ಈ ಬಾರಿಯ ಕ್ರಿಸ್ಮಸ್ (Christmas ) ಅಲ್ಲಲ್ಲಿ ಕ್ರೈಸ್ತರ ಮೇಲಿನ ವಿನಾಕಾರಣ ದಾಳಿಗೆ ಸುದ್ದಿಯಾಯಿತು. ಕರ್ನಾಟಕದಲ್ಲೂ (Karnataka) ಚರ್ಚ್ ಮೇಲೆ ದಾಳಿಗಳಾದವು. ಪಿಯುಸಿಎಲ್ ಅಧ್ಯಯನಾ ವರದಿಯ ಪ್ರಕಾರ 2021ರಲ್ಲಿ ಕರ್ನಾಟಕದಾದ್ಯಂತ ಕ್ರೈಸ್ತರ ಮೇಲೆ 39 ದಾಳಿಗಳು ನಡೆದಿವೆ. ಮಿತಿ ಮೀರಿದ ಕ್ರೈಸ್ತ ದ್ವೇಷಕ್ಕೆ ಹಿಂದೂ ಧರ್ಮದಿಂದ ಕ್ರಿಶ್ಚಿಯನ್ ಧರ್ಮಕ್ಕೆ ಅಮಿಷದ ಮತಾಂತರ ಮಾಡಲಾಗುತ್ತಿದೆ ಎನ್ನುವುದು ಹಿಂದುತ್ವ (Hindutva) ವಾದಿಗಳ ಆರೋಪ.
ಕ್ರಿಸ್ಮಸ್, ಸಂತಾಕ್ಲಾಸ್ (Santa), ಹೊಸವರ್ಷವನ್ನು ನೆಪವಾಗಿಟ್ಟುಕೊಂಡು ಕ್ರಿಸ್ತ ಮಿಷನರಿಗಳು ಅಮಾಯಕ ಹಿಂದೂಗಳನ್ನು ಗುರಿಯಾಗಿಟ್ಟುಕೊಂಡು ಮತಾಂತರ ಮಾಡುತ್ತಾರೆ ಎನ್ನುವ ಕಾರಣಕ್ಕೆ ಹರಿಯಾಣ (Haryana) ರಾಜ್ಯದಲ್ಲಿ ಹಿಂದೆಂದೂ ಕಂಡರಿಯದಷ್ಟು ಚರ್ಚ್ಗಳ ಮೇಲೆ ದಾಳಿಗಳಾಯ್ತು. ಅದರಲ್ಲೂ ಹರಿಯಾಣದ ಕೈತಾಲ್ ಜಿಲ್ಲೆಯ ಕುರುಕ್ಷೇತ್ರದಲ್ಲಿ ಕ್ರಿಸ್ಮಸ್ ದಿನದಂದು ಪುಟ್ಟ ಮಕ್ಕಳು ನಡೆಸಿಕೊಡುತ್ತಿದ್ದ ಕ್ರಿಸ್ಮಸ್ ಕಾರ್ಯಕ್ರಮಕ್ಕೆ ಅಡ್ಡಿಪಡಿಸಿ ಜೈ ಶ್ರೀರಾಮ್ ಘೋಷಣೆ ಕೂಗಿದ್ದು ದೇಶಾದ್ಯಂತ ಸುದ್ದಿಯಾಗದ್ದನ್ನು ಗಮನಿಸಬಹುದು.
ಹಿಂದೆಂದೋ ದಲಿತರಾಗಿದ್ದು ತನ್ನ ಹದಿನೆಂಟನೇ ವಯಸ್ಸಿನಲ್ಲಿ ಕ್ರಿಶ್ಚಿಯನ್ (Christians) ಧರ್ಮ ಸ್ವೀಕರಿಸಿದ್ದ ಗುರುದೇವ್ 36 ವರ್ಷದ ಗುರುದೇವ್ (Gurudev) ಎಂಬವರು ಕಳೆದ ಹದಿನೆಂಟು ವರ್ಷಗಳಿಂದಲೂ ಕ್ರಿಸ್ಮಸ್ ಆಚರಿಸಿಕೊಂಡು ಬರುತ್ತಿದ್ದು ಕುಕ್ಷೇತ್ರದ ಸ್ಥಳೀಯ ಚರ್ಚ್ ಒಂದರಲ್ಲಿ ಪಾದ್ರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪ್ರತಿ ಬಾರಿಯಂತೆ ಈ ಬಾರಿಯೂ ಗುರುದೇವ್ ಮತ್ತವರ ಕುಟುಂಬ ಸ್ನೇಹಿತರು, ಅಕ್ಕಪಕ್ಕದ ಮನೆಯವರಡೊಗೂಡಿ ಕ್ರಿಸ್ಮಸ್ ಆಚರಿಸುತ್ತಿದ್ದರು.
Also read : ಕ್ರೈಸ್ತರ ಮೇಲಿನ ದಾಳಿ : ಕರ್ನಾಟಕಕ್ಕೆ ಮೂರನೇ ಸ್ಥಾನ
‘ಶೈನ್ ಅವೆನ್ಯೂ’ ಎಂಬ ಸ್ಥಳೀಯ ಪಾರ್ಟಿ ಹಾಲ್ನಲ್ಲಿ ಆಯೋಜಿಸಲಾಗಿದ್ದ ಕ್ರಿಸ್ಮಸ್ ಆಚರಣೆಯು ಮಕ್ಕಳಿಂದ ನೃತ್ಯ ಪ್ರದರ್ಶನಗಳನ್ನು ಒಳಗೊಂಡಿತ್ತು. ಕಾರ್ಯಕ್ರಮ ಶುರುವಾಗಿ ಅರ್ಧ ಗಂಟೆಯಾಗುತ್ತಿದ್ದಂತೆ ಮಕ್ಕಳು ಪ್ರದರ್ಶನ ನೀಡಲು ಪ್ರಾರಂಭಿಸಿದರು. ಅಷ್ಟರಲ್ಲಿ ಬಜರಂಗದಳದ (Bajrang Dal) ಕಾರ್ಯಕರ್ತರು ಎಂದು ಹೇಳಲಾದ ಒಂದು ಗುಂಪು ಒಳಗೆ ನುಗ್ಗಿ, ವೇದಿಕೆಯನ್ನು ತುಳಿದು ‘ಜೈ ಶ್ರೀ ರಾಮ್’ (Jai Sri Ram) ಮತ್ತು ‘ಹರ್ ಹರ್ ಮಹಾದೇವ್’ (Har Har Mahadev) ಎಂದು ಕೂಗಲು ಪ್ರಾರಂಭಿಸಿತು.
![](https://pratidhvani.com/wp-content/uploads/2022/01/Karnataka_Pastor_Attacks_3012022_1200.jpg)
6 ರಿಂದ 12 ವರ್ಷ ವಯಸ್ಸಿನ ಮಕ್ಕಳು, ಏನಾಗುತ್ತಿದೆ ಎಂದು ತಿಳಿಯದೆ ಆಘಾತದ ಸ್ಥಿತಿಯಲ್ಲಿ ನಿಂತಿದ್ದರು. ಇವೆಲ್ಲವೂ ಕ್ಯಾಮೆರಾದಲ್ಲಿ ದಾಖಲಾಗಿದ್ದು, ವೈರಲ್ ಆದ ಘಟನೆಯ ವೀಡಿಯೊಗಳಲ್ಲಿ, ಭಜರಂಗದಳದ ಕಾರ್ಯಕರ್ತರು ಬಲೂನ್ಗಳನ್ನು ಒಡೆದು ಅಲಂಕಾರವನ್ನು ಧ್ವಂಸಗೊಳಿಸಿದ್ದರಿಂದ ಪ್ರೇಕ್ಷಕರು ದಿಗ್ಭ್ರಮೆಗೊಂಡಿರುವುದು ಮತ್ತು ಅಸಹಾಯಕರಾಗಿರುವುದನ್ನು ಕಾಣಬಹುದು.
“ನಾವು ಮಕ್ಕಳನ್ನು ತ್ವರಿತವಾಗಿ ಕೆಳಕ್ಕೆ ಎಳೆಯಬೇಕಾಗಿ ಬಂತು, ಯಾಕೆಂದರೆ ಅವರು ಗಾಯಗೊಳ್ಳುತ್ತಾರೆ ಎಂದು ನಾವು ಭಯಭೀತರಾಗಿದ್ದೆವು” ಎಂದು ವೇದಿಕೆಯಲ್ಲಿದ್ದ ಮಗುವಿನ ಪಾಲಕರಲ್ಲಿ ಒಬ್ಬರಾದ ಸೋನಿಯಾ ಮೆಹ್ರಾ ಹೇಳಿದ್ದಾರೆ. ಸಂಘಟನಾ ತಂಡದಿಂದ ಯಾರಾದರೂ ಇಲ್ಲಿ ಏನಾಗುತ್ತಿದೆ ಎಂದು ಎಂದು ಕೇಳುವ ಮೊದಲೇ ಆ ಕಾರ್ಯಕರ್ತರು ಸಂಗೀತವನ್ನು ನಿಲ್ಲಿಸಿ ಬದಲಿಗೆ ಹನುಮಾನ್ ಚಾಲೀಸಾ ಪಠಿಸಲು ಪ್ರಾರಂಭಿಸಿದರು.
Also read : ಬಲಪಂಥೀಯರಿಂದ ದಾಳಿ ಆಗದಿರಲು ಪ್ರಾರ್ಥನೆಯನ್ನು ಕೈಬಿಡಿ : ಕ್ರೈಸ್ತರಿಗೆ ಬೆಳಗಾವಿ ಪೊಲೀಸರ “ಸ್ನೇಹಪರ” ಎಚ್ಚರಿಕೆ!
ಈ ಎಲ್ಲಾ ಘಟನೆಗಳು ವೈರಲ್ ಆಗುತ್ತಿದ್ದಂತೆ ಕುರುಕ್ಷೇತ್ರದ ಬಜರಂಗದಳದ ಸಂಚಾಲಕರಾಗಿರುವ ರಾಕೇಶ್ ಕುಮಾರ್ ಎಂಬವರು ವಿಡಿಯೋ ಒಂದನ್ನು ಬಿಡುಗಡೆ ಮಾಡಿದ್ದು ಅಲ್ಲಿ ಸಾಮೂಹಿಕ ಮತಾಂತರ ನಡೆಯುತ್ತಿತ್ತು ಎಂದು ಆರೋಪಿಸಿದ್ದಾರೆ. “ಅಲ್ಲಿನ ಕ್ರಿಶ್ಚಿಯನ್ ಮಿಷನರಿಗಳು ನಮ್ಮ ಹಿಂದೂ ಸಹೋದರರನ್ನು ಆಮಿಷ ಒಡ್ಡುವ ಮೂಲಕ ಅವರನ್ನು ಕ್ರಿಶ್ಚಿಯನ್ ಧರ್ಮಕ್ಕೆ ಪರಿವರ್ತಿಸಲು ಪ್ರಯತ್ನಿಸುತ್ತಿದ್ದಾರೆ” ಎಂದು ಅವರು ಆರೋಪಿಸಿದರು. ಜೊತೆಗೆ “ಈ ಬಜರಂಗದಳದ ಎಚ್ಚರಿಕೆಯನ್ನು ಸ್ಪಷ್ಟವಾದ ಪದಗಳಲ್ಲಿ ಪರಿಗಣಿಸಿ, ಮತ್ತೆ ಇಂತಹ ಪ್ರಯತ್ನ ನಡೆದರೆ ನಾವು ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ” ಎಂದು ಎಚ್ಚರಿಕೆಯನ್ನೂ ನೀಡಿದ್ದಾರೆ.
ʼದಿ ಕ್ವಿಂಟ್ʼ ಜೊತೆ ಮಾತನಾಡಿದ ಗುರುದೇವ್ ಮತ್ತು ಅವರ ಕುಟುಂಬವು, “ಸಾಮೂಹಿಕ ಮತಾಂತರದ ಎಲ್ಲಾ ಆರೋಪಗಳನ್ನು ತಳ್ಳಿಹಾಕಿದರು.“ನಮ್ಮ ಮಕ್ಕಳು ಒಟ್ಟಿಗೆ ಸೇರಲು, ಹಾಡಲು ಮತ್ತು ನೃತ್ಯ ಮಾಡಲು ಇದು ಕೇವಲ ಒಂದು ಅವಕಾಶವಾಗಿತ್ತು. ಇದಲ್ಲದೆ, ಈವೆಂಟ್ಗೆ ಹಾಜರಾಗುವ ಪ್ರತಿಯೊಬ್ಬರೂ ಈಗಾಗಲೇ ಕ್ರಿಸ್ತನ ಅನುಯಾಯಿಗಳಾಗಿದ್ದರು, ಹಾಗಾದರೆ ಮತಾಂತರದ ಪ್ರಶ್ನೆ ಎಲ್ಲಿದೆ?” ಎಂದು ಗುರುದೇವ್ ಹೇಳಿದ್ದಾರೆ.
![](https://pratidhvani.com/wp-content/uploads/2022/01/KarnatakaChristianMob-1024x768.jpg)
ಘಟನೆಯ ನಂತರ ಮಕ್ಕಳು ಆಘಾತಕ್ಕೊಳಗಾಗಿದ್ದಾರೆ ಎಂದು ಹೇಳುತ್ತಾರೆ ಪೋಷಕರು. “ಅವರು ಕಿರುಚಲು ಪ್ರಾರಂಭಿಸಿದರು, ಮತ್ತು ನೃತ್ಯವನ್ನು ನಿಲ್ಲಿಸಲು ಎಲ್ಲರಿಗೂ ಕೇಳಿದರು, ಅದು ತುಂಬಾ ಭಯಾನಕವಾಗಿತ್ತು” ಎಂದು 8 ವರ್ಷದ ಸಮರ್ಥ್ ಮೆಹ್ರಾ ಹೇಳಿದ್ದಾರೆ.
ಕುರುಕ್ಷೇತ್ರ ಪೊಲೀಸರು ಕೂಡ ಧಾರ್ಮಿಕ ಮತಾಂತರದ ಬಗ್ಗೆ ಯಾವುದೇ ಪುರಾವೆಗಳಿಲ್ಲ ಎಂದು ಹೇಳಿದ್ದು “ನಾವು ಅದರ ಬಗ್ಗೆ ತನಿಖೆ ನಡೆಸಿದ್ದೇವೆ, ದಿನದ ಎಲ್ಲಾ ಸಿಸಿಟಿವಿ ದೃಶ್ಯಗಳನ್ನು ಸಹ ಪರಿಶೀಲಿಸಿದ್ದೇವೆ. ಯಾವುದೇ ಧಾರ್ಮಿಕ ಮತಾಂತರದ ಅಂಶಗಳಿಲ್ಲ ಎಂಬುದು ಸ್ಪಷ್ಟವಾಗಿದೆ” ಎಂದು ಕುರುಕ್ಷೇತ್ರ ಸೆಕ್ಟರ್ 5 ಪೊಲೀಸ್ ಚೌಕಿಯ ಎಸ್ಎಚ್ಒ ದೇವೇಂದ್ರ ಕುಮಾರ್ ದಿ ತಿಳಿಸಿದ್ದಾರೆ.
Also read : ಇಸ್ಲಾಮ್ ಅಥವಾ ಕ್ರೈಸ್ತ ಧರ್ಮಕ್ಕೆ ಮತಾಂತರವಾದ ದಲಿತರಿಗೆ ಮೀಸಲಾತಿಯ ಹಕ್ಕು ಇಲ್ಲ – ರವಿ ಶಂಕರ್ ಪ್ರಸಾದ್
ಕಾರ್ಯಕ್ರಮಕ್ಕೆ ಅಡ್ಡಿಪಡಿಸಿದ ಬಜರಂಗದಳದ ವಿರುದ್ಧ ಯಾವುದೇ ದೂರು ದಾಖಲಾಗಿಲ್ಲ. “ಸಂಘಟಕರು ದೂರು ಸಲ್ಲಿಸಲು ಬಯಸುವುದಿಲ್ಲ, ಆದ್ದರಿಂದ ನಾವು ಏನು ಮಾಡಬಹುದು? ಎರಡೂ ಕಡೆಯವರು ಯಾವುದೇ ದೂರು ದಾಖಲಿಸಿಲ್ಲ” ಎಂದೂ ಪೊಲೀಸರು ಹೇಳಿದ್ದಾರೆ. ಆದರೆ “ನಾನು ಬೆಳೆದ ಭಾರತದಲ್ಲಿ ಈ ರೀತಿಯ ಘಟನೆಗಳು ಯಾವತ್ತಾದರೂ ಸಂಭವಿಸುತ್ತದೆ ಎಂದು ನಾನು ನನ್ನ ಕನಸಲ್ಲೂ ಊಹಿಸಿರಲಿಲ್ಲ” ಎನ್ನುವ ಗುರುದೇವ್ ಅವರ ನೋವಿನ ಮಾತುಗಳು ಭಾರತ ಸಾಗುತ್ತಿರುವ ದಾರಿಯ ಬಗ್ಗೆ ವಿಷಾದ ಹುಟ್ಟಿಸುತ್ತವೆ.