ಬೆಂಗಳೂರು : ಮಹತ್ವದ ಬೆಳವಣಿಗೆಯೊಂದರಲ್ಲಿ ದಾವಣಗೆರೆಯ ಹರಿಹರ ಪಂಚಮಸಾಲಿ ಗುರು ಪೀಠದಿಂದ ಶ್ವಾಸಗುರು ವಚನಾನಂದ ಸ್ವಾಮೀಜಿಯವರನ್ನು ಉಚ್ಚಾಟಿಸಲಾಗಿದೆ. ಇಂದು ಸಭೆ ಸೇರಿದ್ಧ ಧರ್ಮ ದರ್ಶಿ ಮಂಡಳಿಯ 15 ಸದಸ್ಯರ ಪೈಕಿ 13 ಸದಸ್ಯರ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.

ವಚನಾನಂದ ಸ್ವಾಮೀಜಿಗಳಿಗೆ ಶ್ವಾಸಪೀಠ ಅಥವಾ ಹರಿಹರ ಪೀಠ ಈ ಎರಡರಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಲು ಸೂಚಿಸಲಾಗಿತ್ತು. ಆದರೆ ಇದಕ್ಕೆ ವಿಫಲರಾದ ಕಾರಣ ಹಾಗೂ ಮಠದ ಆಡಳಿತ ಮಂಡಳಿಯಲ್ಲಿನ ಭಿನ್ನಾಭಿಪ್ರಾಯಗಳ ಹಿನ್ನೆಲೆಯಲ್ಲಿ ಟ್ರಸ್ಟಿಗಳ ಸಭೆಯಲ್ಲಿ ಈ ತೀರ್ಮಾನಕ್ಕೆ ಬರಲಾಗಿದೆ. ಇನ್ನೂ ಈ ಬೆಳವಣಿಗೆಯಿಂದ ಹರಿಹರದ ಪಂಚಮಸಾಲಿ ಮಠದ ಸುತ್ತಮುತ್ತ ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ.
ವಚನಾನಂದ ಶ್ರೀಗೆ ಶ್ವಾಸಪೀಠ ಅಥವಾ ಹರಿಹರ ಪಂಚಮಸಾಲಿ ಪೀಠದ ಪೈಕಿ ಎರಡರಲ್ಲಿ ಒಂದನ್ನು ಆಯ್ಕೆ ಮಾಡುವಂತೆ ಹೇಳಿದ್ದರಂತೆ. ಆದರೆ ಈ ಬಗ್ಗೆ ಸ್ಪಷ್ಟವಾಗಿರುವ ನಿಲುವನ್ನು ತಾಳದ ಹಿನ್ನೆಲೆಯಲ್ಲಿ ವಚನಾನಂದ ಶ್ರೀಗಳನ್ನು ಪದಚ್ಯುತಿ ಮಾಡಿದ್ದೇವೆ ಎಂದ ಟ್ರಸ್ಟಿ ಬಸವರಾಜ ದಿಂಡೂರ ತಿಳಿಸಿದ್ದಾರೆ.
ಇನ್ನೂ ಈ ನಿರ್ಧಾರ ಟ್ರಸ್ಟ್ ನ ವತಿಯಿಂದ ವೈಯಕ್ತಿಕವಾಗಿ ಪಡೆದದ್ದಲ್ಲಾ, ಇದೊಂದು ಸಮಾಜದ ನಿರ್ಧಾರ. ಸ್ವಾಮೀಜಿಗಳು ನಮ್ಮನ್ನು ಒಳಗೆ ಕರೆಯೋಕೆ ಸಿದ್ಧರಿಲ್ಲ, ಶ್ವಾಸಗುರು ಪೀಠ ಬಿಡದೇ ಇರುವುದೇ ಇದಕ್ಕೆ ಮುಖ್ಯ ಕಾರಣ. ಉಳಿದ ಕಾರಣ ಏನು ಎಂಬುದನ್ನು ಸದ್ಯದಲ್ಲೇ ತಿಳಿಸುತ್ತೇವೆ ಎಂದು ಟ್ರಸ್ಟಿ ಜಿ.ಪಿ.ಪಾಟೀಲ್ ಸಭೆ ಬಳಿಕ ಟ್ರಸ್ಟ್ನ ಸದಸ್ಯರ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.
ನನ್ನನ್ನು ಟಾರ್ಗೆಟ್ ಮಾಡಿದ್ದಾರೆ….
ಪ್ರಮುಖವಾಗಿ ಮಠದ ಅನುದಾನ ಹಾಗೂ ಹಣದಲ್ಲಿ ಅವ್ಯವಹಾರ ನಡೆದಿರುವ ಆರೋಪದ ಹಿನ್ನೆಲೆಯಲ್ಲಿ ನನ್ನನ್ನು ಟಾರ್ಗೆಟ್ ಮಾಡಿದ್ದಾರೆ. ನನ್ನ ಉಚ್ಚಾಟನೆ ಹಾಸ್ಯಾಸ್ಪದ ನಿರ್ಧಾರವಾಗಿದೆ, ಮಠದ ಅಧಿಕಾರ ವಹಿಸಿಕೊಂಡಾಗಿನಿಂದಲೂ ಇಂದಿನವರೆಗೂ ನಾನು ನನ್ನ ಪೂರ್ವಾಶ್ರಮಕ್ಕೆ ಹೋಗಿಲ್ಲ. ನನ್ನ ಹೆಸರಿನಲ್ಲಿ ಯಾವುದೇ ವೈಯಕ್ತಿಕ ಆಸ್ತಿಯನ್ನು ಮಾಡಿಕೊಂಡಿಲ್ಲ. ಆದರೆ ತಮ್ಮ ಅವ್ಯವಹಾರ ಮುಚ್ಚಿ ಹಾಕಲು ಯತ್ನಿಸಿದ್ದಾರೆ. ನಾನು ಲೆಕ್ಕ ಕೇಳಿದ್ದೆ ತಪ್ಪಾ ಎಂದು ಉಚ್ಚಾಟನೆಯ ಬಳಿಕ ವಚನಾನಂದ ಸ್ವಾಮೀಜಿ ಕಿಡಿಕಾರಿದ್ದಾರೆ.






