ಇಂದು ಪಂಚಮಸಾಲಿ ಸಮುದಾಯದ ಮಠಾಧೀಶರು ಕೇಳುತ್ತಿರುವ 2-ಎ ಮೀಸಲಾತಿ ಕುರಿತಂತೆ ‘ಪ್ರತಿಧ್ವನಿ’ (ಶಶಿ ಸಂಪಳ್ಳಿ ಅವರ ಬರಹ) ಪ್ರಕಟಿಸಿದ ಬರಹ ಸಾಕಷ್ಟು ಚರ್ಚೆಗೆ ಒಳಗಾಗಿದೆ.
ಈಗ ಆರ್ಥಿಕವಾಗಿ ಹಿಂದುಳಿದವರಿಗೆ (ಇ.ಡಬ್ಲು.ಎಸ್ – ಎಕಾನಾಮಿಕಲಿ ವೀಕರ್ ಸೆಕ್ಷನ್) ಕೇಂದ್ರ ನೀಡಿರುವ ಶೇ. 10 ರ ಮೀಸಲಾತಿ ಸಾಂವಿಧಾನಿಕವೇ ಎಂಬ ಕುರಿತು ‘ಪ್ರತಿಧ್ವನಿ’ ಹಲವು ತಜ್ಞರೊಂದಿಗೆ ಚರ್ಚೆ ನಡೆಸಿದೆ.
ಅದಕ್ಕೂ ಮೊದಲು ಈ ವಾರದಲ್ಲಿ ಈ ಮೀಸಲಾತಿ ಕುರಿತಾಗಿ ಸುಪ್ರೀಂಕೋರ್ಟ್ ಎತ್ತಿರುವ ಪ್ರಶ್ನೆ ಮ ತ್ತು ತಕರಾರುಗಳನ್ನು ಗಮನಿಸೋಣ.
ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (ನೀಟ್) ಮೂಲಕ ಆರ್ಥಿಕ ದುರ್ಬಲ ವರ್ಗಕ್ಕೆ (ಇಡಬ್ಲ್ಯೂಎಸ್) ಸೇರಿದವರಿಗೆ ಮೀಸಲಾತಿ ಪಡೆಯಲು ರೂ 8 ಲಕ್ಷ ವಾರ್ಷಿಕ ಆದಾಯ ಮಿತಿ ನಿಗದಿಪಡಿಸಿರುವುದಕ್ಕೆ ಕಾರಣ ನೀಡಿ ಅಫಿಡವಿಟ್ ಸಲ್ಲಿಸುವಂತೆ ಸುಪ್ರೀಂಕೋರ್ಟ್ ಕಳೆದ ಗುರುವಾರ ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಿದೆ.
ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ತ್ರಿಸದಸ್ಯ ಪೀಠ ಇಡಬ್ಲ್ಯೂಎಸ್ಗೆ ರೂ 8 ಲಕ್ಷ ಆದಾಯ ಮಿತಿುಯು ಇತರ ಹಿಂದುಳಿದ ವರ್ಗಗಳಿಂದ (OBC) ಕೆನೆ ಪದರ ವರ್ಗವನ್ನು ಬೇರ್ಪಡಿಸುವ ಕಟ್-ಆಫ್ ಗೆ ಸಮವಾಗಿದೆ ಎಂದು ಹೇಳಿದೆ. ಈ ಹಿನ್ನೆಲೆಯಲ್ಲಿ ಆದಾಯಮಿತಿ ನಿಗದಿಪಡಿಸುವ ಮೊದಲು ಯಾವುದೇ ಅಧ್ಯಯನ ನಡೆಸಲಾಗಿದೆಯೇ ಎಂದು ಕೇಂದ್ರವನ್ನು ನ್ಯಾಯಾಲಯ ಪ್ರಶ್ನೆ ಮಾಡಿದೆ.
ಕೇಂದ್ರ ಸರ್ಕಾರದ ಪರ ಹಾಜರಾದ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ ಎಂ ನಟರಾಜ್, ಸಿನ಼್ ಆಯೋಗದ ವರದಿಯನ್ನು ಆಧರಿಸಿ ಮಿತಿಯನ್ನು ನಿಗದಿಪಡಿಸಲಾಗಿದೆ ಎಂದರು. ಆದರೆ ನ್ಯಾಯಾಲಯ ಇದನ್ನು ಒಪ್ಪಲಿಲ್ಲ.

ನ್ಯಾಯಾಲಯ ಹೇಳಿದ್ದೇನು?
ಕೆಲ ಜನಸಂಖ್ಯಾಶಾಸ್ತ್ರೀಯ ಅಥವಾ ಸಮಾಜಶಾಸ್ತ್ರೀಯ ಇಲ್ಲವೇ ಸಮಾಜೋ ಆರ್ಥಿಕ ಮಾಹಿತಿ ನಿಮ್ಮ ಬಳಿ ಇರಬೇಕು. ರೂ 8 ಲಕ್ಷ ಆದಾಯ ಮಿತಿಯನ್ನು ಬರಿ ಶೂನ್ಯದಿಂದ ಸೃಷ್ಟಿಸಲು ಸಾಧ್ಯವಿಲ್ಲ. ನೀವು ಹೇಳುತ್ತಿರುವ ಏಕೈಕ ವಿಚಾರ ಎಂದರೆ ಈ ಹೊಸ ಮೀಸಲಾತಿಯು ಒಬಿಸಿಯೊಂದಿಗೆ ಸಮಾನತೆಯಾಗಿದೆ.
ಆದರೆ ಒಬಿಸಿ ಮತ್ತು ಇಡಬ್ಲ್ಯೂಎಸ್ಗೆ ಒಂದೇ ಮಿತಿ ಅನ್ವಯಿಸುವ ಮೂಲಕ, ನೀವು ಅಸಮಾನವಾಗಿರುವವರನ್ನು ಸಮನಾಗಿ ಸಮೀಕರಿಸುತ್ತಿದ್ದೀರಿ. ಆದ್ದರಿಂದ ಈ ಬಗ್ಗೆ ವಿವರವಾದ ಅಫಿಡವಿಟ್ ಸಲ್ಲಿಸತಕ್ಕದ್ದು ಎಂದು ಕೇಂದ್ರಕ್ಕೆ ತಕರಾರು ಎಚ್ಚರಿಕೆ ನೀಡಿದೆ.
ಒಬಿಸಿ ಮತ್ತು ಇಡಬ್ಲ್ಯೂಎಸ್ನಲ್ಲಿ ಕೆನೆ ಪದರವನ್ನು ನಿರ್ಧರಿಸುವ ಆದಾಯದ ಮಿತಿ ರೂ. 8 ಲಕ್ಷವಾಗಿದೆ. ಒಬಿಸಿಯಲ್ಲಿ ಈ ಮಿತಿಯನ್ನು ಆರ್ಥಿಕವಾಗಿ ಮುಂದುವರಿದವರನ್ನು ಹೊರಗಿಡಲು ಬಳಸಲಾಗಿದ್ದು ಆ ಮೂಲಕ ಸಾಮಾಜಿಕ ಹಿಂದುಳಿದಿರುವಿಕೆಯನ್ನು ಕಡಿಮೆ ಮಾಡಲು ಪ್ರಯತ್ನಿಸಲಾಗಿದೆ. ಇಡನ್ನು ಇಡಬ್ಲುಎಸ್ನಲ್ಲಿ (ಆರ್ಥಿಕವಾಗಿ ಹಿಂದುಳಿದವರು) ವಿವಿಧ ವರ್ಗಗಳನ್ನು ಒಳಗೊಳ್ಳಲು ಬಳಸಲಾಗಿದೆ. ಹಾಗಾಗಿ ಒಂದೇ ಮಿತಿಯನ್ನು ಒಬಿಸಿಯಲ್ಲಿ ಹೊರಗಿಡಲು ಬಳಸಿದರೆ ಎಡಬ್ಲ್ಯುಎಸ್ನಲ್ಲಿ ಒಳಗೊಳ್ಳಲು ಬಳಸಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಇಡಬ್ಲ್ಯುಎಸ್ ಹಾಗೂ ಒಬಿಸಿಗೆ ಏಕರೂಪವಾದ ಆದಾಯ ಮಿತಿಯನ್ನು ನಿಗದಿಪಡಿಸಿರುವುದು ಮನಸೋಇಚ್ಛೆಯಾಗಿದೆ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ.
ಅಫಿಡವಿಟ್ ಕೋರಿರುವ ಆದೇಶದಲ್ಲಿ ಈ ಕೆಳಗಿನ ಸಮಸ್ಯೆಗಳನ್ನು ರೂಪಿಸಲು ಮುಂದಾಗಿದೆ ಎಂದು ನ್ಯಾಯಾಲಯ ಹೇಳಿದೆ: ಇಡಬ್ಲ್ಯೂಎಸ್ ನಿರ್ಧರಿಸುವ ಮಾನದಂಡಕ್ಕಾಗಿ ಮೊದಲು ಕೇಂದ್ರ ಸರ್ಕಾರ ಕೆಲಸ ಮಾಡಿದೆಯೇ? ಉತ್ತರ ಹೌದು ಎಂದಾದದಲ್ಲಿ ಅದು, ಸಿನ್ಹೋ ಆಯೋಗದ ವರದಿಯನ್ನು ಆಧರಿಸಿದ ಮಾನದಂಡವಾಗಿದ್ದರೆ, ಆ ವರದಿಯನ್ನು ನ್ಯಾಯಾಲಯದ ಮುಂದೆ ಅಧಿಕೃತವಾಗಿ ಇರಿಸಿರಿ.
ಸಂಪೂರ್ಣ ದಾಖಲೆ ಮುಂದಿಡಲು ನ್ಯಾಯಾಲಯ ಕೇಂದ್ರಕ್ಕೆ ಸ್ವಾತಂತ್ರ್ಯ ನೀಡಿರುವಾಗ ಇಡಬ್ಲ್ಯೂಎಸ್ ಆದಾಯದ ಮಾನದಂಡವನ್ನು ಯಾವ ಆಧಾರದ ಮೇಲೆ ನಿರ್ಧರಿಸಲಾಗಿದೆ ಎಂಬುದನ್ನು ನ್ಯಾಯಾಲಯಕ್ಕೆ ತಿಳಿಸಬೇಕು.
ನಾವು ನೀತಿಯ ವಿಚಾರದಲ್ಲಿ ಹಸ್ತಕ್ಷೇಪ ಮಾಡುತ್ತಿಲ್ಲ. ಆದರೆ ಸಾಂವಿಧಾನಿಕ ತತ್ವಗಳನ್ನು ಪಾಲಿಸಲು (ಕೇಂದ್ರ ಸರ್ಕಾರ) ಮಾಹಿತಿ ಬಹಿರಂಗಗೊಳಿಸುವುದು ಅಗತ್ಯವಿದೆ.
ಸ್ನಾತಕೋತ್ತರ ವೈದ್ಯಕೀಯ ಕೋರ್ಸ್ಗಳಿಗೆ ಅಖಿಲ ಭಾರತ ಕೋಟಾ ಸೀಟುಗಳಲ್ಲಿ ಇತರ ಹಿಂದುಳಿದ ವರ್ಗಗಳಿಗೆ (ಒಬಿಸಿ) ಶೇ 27 ಮೀಸಲಾತಿ ಮತ್ತು ಇಡಬ್ಲ್ಯೂಎಸ್ಗೆ ಶೇ 10 ಮೀಸಲಾತಿ ನಿಗದಿಪಡಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯುತ್ತಿದೆ.

ಈ ಮೀಸಲಾತಿಯೇ ಸಂವಿಧಾನಕ್ಕೆ ವಿರುದ್ಧ?
ಸಂವಿಧಾನದಲ್ಲಿ ಎಲ್ಲೂ ಆರ್ಥಿಕ ಹಿಂದುಳಿದಿರುವಿಕೆ ಪದವನ್ನು ಮೀಸಲಾತಿಗೆ ಅನ್ವಯಿಸಿಯೇ ಇಲ್ಲ. ಆದರೆ ಸಂವಿಧಾನ ತಿದ್ದುಪಡಿ ಮೂಲಕ ಕೇಂದ್ರದ ಬಿಜೆಪಿ ಸರ್ಕಾರವು ಆರ್ಥಿಕವಾಗಿ ಹಿಂದುಳಿದವರಿಗೆ ಶೇ. 10 ಮೀಸಲಾತಿ ನೀತಿ ಜಾರಿಗೆ ತಂದಿದೆ. ಇದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಎದುರು 300 ಕ್ಕೂ ಹೆಚ್ಚು ಪೆಟಿಷನ್ಗಳಿವೆ. ಇಲ್ಲಿವರೆಗೂ ಕೇಂದ್ರ ಸರ್ಕಾರದ ಕೈಚಳಕದ ಕಾರಣ ಈ ಅರ್ಜಿಗಳು ವಿಚಾರಣೆಗೆ ಬಂದಿಲ್ಲ. ಈಗ ಮುಖ್ಯ ನ್ಯಾಯಮೂರ್ತಿ ರಮಣ ಮತ್ತು ನ್ಯಾಯಾಧೀಶ ಚಮದ್ರಚೂಡ್ ಅವರ ಕಾರಣಕ್ಕೆ ಈ 300 ಅರ್ಜಿಗಳನ್ನು ಒಂದೇ ಎಂದು ಪರಿಗಣಿಸಿ ವಿಚಾರಣೆ ಆರಂಭಿಸಬಹುದು ಎಂಬ ನಿರೀಕ್ಷೆಯಿದೆ.
ಈ ಕುರಿತು ‘ಪ್ರತಿಧ್ವನಿ’ ಜೊತೆ ಮಾತನಾಡಿದ ಹಿರಿಯ ವಕೀಲ ಮತ್ತು ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಸಿ,ಎಸ್ ದ್ವಾರಕಾನಾಥ್, ಹಂಪಿ ಕನ್ನಡ ವಿವಿಯ ಬುಡಕಟ್ಟು ಅಧ್ಯಯನ ವಿಣಾಗದ ಮುಖ್ಯಸ್ಥ ಎ.ಎಸ್.ಪ್ರಭಾಕರ್ ಮತ್ತು ಚಿಂತಕ-ಬರಹಗಾರ ಬಂಜಗೆರೆ ಜಯಪ್ರಕಾಶ್ ಅವರು ಶೇ. 10 ಮೀಸಲಾತಿ ನೀಡಿರುವುದು ಸಂವಿಧಾನ ವಿರೋಧಿ ಕ್ರಮ ಎಂಬುದನ್ನು ಒತ್ತಿ ಹೇಳಿದರು.
‘ಮೀಸಲಾತಿಯು ಬಡತನ ನಿರ್ಮೂಲನಾ ಯೋಜನೆಯಲ್ಲ ಎಂದು ಸಂವಿಧಾನ ಸ್ಪಷ್ಟವಾಗಿ ಹೇಳಿದೆ. ಹೀಗಾಗಿ ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಾತಿ ನೀಡಲು ಯಾವುದೇ ಅವಕಾಶ ಇಲ್ಲ ಎಂದರು.
‘ ಶೇ. 70ರಷ್ಟಿರುವ ಒಬಿಸಿಗಳಿಗೆ ಶೇ. 27 ಮೀಸಲಾತಿ, ಶೇ. 5ಅನ್ನೂ ದಾಟದ ಮೇಲ್ಜಾತಿಯ ಆರ್ಥಿಕವಾಗಿ ಹಿಂದುಳಿದವರಿಗೆ ಶೇ. 10 ಮೀಸಲಾತಿ. ಈ ನಿಲುವೇ ಪಕ್ಷಪಾತಿಯಾಗಿದೆ’ ಕರ್ನಾಟಕದಲ್ಲಿ ಈ ಸೌಲಭ್ಯ ಶೇ 4ರಷ್ಟು ಇರಬಹುದಾದ ಬ್ರಾಹ್ಮಣರು, ಕೊಮಟ ಶೆಟ್ಟರು ಮತ್ತು ಪಟ್ಟೇಗಾರ ಸಮುದಾಯ.
ಒಂದು ಉಪಜಾತಿಗೆ ಮಾತ್ರ ಸಿಗಲಿದೆ, ಅಂದರೆ ಶೆ. 4ರಷ್ಟು ಇರಬಹಯದಾದ ಇವರಿಗೆ ಶೇ. 10 ಮೀಸಲಾತಿಯ ಬೋನಸ್ ನೀಡಿರುವುದು ಒಬಿಸಿಗಳಿಗೆ ಅನ್ಯಾಯ ಎಸಗಲಿದೆ’’ ಎಂದು ಬಂಜಗೆರೆ ಜಯಪ್ರಕಾಶ್ ‘ಪ್ರತಿಧ್ವನಿ’ಗೆ ತಿ:ಳಿಸಿದರು.
ಈ ಕುರಿತು ಮಾತನಾಡಿದ ವಕೀಲ ದ್ವಾರಕನಾಥ್, ‘ ನಾನೂ ಕೂಡ ಇದರ ವಿರುದ್ಧ ಪೆಟಿಷನ್ ಹಾಕಿರುವೆ. ಸಂವಿಧಾನದ ಅನುಚ್ಛೇಧ 15(4) ಮತ್ತು 16(4) ರಲ್ಲಿ ಶೈಕ್ಷಣಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದವರಿಗೆ ಮಾತ್ರ ಮೀಸಲಾತಿ ಎಂದು ಸ್ಪಷ್ಟವಾಗಿ ಹೇಳಲಾಗಿದೆ. ಆದರೆ ಸಿಕ್ಕಿರುವ ಬಹುಮತವನ್ನು ದುರುಪಯೋಗ ಮಾಡಿಕೊಂಡ ಬಿಜೆಪಿ ಸರ್ಕಾರ ತಿದ್ದುಪಡಿ ತಂದು ಈ ಅಚಾತುರ್ಯದ ಕೆಲಸ ಮಾಡಿದೆ. ಕೇಶವಾನಂದ ವರ್ಸಸ್ ಯುನಿಯನ್ ಗವರ್ನಮೆಂಟ್ ಕೇಸಿನಲ್ಲಿ, ಸಂವಿಧಾನದ ಮೂಲ ಆಶಯಕ್ಕೆ ಧಕ್ಕೆ ತರುವ ಯಾವುದೇ ತಿದ್ದುಪಡಿ ಮಾಡಬಾರದು ಎಂದು ಸುಪ್ರೀಂಕೋರ್ಟ್ ಬಹು ಹಿಂದೆಯೇ ಆದೇಶ ಮಾಡಿದೆ. ಕೇಂದ್ರ ಸರ್ಕಾರವು ಈ ಆದೇಶವನ್ನು ಉಲ್ಲಂಘಿಸಿದೆ. ಸುಪ್ರೀಂಕೋರ್ಟ್ ವಿಚಾರಣೆ ಕೈಗೆತ್ತಿಕೊಂಡರೆ ಈ ಶೇ. 10 ಮೀಸಲಾತಿ ಕಳಚಿ ಹೋಗಲಿದೆ’ ಎಂದು ತಿಳಿಸಿದರು.

ಸದ್ಯ ಕೆಲವು ಎಂಬಿಬಿಎಸ್ ವಿದ್ಯಾರ್ಥಿಗಳು ಆರ್ಥಿಕವಾಗಿ ಹಿಂದುಳಿದವರಿಗೆ 8 ಲಕ್ಷ ರೂ ಆದಾಯ ಮಿತಿ ನಿಗದಿಪಡಿಸಿದ್ದನ್ನು ಪ್ರಶ್ನಿಸಿ, ಇದರಿಂದ ಒಬಿಸಿ ಕೆನೆಪದರದವರಿಗೆ ಅನ್ಯಾಯ ಆಗುತ್ತಿದೆ ಎಂದು ಸಲ್ಲಿಸಿರುವ ಅರ್ಜಿ ಸುಪ್ರೀಂಕೋರ್ಟ್ನಲ್ಲಿ ವಿಚಾರಣೆಯಲ್ಲಿದೆ. ಕೇಂದ್ರದ ಈ ಕ್ರಮವನ್ನು ಪ್ರಶ್ನಿಸಿರುವ ಸುಪ್ರೀಂಕೋರ್ಟ್ ವಿವರವಾದ ಅಫಿಡವಿಯೆಟ್ ಸಲ್ಲಿಸಲು ಕೇಂದ್ರಕ್ಕೆ ಸೂಚನೆ ನೀಡಿದೆ.
ಒಟ್ಟಿನಲ್ಲಿ ಶೇ. 10 ರ ಈ ಮೀಸಲಾತಿ ಸಂವಿಧಾನ ದ್ರೋಹವೇ ಆಗಿದೆ ಎಂದು ಹೈಕೋರ್ಟ್ ವಕೀಲೆ ರಾಜಲಕ್ಷ್ಮಿ ಅಂಕಲಗಿ ಕೂಡ ಅಭಿಪ್ರಾಯ ಪಟ್ಟರು.
ಮುಂದಿನ ಬೆಳವಣಿಗೆಗಳ ಕುರಿತು ’’ಪ್ರತಿಧ್ವನಿ’ ಅಪ್ಡೇಟ್ ನೀಡುತ್ತ ಹೋಗಲಿದೆ.