ದೇಶದ ವಿರೋಧ ಪಕ್ಷದ ನಾಯಕರ ವಿರುದ್ಧ ಅಕ್ರಮ ಹಣ ವರ್ಗಾವಣೆ ಆರೋಪದ ಅನೇಕ ಪ್ರಕರಣಗಳ ಮೇಲ್ವಿಚಾರಣೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯದ (ED) ಮುಖ್ಯಸ್ಥ ಸಂಜಯ್ ಕುಮಾರ್ ಮಿಶ್ರಾ ಅವರು ತಮ್ಮ ಎರಡು ವರ್ಷಗಳ ನಿಗದಿತ ಅಧಿಕಾರಾವಧಿ ಮುಗಿಯುವ ಮುನ್ನವೇ ಮತ್ತೊಂದು ವರ್ಷದ ವಿಸ್ತರಣೆಯನ್ನು ಪಡೆದಿದ್ದಾರೆ.
ಕಳೆದ ಶನಿವಾರ, ಹಣಕಾಸು ಸಚಿವಾಲಯವು ನವೆಂಬರ್ 19, 2018 ರ ಆದೇಶವನ್ನು ಮಾರ್ಪಡಿಸಿತು, ಅದರ ಮೂಲಕ 1984 ರ ಬ್ಯಾಚ್ ನ ಭಾರತೀಯ ಕಂದಾಯ ಸೇವಾ ಅಧಿಕಾರಾವಧಿಯನ್ನು ಭಾರತದ ರಾಷ್ಟ್ರಪತಿಗಳ ಅನುಮೋದನೆಯೊಂದಿಗೆ ವಿಸ್ತರಿಸಲಾಯಿತು. ಕೇಂದ್ರ ಸರ್ಕಾರದ ಈ ನಿರ್ಧಾರದಿಂದ, ಮಿಶ್ರಾ ಅವರ ಅಧಿಕಾರಾವಧಿಯು ಈಗ ಮೂರು ವರ್ಷಗಳ ಅವಧಿಗೆ ಇರುತ್ತದೆ.
Also Read: ಈಶ್ವರಪ್ಪ ವಿರುದ್ಧದ ಇಡಿ ತನಿಖೆ ಎಲ್ಲಿಗೆ ಬಂತು?
ED ಯು ಎರಡು ಕೇಂದ್ರ ಕಾನೂನುಗಳನ್ನು ಜಾರಿಗೊಳಿಸುತ್ತದೆ – ಮನಿ ಲಾಂಡರಿಂಗ್
ತಡೆಗಟ್ಟುವಿಕೆ ಕಾಯ್ದೆ (PMLA) ಮತ್ತು ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (FEMA). ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (CBI) ನೋಂದಾಯಿಸಿರುವ ಉನ್ನತ ಮಟ್ಟದ ಬ್ಯಾಂಕ್ ವಂಚನೆ ಪ್ರಕರಣಗಳು ಮತ್ತು ಕಪ್ಪು ಹಣ (ಬಹಿರಂಗಪಡಿಸದ ವಿದೇಶಿ ಆದಾಯ ಮತ್ತು ಸ್ವತ್ತುಗಳು) ಮತ್ತು ತೆರಿಗೆ ವಿಧಿಸುವಿಕೆಗೆ ಸಂಬಂಧಿಸಿದ ಪ್ರಕರಣಗಳಲ್ಲಿ ತನಿಖೆಗಳನ್ನು ಅನುಸರಿಸುತ್ತಿದೆ. ರಾಷ್ಟ್ರೀಯ ತನಿಖಾ ಸಂಸ್ಥೆ ಸಲ್ಲಿಸಿದ FIR ಗಳಿಗೆ ಸಂಬಂಧಿಸಿರುವ ಭಯೋತ್ಪಾದಕ-ಹಣದ ಪ್ರಕರಣಗಳಲ್ಲಿ ಆಸ್ತಿಗಳ ಮುಟ್ಟುಗೋಲು ಮತ್ತು ವಶಪಡಿಸಿಕೊಳ್ಳುವಿಕೆಯನ್ನು ಸಹ ಇದು ನಡೆಸಿದೆ.
ಕೇಂದ್ರ ತನಿಖಾ ಸಂಸ್ಥೆಗಳಾದ CBI, NIA ಮತ್ತು ED ಯನ್ನು ನಿರ್ದಿಷ್ಟವಾಗಿ ವಿರೋಧ ಪಕ್ಷದ ನಾಯಕರನ್ನು ಗುರಿಯಾಗಿಸಲು ಬಳಸಲಾಗುತ್ತಿದೆ ಎಂಬ ಆರೋಪಗಳ ಮಧ್ಯೆ ಮಿಶ್ರಾ ಅವರ ಅವಧಿಯನ್ನು ವಿಸ್ತರಿಸುವ ಕೇಂದ್ರ ಸರ್ಕಾರದ ನಿರ್ಧಾರವು ಸಂದೇಹಕ್ಕೆ ಕಾರಣವಾಗಿದೆ. ಇತ್ತೀಚಿನ ದಿನಗಳಲ್ಲಿ, ವಿರೋಧ ಪಕ್ಷದ ನಾಯಕರ ವಿರುದ್ಧ ED ಪ್ರಕರಣಗಳ ಸಂಖ್ಯೆ ಹೆಚ್ಚಳವಾಗಿದ್ದು ED ಅನ್ನು ರಾಜಕೀಯ ಲಾಭಕ್ಕಾಗಿ ಕೇಂದ್ರ ಸರ್ಕಾರ ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಲಾಗಿದೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಮಿಶ್ರಾ ಅವರ ಉಸ್ತುವಾರಿ ಅಡಿಯಲ್ಲಿ ED ಪ್ರಸ್ತುತ ವಿರೋಧ ಪಕ್ಷದ ನಾಯಕರ ವಿರುದ್ಧ ತನಿಖೆ ನಡೆಸುತ್ತಿರುವ ಪ್ರಕರಣಗಳ ಪಟ್ಟಿ ಇಲ್ಲಿದೆ.
1. ಮಹಾರಾಷ್ಟ್ರ ರಾಜ್ಯ ಸಹಕಾರಿ ಬ್ಯಾಂಕ್ (MSCB) ಯಲ್ಲಿ 2,500 ಕೋಟಿ ರೂ.ಗಳ ಸಾಲ ವಂಚನೆ ED ಅಡಿಯಲ್ಲಿರುವ ಉನ್ನತ ಮಟ್ಟದ ಪ್ರಕರಣಗಳಲ್ಲಿ ಒಂದಾಗಿದೆ. ಬ್ಯಾಂಕ್ ನಿರ್ದೇಶಕ ಶರದ್ ಪವಾರ್ ಅವರ ಸೋದರಳಿಯ ಮತ್ತು ಮಹಾರಾಷ್ಟ್ರದ ಮಾಜಿ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಬ್ಯಾಂಕಿನ 70 ಮಾಜಿ ನಿರ್ದೇಶಕರ ವಿರುದ್ಧದ ಆರೋಪಗಳಿಗೆ ಸಂಬಂಧಿಸಿದಂತೆ ED ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಶರದ್ ಪವಾರ್ಅ ವರಿಗೆ ಸಮನ್ಸ್ ಕಳುಹಿಸಿದೆ.
2. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಒಡೆತನದ ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ ಗೆ ಪಂಚಕುಲದಲ್ಲಿ ಭೂ ಹಂಚಿಕೆಯಲ್ಲಿ ಅಕ್ರಮಗಳು ನಡೆದಿವೆ ಎಂಬ ಆರೋಪದ ಮೇಲೆ ಹರಿಯಾಣ ಮಾಜಿ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ಮುಖಂಡ ಭೂಪಿಂದರ್ ಸಿಂಗ್ ಹೂಡಾ ಮತ್ತು ಹಿರಿಯ ಕಾಂಗ್ರೆಸ್ ಮುಖಂಡ ಮೋತಿಲಾಲ್ ವೋರಾ ಅವರ ಪಾತ್ರವನ್ನೂ ED ಪರಿಶೀಲಿಸುತ್ತಿದೆ.
3. ಬಹುಜನ ಸಮಾಜ ಪಕ್ಷಕ್ಕೆ ಸಂಬಂಧಿಸಿರುವ ಬ್ಯಾಂಕ್ ಖಾತೆಯಲ್ಲಿ 104 ಕೋಟಿ ರೂ. ಮತ್ತು ಬಿಎಸ್ಪಿ ಮುಖ್ಯಸ್ಥ ಮಾಯಾವತಿ ಅವರ ಸಹೋದರ ಆನಂದ್ ಕುಮಾರ್ ಅವರ ಖಾತೆಯಲ್ಲಿ ಸುಮಾರು 1.5 ಕೋಟಿ ರೂ. ಅಕ್ರಮವಾಗಿ ಜಮೆ ಆಗಿರುವ ಕುರಿತು ED ತನಿಖೆ ನಡೆಯುತ್ತಿದೆ.
Also Read: ವಿನಯ್ ಕುಲಕರ್ಣಿ ಬಂಧನ ರಾಜಕೀಯ ದುರುದ್ದೇಶಪೂರಿತ ಕ್ರಮ – ಸಿದ್ದರಾಮಯ್ಯ
4. ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ ಮತ್ತು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ವಿರುದ್ಧ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ED ಹಣ ವರ್ಗಾವಣೆ ಪ್ರಕರಣವನ್ನು ದಾಖಲಿಸಿದೆ.
5. ಫೆಮಾ ಅಡಿಯಲ್ಲಿ ವಿದೇಶಿ ವಿನಿಮಯ ಉಲ್ಲಂಘನೆಗೆ ಸಂಬಂಧಿಸಿದ INX ಮಾಧ್ಯಮ ಪ್ರಕರಣವು ED ತನಿಖೆ ನಡೆಸುತ್ತಿರುವ ಪ್ರಮುಖ ಪ್ರಕರಣಗಳಲ್ಲಿ ಒಂದಾಗಿದೆ. ಈ ಪ್ರಕರಣದಲ್ಲಿ ಸಿಬಿಐ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಅವರನ್ನು ಬಂಧಿಸಿತ್ತು. ಚಿದಂಬರಂ ಅವರ ಪುತ್ರ ಕಾರ್ತಿ ಚಿದಂಬರಂ ಕೂಡ ಈ ಪ್ರಕರಣದ ಆರೋಪಿ.
6. ಹಣ ವರ್ಗಾವಣೆ ಆರೋಪದ ಮೇಲೆ ಕರ್ನಾಟಕ ಕಾಂಗ್ರೆಸ್ ಮುಖ್ಯಸ್ಥ ಡಿ.ಕೆ.ಶಿವಕುಮಾರ್ ಅವರ ವಿರುದ್ದವೂ ED ಪ್ರಕರಣ ದಾಖಲಿಸಿದೆ. ED ಚಿದಂಬರಂ ಅವರನ್ನು ಬಂಧಿಸಿದ ಸುಮಾರು ಎರಡು ವಾರಗಳ ನಂತರ, 2019 ರ ಸೆಪ್ಟೆಂಬರ್ನಲ್ಲಿ, ಅವರ ಮನೆಯಲ್ಲಿ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದ ನಂತರ, ಮತ್ತು ಅವರ ಮನೆಯಲ್ಲಿ ಅಪರಿಮಿತ ಸಂಪತ್ತನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಆರೋಪಿಸಿ DK ಶಿವಕುಮಾರ್ ರನ್ನು ಬಂಧಿಸಿತು.
7. ಪ್ರಿಯಾಂಕಾ ಗಾಂಧಿಯವರ ಪತಿ ರಾಬರ್ಟ್ ವಾದ್ರಾ ಅವರು ಹಲವಾರು ಭೂ ವ್ಯವಹಾರಗಳಲ್ಲಿ ಅಕ್ರಮಗಳ ಆರೋಪದ ಮೇಲೆ EDಯ ತನಿಖೆ ಎದುರಿಸುತಿದ್ದಾರೆ.
8. DMK ಮುಖಂಡರಾದ ಎ.ರಾಜಾ ಮತ್ತು ಕನಿಮೋಳಿ ಅವರನ್ನು 2 ಜಿ ಹಗರಣ ಪ್ರಕರಣಗಳಲ್ಲಿ ED ಈ ಹಿಂದೆ ತನಿಖೆ ನಡೆಸಿದ್ದರೆ, ಪ್ರಸ್ತುತ ತಮಿಳುನಾಡಿನ Aircel-Maxis ಪ್ರಕರಣ ಸೇರಿದಂತೆ ಮನಿ ಲಾಂಡರಿಂಗ್ ಪ್ರಕರಣಗಳನ್ನು ತನಿಖೆ ನಡೆಸುತ್ತಿದೆ ಇದರಲ್ಲಿ ವಿರೋಧ ಪಕ್ಷದ ದಯಾನಿಧಿ ಮತ್ತು ಕಲಾನಿಧಿ ಮಾರನ್ ಆರೋಪಿಗಳಾಗಿದ್ದಾರೆ.
9. ಅದೇ ರೀತಿ, ED ಬ್ಯಾಂಕ್ ವಂಚನೆ ಪ್ರಕರಣದಲ್ಲಿ ವೈ.ಎಸ್. ಚೌದರಿ ಮತ್ತು ನಾರಾಯಣ್ ರಾಣೆ. ವಿರುದ್ದ ತನಿಖೆ ನಡೆಸುತ್ತಿರುವಾಗ, 316 ಕೋಟಿ ರೂ.ಗಳ ಮೌಲ್ಯದ ಚೌದರಿಯ ಆಸ್ತಿಯನ್ನು ವಶಪಡಿಸಿಕೊಂಡಿತು. ಎರಡು ತಿಂಗಳ ನಂತರ ತೆಲುಗು ದೇಶಂ ಪಕ್ಷದ ಮುಖಂಡರು ಬಿಜೆಪಿಗೆ ಸೇರ್ಪಡೆಗೊಂಡರು.
10. 2019 ರಲ್ಲಿ, ಹಿರಿಯ ಕಾಂಗ್ರೆಸ್ ಮುಖಂಡ ಅಹ್ಮದ್ ಪಟೇಲ್, EDಯ ವಿಚಾರಣೆಯ ಬಿಸಿಯನ್ನು ಎದುರಿಸಿದರು. ಸ್ಟರ್ಲಿಂಗ್ ಬಯೋಟೆಕ್ ಮನಿ ಲಾಂಡರಿಂಗ್ ಪ್ರಕರಣದಲ್ಲಿ ಪಟೇಲ್ ಅವರ ಮಗ ಮತ್ತು ಸೊಸೆಯನ್ನು ED ತನಿಖೆಗೊಳಪಡಿಸಿದೆ.
11. ಆಗಸ್ಟ್ 2019 ರಲ್ಲಿ, ED ಮಧ್ಯಪ್ರದೇಶದ ಮುಖ್ಯಮಂತ್ರಿ ಕಮಲ್ ನಾಥ್ ಅವರ ಸೋದರಳಿಯ ರತುಲ್ ಪುರಿಯನ್ನು ಬಹು ಕೋಟಿ ಬ್ಯಾಂಕ್ ಸಾಲ ವಂಚನೆ ಪ್ರಕರಣದಲ್ಲಿ ಬಂಧಿಸಿತ್ತು.
12. ವೈಎಸ್ಆರ್ ಕಾಂಗ್ರೆಸ್ ಮುಖಂಡ ಮತ್ತು ಪ್ರಸ್ತುತ ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರು ಹಲವಾರು ರೀತಿಯ ಹಣ ವರ್ಗಾವಣೆ ಪ್ರಕರಣಗಳು ಮತ್ತು ಭೂಹಗರಣಗಳಲ್ಲಿ ED ತನಿಖೆ ಎದುರಿಸುತ್ತಿದ್ದಾರೆ.
ಕಳೆದ ಕೆಲವು ವರ್ಷಗಳಿಂದ ED ಪ್ರಾಥಮಿಕ ತನಿಖಾ ಸಂಸ್ಥೆಯಾಗಿ CBI ಅನ್ನು ಮೀರಿಸಿದೆ ಎಂದು ರಾಜಕೀಯ ತಜ್ಞರು ಹೇಳಿದ್ದಾರೆ. ED ನಿರ್ದೇಶಕ ಎಸ್ ಕೆ ಮಿಶ್ರಾ ತಮ್ಮ ಬಗ್ಗೆ ಬಹಳ ಕಡಿಮೆ ವಿವರವನ್ನು ವೆಬ್ ಸೈಟ್ ನಲ್ಲಿ ನೀಡಿದ್ದಾರೆ. ಇವರ ಒಂದು ಛಾಯಾಚಿತ್ರ ಕೂಡ ED ವೆಬ್ ಸೈಟ್ ನಲ್ಲಿ ಲಭ್ಯವಿಲ್ಲ. ದೆಹಲಿಯ ಖಾನ್ ಮಾರ್ಕೆಟ್ ಬಳಿಯ ಲೋಕ ನಾಯಕ್ ಭವನದಲ್ಲಿ EDಯ ಕಚೇರಿಯಿಂದ ಮಿಶ್ರಾ ಕೆಲಸ ಮಾಡುತಿದ್ದು ಒಟ್ಟು ಮಂಜೂರಾದ 2,066 ED ಅಧಿಕಾರಿಗಳ ಹುದ್ದೆಯ ಬದಲಿಗೆ ಈಗ 1,273 ಅಧಿಕಾರಿಗಳು ಕಾರ್ಯ ನಿರ್ವಹಿಸುತಿದ್ದಾರೆ. ಅವರಲ್ಲಿ ಕೇವಲ 400 ಮಂದಿ ಮಾತ್ರ ತನಿಖೆ ಮಾಡುವ ಅಧಿಕಾರಿಗಳಾಗಿದ್ದಾರೆ. ಆದರೆ EDಯು ತನಿಖೆ ನಡೆಸಿದ ಬಹುತೇಕ ಪ್ರಕರಣಗಳಲ್ಲಿ ಆರೋಪವು ಸಾಬೀತಾಗಿ ಶಿಕ್ಷೆ ಆದ ಪ್ರಕರಣಗಳು ತುಂಬಾ ಕಡಿಮೆ ಇದೆ. ಕಳೆದ 2005 ರಿಂದ PMLA ಅಡಿಯಲ್ಲಿ ದಾಖಲಿಸಲಾದ ಸುಮಾರು 2,400 ಪ್ರಕರಣಗಳಲ್ಲಿ ಕೇವಲ ಎಂಟು ಪ್ರಕರಣಗಳಲ್ಲಿ ಮಾತ್ರ ಅಪರಾಧ ಸಾಬೀತಾಗಿವೆ. 2019 ರ ಜೂನ್ ವರೆಗೆ ಕೇವಲ 688 ಪ್ರಕರಣಗಳಲ್ಲಿ ಮಾತ್ರ ಪ್ರಾಸಿಕ್ಯೂಷನ್ ದೂರುಗಳು ದಾಖಲಾಗಿವೆ ತಿಳಿದು ಬಂದಿದೆ.