ಬಾಹ್ಯಾಕಾಶ ತಂತ್ರಜ್ಞಾನ ಪಿತಾಮಹನ ವೈಜ್ಞಾನಿಕ ನಡಿಗೆಯ ಹೆಗ್ಗುರುತುಗಳನ್ನು ಸ್ಮರಿಸೋಣ
( ಚಂದ್ರಯಾನದ ಸಂಭ್ರಮವೂ ಚರಿತ್ರೆಯ ಹೆಜ್ಜೆಗಳೂ
ದಾರ್ಶನಿಕ ನಾಯಕತ್ವವೂ ಭಾರತದ ಬಾಹ್ಯಾಕಾಶ ಪಯಣವೂ
ಬಾಹ್ಯಾಕಾಶ ನಡಿಗೆಯೂ – ಮೊದಲ ಹೆಜ್ಜೆಗಳ ನೆನಪುಗಳೂ
ಈ ಲೇಖನಗಳ ಮುಂದುವರೆದ ಭಾಗ )
–ನಾ ದಿವಾಕರ
ಭಾರತದ 140 ಕೋಟಿ ಜನತೆಯ ನಡುವೆ ಹೆಚ್ಚಿನ ಸಂಖ್ಯೆಯಲ್ಲಿರುವ ಒಂದು ತಲೆಮಾರಿನ ದೃಷ್ಟಿಯಲ್ಲಿ ಅಮೃತಕಾಲದತ್ತ ಧಾವಿಸುತ್ತಿರುವ ಆಧುನಿಕ ಭಾರತ ಜನಿಸಿದ್ದೇ 2014ರ ನಂತರ. ಇದು ವಾಸ್ತವ ಸಂಗತಿ ಅಲ್ಲದಿದ್ದರೂ ಹಾಗೆಂದು ಬಿಂಬಿಸಲು ದೇಶದ ಸಂವಹನ ಮಾಧ್ಯಮಗಳು ತಮ್ಮದೇ ಆದ ಜ್ಞಾನ ಕೋಶಗಳನ್ನು ನಿರ್ಮಿಸಿಕೊಂಡಿವೆ. ಸ್ವತಂತ್ರ ಭಾರತವನ್ನು “ 70 ವರ್ಷಗಳ ಭಾರತ ” ಮತ್ತು “ಆನಂತರದ ಭಾರತ ” ಎಂಬ ವಿಂಗಡನೆಗೊಳಪಡಿಸುವ ಮೂಲಕ ವಸಾಹತುಕಾಲದ ಹಾಗೂ ವಸಾಹತು ಪೂರ್ವದ ಚಾರಿತ್ರಿಕ ನಡಿಗೆಯ ಹೆಗ್ಗುರುತುಗಳನ್ನು ಅಳಿಸಿಹಾಕುವ ಪ್ರಯತ್ನಗಳನ್ನೂ ಮಾಡಲಾಗುತ್ತಿದೆ. ಗತ ಚರಿತ್ರೆಯ ಪುಟಗಳನ್ನು ತನ್ನದೇ ಆದ ರೀತಿಯಲ್ಲಿ ಮರುವ್ಯಾಖ್ಯಾನಕ್ಕೊಳಪಡಿಸುತ್ತಿರುವ ಒಂದು ಬೌದ್ಧಿಕ ವರ್ಗ ಮತ್ತೊಂದೆಡೆ ಸಮಕಾಲೀನ ಇತಿಹಾಸದ ಪುಟಗಳನ್ನೂ ವಿಮರ್ಶೆಗೊಳಪಡಿಸುತ್ತಿದ್ದು ಅಲ್ಲಿ ಅಚ್ಚಳಿಯದಂತಿರುವ ದಿಟ್ಟ ಹೆಜ್ಜೆಗುರುತುಗಳನ್ನೂ ಮರೆಮಾಚಲು ಪ್ರಯತ್ನಿಸಲಾಗುತ್ತಿದೆ.
ಒಂದು ದೇಶದ ಪ್ರಾಚೀನ-ಮಧ್ಯಕಾಲೀನ-ಆಧುನಿಕ ಇತಿಹಾಸದ ಹೆಜ್ಜೆಗಳು ಹಾಗೂ ಇದರೊಡನೆಯೇ ಸಮ್ಮಿಳಿತಗೊಂಡಿರಬಹುದಾದ ಸಾಂಸ್ಕೃತಿಕ ನೆಲೆಗಳು ವರ್ತಮಾನದ ಅಧಿಕಾರ ರಾಜಕಾರಣದ ದೃಷ್ಟಿಯಲ್ಲಿ ಬಳಸಿಕೊಳ್ಳಬಹುದಾದ ಬೌದ್ಧಿಕ ಅಸ್ತ್ರಗಳಾಗಿ ಪರಿಣಮಿಸಿದಾಗ ಇಂತಹ ಅಪಸವ್ಯಗಳು ಸಹಜವಾಗಿಯೇ ಕಂಡುಬರುತ್ತವೆ. ಆದರೆ ವಿಜ್ಞಾನ ಕ್ಷೇತ್ರದಲ್ಲಿ ನಮ್ಮ ದೇಶದ ವಿಜ್ಞಾನಿಗಳ ಅಧ್ಯಯನ, ಸಂಶೋಧನೆ ಹಾಗೂ ಬೌದ್ಧಿಕ ಪರಿಶ್ರಮಗಳನ್ನು ಗೌರವಿಸಬೇಕಾದರೆ ಅವರು ತುಳಿದ ಹಾದಿ ಮತ್ತು ಕ್ರಮಿಸಿದ ಮಾರ್ಗವನ್ನು ಸಮಕಾಲೀನ ನೆಲೆಯಲ್ಲಿ ಗ್ರಹಿಸಬೇಕಾಗುತ್ತದೆ. ನಮ್ಮಲ್ಲಿ ಶತಮಾನಗಳ ಹಿಂದೆಯೇ ಇದ್ದುದನ್ನು ಈಗ ಸಾಧಿಸಲಾಗಿದೆ ಎಂಬ ಬೀಸು ಹೇಳಿಕೆಗಳ ಹಿಂದೆ ಪ್ರಾಚೀನ ಕಲ್ಪನೆಗಳನ್ನು ಸಾಕ್ಷೀಕರಿಸಿ ವೈಭವೀಕರಿಸುವ ಆತ್ಮರತಿ ಇದ್ದಷ್ಟೇ ಸಮಕಾಲೀನ ಪರಿಶ್ರಮವನ್ನು ನಗಣ್ಯವಾಗಿ ನೋಡುವ ದಾರ್ಷ್ಟ್ಯವೂ ಇರುತ್ತದೆ. ಈ ಹಿನ್ನೆಲೆಯಿಂದಾದರೂ ಚಂದ್ರಯಾನ-3ರ ಯಶೋಗಾಥೆಯನ್ನು ದಾಖಲಿಸುವಾಗ, ಸ್ವತಂತ್ರ ಭಾರತದ ವಿಜ್ಞಾನಿಗಳು ಮತ್ತು ವೈಜ್ಞಾನಿಕ ನೆಲೆಗಟ್ಟುಗಳನ್ನು ಪೋಷಿಸಿ ವಿಸ್ತರಿಸಿದ ಆಳ್ವಿಕೆಯ ಪ್ರತಿನಿಧಿಗಳನ್ನು ಸ್ಮರಿಸುವುದು ಸೂಕ್ತ.
![ಚಂದ್ರಯಾನ 3](https://pratidhvani.com/wp-content/uploads/2023/08/ವಿಕರಾಮಸೆರ-1.jpg)
ಬಾಹ್ಯಾಕಾಶದತ್ತ ಮೊದಲ ನಡಿಗೆ
1940ರ ದಶಕರಿಂದಲೇ ಆರಂಭವಾದ ವೈಜ್ಞಾನಿಕ ಭಾರತದ ನಡಿಗೆ ಸ್ವಾತಂತ್ರ್ಯಾನಂತರದಲ್ಲಿ ಒಂದು ವ್ಯವಸ್ಥಿತ ಸಾಂಸ್ಥಿಕ ಚೌಕಟ್ಟಿಗೊಳಪಟ್ಟು ತನ್ನ ಜ್ಞಾನಶಾಖೆಗಳನ್ನು ವಿಸ್ತರಿಸುತ್ತಾ ಆಧುನಿಕ ಭಾರತದ ವೈಜ್ಞಾನಿಕ ಪ್ರಗತಿಗೆ ಪೂರಕವಾದ ಶೈಕ್ಷಣಿಕ-ಬೌದ್ಧಿಕ-ಸಾಂಸ್ಥಿಕ ವಾತಾವರಣವನ್ನು ಪ್ರವೇಶಿಸಿದ್ದನ್ನು ಈ ಹಿಂದಿನ ಲೇಖನಗಳಲ್ಲಿ ಗಮನಿಸಿದ್ದೇವೆ. 1960ರ ಆರಂಭದಲ್ಲಿ ವಿಕ್ರಂ ಸಾರಾಭಾಯ್ ಹಾಗೂ ಹೋಮಿ ಜೆ ಭಾಭಾ ಭಾರತದ ಬಾಹ್ಯಾಕಾಶ ನಡಿಗೆಯ ವೈಜ್ಞಾನಿಕ ಉಪಕ್ರಮಗಳನ್ನು ಆರಂಭಿಸಿದಾಗ ದೇಶದ ಪರಿಸ್ಥಿತಿ ಉಜ್ವಲವಾಗೇನೂ ಇರಲಿಲ್ಲ. ಉನ್ನತ ಧ್ಯೇಯೋದ್ದೇಶಗಳೊಂದಿಗೆ, ಉದಾತ್ತ ಚಿಂತನೆಗಳೊಂದಿಗೆ ಆಧುನಿಕತೆಗೆ ತೆರೆದುಕೊಳ್ಳುತ್ತಿದ್ದ ಭಾರತದಲ್ಲಿ ಬಾಹ್ಯಾಕಾಶ ತಂತ್ರಜ್ಞಾನದ ವಿವಿಧ ಜ್ಞಾನಶಾಖೆಗಳಲ್ಲಿ ಅನುಭವ ಇರುವ ವಿಜ್ಞಾನಿಗಳ ಕೊರತೆ ಇತ್ತು. ಕೇರಳದ ತುಂಬಾ ಗ್ರಾಮದ ಬಳಿಯ ಸಂತ ಮೇರಿ ಮ್ಯಾಗ್ಡಲೀನ್ ಚರ್ಚ್ ಎಂದು ಕರೆಯಲ್ಪಡುವ ಒಂದು ಚರ್ಚ್ ಕಟ್ಟಡದಲ್ಲಿದ್ದ TERLS ಒಂದು ಸ್ಥಾವರವಾಗಿದ್ದರೂ ಬಾಹ್ಯಾಕಾಶ ತಂತ್ರಜ್ಞಾನದ ಪ್ರಯೋಜನಗಳ ಬಗ್ಗೆ ಆಡಳಿತ ನೀತಿ ನಿರೂಪಕರಿಗಾಗಲೀ, ಸಾಮಾನ್ಯ ಜನತೆಗಾಗಲೀ ಮನವರಿಕೆಯಾಗಿರಲಿಲ್ಲ. ಇದೇ ಸಂದರ್ಭದಲ್ಲಿ ಭೌಗೋಳಿಕ ಗಡಿ ಘರ್ಷಣೆಗಳು, ಆಹಾರದ ಕೊರತೆ ಮತ್ತು ಹೊರದೇಶಗಳ ಮೇಲಿನ ಅವಲಂಬನೆ ಜನಸಾಮಾನ್ಯರಲ್ಲಿ ನಿರಾಸಕ್ತಿ ಮೂಡಿಸಿತ್ತು.
ಈ ಸಂದರ್ಭದಲ್ಲಿ ಭಾರತದ ಬಾಹ್ಯಾಕಾಶ ನಡಿಗೆಯ ಮೊದಲ ಹೆಜ್ಜೆಗೆ ಸಂತ ಮೇರಿ ಮ್ಯಾಗ್ಡಲೀನ್ ಚರ್ಚ್ ಆಸರೆ ನೀಡಿತ್ತು. ಆಸ್ಕರ್ ವೈಲ್ಡ್ ಒಂದು ಸಂದರ್ಭದಲ್ಲಿ “ ನಾವೆಲ್ಲರೂ ಗಟಾರದಲ್ಲಿದ್ದೇವೆ ಆದರೆ ಕೆಲವರು ನಮ್ಮಲ್ಲಿ ನಕ್ಷತ್ರಗಳನ್ನು ನೋಡುತಿರುತ್ತಾರೆ “ ಎಂದು ಹೇಳಿದ್ದುದನ್ನು ಸ್ಮರಿಸುವಾಗ 1960ರ ದಶಕದ ಆಸುಪಾಸಿನ ಅವಧಿಯಲ್ಲಿ ನೆಹರೂ, ಹೋಮಿ ಜೆ ಭಾಭಾ ಮತ್ತು ವಿಕ್ರಂ ಸಾರಾಭಾಯ್ ಮುಂತಾದ ದಾರ್ಶನಿಕರು ದೇಶದ ಬಡತನದ ನಡುವೆ ಬಾಹ್ಯಾಕಾಶದತ್ತ ನೋಡುತ್ತಿದ್ದುದನ್ನೂ ನೆನಪಿಸಿಕೊಳ್ಳಬೇಕಾಗುತ್ತದೆ. ಚಂದ್ರಯಾನದಿಂದ ಸಾಮಾನ್ಯಜನತೆಗೆ ಆಗುವ ಪ್ರಯೋಜನವೇನು ಎಂಬ ತಾರ್ಕಿಕ ಪ್ರಶ್ನೆ ಇಂದಿಗೂ ಕೇಳಿಬರುತ್ತಲೇ ಇದ್ದು, ಈ ಪ್ರಶ್ನೆಯಿಂದಾಚೆಗೆ ನೋಡಿದಾಗ ಭಾರತ ತನ್ನ ವೈಜ್ಞಾನಿಕ ಪ್ರಗತಿಯನ್ನು ಸಾಧಿಸಲು ಪಟ್ಟ ಶ್ರಮವನ್ನು ಹೆಮ್ಮೆಯಿಂದಲೇ ಗುರುತಿಸಬೇಕಾಗುತ್ತದೆ. ಅಂದು ನೆಹರೂ ಮತ್ತವರ ತಂಡ ಮಂಗಳಗ್ರಹದತ್ತ, ಚಂದ್ರನತ್ತ ಹತಾಶೆಯಿಂದ ನೋಡುತ್ತಿದ್ದರೂ, ಆರು ದಶಕಗಳ ನಂತರ ಭಾರತ ಎರಡೂ ಕಡೆ ತನ್ನ ಕಾಲಿರಿಸುವ ಮೂಲಕ ವಿಜ್ಞಾನ ಲೋಕದ ವಿಸ್ಮಯಗಳನ್ನು ಭೇದಿಸಿದೆ ಎನ್ನುವುದು ವಾಸ್ತವ.
![](https://pratidhvani.com/wp-content/uploads/2023/05/jawaharlal_nehru-621x414-621x414-1.webp)
ಸಾರಾಭಾಯ್ ಎಂಬ ತ್ರಿವಿಕ್ರಮ
ಭಾರತದ ಬಾಹ್ಯಾಕಾಶ ವಿಜ್ಞಾನದ ಪಿತಾಮಹ ವಿಕ್ರಂ ಸಾರಾಭಾಯ್ ಅವರ ಕ್ಷಿಪ್ರ ಕಾರ್ಯಾಚರಣೆಯ ವೈಖರಿ, ಶೀಘ್ರ ಕಾರ್ಯಸಾಧನೆಯ ಗುರಿ ಹಾಗೂ ಎಲ್ಲರನ್ನೊಳಗೊಂಡು ಮುನ್ನಡೆಯುವ ನಾಯಕತ್ವದ ಗುಣಗಳು ಇಸ್ರೋ ಎಂಬ ಒಂದು ಸಂಸ್ಥೆಯ ಸ್ಥಾಪನೆಗೆ ಮತ್ತು ಮುನ್ನಡೆಗೆ ನಾಂದಿ ಹಾಡಿತ್ತು. ಹೋಮಿ ಜೆ ಭಾಭಾ ಅವರ ಸಲಹೆಯೊಂದಿಗೆ, ಎ.ಪಿ.ಜೆ. ಅಬ್ದುಲ್ ಕಲಾಂ ಅವರಂತಹ ಪ್ರತಿಭಾವಂತ ತಂತ್ರಜ್ಞರನ್ನು, ಇಂಜಿನಿಯರುಗಳನ್ನು, ವಿಜ್ಞಾನಿಗಳನ್ನು ಹಾಗೂ ವಿಜ್ಞಾನದಲ್ಲಿ ಆಸಕ್ತಿಯಿದ್ದ ಅನೇಕ ಪ್ರತಿಭೆಗಳನ್ನು ಗುರುತಿಸಿ ಅವರನ್ನು ತರಬೇತಿಗಾಗಿ ಕಳುಹಿಸುತ್ತಿದ್ದರು. ರಾಷ್ಟ್ರೀಯ-ಅಂತರರಾಷ್ಟ್ರೀಯ ಸಮ್ಮೇಳನಗಳಿಗೆ ಕಳುಹಿಸುವ ಮೂಲಕ ಬಾಹ್ಯಾಕಾಶ ತಂತ್ರಜ್ಞಾನ ಕ್ಷೇತ್ರದ ಹಲವು ಖ್ಯಾತ ತಜ್ಞರೊಡನೆ ಮುಖಾಮುಖಿಯಾಗಲು ಅವಕಾಶಗಳನ್ನು ಕಲ್ಪಿಸಿದ್ದರು. ಸಾರಾಭಾಯ್ ಅವರ ಈ ಬೌದ್ಧಿಕ ಕ್ಷಮತೆಯ ಫಲವಾಗಿಯೇ 1965-67ರ ಅವಧಿಯಲ್ಲಿ ಜಪಾನ್ ದೇಶದ ಬಾಹ್ಯಾಕಾಶ ಪ್ರವರ್ತಕ ಹಿಡೆಯೋ ಇಟೋಕಾವಾ ಅವರೊಂದಿಗೆ ನಿಕಟವಾದ ಸಂಪರ್ಕವನ್ನು ಹೊಂದಿರಲು ಸಾಧ್ಯವಾಗಿತ್ತು. 1962ರಲ್ಲಿ TERLS ಅಧಿಕೃತವಾಗಿ ಸ್ಥಾಪನೆಯಾಗುವ ಮುನ್ನವೇ ಸಾರಾಭಾಯ್ ಎ.ಪಿ.ಜೆ. ಅಬ್ದುಲ್ ಕಲಾಂ ಸೇರಿದಂತೆ ಹೊಸದಾಗಿ ನೇಮಕಗೊಂಡ ಇಂಜಿನಿಯರುಗಳ ತಂಡವನ್ನು ತರಬೇತಿಗಾಗಿ NASA ಗೆ ಕಳುಹಿಸಿದ್ದರು.
1964ರಲ್ಲಿ ಟೋಕಿಯೋ ಒಲಂಪಿಕ್ಸ್ ಕ್ರೀಡಾಕೂಟವನ್ನು ಪ್ರಸಾರ ಮಾಡಲು ಅಮೆರಿಕ ತನ್ನ ಉಪಗ್ರಹ ಸಿನ್ಕಾಮ್-3ನ್ನು ಬಳಸಿಕೊಂಡು ಪೆಸಿಫಿಕ್ ಪ್ರದೇಶದಾದ್ಯಂತ ನೇರ ಪ್ರಸಾರ ಮಾಡುವಲ್ಲಿ ಯಶಸ್ವಿಯಾಗಿತ್ತು. ಉಪಗ್ರಹದ ಈ ಸಂವಹನ ಶಕ್ತಿಯನ್ನು ಅರಿತಿದ್ದ ವಿಕ್ರಂ ಸಾರಾಭಾಯ್ ಕೂಡಲೇ ಕಾರ್ಯೋನ್ಮುಖರಾಗಿ, ಅಹಮದಾಬಾದ್ನಲ್ಲಿ 1967ರಲ್ಲಿ ಪ್ರಾಯೋಗಿಕ ಉಪಗ್ರಹ ಸಂವಹನ ಭೂ ಕೇಂದ್ರ (ESCES) ಸ್ಥಾಪಿಸಿದ್ದರು. ಈ ಕೇಂದ್ರದ ಸ್ಥಾಪನೆಗಾಗಿಯೇ ಸಾರಾಭಾಯ್ ತರಾತುರಿಯಿಂದ ಇಂಜಿನಿಯರುಗಳ ತಂಡವನ್ನೂ ಒಟ್ಟುಗೂಡಿಸಿದ್ದರು. ಈ ಸಂದರ್ಭದಲ್ಲಿ UNDP (United Nations Development Programme) ಹಾಗೂ ITU (International Telecommunication Union) ಸಂಸ್ಥೆಗಳಿಂದ ನೆರವನ್ನೂ ಪಡೆಯಲು ಸಾಧ್ಯವಾಗಿತ್ತು. ಜಪಾನಿನ NEC ಉಪಕರಣಗಳೊಂದಿಗೆ 14 ಮೀಟರ್ ಎತ್ತರದ ಡಿಷ್ ಆಂಟೆಯಾ ಅಳವಡಿಸುವ ಮೂಲಕ 1967ರಲ್ಲಿ ಕಾರ್ಯಾರಂಭ ಮಾಡಿದ ESCES ನಂತರದ ದಿನಗಳಲ್ಲಿ ಉಪಗ್ರಹ, ಬಾಹ್ಯಾಕಾಶ ತಂತ್ರಜ್ಞಾನ ಹಾಗೂ ಇತರ ವಿಷಯಗಳಲ್ಲಿ ಭಾರತ ಮತ್ತು ಇತರ ಅಭಿವೃದ್ಧಿ ದೇಶಗಳ 200ಕ್ಕೂ ಹೆಚ್ಚು ಇಂಜಿನಿಯರುಗಳಿಗೆ ತರಬೇತಿಯನ್ನು ನೀಡಿತ್ತು.
![](https://pratidhvani.com/wp-content/uploads/2023/08/Vikram-Sarabhai-Indian-physicist-and-industrialist-1-823x1024.webp)
RH-75, ಭಾರತವು ಅಭಿವೃದ್ಧಿಪಡಿಸಿದ ಮೊದಲ ಸೌಂಡಿಂಗ್ ರಾಕೆಟ್ ಆಗಿದ್ದು ಇದು 32 ಕಿಲೋಗ್ರಾಂ (71 ಪೌಂಡ್) ತೂಕ, 75 ಮಿಲಿಮೀಟರ್ (3.0 ಇಂಚು) ವ್ಯಾಸವನ್ನು ಹೊಂದಿತ್ತು ಮತ್ತು ನವೆಂಬರ್ 1967 ಮತ್ತು ಸೆಪ್ಟೆಂಬರ್ 1968 ರ ನಡುವೆ 15 ಬಾರಿ ಹಾರಿತ್ತು. RH-100 ಏಕ-ಹಂತದ ಘನ-ಇಂಧನ ರಾಕೆಟ್ ಆಗಿದ್ದು, ಇದು ತನ್ನ ಪೇಲೋಡ್ ಅನ್ನು 55 ಕಿ.ಮೀ ಅಥವಾ ಅದಕ್ಕಿಂತ ಹೆಚ್ಚಿನ ಎತ್ತರಕ್ಕೆ ಸಾಗಿಸುವ ಸಾಮರ್ಥ್ಯವನ್ನು ಹೊಂದಿತ್ತು. ಇದೇ ಅವಕಾಶವನ್ನು ಬಳಸಿಕೊಂಡ ಸಾರಾಭಾಯ್ ಭಾರತ ಸರ್ಕಾರದ ನೆರವಿನೊಂದಿಗೆ ಫ್ರೆಂಚ್ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡು CENTAUR ಸೌಂಡಿಂಗ್ ರಾಕೆಟ್ಗಳನ್ನು ತಯಾರಿಸಲು ಸಿದ್ಧವಾದರು. ಕಾಲಾನಂತರದಲ್ಲಿ ಈ ಒಪ್ಪಂದಗಳ ಮೂಲಕವೇ ತುಂಬಾದಲ್ಲಿ Rocket Propellant Plant (RPP) ಮತ್ತು Rocket Fabrication Facility (RFF) ಘಟಕಗಳನ್ನು ಸ್ಥಾಪನೆ ಮಾಡಲಾಯಿತು.
ಇದಕ್ಕೂ ಮುನ್ನ ತುಂಬಾ ಕಡಲಂಚಿನ ಗ್ರಾಮದ ವೇಲಿ ಹಿಲ್ಸ್ ಎಂಬ ಜಾಗದಲ್ಲಿ ವಿಕ್ರಂ ಸಾರಾಭಾಯ್ ಮುಂದಾಳತ್ವದಲ್ಲಿ ಸ್ಥಾಪಿಸಲಾದ TERLS ನಲ್ಲಿ ರಾಕೆಟ್ ವ್ಯವಸ್ಥೆಗಳು ಮತ್ತು ತತ್ಸಂಬಂಧಿತ ಘಟಕಗಳ ಮೇಲೆ ಸಂಶೋಧನೆ ನಡೆಸಿ ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಕಾರ್ಯಯೋಜನೆಗಳನ್ನು ಹಮ್ಮಿಕೊಳ್ಳಲಾಗಿತ್ತು. ದೇಶೀಯ ಉಪಗ್ರಹ ಉಡಾವಣಾ ಸಾಮರ್ಥ್ಯವನ್ನು ಸಾಕಾರಗೊಳಿಸುವ ಏಕೈಕ ಧ್ಯೇಯದೊಂದಿಗೆ ಸಾರಾಭಾಯ್ ನೆಹರೂ ಸರ್ಕಾರದ ಪೂರ್ಣ ಬೆಂಬಲದೊಂದಿಗೆ ತಮ್ಮ ಕಾರ್ಯಾಚರಣೆಯನ್ನು ಮುನ್ನಡೆಸಿದ್ದರು. ಈ ಪರಿಶ್ರಮದ ಫಲವನ್ನು ಮುಂದೆ ಭಾರತವನ್ನು ವಿಶ್ವ ಭೂಪಟದಲ್ಲಿ ರಾರಾಜಿಸುವಂತೆ ಮಾಡಿದ ಇಸ್ರೋ ಸಂಸ್ಥೆಯ ASĻV PSLV ಹಾಗೂ GSLV ಉಪಗ್ರಹ ಉಡಾವಣಾ ವಾಹನಗಳ ಯಶಸ್ಸಿನಲ್ಲಿ ಗುರುತಿಸಬಹುದು. ವಿಕ್ರಂ ಸಾರಾಭಾಯ್ ಅವರ ಯಶಸ್ಸಿನ ಮೂಲ ಕಾರಣ ಅವರ ಕಾರ್ಯಕ್ಷಮತೆ, ದಕ್ಷತೆ ಹಾಗೂ ತಮ್ಮ ಒಡನಾಡಿಗಳ-ಸಹೋದ್ಯೋಗಿಗಳ ನಡುವೆ ಅವರು ಹೊಂದಿದ್ದ ವಿಶ್ವಾಸಾರ್ಹ ಸಂಬಂಧಗಳು. ತಮ್ಮ ಸುಪರ್ದಿಯಲ್ಲಿ ಕೆಲಸ ಮಾಡುವ ಇಂಜಿನಿಯರುಗಳು ಮತ್ತು ವಿಜ್ಞಾನಿಗಳಿಗೆ ಸಂಪೂರ್ಣ ನಂಬಿಕೆಯನ್ನು ವ್ಯಕ್ತಪಡಿಸಿ ಆಯಾ ಕ್ಷೇತ್ರಗಳಲ್ಲಿ ಅವರ ಕಾರ್ಯನಿರ್ವಹಣೆಗೆ ಮುಕ್ತ ಅವಕಾಶ ನೀಡುವ ಮೂಲಕ ಸಾರಾಭಾಯ್ ಒಂದು ಮುಕ್ತ ವಾತಾವರಣವನ್ನು ಸೃಷ್ಟಿಸಿದ್ದರು.
ತತ್ಪರಿಣಾಮವಾಗಿ ಹಲವು ಗುಂಪುಗಳು ಸೌಂಡಿಂಗ್ ರಾಕೆಟ್ ವಿನ್ಯಾಸಗಳ ಮೇಲೆ ಕೆಲಸ ಮಾಡುತ್ತಿದ್ದವು. ಕನಿಷ್ಠ ಎರಡು ಗುಂಪುಗಳು ಘನ ಪ್ರೊಪೆಲ್ಲಂಟರ್ಗಳ ಅಭಿವೃದ್ಧಿಯಲ್ಲಿ ಕಾರ್ಯನಿರತವಾಗಿದ್ದವು. ಫೈಬರ್ ಬಲವರ್ಧಿತ ಪ್ಲಾಸ್ಟಿಕ್ಗಳು, ಪೈರೋ ವ್ಯವಸ್ಥೆಗಳ ಬಗ್ಗೆ ಇತರ ಗುಂಪುಗಳು ಕೆಲಸ ಮಾಡುತ್ತಿದ್ದವು. ಈ ಸಂದರ್ಭದಲ್ಲಿ ಕನಿಷ್ಠ ಎಂದರೆ 15 ವಿವಿಧ ರೀತಿಯ ಸೌಂಡಿಂಗ್ ರಾಕೆಟ್ಗಳ ವಿನ್ಯಾಸಗಳು ಸಿದ್ಧವಾಗಿದ್ದವು. ಈ ತಂತ್ರಜ್ಞಾನದ ಕುಲುಮೆಯಿಂದಲೇ ಭಾರತದಲ್ಲಿ ಒಂದು ಹೊಸ ಪೀಳೀಗೆಯ ವಿಜ್ಞಾನಿಗಳ ಪೀಳಿಗೆಯೂ ಬೆಳೆದಿತ್ತು. ಅವರೆಲ್ಲರನ್ನೂ ಈಗ ಇಸ್ರೋದ ಅನುಭವಿಗಳು ಎಂದೇ ಪರಿಗಣಿಸಲಾಗುತ್ತದೆ. ಈ ವಿಜ್ಞಾನಿಗಳು, ಇಂಜಿನಿಯರುಗಳು ವಿಕ್ರಂ ಸಾರಾಭಾಯ್ ಅವರಲ್ಲಿಟ್ಟಿದ್ದ ನಂಬಿಕೆ ವಿಶ್ವಾಸಗಳನ್ನು ಸಾಕಾರಗೊಳಿಸಿ ಇಂದು ಚಂದ್ರಯಾನದ ಯಶಸ್ಸಿನಲ್ಲಿ ತೋರಿಸಿದ್ದಾರೆ.
ವಿಕ್ರಂ ಸಾರಾಭಾಯ್ ಸ್ಥಾಪಿಸಿದ ಸಂಸ್ಥೆಗಳು |
Indian Space Research Organisation (ISRO) |
Indian Institute of Management Ahmedabad (IIMA) |
Operations Research Group (ORG) – India’s first market research organization |
Ahmedabad Textile Industry’s Research Association (ATIRA) |
Center for Environmental Planning and Technology (CEPT) |
Faster Breeder Test Reactor (FBTR) at Kalpakkam |
Blind Men Association (BMA) |
Electronics Corporation of India Limited (ECIL) at Hyderabad |
Variable Energy Cyclotron Project at Calcutta |
Uranium Corporation of India Limited (UCIL) at Jharkhand. |
Darpana Academy of Performing Arts (along with his wife, dancer Mrinalini Sarabhai) |
ವಿಜ್ಞಾನದ ಉಸಿರು ನಂದಿದಾಗ
1969ರ ಆಗಸ್ಟ್ 15ರಂದು, ಭಾರತದ 22ನೆಯ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ವಿಕ್ರಂ ಸಾರಾಭಾಯ್ ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರ (ಇಸ್ರೋ) ಸ್ಥಾಪಿಸಿದ್ದರು. 1963ರಲ್ಲಿ ಸ್ಥಾಪನೆಯಾಗಿದ್ದ INCOSPAR ಸಂಸ್ಥೆಯೇ ರೂಪಾಂತರಗೊಂಡು ISRO ಆಗಿ ರೂಪುಗೊಂಡಿತ್ತು. ಭಾರತದ ಮೊಟ್ಟಮೊದಲ ಉಪಗ್ರಹ ಉಡಾವಣಾ ವಾಹನವನ್ನು ಅಭಿವೃದ್ಧಿಪಡಿಸಲು ಹಸಿರು ನಿಶಾನೆ ತೋರಿದ ಸಾರಾಭಾಯ್, ದೇಶದ ಮೊದಲ ಉಪಗ್ರಹ , ಆರ್ಯಭಟದ ಉಡಾವಣೆಗಾಗಿ ಸೋವಿಯತ್ ಒಕ್ಕೂಟದೊಂದಿಗೆ ಒಡಂಬಡಿಕೆಗಳನ್ನು ಮಾಡಿಕೊಳ್ಳುವಲ್ಲಿ ಕೇಂದ್ರ ಸರ್ಕಾರದ ನೆರವಿನೊಂದಿಗೆ ಯಶಸ್ವಿಯಾಗಿದ್ದರು. ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಲ್ಲಿ ವಿಜ್ಞಾನ ಮತ್ತು ಗಣಿತವನ್ನು ಜನಪ್ರಿಯಗೊಳಿಸಲು ಅವರು 1960 ರ ದಶಕದಲ್ಲಿ ವಿಕ್ರಮ್ ಎ. ಸಾರಾಭಾಯ್ ಸಮುದಾಯ ವಿಜ್ಞಾನ ಕೇಂದ್ರವನ್ನು (VASCSC) ಸ್ಥಾಪಿಸಿದರು. ‘ಪರಮಾಣು ಶಕ್ತಿಯ ಶಾಂತಿಯುತ ಬಳಕೆಗಳು’ ಕುರಿತ ವಿಶ್ವಸಂಸ್ಥೆಯ ನಾಲ್ಕನೇ ಸಮ್ಮೇಳನದಲ್ಲಿ ಅವರಿಗೆ ಉಪಾಧ್ಯಕ್ಷ ಸ್ಥಾನವನ್ನು ನೀಡಲಾಯಿತು.
![](https://pratidhvani.com/wp-content/uploads/2023/06/isro-1024x576.webp)
ತದನಂತರ ಭಾರತದ ಪೂರ್ವ ಕರಾವಳಿಯಲ್ಲಿ , ಶ್ರೀಹರಿಕೋಟಾ ಎಂಬಲ್ಲಿ, ಉಡಾವಣಾ ಕೇಂದ್ರ ಸಂಕೀರ್ಣವನ್ನು ನಿರ್ಮಿಸಲು ಆರಂಭಿಸಿದ್ದರು. ವಿಮಾನ ಅಪಘಾತವೊಂದರಲ್ಲಿ ತಮ್ಮ ಬಲಗೈನಂತಿದ್ದ ಹೋಮಿ ಜೆ ಭಾಭಾ ದುರ್ಮರಣಕ್ಕೀಡಾದ ನಂತರ ಸಾರಾಭಾಯ್ ಪರಮಾಣು ಶಕ್ತಿ ಆಯೋಗದ (AEC) ಅಧಿಕಾರವನ್ನೂ ವಹಿಸಿಕೊಂಡಿದ್ದರು. NASA ದ ATS-F (ನಂತರದಲ್ಲಿ ಇದನ್ನು ATS-S ಎಂದು ಕರೆಯಲಾಯಿತು) ಉಪಗ್ರಹವನ್ನು ಬಳಸಿಕೊಂಡು ಜಂಟಿಯಾಗಿ ಬೋಧನಾ ದೂರದರ್ಶನ ಪ್ರಯೋಗವನ್ನು ನಡೆಸಲು ಸಾರಾಭಾಯ್ NASA ದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದ್ದರು. 1970-80ರ ದಶಕದಲ್ಲಿ ಇಸ್ರೋ ಅನುಸರಿಸಬೇಕಾದ ಮಾರ್ಗದ ನೀಲನಕ್ಷೆಯನ್ನೂ ಸಾರಾಭಾಯ್ ಸಿದ್ಧಪಡಿಸಿದ್ದರು.
1971ರ ಡಿಸೆಂಬರ್ 30ರಂದು ಭಾರತದ ಬಾಹ್ಯಾಕಾಶ ತಂತ್ರಜ್ಞಾನ ಪಿತಾಮಹ ಎಂದೇ ಕರೆಯಲ್ಪಡುವ ವಿಕ್ರಂ ಸಾರಾಭಾಯ್, ತಮ್ಮ 52ನೆಯ ವಯಸ್ಸಿನಲ್ಲಿ, ನಿದ್ರಾವಸ್ಥೆಯಲ್ಲಿದ್ದಾಗಲೇ ಚಿರನಿದ್ರೆಗೆ ಜಾರಿದ್ದರು. ಇಂದು ಅವರದೇ ಹೆಸರಿನ ವಿಕ್ರಂ ಲ್ಯಾಂಡರ್ ಚಂದ್ರನ ಕಕ್ಷೆಯನ್ನು ಪ್ರವೇಶಿಸಿ ದಕ್ಷಿಣ ಧೃವದಲ್ಲಿ ಕಾಲೂರಿದ ಪ್ರಪ್ರಥಮ ದೇಶ ಎಂದು ಭಾರತಕ್ಕೆ ಹೆಮ್ಮೆಯ ಕಿರೀಟ ತೊಡಿಸಿದೆ. ಆ ನಿರ್ದಿಷ್ಟ ಬಿಂದುವನ್ನು ಕೇಂದ್ರ ಸರ್ಕಾರ ಶಿವಶಕ್ತಿ ಎಂದು ನಾಮಾಂಕಿತಗೊಳಿಸಿದ್ದರೂ, ಭಾರತದ ಹೆಮ್ಮೆಯ ಜನತೆ ದಕ್ಷಿಣ ಧೃವದ ಆ ಜಾಗವನ್ನು ಗುರುತಿಸಬೇಕಾದ್ದು ವಿಕ್ರಂ ಸಾರಾಭಾಯ್ ಎಂಬ ತ್ರಿವಿಕ್ರಮ ವಿಜ್ಞಾನಿಯ ಮೂಲಕ. ಅವರೊಟ್ಟಿಗೆ ಹೆಗಲು ನೀಡಿದ ಸಾವಿರಾರು ವಿಜ್ಞಾನಿಗಳ, ಇಂಜಿನಿಯರುಗಳ ಮೂಲಕ ಹಾಗೂ ಆ ಕಾಲಘಟ್ಟದ ನೆಹರೂ ಯುಗದ ಸರ್ಕಾರಗಳ ಮೂಲಕ. ಇತಿಹಾಸ ರಚನೆಯಾಗುವುದು ಅಕ್ಷರಗಳಲ್ಲಿ ಅಲ್ಲ ಸಾಧನೆಗಳಲ್ಲಿ ಎನ್ನುವುದಕ್ಕೆ ವಿಕ್ರಂ ಸಾರಾಭಾಯ್ ಚಾರಿತ್ರಿಕ ಸಾಕ್ಷಿಯಾಗಿ ಸದಾಕಾಲಕ್ಕೂ ನಿಲ್ಲುತ್ತಾರೆ.
ಕೊನೆಯ ಹನಿ :
ಭಾರತದ ಬಾಹ್ಯಾಕಾಶ ವಿಜ್ಞಾನದ ಪಿತಾಮಹ ಎನಿಸಿಕೊಂಡಿದ್ದ ಹೋಮಿ ಜೆ ಭಾಭಾ ಹಾಗೂ ವಿಕ್ರಂ ಸಾರಾಭಾಯ್ ಭಾರತರತ್ನ ಪ್ರಶಸ್ತಿಗೆ ಭಾಜನರಾಗಿಲ್ಲ. ಹಾಗೆಯೇ ಭಾರತದ ಉಪಗ್ರಹ ಮನುಷ್ಯ (Satellite Man of India ) ಎನಿಸಿಕೊಂಡಿದ್ದ ಕನ್ನಡಿಗ ಯು. ಆರ್. ರಾವ್ ಕನ್ನಡ ರತ್ನ ಪ್ರಶಸ್ತಿಗೂ ಭಾಜನರಾಗಿಲ್ಲ.
(ಇಸ್ರೋ ನಡೆದುಬಂದ ಹಾದಿ ಮುಂದಿನ ಭಾಗದಲ್ಲಿ )
-೦-೦-೦-೦-