
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಕಾರು ಅಪಘಾತ ಪ್ರಕರಣದ ಬಗ್ಗೆ ಮತ್ತೆ ಅನುಮಾನ ವ್ಯಕ್ತಪಡಿಸಿದ್ದಾರೆ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ. ಲಕ್ಷ್ಮಿ ಹೆಬ್ಬಾಳ್ಕರ್ ಕಾರು ಅಪಘಾತ ಆಯ್ತು, ಕಾರಿನ ಗಾಜುಗಳು ಒಡೆಯಿತು, ಆದ್ರೆ ಅದನ್ನು ಬಟ್ಟೆ ಹಾಕಿ ಮುಚ್ಚಲಾಗಿದೆ. ಯಾಕೆ ಮುಚ್ಚಿದ್ರು..? ತಕ್ಷಣ ಯಾಕೆ ಕಾರನ್ನು ಸ್ಥಳದಿಂದ ಸಾಗಿಸಲಾಯ್ತು..? ಎಂದು ಪ್ರಶ್ನಿಸಿದ್ದಾರೆ.
ಕಾರಲ್ಲಿ ಕೋಟ್ಯಂತರ ರೂಪಾಯಿ ಹಣ ಸಾಗಿಸಲಾಗ್ತಿತ್ತು ಅಂತ ಜನ ಮಾತಾಡ್ಕೊಳ್ತಿದ್ದಾರೆ. ಇದಕ್ಕೆ ಸರ್ಕಾರ ಉತ್ತರ ಕೊಡಬೇಕು. ತನಿಖೆ ಮಾಡ್ತಿರೋರು ಯಾರು..? ಕಾರು ಚಾಲನೆ ಮಾಡ್ತಿದ್ದ ಡ್ರೈವರ್ ಎಲ್ಲಿದ್ದಾರೆ…? ನಾಯಿ ಅಡ್ಡ ಬಂತು ಅಂತ ಮೊದ್ಲು ಹೇಳಿದ್ರಿ, ನಂತರ ಹಿಟ್ ಅಂಡ್ ರನ್ ಅಂತ, ನಂತರ ಡ್ರೈವರ್ಗೆ ನಿದ್ದೆ ಬಂದಿತ್ತು ಅಂದಿದ್ದೀರಿ ಎಂದು ಕಾಂಗ್ರೆಸ್ ಸರ್ಕಾರವನ್ನು ಪ್ರಶ್ನಿಸಿದ್ದಾರೆ.
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಯಾಕೆ ಸರ್ಕಾರಿ ಕಾರಲ್ಲಿ ಹೋಗಲಿಲ್ಲ..? ಎಂದಿರುವ ಛಲವಾದಿ ನಾರಾಯಣಸ್ವಾಮಿ, ಗನ್ ಮ್ಯಾನ್, ಎಸ್ಕಾರ್ಟ್ ಯಾಕೆ ತಗೊಳ್ಳಲಿಲ್ಲ..? ಅಂತಾನೂ ಪ್ರಶ್ನಿಸಿದ್ದಾರೆ. ಅಪಘಾತದ ವಿಚಾರದಲ್ಲಿ ಬಹಳ ಅನುಮಾನಗಳಿವೆ. ರಾಜ್ಯ ಸರ್ಕಾರ ಈ ಬಗ್ಗೆ ಸೂಕ್ತ ಉತ್ತರಕೊಡದಿದ್ರೆ ಅನುಮಾನಗಳೇ ಸತ್ಯ ಆಗುತ್ತವೆ ಅಂತಾನೂ ಎಚ್ಚರಿಸಿದ್ದಾರೆ. ಈ ವಿಚಾರಗಳ ಬಗ್ಗೆ ತನಿಖೆ ಆಗಲಿ ಎಂದು ಆಗ್ರಹ ಮಾಡಿದ್ದಾರೆ.
ವಿಜಯಪುರದಲ್ಲಿ ಮಾತನಾಡಿದ್ದ ಛಲವಾದಿ ನಾರಾಯಣಸ್ವಾಮಿ ಮಾತಿಗೆ ತಿರುಗೇಟು ನೀಡಿದ್ದಾರೆ ಸಚಿವ ಜಾರ್ಜ್. ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಕಾರು ಅಪಘಾತ, ಖಾಸಗಿ ಕಾರು ಬಳಸಿ ಕೋಟ್ಯಂತರ ಹಣ ಸಾಗಿಸ್ತಿದ್ರು ಅನ್ನೋ ಛಲವಾದಿ ನಾರಾಯಣಸ್ವಾಮಿ ಹೇಳಿಕೆಗೆ ಟಾಂಗ್ ಕೊಟ್ಟಿದ್ದು, ಮೊದಲು ಛಲವಾದಿ ನಾರಾಯಣಸ್ವಾಮಿ ಯಾವ ಪಕ್ಷದಲ್ಲಿದ್ರು..? ಎಂದು ಪ್ರಶ್ನಿಸಿದ್ದು, ಛಲವಾದಿ ನಾರಾಯಣಸ್ವಾಮಿ ನನಗೆ ಬಹಳ ಚೆನ್ನಾಗಿ ಗೊತ್ತು.. ಕಾಂಗ್ರೆಸ್ ಪಕ್ಷದಲ್ಲಿದ್ದವರು, ಈಗ ಬಿಜೆಪಿಗೆ ಹೋಗಿದ್ದಾರೆ.. ಅವರು ಏನೆಲ್ಲಾ ಪ್ರಶ್ನೆ ಕೇಳಬೇಕು ಅಂತ ಬರೆದುಕೊಡ್ತಾರೆ ಎಂದು ವ್ಯಂಗ್ಯವಾಡಿದ್ದಾರೆ.

ಬಿಜೆಪಿ ಪಕ್ಷದಲ್ಲಿ ಏನು ಬರೆದುಕೊಡ್ತಾರೆ ಅದನ್ನು ಇವರು ಕೇಳ್ತಾರೆ ಎಂದಿದ್ದಾರೆ. ಅವರು ಕಾಂಗ್ರೆಸ್ ಪಕ್ಷದಲ್ಲಿದ್ದವರು ತಾನೆ.. ಲಕ್ಷ್ಮೀ ಹೆಬ್ಬಾಳಕರ ಸಚಿವರು, ಲೀಡರ್ ಕಾರಿನಲ್ಲಿ ಕುಳಿತುಕೊಂಡು ದುಡ್ಡು ಸಾಗಿಸಬೇಕಾ..? ಓರ್ವ ಮಿನಿಸ್ಟರ್ ಅಪಘಾತವಾಗಿದ್ದಾಗ ಸಹಾನುಭೂತಿ ತೋರಿಸೋದು ಬಿಟ್ಟು ಇದೆಲ್ಲಾ ಯಾವ ರಾಜಕಾರಣ ಅಂತ ನನಗೆ ಗೊತ್ತಾಗ್ತಿಲ್ಲ ಎಂದು ಖಂಡಿಸಿದ್ದಾರೆ..







