕ್ ಟನ್ ಹೆಚ್ಚುವರಿ ಆಮದಾಗಬಹುದು, ಇದರಿಂದ ನಮ್ಮ ದೇಶಿ ಅಡಿಕೆ ಬೆಳೆಗಾರರ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದರಿಂದ ಇದನ್ನು ತಕ್ಷಣವೇ ರದ್ದು ಪಡಿಸಬೇಕೆಂದು ಎಂದು ರೈತ ಮುಖಂಡರು ಒತ್ತಾಯಿಸಿದರು.
ಹೆಚ್ ಆರ್ ಬಸವರಾಜಪ್ಪ ಮಾತನಾಡಿ, ಕೇಂದ್ರ ಸರ್ಕಾರ ಹದಿನೇಳು ಸಾವಿರ ಮೆಟ್ರಿಕ್ ಟನ್ ಹಸಿ ಅಡಕೆ ಆಮದು ಮಾಡಿಕೊಳ್ಳಲು ನಿರ್ಧರಿಸಿದ್ದು ಬೆಳೆಗಾರರನ್ನ ಮರಣಶ್ಯಯದಲ್ಲಿ ಮಲಗಿಸಲು ನಿರ್ಧರಿಸಿದೆ. ಇದರಿಂದ ಸುಮಾರು ಎಂಟು ಸಾವಿರ ರೂಪಾಯಿಯಷ್ಟು ದರ ಕುಸಿತ ಕಂಡಿದೆ. ನಮ್ಮ ದೇಶದಲ್ಲಿ ದೇಸಿಯ ಅಡಕೆ ಹೆಚ್ಚುವರಿ ಉತ್ಪಾದನೆಯಾಗುತ್ತಿದ್ದರೂ ಹೊರಗಿನ ಅಡಕೆ ಅನವಶ್ಯ. ಎಲೆ ಚುಕ್ಕೆ ರೋಗದ ಬಾಧೆಯಿಂದಲೂ ಸಹ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ.
ಪರಿಹಾರ ನಾಲ್ಕು ಕೋಟಿ ಬಿಡುಗಡೆ ಮಾಡಿರೋದು ಸಾಲದು, ತಕ್ಷಣ ನೂರು ಕೋಟಿ ರೂಪಾಯಿ ಬಿಡುಗಡೆ ಮಾಡಬೇಕು. ಎಲೆಚುಕ್ಕೆ ರೋಗದ ಜೊತೆ ಅನೇಕ ರೋಗಗಳು ಬಾಧಿಸುತ್ತಿವೆ. ಅಡಕೆ ಸಂಶೋಧನೆ ಕೇಂದ್ರ ಸ್ಥಾಪಿಸಬೇಕು ಎಂದು ಸಾವಿರಾರು ಕೋಟಿ ರೂಪಾಯಿ ತೆರಿಗೆ ನೀಡುತ್ತಿದ್ದೇವೆ. ಅಡಕೆ ಸಂಶೋಧನಾ ಕೇಂದ್ರ ತೆರಿಯಬೇಕು. ಅಡಕೆ ಆಮದು ತಕ್ಷಣ ನಿಲ್ಲಿಸಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಪ್ರತಿಭಟನೆ ತೀವ್ರಗೊಳಿಸಲಾಗುವುದು ಎಂದು ಬಸವರಾಜಪ್ಪ ಎಚ್ಚರಿಸಿದರು.






