ನಂಜನಗೂಡು ಕಾಂಗ್ರೆಸ್ ಟಿಕೆಟ್ ಆಯ್ಕೆ ಕಗ್ಗಂಟಿಗೆ ಕಡೆಗೂ ತೆರೆಬಿದ್ದಿದೆ. ದಿವಂಗತ ಮಾಜಿ ಸಂಸದ ಧ್ರುವನಾರಾಯಣ ಪುತ್ರ ದರ್ಶನ್ಗೆ ನನ್ನ ಬೆಂಬಲ ಅಂತ ಮಾಜಿ ಸಚಿವ ಡಾ.H.C.ಮಹದೇವಪ್ಪ ಹೇಳಿದ್ದಾರೆ. ನಂಜನಗೂಡು ಕ್ಷೇತ್ರದ ಟಿಕೆಟ್ ಅನ್ನ ಮಹದೇವಪ್ಪ ದರ್ಶನ್ಗೆ ತ್ಯಾಗ ಮಾಡಿದ್ದಾರೆ. ನಾನು ನಂಜನಗೂಡು ಕ್ಷೇತ್ರದ ಸ್ಪರ್ಧೆಯಿಂದ ಹಿಂದೆ ಸರಿಯುತ್ತಿದ್ದೇನೆ. ಧ್ರುವನಾರಾಯಣ್ ಪುತ್ರ ದರ್ಶನ್ಗೆ ನಾನು ಬೆಂಬಲ ನೀಡುತ್ತೇನೆ. ನಂಜನಗೂಡಿನಲ್ಲಿ ದರ್ಶನ್ ಧ್ರುವರನ್ನು ಗೆಲ್ಲಿಸಲು ಮುಂದಾಗುತ್ತೇನೆ ಅಂತ ಮಹದೇವಪ್ಪ ಹೇಳಿದ್ದಾರೆ .
ಧ್ರುವನಾರಾಯಣ್ ಹಠಾತ್ ನಿಧನರಾದಾಗಲೇ ಈ ನಿರ್ಧಾರ ಮಾಡಿದ್ದೆ. ಸುನಿಲ್ ಬೋಸ್, ಧ್ರುವ ಪುತ್ರ ದರ್ಶನ್ ಸಮ್ಮುಖದಲ್ಲಿ ಬಹಿರಂಗಪಡಿಸಿದ್ದೇನೆ .ಈ ಸಂದರ್ಭದಲ್ಲಿ ನಾನು ನಂಜನಗೂಡು ಅಭ್ಯರ್ಥಿಯಾಗಲು ಬಯಸುವುದಿಲ್ಲ .ನಾನು ಸಾವಿನಲ್ಲಿ, ಸಮಾಧಿಯ ಮೇಲೆ ರಾಜಕೀಯ ಮಾಡುವುದಿಲ್ಲ ಎಂದು ದರ್ಶನ್ ಸಮ್ಮುಖದಲ್ಲಿ ಡಾ.ಹೆಚ್.ಸಿ.ಮಹದೇವಪ್ಪ ಘೋಷಣೆ ಮಾಡಿದ್ರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ್ ನಿಧನ ಬಳಿಕ ನಂಜನಗೂಡು ಅಭ್ಯರ್ಥಿ ಆಯ್ಕೆ ಕಾಂಗ್ರೆಸ್ನಲ್ಲಿ ತಳಮಳ ಶುರುವಾಗಿತ್ತು. ನಂಜನಗೂಡು ಟಿಕೆಟ್ಗೆ ಪ್ರಬಲ ಆಕಾಂಕ್ಷಿಯಾದ H.C.ಮಹದೇವಪ್ಪ ಪರ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಬ್ಯಾಟಿಂಗ್ ಬೀಸಿದ್ರು. ಇತ್ತ ಧ್ರುವ ಪುತ್ರ ದರ್ಶನ್ ಧ್ರುವಗೆ ಟಿಕೆಟ್ ನೀಡಬೇಕು ಎಂದು ಬೆಂಬಲಿಗರು, ಅಭಿಮಾನಿಗಳ ಒತ್ತಡ ಹಾಕ್ತಿದ್ರು. ರಾಜಕೀಯಕ್ಕೆ ಬರಲು ಧ್ರುವನಾರಾಯಣ್ ಪುತ್ರ ದರ್ಶನ್ ಆಸಕ್ತಿ ತೋರಿದ್ದರು, ಬೃಹತ್ ಕಾರ್ಯಕ್ರಮದಲ್ಲಿ ಅಧಿಕೃತವಾಗಿ ಟಿಕೆಟ್ ಘೋಷಣೆ ಸಾಧ್ಯತೆ ಇದೆ. ಈ ಮಧ್ಯೆ ಹೆಚ್.ಸಿ.ಮಹದೇವಪ್ಪಗೆ ಪರ್ಯಾಯ ಸ್ಥಾನ ನೀಡಲು ಕಾಂಗ್ರೆಸ್ ನಾಯಕರು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.