ರಾಜ್ಯದಲ್ಲಿ ಭಾರತೀಯ ಜನತಾ ಪಾರ್ಟಿ ವಿಜಯ ಪತಾಕೆ ಹಾರಿಸುತ್ತೇವೆ ಎನ್ನುತ್ತಲೇ ಸೋಲಿನಿಂದ ಪಾರಾಗಲು ಬೇಕಿರುವ ಎಲ್ಲಾ ರೀತಿಯ ಕಸರತ್ತುಗಳನ್ನು ಮಾಡಲಾಗ್ತಿದೆ. ಆ ತಂತ್ರಗಾರಿಕೆಯ ಮೊದಲ ಹಂತ, ಮೂಲೆ ಸೇರಿಕೊಂಡಿದ್ದ ಯಡಿಯೂರಪ್ಪ ಅವರನ್ನು ಮುನ್ನಲೆಗೆ ಕರೆದುಕೊಂಡು ಬಂದಿದ್ದು. ಅಮಿತ್ ಷಾ ಕಾರ್ಯಕ್ರಮದಿಂದಲೇ ದೂರ ಇರಿಸಲಾಗಿದ್ದ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರನ್ನು ಸ್ವತಃ ಪ್ರಧಾನಿ ನರೇಂದ್ರ ಮೋದಿ ವೇದಿಕೆ ಮೇಲೆ ಪೇಟ ತೊಡಿಸಿ, ಹಾರ ಹಾಕಿ ನಿರ್ಲಕ್ಷ್ಯ ಮಾಡಿಲ್ಲ ಎನ್ನುವುದನ್ನು ಜನತೆಗೆ ತೋರಿಸುವ ಪ್ರಯತ್ನ ಮಾಡಿದ್ದು. ಆದರೆ ಬಿಎಸ್ ಯಡಿಯೂರಪ್ಪ ಅವರನ್ನು ನಿರ್ಲಕ್ಷ್ಯ ಮಾಡಿಲ್ಲ ಎಂದು ಬಿಜೆಪಿ ಎಷ್ಟೇ ಪರಿಪರಿಯಾಗಿ ಹೇಳಿದರೂ ಜನ ನಂಬುವ ಸ್ಥಿತಿಯಲ್ಲಿ ಇಲ್ಲ. ಕ್ಯಾಮೆರಾ ಎದುರು ಮಾತ್ರ ನಿರ್ಲಕ್ಷ್ಯ ಮಾಡಿಲ್ಲ ಎನ್ನುವಂತೆ ನಟಿಸುತ್ತಿದ್ದಾರೆ ಎಂದು ಸಾಮಾಜಿಕ ಜಾಲ ತಾಣದಲ್ಲಿ ಚರ್ಚೆ ಆಗಿದೆ. ಇದರ ನಡುವೆ ಬಿ.ಎಸ್ ಯಡಿಯೂರಪ್ಪ ಭಾಷಣದ ಬಗ್ಗೆ ಸಾಕಷ್ಟು ಅನುಮಾನ ಸೃಷ್ಟಿಸಿದೆ.
ಲಿಂಗಾಯತ ಮತಗಳ ಮೇಲೆ ಹೈಕಮಾಂಡ್ ಬೆರಗುಗಣ್ಣು..!

ಯಡಿಯೂರಪ್ಪ ಅವರನ್ನು ಬಿಜೆಪಿ ಹೈಕಮಾಂಡ್ ನಾಯಕರು ಉದ್ದೇಶಪೂರ್ವಕವಾಗಿಯೇ ರಾಜಕೀಯ ತೆರೆಮರೆಗೆ ಸರಿಸುತ್ತಿದ್ದಾರೆ ಎನ್ನುವ ವಿಚಾರ ಸಾಕಷ್ಟು ಅನಾಹುತಕ್ಕೆ ಎಡೆ ಮಾಡಿಕೊಡುತ್ತಿದೆ. ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಸೋಲುವ ಬಗ್ಗೆ ಸರ್ವೇಗಳಲ್ಲಿ ಖಚಿತ ಆಗುತ್ತಿದ್ದಂತೆ ಲಿಂಗಾಯತ ಮತಗಳನ್ನು ಭದ್ರ ಪಡಿಸಿಕೊಳ್ಳಲು ಬಿಜೆಪಿ ತಂತ್ರಗಾರಿಕೆ ಮಾಡಿದೆ. ಲಿಂಗಾಯತ ಮತಗಳ ಭೇಟಿಗೆ ಮೂವರು ನಾಯಕರನ್ನು ಸಿದ್ಧ ಮಾಡಿದ್ದು, ಮಾಜಿ ಸಿಎಂ ಯಡಿಯೂರಪ್ಪ, ಸಿಎಂ ಬಸವರಾಜ್ ಬೊಮ್ಮಾಯಿ ಹಾಗು ಬಿ ವೈ ವಿಜಯೇಂದ್ರ ಅವರನ್ನು ಬಳಸಿಕೊಳ್ಳಲು ನಿರ್ಧಾರ ಮಾಡಲಾಗಿದೆ. ರಾಜ್ಯದ ಉದ್ದಗಲಕ್ಕೂ ಲಿಂಗಾಯತ ಕ್ಷೇತ್ರಗಳಲ್ಲಿ ಸಂಚಾರ ಮಾಡಲಿರುವ ಮೂವರು ನಾಯಕರು ಮತಯಾಚನೆ ಮಾಡಲಿದ್ದಾರೆ. ಲಿಂಗಾಯತ ಶಾಸಕರು ಇರುವ ಕ್ಷೇತ್ರಗಳಲ್ಲಿ ಪ್ರಚಾರಕ್ಕೆ ತಯಾರಿ ಮಾಡಲಾಗಿದೆ. ಆ ಕ್ಷೇತ್ರಗಳಲ್ಲಿ ಲಿಂಗಾಯತ ಮಠಗಳಿಗೆ ಭೇಟಿ ಕೊಡುವುದು, ಲಿಂಗಾಯತ ನಾಯಕರ ಮನೆಗೆ ಭೇಟಿ ಕೊಡುವುದು. ಲಿಂಗಾಯತ ಮತದಾರರ ಸೆಳೆಯುವ ತಂತ್ರ ಮಾಡುವುದು. ಈ ಮೂಲಕ ಬಿಜೆಪಿ ಮೇಲೆ ಇರುವ ಆತಂಕವನ್ನು ದೂರ ಮಾಡುವುದು. ಲಿಂಗಾಯತ ಮತಗಳು ಛಿದ್ರವಾಗದಂತೆ ನೋಡಿಕೊಳ್ಳಲು ಬಿಜೆಪಿ ಈ ಯೋಜನೆ ರೂಪಿಸಿದೆ.
ಯಡಿಯೂರಪ್ಪ ಭಾಷಣ ಹೇಗೆ ಇರಬೇಕು..? ಏನು ಹೇಳಬೇಕು..?
ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವ ಸಮಯದಲ್ಲಿ ಬಿ.ಎಸ್ ಯಡಿಯೂರಪ್ಪ ಕಣ್ಣೀರು ಹಾಕಿದ್ದರು. ಅಧಿಕಾರ ವಹಿಸಿಕೊಂಡ ಬಳಿಕ 2 ತಿಂಗಳ ಸಂಪುಟ ವಿಸ್ತರಣೆ ಮಾಡಲು ಕೇಂದ್ರದ ನಾಯಕರು ಅವಕಾಶ ಕೊಡಲಿಲ್ಲ. ಒಬ್ಬನೆ ಹುಚ್ಚನಂತೆ ರಾಜ್ಯ ಸುತ್ತಬೇಕಾಯ್ತು ಎಂದಿದ್ದರು. ಬಿ.ಎಸ್ ಯಡಿಯೂರಪ್ಪ ಮಾತಿನದ ಲಿಂಗಾಯತ ಮತಗಳು ದೂರ ಆಗುವ ಭೀತಿಯಲ್ಲಿರುವ ಬಿಜೆಪಿ ನಾಯಕರು ಯಡಿಯೂರಪ್ಪ ಅವರು ಪ್ರತಿ ಕ್ಷೇತ್ರದಲ್ಲೂ ಹೀಗೆ ಮಾತನಾಡಬೇಕು ಎನ್ನುವ ಕಟ್ಟಪ್ಪಣೆ ವಿಧಿಸಿದ್ದಾರೆ ಎನ್ನಲಾಗಿದೆ. ಬಿಜೆಪಿ ಹೈಕಮಾಂಡ್ ನನಗೆ ಯಾವುದೇ ದ್ರೋಹ ಮಾಡಿಲ್ಲ. ನಾನು ಸಂತೋಷದಿಂದಲೇ ರಾಜೀನಾಮೆ ನೀಡಿದೆ. ನನಗೆ ಬಿಜೆಪಿ ಎಲ್ಲವನ್ನೂ ಕೊಟ್ಟಿದೆ. ವೀರಶೈವ ಬಂಧುಗಳಲ್ಲಿ ಕೈಮುಗಿದು ಪ್ರಾರ್ಥನೆ ಮಾಡ್ತೇನೆ, ಯಾವುದೇ ಕಾರಣಕ್ಕೂ ನಾನು ಚುನಾವಣೆಗೆ ನಿಲ್ಲಲ್ಲ. ಪಕ್ಷ ನನಗೆ ಅನ್ಯಾಯ ಮಾಡಿಲ್ಲ. ಪಕ್ಷ ನನಗೆ ಎಲ್ಲವನ್ನು ಕೊಟ್ಟಿದೆ. ಕೇಂದ್ರ ಕೋರ್ ಕಮಿಟಿ ಸದಸ್ಯನನ್ನಾಗಿ ಮಾಡಿದೆ. ಬಸವರಾಜ ಬೊಮ್ಮಾಯಿಯನ್ನು ಮುಖ್ಯಮಂತ್ರಿ ಮಾಡಿದ್ದು ನಾನೇ. ವೀರಶೈವ ಬಂಧುಗಳು ತಪ್ಪು ತಿಳಿಯಬಾರದು. ಪಕ್ಷ ನನಗೆ ಅನ್ಯಾಯ ಮಾಡಿದೆ ಎಂಬ ಭಾವನೆ ಬೇಡ ಎಂದು ಮನವಿ ಮಾಡಬೇಕಿದೆ.
ಕಾಂಗ್ರೆಸ್ ಕಡೆಗೆ ಲಿಂಗಾಯತ ಮತಗಳು ವಾಲುವ ಭೀತಿ..!

ವೀರಶೈವ ಲಿಂಗಾಯತ ಸಮುದಾಯಕ್ಕೆ ಗಟ್ಟಿಯಾದ ದನಿ ಎಂದರೆ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ. ಆದರೆ ಬಿಜೆಪಿಯಲ್ಲಿ ಯಡಿಯೂರಪ್ಪ ತೆರೆಮರೆಗೆ ಸರಿಯುತ್ತಿರುವ ಈ ಕಾಲಘಟ್ಟದಲ್ಲಿ ಲಿಂಗಾಯತ ಸಮುದಾಯಕ್ಕೆ ಪ್ರಬಲ ನಾಯಕನ ಅವಶ್ಯಕತೆ ಕೊರತೆ ಎದುರಾಗಿದೆ. ಹೀಗಾಗಿ ಯಡಿಯೂರಪ್ಪ ಅವರ ಸ್ಥಾನವನ್ನು ತುಂಬಬಲ್ಲ ನಾಯಕರು ಕಾಂಗ್ರೆಸ್’ನಲ್ಲಿ ಸಾಕಷ್ಟು ಮಂದಿಯಿದ್ದಾರೆ. ಈಗಾಗಲೇ ಕಾಂಗ್ರೆಸ್ನಲ್ಲಿ ಪ್ರಭಾವಿ ಲಿಂಗಾಯತ ನಾಯಕರಾಗಿ ಗುರುತಿಸಿಕೊಂಡಿರುವ ಎಂಬಿ ಪಾಟೀಲ್’ಗೆ ಕಾಂಗ್ರೆಸ್ನಲ್ಲೂ ಸಾಕಷ್ಟು ಅವಕಾಶ ಕೊಡಲಾಗ್ತಿದೆ. ಪ್ರಚಾರ ಸಮಿತಿ ಅಧ್ಯಕ್ಷರಾನ್ನಾಗಿ ಎಂಬಿ ಪಾಟೀಲ್ ಅವರನ್ನು ಆಯ್ಕೆ ಮಾಡಲಾಗಿದೆ. ಕಾಂಗ್ರೆಸ್’ನಲ್ಲಿ ಸಿಎಂ ಅಭ್ಯರ್ಥಿ ರೇಸ್’ನಲ್ಲೂ ಎಂಬಿ ಪಾಟೀಲ್ ಇದ್ದಾರೆ. ಇನ್ನು ಎಂಬಿ ಪಾಟೀಲ್ ಜೊತೆ ಶಾಮನೂರು ಶಿವಶಂಕರಪ್ಪ, ಈಶ್ವರ ಖಂಡ್ರೆ ಕೂಡ ಕಾಂಗ್ರೆಸ್’ನಲ್ಲಿ ಪ್ರಭಾವ ಹೊಂದಿದ್ದಾರೆ. ಕಾಂಗ್ರೆಸ್ ಕಾರ್ಯಾಧ್ಯಕ್ಷ ಸ್ಥಾನದಲ್ಲಿ ಈಶ್ವರ ಖಂಡ್ರೆ ಕೆಲಸ ಮಾಡುತ್ತಿದ್ದಾರೆ. ಸರ್ಕಾರ ಬಂದರೆ ಲಿಂಗಾಯತರಿಗೆ ಪ್ರಬಲ ಸ್ಥಾನಮಾನಗಳು ಫಿಕ್ಸ್ ಅನ್ನೋದು ಲಿಂಗಾಯತ ಸಮುದಾಯದಲ್ಲಿ ನಿರ್ಧಾರವಾಗಿದೆ. ಇದು ಬಿಜೆಪಿ ನಾಯಕರ ಭೀತಿಗೆ ಕಾರಣವಾಗಿದೆ. ಇದೇ ಕಾರಣಕ್ಕೆ ಎಲ್ಲಾ ಕಡೆ ಯಡಿಯೂರಪ್ಪ ವೀರಶೈವರ ಮನವೊಲಿಸುವ ಕೆಲಸ ಮಾಡಬೇಕು ಅನ್ನೋ ಕಟ್ಟಪ್ಪಣೆ ಹೈಕಮಾಂಡ್ ಅಂಗಳದಿಂದ ರವಾನೆ ಆಗಿದೆ. ಈ ಮಾತುಗಳನ್ನು ಯಡಿಯೂರಪ್ಪ ಈಗಾಗಲೇ ಒಂದೆರಡು ಬಾರಿ ಹೇಳಿಯೂ ಆಗಿದೆ.