ಹಾಸನ: ಹೈಕಮಾಂಡ್ಗೂ ನಾನು ಕೇರ್ ಮಾಡಲ್ಲ, ಹೈಕಮಾಂಡ್ ಗುಲಾಮನಲ್ಲ ಎನ್ನುವವರಿಗೆ ನಾನು ಯಾವ ಲೆಕ್ಕ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ ಹಾಗೂ ಅರಸೀಕೆರೆ ಶಾಸಕ ಕೆ.ಎಂ.ಶಿವಲಿಂಗೇಗೌಡ ಅವರ ವಿರುದ್ಧ ಮಾಜಿ ಸಚಿವ ಬಿ.ಶಿವರಾಂ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.
ಹಾನಸದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಪಕ್ಷ ಸಂಘಟನೆ ಆಗುತ್ತಿಲ್ಲ ಎಂದು ಮಾತನಾಡಿದ್ದೆ. ಆದರೆ ನನ್ನ ಮಾತು ಯಾರ ವಿರುದ್ಧ ಅಥವಾ ವೈಯಕ್ತಿಕವಾಗಿ ಅಲ್ಲ ಎಂದು ಸ್ಪಷ್ಟಪಡಿಸಿದರು. ಉಸ್ತುವಾರಿ ಸಚಿವರ ಬಗ್ಗೆ ನಾನು ಲಘುವಾಗಿ ಮಾತಾಡಿಲ್ಲ, ಜಿಲ್ಲೆಯಲ್ಲಿ ನಮ್ಮ ಒಬ್ಬರೇ ಶಾಸಕರಿದ್ದು, ಸಚಿವರು, ಶಾಸಕರು, ಜಿಲ್ಲೆಯ ಎಲ್ಲಾ ತಾಲೂಕು ಸುತ್ತಾಡಿ, ಪಕ್ಷ ಸಂಘಟಿಸಿ ಎಂದು ಸಲಹೆ ನೀಡಿದ್ದೆ ಅಷ್ಟೇ ಎಂದರು. ಆದರೆ ನನ್ನ ಬಗ್ಗೆ ಸಚಿವರು ಏಕ ವಚನ ಪದ ಬಳಕೆ ಮಾಡಿದ್ದು, ಕಾರ್ಯಕರ್ತರ ಮನಸಿಗೆ ನೋವಾಗಿದೆ. ಜಿಲ್ಲೆಯಲ್ಲಿ ಪಕ್ಷ ಸಂಘಟನೆ ಮಾಡಲು ಪ್ರವಾಸ ಮಾಡಿ, ಕಾರ್ಯಕರ್ತರು, ಮುಖಂಡರನ್ನು ವಿಶ್ವಾಸಕ್ಕೆ ಪಡೆಯಿರಿ ಎಂದು ಹೇಳಿದ್ದೆ.
![](https://pratidhvani.com/wp-content/uploads/2022/08/rajanna-1570653038.jpg)
ಆದರೆ ನಾನು ಯಾರ ಅಭಿಪ್ರಾಯವನ್ನೂ ಕೇಳಲ್ಲ, ನಾನು ಯಾರಿಗೂ ಹೆದರಲ್ಲ, ನನಗೆ ಅದರ ಅವಶ್ಯಕತೆ ಇಲ್ಲ. ಹೈಕಮಾಂಡ್ಗೂ ನಾನು ಕೇರ್ ಮಾಡಲ್ಲ, ಹೈಕಮಾಂಡ್ ಗುಲಾಮನಲ್ಲ ಎನ್ನುವವರಿಗೆ ನಾನು ಯಾವ ಲೆಕ್ಕ ಎಂದು ಶಿವರಾಂ ವಿಷಾದಿಸಿದರು. ನನಗೆ ಹೈಕಮಾಂಡ್ ವಿರುದ್ಧ ಮಾತನಾಡಲು ಎದೆಗಾರಿಕೆ ಇಲ್ಲ. ಪೂಜ್ಯ ಭಾವನೆ ಇದೆ, ಎಲ್ಲಾ ಸಂದರ್ಭದಲ್ಲೂ ನಾನು ನಿಷ್ಠೆಯಿಂದ ನಡೆದುಕೊಂಡಿದ್ದೇನೆ. ಆದರೆ ಹೈಕಮಾಂಡ್ ಬಗ್ಗೆ ಗೌರವ ಇಲ್ಲ, ಭಯ ಇಲ್ಲ ಎನ್ನುವವರ ಬಗ್ಗೆ ನಾನೇನು ಮಾತನಾಡಲಿ ಎಂದರು.
ರಾಜಣ್ಣ ಅವರ ಹೆಸರು ಹೇಳದೆಯೇ ಅವರಿಗೆ ನಾವು ಲೆಕ್ಕ ಇಲ್ಲ ಎಂಬ ಮಾತಿನ ಧಾಟಿ ನೋಡಿದ್ರೆ, ಎಐಸಿಸಿ ಅಧ್ಯಕ್ಷರೂ ಅವರಿಗೆ ಗಣನೆಗೆ ಇಲ್ಲ ಅನಿಸುತ್ತದೆ. ಯಾರಿಗೂ ಗೌರವ ಕೊಡದವರು ನಾಯಕರಲ್ಲ, ಕೊಡುವವನು ಮಾತ್ರ ನಿಜವಾದ ನಾಯಕ. ಹೈಕಮಾಂಡೇ ಲೆಕ್ಕಕ್ಕಿಲ್ಲ ಎಂದರೆ ನಾನ್ಯಾವ ಲೆಕ್ಕ ಎಂದ ಶಿವರಾಂ, ಇಂಥವರ ಬಗ್ಗೆ ಜನ ಹಾಗೂ ನಾಯಕರು ಅರ್ಥ ಮಾಡುಕೊಳ್ಳಬೇಕು. ಏಕೈಕ ಶಾಸಕರು ವರ್ಗಾವಣೆ ಸಂಬಂಧ ಇಡೀ ಜಿಲ್ಲೆಗೆ ಪತ್ರ ಕೊಡುತ್ತಾರೆ. ಆದರೆ ಪಕ್ಷ ಸಂಘಟನೆಗೆ ಸುತ್ತಾಡಲು ಆಗಲ್ವಾ ಎಂದು ಶಿವಲಿಂಗೇಗೌಡ ಅವರ ಬಗ್ಗೆಯೂ ಮಾರ್ಮಿಕವಾಗಿ ಕೇಳಿದರು. ಈಗಲೂ ಜಿಲ್ಲೆಯ ಮುಖಂಡರು,ಕಾರ್ಯಕರ್ತರಲ್ಲಿ ಗೊಂದಲ ಇದೆ ಸರಿಪಡಿಸಿ ಎಂದು ಹೈಕಮಾಂಡ್ಗೆ ಮನವರಿಕೆ ಮಾಡುತ್ತೇನೆ ಎಂದು ತಿಳಿಸಿದರು.
#KNRajanan #KMShivalingegowda #Congress #KPCC #INCHighCommand