ತಮ್ಮನ್ನು ಕೃಷಿಕ ಮತ್ತು ಉದ್ಯಮಿ ಎಂದು ಬಣ್ಣಿಸಿರುವ ಬಿಜೆಪಿಯ ಮಾಜಿ ಶಾಸಕ ನಂದೀಶ ರೆಡ್ಡಿ ಅವರು 2018 ರಲ್ಲಿ ಕೆಆರ್ ಪುರಂ ಶಾಸಕರ ಚುನಾವಣೆಯಲ್ಲಿ ಸ್ಪರ್ಧಿಸಿ, ಸೋತಿದ್ದಾರೆ. ಕುತೂಹಲಕಾರಿ ಅಂಶವೇನೆಂದರೆ, ಚುನಾವಣೆಗೆ ಅವರು ಸಲ್ಲಿಸಿರುವ ಅಫಿಡವಿಟ್ ನಲ್ಲಿ ಚಿಲುಮೆ ಎನ್ಜಿಒಗೆ 17.5 ಲಕ್ಷ ಡೊನೇಷನ್ ನೀಡಿರುವುದಾಗಿ ಅಫಿಡವಿಟ್ ನಲ್ಲಿ ತಿಳಿಸಿದ್ದಾರೆ. ಮತದಾರರ ಮಾಹಿತಿ ಅಕ್ರಮವಾಗಿ ಸಂಗ್ರಹಿಸಿರುವ ಆರೋಪ ಇರುವ ವಿವಾದಿತ ಚಿಲುಮೆ ಟ್ರಸ್ಟ್ಗೆ ಮಾಜಿ ಶಾಸಕ ಅನುದಾನ ನೀಡಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಮತದಾರರ ಡೇಟಾವನ್ನು ಅಕ್ರಮವಾಗಿ ಸಂಗ್ರಹಿಸಿರುವ ಪ್ರಕರಣವನ್ನು theNewsminute ಹಾಗೂ ಪ್ರತಿಧ್ವನಿ ಜಂಟಿ ತನಿಖಾ ವರದಿ ಬಯಲಿಗೆಳೆದಿತ್ತು. ಚಿಲುಮೆ ಅಡಿಯಲ್ಲೇ ʼಚುನಾವಣಾ ನಿರ್ವಹಣೆ’ ಸೇವೆಗಳನ್ನು ಒದಗಿಸುವ ಖಾಸಗಿ ಕಂಪನಿ ನಡೆಸುತ್ತಿರುವ ಆ್ಯಪ್ಗೆ ಮತದಾರರ ವಿವರಗಳನ್ನು ಅಪ್ಲೋಡ್ ಮಾಡಲಾಗಿದೆ ಎಂದು ತನಿಖೆಯಲ್ಲಿ ಬಹಿರಂಗಗೊಂಡಿತ್ತು. ಚಿಲುಮೆಯ ಸಂಸ್ಥಾಪಕ ಕೃಷ್ಣಪ್ಪ ರವಿಕುಮಾರ್ ಅವರು 2014 ರಿಂದ ಇಂತಹ ಸಮೀಕ್ಷೆಗಳನ್ನು ನಡೆಸುತ್ತಿದ್ದಾರೆ ಎಂದು ನಮ್ಮ ತನಿಖಾ ತಂಡಕ್ಕೆ ತಿಳಿಸಿದ್ದರು.
ಹಾಗಾದರೆ ಈ ಮಾಜಿ ಬಿಜೆಪಿ ಶಾಸಕ ಚಿಲುಮೆಗೆ 18 ಲಕ್ಷ ರೂಪಾಯಿಗಳನ್ನು ಮುಂಗಡವಾಗಿ ಏಕೆ ಪಾವತಿಸಿದ್ದಾರೆ ಮತ್ತು ಚಿಲುಮೆ ಟ್ರಸ್ಟ್ ಅವರಿಗೆ ಯಾವ ಸೇವೆಗಳನ್ನು ಒದಗಿಸಿದೆ? ಎನ್ನುವ ಪ್ರಶ್ನೆ ಉದ್ಭವಿಸಿದೆ.
ಈ ಕುರಿತು ಟಿಎನ್ಎಂ ಜತೆ ಮಾತನಾಡಿದ ನಂದೀಶ ರೆಡ್ಡಿ, ಕೆಆರ್ ಪುರಂ ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿ ಸಮೀಕ್ಷೆಗೆ ಹಣ ನೀಡಿದ್ದೇನೆ. ನನ್ನ ಕ್ಷೇತ್ರದಲ್ಲಿ ಮತದಾರರ ಪಟ್ಟಿಯಲ್ಲಿ ಅವ್ಯವಹಾರ ನಡೆದಿದೆ ಎಂದು 2017-2018ರಲ್ಲಿ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದೆ. ಚಿಲುಮೆ ಸಮೀಕ್ಷೆ ನಡೆಸಿ ಮಾಹಿತಿ ನೀಡುವಂತೆ ಹೇಳಿದ್ದೆ. ಇತರರು ಇಂದು ಅವುಗಳನ್ನು ಇತರ ಉದ್ದೇಶಗಳಿಗಾಗಿ ಬಳಸಿರಬಹುದು, ಅದರ ಬಗ್ಗೆ ನನಗೆ ಏನೂ ತಿಳಿದಿಲ್ಲ. ಆದರೆ ಆಗ, ಮತದಾರರ ಪಟ್ಟಿ ಸರಿಯಾಗಿದೆ ಮತ್ತು ಯಾವುದೇ ದೋಷಗಳಿಲ್ಲ ಎಂದು ಖಚಿತಪಡಿಸಿಕೊಳ್ಳಲು ನಾನು ನನ್ನ ಖಾತೆಯಿಂದ ಮೊತ್ತವನ್ನು ಪಾವತಿಸಿದ್ದೇನೆ ಎಂದು ತಿಳಿಸಿದ್ದಾರೆ.
ಚಿಲುಮೆಯ ಕೃಷ್ಣಪ್ಪ ರವಿಕುಮಾರ್ ಅವರು ನೇರವಾಗಿ ನನ್ನ ಬಳಿಗೆ ಬಂದರು. ತನ್ನ ಕಛೇರಿ ಮಲ್ಲೇಶ್ವರಂನಲ್ಲಿದೆ ಎಂದು ತನ್ನನ್ನು ಪರಿಚಯಿಸಿಕೊಂಡರು. ಮತ್ತು ಅವರು ಇದೇ ರೀತಿಯಲ್ಲಿ ಹಲವಾರು ಜನರೊಂದಿಗೆ ಕೆಲಸ ಮಾಡುತ್ತಿರುವುದಾಗಿ ತಿಳಿಸಿದರು. ಹೆಚ್ಚಿನ ಮಾಹಿತಿಗಾಗಿ ನಾನು ಕೂಡ ಅವರನ್ನು ನೇಮಿಸಿಕೊಂಡೆ. ನಾನು ಮರೆಮಾಡಲು ಬಯಸಿದ್ದರೆ ನಾನು ಅವರಿಗೆ ನಗದು ನೀಡಬಹುದಿತ್ತು. ಆದರೆ ನಾನು ಅವರಿಗೆ ಚೆಕ್ ಮೂಲಕ ಪಾವತಿಸಿ ಅಫಿಡವಿಟ್ನಲ್ಲಿ ತೋರಿಸಿದ್ದೇನೆ ಎಂದು ನಂದೀಶ ರೆಡ್ಡಿ ಟಿಎನ್ಎಂಗೆ ತಿಳಿಸಿದ್ದಾರೆ.
ಆದಾಗ್ಯೂ, 2018 ರಲ್ಲಿ, ಅಸೆಂಬ್ಲಿ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗೆ ಚುನಾವಣಾ ಆಯೋಗವು ನಿಗದಿಪಡಿಸಿದ ವೆಚ್ಚದ ಮಿತಿ 28 ಲಕ್ಷ ರೂಪಾಯಿಗಳಾಗಿತ್ತು. ಆದರೆ, ನಂದೀಶ ರೆಡ್ಡಿ ಅವರು ಚಿಲುಮೆಯ ಸೇವೆಗೆ ಕನಿಷ್ಠ 18 ಲಕ್ಷ ರೂಪಾಯಿಗಳನ್ನು ಖರ್ಚು ಮಾಡಿದ್ದಾರೆ ಎಂಬುದು ಗಮನಿಸಬೇಕಾದ ಸಂಗತಿ.
ಈ ವರ್ಷದ ಆರಂಭದಲ್ಲಿ ಚಿಲುಮೆ ಟ್ರಸ್ಟ್ಗೆ ಸರ್ಕಾರಿ ಆದೇಶದ ಮೂಲಕ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ನಗರದ ಪುರಸಭೆಯಿಂದ ಮತದಾರರ ಜಾಗೃತಿ ನಡೆಸಲು ಅವಕಾಶ ನೀಡಲಾಯಿತು. ಗುತ್ತಿಗೆ ನೀಡಿರುವ ಸಂಸ್ಥೆಯು ಯಾವುದೇ ರಾಜಕಾರಣಿ ಅಥವಾ ರಾಜಕೀಯ ಪಕ್ಷ ಅಥವಾ ಗುಂಪಿನೊಂದಿಗೆ ಸಂಬಂಧ ಹೊಂದಿರಬಾರದು ಎಂದು ಆದೇಶದಲ್ಲಿ ಷರತ್ತು ವಿಧಿಸಲಾಗಿತ್ತು. ಮತದಾರರ ಪಟ್ಟಿಗೆ ಸಂಬಂಧಿಸಿದ ಕೆಲಸಕ್ಕಾಗಿ ಚಿಲುಮೆಗೆ ಹಣ ಪಾವತಿಸಿರುವುದಾಗಿ ನಂದೀಶ ರೆಡ್ಡಿ ಬಹಿರಂಗಪಡಿಸಿರುವುದು ಸರ್ಕಾರಿ ಆದೇಶವನ್ನು ಬಿಡುಗಡೆ ಮಾಡುವ ಮೊದಲು ಬಿಬಿಎಂಪಿಯು ಸಂಸ್ಥೆಯ ಹಿನ್ನೆಲೆ ಪರಿಶೀಲನೆ ನಡೆಸಿದೆಯೇ ಎಂಬ ಬಗ್ಗೆ ಮತ್ತಷ್ಟು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಚಿಲುಮೆ ಯಾವುದೇ ರಾಜಕೀಯ ಸಂಘಟನೆಯೊಂದಿಗೆ ಸಂಪರ್ಕ ಹೊಂದುವಂತಿಲ್ಲ ಎಂದು ಸರಕಾರಿ ಆದೇಶದಲ್ಲಿ ಸ್ಪಷ್ಟವಾಗಿ ಹೇಳಲಾಗಿದ್ದರೂ ರಾಜಕಾರಣಿಯಿಂದ ದುಡ್ಡು ಪಡೆದುಕೊಂಡ ಸಂಸ್ಥೆಗೆ ಹೇಗೆ ಇಂತಹ ಮಹತ್ವದ ಜವಾಬ್ದಾರಿ ಹೊರಿಸಲಾಯಿತು ಎನ್ನುವುದು ಪ್ರಶ್ನಾರ್ಹ.
ಚಿಲುಮೆ ತಾನೇ ಸರ್ಕಾರವನ್ನು ಸಂಪರ್ಕಿಸಿ ಸ್ವಯಂಪ್ರೇರಿತ ಸೇವೆಗಳನ್ನು ಒದಗಿಸಲು ಆಮಿಷ ನೀಡಿದ ನಂತರ ಈ ಆದೇಶವನ್ನು ನೀಡಲಾಗಿದೆ ಎಂದು ತನಿಖಾ ವರದಿ ವೇಳೆ ಕಂಡುಹಿಡಿಯಲಾಗಿದೆ. ಆದಾಗ್ಯೂ, ಈ ಸ್ವಯಂಪ್ರೇರಿತ ಕೆಲಸಕ್ಕಾಗಿ ರಾಜ್ಯಾದ್ಯಂತ ನೂರಾರು ಯುವಕರನ್ನು ನೇಮಿಸಿಕೊಂಡು ಅವರನ್ನು ಸರ್ಕಾರಿ ಅಧಿಕಾರಿಗಳಂತೆ ಬಿಂಬಿಸಿ ಅವರಿಗೆ 15 ರಿಂದ 25 ಸಾವಿರದವರೆಗೆ ವೇತನ ನೀಡಿದೆ.
ಇದಲ್ಲದೆ, ಉಪ-ಗುತ್ತಿಗೆದಾರರೊಂದಿಗಿನ ಅವರ ಒಪ್ಪಂದವು ಪ್ರತಿ ಮತದಾರರ ಪರಿಶೀಲನೆಗೆ ರೂ 20, ಪ್ರತಿ ಹೊಸ ಮತದಾರರನ್ನು ಗುರುತಿಸಲು ರೂ 13 ಮತ್ತು ಉಪ-ಗುತ್ತಿಗೆದಾರರಿಂದ ಭರ್ತಿ ಮಾಡಿದ ಪ್ರತಿ ಪರಿಶೀಲಿಸಿದ ಫಾರ್ಮ್ 7 ಗೆ ರೂ 13 ಪಾವತಿಸುತ್ತದೆ ಎಂದು ಹೇಳುತ್ತದೆ.
ಬಿಬಿಎಂಪಿ ಈ ಕಾರ್ಯಕ್ಕೆ ಹಣ ನೀಡದಿದ್ದರೆ, ಚಿಲುಮೆ ತಮ್ಮ ಉಪ ಗುತ್ತಿಗೆದಾರರಿಗೆ ಮತ್ತು ನೂರಾರು ಕಾರ್ಮಿಕರನ್ನು ಈ ಕೆಲಸ ಮಾಡಲು ಕೂಲಿ ಮಾಡಲು ಹಣವನ್ನು ಎಲ್ಲಿಂದ ಪಡೆದರು? ನಂದೀಶ್ ರೆಡ್ಡಿಯಂತೆ ಎಷ್ಟು ಮಂದಿ ರಾಜಕಾರಣಿಗಳಿಗಾಗಿ ಚಿಲುಮೆ ಕೆಲಸ ನಿರ್ವಹಿಸಿದೆ ಅನ್ನುವುದು ತನಿಖೆಯಿಂದಷ್ಟೇ ಹೊರಬರಬೇಕಿದೆ.