ಬೀದರ್: ಮಾ.15: ಜಿಲ್ಲಾ ಕೇಂದ್ರದಲ್ಲಿ ಜಿಲ್ಲಾ ಕನ್ನಡ ಭವನ ಇರದ ಏಕೈಕ ಜಿಲ್ಲೆ ಬೀದರ್. ಜಾತಿ ಭವನಗಳಿಗೆ ಉದಾರವಾಗಿ ಕೊಡುವಷ್ಟು ಅನುದಾನ ಕನ್ನಡ ಭವನಕ್ಕೆ ಕೊಡುತ್ತಿಲ್ಲ. ಸರ್ಕಾರ ಹಾಗೂ ಚುನಾಯಿತ ಪ್ರತಿನಿಧಿಗಳು ನಿರಾಸಕ್ತಿ ವಹಿಸಿರುವ ಕಾರಣ ಕಟ್ಟಡ ಕಾಮಗಾರಿ ನನೆಗುದಿಗೆ ಬಿದ್ದಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ ತಿಳಿಸಿದರು.
ಪರಿಷತ್ತಿನ ನಿಯೋಗ ಬೆಂಗಳೂರಿಗೆ ತೆರಳಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನೀಲಕುಮಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರಿಗೆ ಲಿಖಿತ ಮನವಿ ಕೊಟ್ಟಿದೆ. ಆದರೆ, ಪ್ರಯೋಜನವಾಗಿಲ್ಲ ಎಂದು ನಗರದಲ್ಲಿ ಸೋಮವಾರ ಮಾಧ್ಯಮಗೋಷ್ಠಿಯಲ್ಲಿ ಅಸಮಾಧಾನ ಹೊರ ಹಾಕಿದರು.
ಚುನಾಯಿತ ಪ್ರತಿನಿಧಿಗಳು ಪತ್ರ ವ್ಯವಹಾರಗಳಲ್ಲೇ ಕಾಲಹರಣ ಮಾಡುತ್ತಿದ್ದಾರೆ. ಗಡಿ ಅಭಿವೃದ್ಧಿ ಪ್ರಾಧಿಕಾರದ ಮೂಲಕ ₹ 1 ಕೋಟಿ ಬಿಡುಗಡೆ ಮಾಡಲಾಗುವುದು ಎಂದು ಮತ್ತೆ ಭರವಸೆ ಕೊಡಲಾಗಿದೆ. ಇಷ್ಟು ದಿನ ಕಾದಿದ್ದೇವೆ. ಇನ್ನೊಂದು ವಾರ ಕಾಯುತ್ತೇವೆ. ನಂತರ ಬೀದಿಗಿಳಿದು ಭಿಕ್ಷೆ ಬೇಡಿ ಕನ್ನಡ ಭವನಕ್ಕೆ ಹಣ ಸಂಗ್ರಹಿಸುತ್ತೇವೆ’ ಎಂದು ತಿಳಿಸಿದರು.
ರಾಜಕಾರಣಿಗಳು ಕೊಟ್ಟಿಲ್ಲ ಹಣ
ಜಿಲ್ಲೆಯ ಔರಾದ್ ಹಾಗೂ ಭಾಲ್ಕಿಯಲ್ಲಿ ತಾಲ್ಲೂಕು ಕನ್ನಡ ಭವನಗಳ ಒಂದು ಹಂತದ ಕಟ್ಟಡ ಕಾಮಗಾರಿ ಪೂರ್ಣಗೊಂಡಿವೆ. ಹುಮನಾಬಾದ್ನಲ್ಲಿ ಶಾಸಕರು ಕನ್ನಡ ಭವನಕ್ಕೆ ನಿವೇಶನ ಒದಗಿಸಿದ್ದಾರೆ. ತಾಲ್ಲೂಕು ಕನ್ನಡ ಭವನಕ್ಕೆ ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರು ನೆರವು ನೀಡುವ ಭರವಸೆ ಕೊಟ್ಟಿದ್ದಾರೆ.
ಬೀದರ್ ಶಾಸಕ ರಹೀಂ ಖಾನ್ ₹ 25 ಲಕ್ಷ, ಕೇಂದ್ರ ಸಚಿವ ಭಗವಂತ ಖೂಬಾ ₹ 10 ಲಕ್ಷ, ರಘುನಾಥರಾವ್ ಮಲ್ಕಾಪುರೆ ₹ 10 ಲಕ್ಷ ಕೊಡುವ ಭರವಸೆ ನೀಡಿದ್ದರು. ಉಳಿದ ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರು ಸಹ ಕೇವಲ ಭರವಸೆ ಕೊಟ್ಟಿದ್ದಾರೆ. ಅನುದಾನ ಕೊಟ್ಟಿಲ್ಲ ಎಂದು ತಿಳಿಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಪದಾಧಿಕಾರಿಗಳು ಜಿಲ್ಲಾ ಕನ್ನಡ ಭವನ ನಿರ್ಮಾಣಕ್ಕೆ ಅಗತ್ಯವಿರುವ ಅನುದಾನ ಕೋರಿ ಅನೇಕ ವರ್ಷಗಳಿಂದ ಹೋರಾಟ ನಡೆಸಿರುವುದನ್ನು ಗಂಭೀರವಾಗಿ ಪರಿಗಣಿಸಿ ಕಲ್ಯಾಣ ಕರ್ನಾಟಕ ಸಾಂಸ್ಕೃತಿಕ ಸಂಘ ₹ 25 ಲಕ್ಷ ಬಿಡುಗಡೆ ಮಾಡಿದೆ. ಈ ಅನುದಾನದಲ್ಲಿ ಕಟ್ಟಡದ ಮೇಲೆ ಸಭಾಭವನ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.
ನುಡಿದಂತೆ ನಡೆದ ಹಾರಕೂಡ ಶ್ರೀಗಳು
ಹಾರಕೂಡದ ಚೆನ್ನವೀರ ಶಿವಾಚಾರ್ಯರು ಮಾತ್ರ ಕನ್ನಡ ಭವನಕ್ಕೆ ₹ 1ಲಕ್ಷ ದೇಣಿಗೆ ಕೊಟ್ಟು ನುಡಿದಂತೆ ನಡೆದುಕೊಂಡಿದ್ದಾರೆ. ಕನ್ನಡದ ಬಗ್ಗೆ ಕಾಳಜಿ ತೋರಿಸಿದ್ದಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ ತಿಳಿಸಿದರು.
ಜಿಲ್ಲಾ ರಂಗ ಮಂದಿರದಲ್ಲಿ ಆಯೋಜಿಸಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲೇ ಚೆನ್ನವೀರ ಶಿವಾಚಾರ್ಯರು ₹ 1 ಲಕ್ಷ ಕೊಡುವುದಾಗಿ ಘೋಷಣೆ ಮಾಡಿದ್ದರು. ಅದರಂತೆ ಕನ್ನಡ ಸಾಹಿತ್ಯ ಪರಿಷತ್ತಿಗೆ ಹಣವನ್ನೂ ಸಂದಾಯ ಮಾಡಿದ್ದಾರೆ ಎಂದು ಹೇಳಿದರು.
ಭಾಲ್ಕಿಯ ಹಿರೇಮಠದ ಬಸವಲಿಂಗ ಪಟ್ಟದ್ದೇವರು ಕಟ್ಟಡಕ್ಕೆ ಆರ್ಥಿಕ ನೆರವು ನೀಡುವ ಭರವಸೆ ನೀಡಿದ್ದಾರೆ. ಆದರೆ, ಈವರೆಗೆ ಹಣ ಕೊಟ್ಟಿಲ್ಲ. ಹಾರಕೂಡ ಶ್ರೀಗಳು ಹೊರತು ಪಡಿಸಿ ಉಳಿದ ಯಾವುದೇ ಮಠದವರು ಕನ್ನಡ ಭವನ ನಿರ್ಮಾಣಕ್ಕೆ ದೇಣಿಗೆ ನೀಡಿಲ್ಲ ಎಂದು ಎಂದು ಸ್ಪಷ್ಟಪಡಿಸಿದರು.
ಸಾಹಿತಿಯೊಬ್ಬರು ಕಿಡ್ನಿ ಮಾರಾಟ ಮಾಡಿ ಹಣ ಹೊಂದಿಸುವುದಾಗಿ ಸಮಾರಂಭದಲ್ಲೇ ಘೋಷಣೆ ಮಾಡಿದ್ದರು. ಇವರೆಲ್ಲ ಪುಕ್ಕಟ್ಟೆ ಪ್ರಚಾರ ಪಡೆದುಕೊಂಡರು ಹೊರತು ಕನ್ನಡ ಭವನ ನಿರ್ಮಾಣಕ್ಕೆ ನೆರವಾಗಲಿಲ್ಲ ಎಂದು ಬೇಸರ ತೋಡಿಕೊಂಡರು.
ಈಗಾಗಲೇ ಕಟ್ಟಡದ ಶೇಕಡ 80ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಕಟ್ಟಡದ ಒಳಗೆ ಟೈಲ್ಸ್ ಅಳವಡಿಸುವ ಹಾಗೂ ಬಣ್ಣ ಬಳಿಯುವ ಕಾಮಗಾರಿ ಬಾಕಿ ಇದೆ. ಕಟ್ಟಡ ಆವರಣದಲ್ಲಿ ಇನ್ನಷ್ಟು ಕಾಮಗಾರಿ ನಡೆಯಬೇಕಿದೆ ಎಂದರು. ಶಿವಕುಮಾರ ಕಟ್ಟೆ, ಶಿವಶಂಕರ ಟೋಕರೆ, ಎಂ.ಎಸ್.ಮನೋಹರ, ರೇವಣಸಿದ್ದಪ್ಪ ಜಲಾದೆ, ಬಾಬು ದಾನಿ, ರೂಪಾ ಪಾಟೀಲ, ಕಸ್ತೂರಿ ಪಟಪಳ್ಳಿ ಇದ್ದರು.