ವೈದ್ಯಕೀಯ ಸೌಲಭ್ಯಗಳನ್ನು ಪಡೆಯಲು ಕೋವಿಡ್ ರೋಗಿಗಳಿಗೆ, ಅವರ ಕುಟುಂಬಗಳಿಗೆ ಅಥವಾ ಸ್ವತಂತ್ರ ಸ್ವಯಂಸೇವಕರಿಗೆ ಸೋಶಿಯಲ್ ಮೀಡಿಯಾ ಇತ್ತೀಚೆಗೆ ಒಂದು ಸುಲಭ ಮತ್ತು ಉತ್ತಮ ಮಾರ್ಗವಾಗಿ ಗೋಚರಿಸಿದೆ. ಇದೇ ಹಿನ್ನೆಲೆಯಲ್ಲಿ ಕೋವಿಡ್ ರೋಗಿಗಳಿಗಾಗಿ ಹಲವರು ಸಾಮಾಜಿಕ ಜಾಲತಾಣದಲ್ಲಿ ನೆರವು ಯಾಚಿಸುತ್ತಿದ್ದಾರೆ. ಇದೀಗ ಸುಪ್ರೀಂ ಕೋರ್ಟೂ ಅವರ ಬೆಂಬಲಕ್ಕೆ ನಿಂತಿದ್ದು ತಮಗೆ,ತಮ್ಮ ಕುಟುಂಬಕ್ಕೆ, ಸ್ನೇಹಿತರಿಗೆ ಅಥವಾ ಇತರ ಯಾರಿಗೇ ಆದರೂ ಸೋಶಿಯಲ್ ಮೀಡಿಯಾದಲ್ಲಿ ನೆರವು ಕೇಳುವುದು ಅಥವಾ ಆಮ್ಲಜನಕ ಸರಬರಾಜಿಗಾಗಿ ಸಹಾಯ ಪಡೆಯುವ ಜನರ ವಿರುದ್ಧ ಕ್ರಮ ಕೈಗೊಳ್ಳುವ ಕೆಲವು ರಾಜ್ಯ ಸರ್ಕಾರಗಳ ನಿರ್ಧಾರವನ್ನು ಬಲವಾಗಿ ಖಂಡಿಸಿದೆ ಮತ್ತು ಅವರ ಮೇಲೆ ಕ್ರಮ ಕೈಗೊಳ್ಳುವಂತಿಲ್ಲ ಎಂದು ತೀರ್ಪು ನೀಡಿದೆ.
ಆಮ್ಲಜನಕ ಪೂರೈಕೆ ಕೊರತೆ ಅಥವಾ ಔಷಧಿಗಳ ಲಭ್ಯತೆಗೆ ಸಂಬಂಧಿಸಿದಂತೆ ಎಸ್ಒಎಸ್ ಸಂದೇಶಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಾಕುವ ಜನರ ವಿರುದ್ಧ ನಾಗರಿಕ ಅಥವಾ ಕ್ರಿಮಿನಲ್ ಕ್ರಮಗಳ ಬೆದರಿಕೆ ಕುರಿತು ಸುಪ್ರೀಂ ಕೋರ್ಟ್ ಈ ತೀರ್ಪು ನೀಡಿದೆ.
“ನಾಗರಿಕರು ತಮ್ಮ ಕುಂದುಕೊರತೆಗಳನ್ನು ಸಾಮಾಜಿಕ ಮಾಧ್ಯಮ ಮತ್ತು ಅಂತರ್ಜಾಲದಲ್ಲಿ ಸಂವಹನ ಮಾಡಿದರೆ ಅದನ್ನು ತಪ್ಪು ಮಾಹಿತಿ ಎಂದು ಹೇಳಲಾಗುವುದಿಲ್ಲ ಎಂದು ನಾವು ಸ್ಪಷ್ಟಪಡಿಸಲು ಬಯಸುತ್ತೇವೆ” ಎಂದು ಕೋರ್ಟ್ ಹೇಳಿದೆ.
“ಸಾಮಾಜಿಕ ಮಾಧ್ಯಮಗಳಲ್ಲಿ ಆಮ್ಲಜನಕ / ಹಾಸಿಗೆಗಳು ಇತ್ಯಾದಿಗಳಿಗೆ ಮನವಿ ಸಲ್ಲಿಸುವ ಯಾವುದೇ ನಾಗರಿಕರಿಗೆ ಕಿರುಕುಳ ನೀಡಿದರೆ ಅದನ್ನು ನಾವು ನ್ಯಾಯಾಲಯ ನಿಂದನೆ ಎಂದು ಪರಿಗಣಿಸುತ್ತೇವೆ ಎಂದು ಎಲ್ಲಾ ರಾಜ್ಯಗಳಿಗೆ ಬಲವಾದ ಸಂದೇಶವನ್ನು ನೀಡುತ್ತೇವೆ. ಮಾಹಿತಿಯ ಮೇಲೆ ಹಿಡಿತ ಸಾಧಿಸಲು ಯತ್ನಿಸುವುದು ಮೂಲಭೂತ ನಿಯಮಗಳಿಗೆ ವಿರುದ್ಧವಾದುದು. ಯಾವುದೇ ರಾಜ್ಯವು ಮಾಹಿತಿಯ ಮೇಲೆ ಹಿಡಿತ ಸಾಧಿಸಲು ಯತ್ನಿಸುವಂತಿಲ್ಲ” ಎಂದು ಸುಪ್ರೀಂ ಕೋರ್ಟ್ ಕಠಿಣ ಶಬ್ದಗಳಲ್ಲಿ ಹೇಳಿದೆ.
ಶುಕ್ರವಾರ ಕೋವಿಡ್ -19 ಸಂಬಂಧಿಸಿದ ಸುವೊ ಮೋಟೋ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್, ನ್ಯಾಯಮೂರ್ತಿ ಎಲ್.ನಾಗೇಶ್ವರ ರಾವ್ ಮತ್ತು ನ್ಯಾಯಮೂರ್ತಿ ಎಸ್.ರವೀಂದ್ರ ಭಟ್ ಅವರು ಎಲ್ಲಾ ರಾಜ್ಯಗಳು ಮತ್ತು ರಾಜ್ಯಗಳ ಡಿಜಿಪಿಯವರನ್ನು ಉದ್ದೇಶಿಸಿ ಈ ತೀರ್ಪು ನೀಡಿದ್ದಾರೆ. “ರಾಷ್ಟ್ರೀಯ ಬಿಕ್ಕಟ್ಟಿನ ಈ ಸಮಯದಲ್ಲಿ ನಾವು ನಮ್ಮ ನಾಗರಿಕರ ಅಹವಾಲುಗಳನ್ನು ಆಲಿಸೋಣ” ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಕೋವಿಡ್ ಎರಡನೇ ಅಲೆಯಿಂದ ಭಾರತದ ಆರೋಗ್ಯ ಕ್ಷೇತ್ರದಲ್ಲಿ ತೀವ್ರ ಬಿಕ್ಕಟ್ಟು ಉಂಟಾಗಿದ್ದು ಆಸ್ಪತ್ರೆಗಳ ಹಾಸಿಗೆಗಳ ಲಭ್ಯತೆ ವೈದ್ಯಕೀಯ ಉಪಕರಣಗಳ ಸರಬರಾಜು ಸೀಮಿತವಾಗಿದೆ. ಹಾಗಾಗಿ ಜನರು ಆಮ್ಲಜನಕ ಪೂರೈಕೆ ಮತ್ತು ಇತರ ಸೌಲಭ್ಯಗಳಿಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸಹಾಯ ಯಾಚಿಸುತ್ತಿದ್ದಾರೆ.
ಈ ಸಮಯದಲ್ಲಿ, ಯುಪಿ ಸರ್ಕಾರದಂತಹ ಕೆಲವು ರಾಜ್ಯ ಸರ್ಕಾರಗಳು ಕೋವಿಡ್ ರೋಗಿಗಳು ಅಥವಾ ಅವರ ಕುಟುಂಬಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಸಹಾಯಕ್ಕಾಗಿ ಮನವಿ ಮಾಡಲು ಒತ್ತಾಯಿಸುತ್ತಿರುವುದನ್ನು ಸರ್ಕಾರಕ್ಕರ ಕಳಂಕ ತರುವುದು ಮತ್ತು ಆನ್ಲೈನ್ನಲ್ಲಿ ತಪ್ಪುದಾರಿಗೆಳೆಯುವ ಮಾಹಿತಿಯನ್ನು ಹರಡುವುದು ಎಂಬ ನೆಪವೊಡ್ಡಿ ಪ್ರಕರಣ ದಾಖಲಿಸುತ್ತಿದೆ. ಬೇರೆ ರಾಜ್ಯಗಳಲ್ಲಿ ಇಂತಹ ಯಾವುದೇ ಪ್ರಕರಣಗಳು ವರದಿಯಾಗದೇ ಇದ್ದರೂ ತನ್ನ ಅಜ್ಜನಿಗಾಗಿ ಟ್ಬಿಟ್ಟರಿನಲ್ಲಿ ಆಮ್ಲಜನಕದ ಸಹಾಯ ಕೇಳಿದ್ದಕ್ಕಾಗಿ ಯುವಕನೊಬ್ಬನ ಮೇಲೆ ಇತ್ತೀಚೆಗೆ ಯು.ಪಿಯಲ್ಲಿ ಪ್ರಕರಣ ದಾಖಲಾಗಿತ್ತು.
ಉತ್ತರ ಪ್ರದೇಶದ ಮುಖ್ಯಮಂತ್ರಿಯವರು ಸಾಮಾಜಿಜ ಜಾಲತಾಣದಲ್ಲಿ ಸಹಾಯ ಕೇಳುವವರ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗುವುದು ಎಂದು ಘೋಷಿಸಿದ ಕೆಲವೇ ದಿನಗಳ ನಂತರ ಈ ಪ್ರಕರಣ ದಾಖಲಾಗಿತ್ತು. ಇದರ ವಿರುದ್ದ ಅಲಹಾಬಾದ್ ಹೈಕೋರ್ಟಿನಲ್ಲಿ ಸಾರ್ವಜನಿಕ ಹಿತಾಸಕ್ತಿಯ ಅರ್ಜಿ ಸಲ್ಲಿಕೆಯಾಗಿತ್ತು. ಅಲ್ಲದೆ ಕಳೆದ ವಾರ ಸರ್ಕಾರದ ಕೋರಿಕೆಯ ಮೇರೆಗೆ ಟ್ವಿಟರ್ ಕೋವಿಡ್ ಗೆ ಸಂಬಂಧಿಸಿದ 52 ಟ್ವೀಟ್ಗಳನ್ನು ಡಿಲೀಟ್ ಮಾಡಿರುವುದಾಗಿಯೂ ವರದಿಯಾಗಿತ್ತು.
ಈಗ ಸುಪ್ರೀಂ ಕೋರ್ಟ್ ಸಾಮಾನ್ಯ ಜನತೆಯ ಪರ ನಿಂತಿದ್ದು ಇಂತಹ ಕಾನೂನು ಬಾಹಿರ ಮತ್ತು ಅಮಾನವೀಯ ಕ್ರಮಗಳ ವಿರುದ್ಧ ನಿಂತು ರಾಜ್ಯ ಸರ್ಕಾರಗಳಿಗೆ ತೀವ್ರವಾದ ಎಚ್ಚರಿಕೆ ನೀಡಿ ಸಾರ್ವಜನಿಕ ವಲಯದಲ್ಲಿ ಪ್ರಶಂಸೆಗೆ ಒಳಗಾಗಿದೆ.