
ಚಿತ್ರದುರ್ಗ: ಒಳ ಮೀಸಲಾತಿ, ದತ್ತಾಂಶ ಸಂಗ್ರಹದಲ್ಲಿ ಭೋವಿ ಸಮುದಾಯಕ್ಕೆ ಅನ್ಯಾಯವಾಗುತ್ತದೆ. ಇದನ್ನು ನಾವು ಖಂಡಿಸುತ್ತೇವೆ ಎಂದಿದ್ದಾರೆ ಇಮ್ಮಡಿ ಸಿದ್ಧರಾಮೇಶ್ವರ ಶ್ರೀಗಳು. ಭೋವಿ ಜಗದ್ಗುರು ಪೀಠದಲ್ಲಿ ಇಮ್ಮಡಿ ಸಿದ್ಧರಾಮೇಶ್ವರ ಶ್ರೀ ಸುದ್ದಿಗೋಷ್ಠಿ ನಡೆಸಿ, ಕೆಲವೇ ಸಮುದಾಯಗಳ ಸಮೀಕ್ಷೆ ಮಾಡಿದ್ರೆ ಮಾಡಿ, ನಮ್ಮದೇನೂ ಅಭ್ಯಂತರ ಇಲ್ಲ. ಸಂಪೂರ್ಣ ಪರಿಶಿಷ್ಠ ಜಾತಿ ದತ್ತಾಂಶ ಸಂಗ್ರಹಣೆಗೆ 101 ಸಮುದಾಯಗಳ ಸಲಹೆ ಪಡೆಯಿರಿ. ಅದನ್ನು ಕುಲಕಸಬು ಕಾಲಂಗೆ ಸೇರಿಸಿ ಸಮೀಕ್ಷೆ ಪ್ರಾರಂಭಿಸಿ ಎಂದು ಒತ್ತಾಯಿಸಿದ್ದಾರೆ.

ಭೋವಿ ಸಮುದಾಯದ ಕುಲ ಕಸುಬನ್ನು ಸರ್ಕಾರ ನಾಶ ಮಾಡಲು ಹೊರಟಂತಿದೆ. ಈ ಕಾಲಂಗೆ ಅಲೆಮಾರಿ, ಹಾಗೂ ಅರೆ ಅಲೆಮಾರಿ ಸಮುದಾಯಗಳನ್ನು ಸೇರಿಸುವಂತೆ ಆಗ್ರಹ ಮಾಡಿದ್ದು, ಸರ್ಕಾರ ಅವರಿಗೆ ಶಾಶ್ವತ ನೆಲೆಗಟ್ಟು ಕಲ್ಪಿಸಬೇಕು ಎಂದು ಆಗ್ರಹ ಮಾಡಿದ್ದಾರೆ. ಆಗಿರುವ ಲೋಪ ಸರಿಪಡಿಸಿಕೊಂಡು ಸರ್ಕಾರ ಸಮೀಕ್ಷೆ ಮಾಡಬೇಕು. ಸಮೀಕ್ಷೆ ತರಾತುರಿಯಲ್ಲಿ ಮಾಡಿ, ಒಂದು ಸಮುದಾಯದ ಇತಿಹಾಸ ಅಳಿಸುವುದು ಬೇಡ. ಯಾವುದೇ ಸಮುದಾಯದ ಇತಿಹಾಸ ಮುಗಿಸಲು ಸರ್ಕಾರ ಮುಂದಾಗಬಾರದು ಎಂದು ಆಗ್ರಹಿಸಿದ್ದಾರೆ.

ಸರ್ಕಾರದ ಹಾಳೆ ಒಂದು ರೀತಿಯಲ್ಲಿ ಇತಿಹಾಸದ ಪುಟಗಳು ಇದ್ದಂತೆ ಎಂದಿರುವ ಇಮ್ಮಡಿ ಸಿದ್ಧರಾಮೇಶ್ವರ ಶ್ರೀಗಳು, ಸರ್ಕಾರ ಇತಿಹಾಸ ಸೃಜಿಸುವ ಕೆಲಸ ಮಾಡಬೇಕು. ಇತಿಹಾಸ ಅಳಿಸುವ ಕೆಲಸ ಮಾಡಬಾರದು. ಭೋವಿ ಸಮುದಾಯದ ಕುಲ ಕಸಬನ್ನು ಗುರುತಿಸುವ ಕೆಲಸವನ್ನು ಸರ್ಕಾರ ಮಾಡಬೇಕು. ಮಣ್ಣು ಕೆಲಸ ಮಾಡುವ, ಕಟ್ಟಡ ಕಟ್ಟುವ, ಬಾವಿ ತೋಡುವ, ಅರಮನೆ, ಸೆರೆಮನೆ ಅಂತಹ ಕಟ್ಟಡ ನಿರ್ಮಾಣ ಮಾಡಿದ್ದು ಭೋವಿ ಸಮುದಾಯ. ಸಮೀಕ್ಷೆ ವೇಳೆ ಕುಲಕಸುಬು ಕಾಲಂ 15 ರಲ್ಲಿ ಗುರುತಿಸುವುದು. ಕಲ್ಲು ಕುಟಿಕ, ಬೀಸುವ ಕಲ್ಲು ತಯಾರಿಕೆ, ಶಿಲ್ಪಿ ಮೂರು ಕಸುಬು ಉಲ್ಲೇಖ ಮಾಡಿದ್ದು, ಮಣ್ಣು, ಕಟ್ಟಡ ಕೆಲಸ ಮಾಡುವವರಿಗೆ ಕುಲ ಕಸುಬಿಲ್ಲಿ ಅವಕಾಶ ನೀಡದಿರುವುದು ಅನ್ಯಾಯ ಎಂದಿದ್ದಾರೆ.

ನದಿಗಳು ಹರಿಯದ ನೆಲದಲ್ಲಿ ಗೋಕಟ್ಟೆ ಕಟ್ಟಿದವರು ಭೋವಿ ಸಮುದಾಯದ ಜನರು. ಆದಿ ಮಾನವನಿಂದ ಆಧುನಿಕ ಮಾನವನವರೆಗೆ ಭೋವಿ ಸಮುದಾಯದ ಕೊಡುಗೆ ದೊಡ್ಡದು. ಇಂದು ಸರ್ಕಾರ ಹಿಂದುಳಿದ ಸಮುದಾಯಗಳ ಸಮೀಕ್ಷೆಗೆ ಮುಂದಾಗಿದೆ. ದತ್ತಾಂಶ ಸಂಗ್ರಹಿಸುವ ನಿಟ್ಟಿನಲ್ಲಿ ಮುಂದಾಗಿದ್ದು ಸ್ವಾಗತಾರ್ಹ. ಹಿಂದುಳಿದ ಸಮುದಾಯಗಳನ್ನು ಮುನ್ನೆಲೆಗೆ ತರಲು ಸಮೀಕ್ಷೆಯಲ್ಲಿ ಇತರೆ ಕಾಲಂ ಮಾಡಿದೆ. ಸಮುದಾಯದ ಕುಲ ಕಸುಬು ಗುರುತಿಸುವ ಕೆಲಸ ನಾಗಮೋಹನ್ ದಾಸ್ ಆಯೋಗ ಮಾಡಿದೆ. ಹಾವಾಡಿಗ ಹಕ್ಕಿ-ಪಿಕ್ಕಿ, ಗೊಂಬೆಯಾಡಿಸುವವರು ಹೀಗೆ. ಈಗ ತಯಾರಿಸುವ ಕೈಪಿಡಿ ತರಾತುರಿಯಲ್ಲಿ ತಯಾರಿ ಮಾಡಿದ್ದಾರೆ. ಕೆಲ ಸಮುದಾಯಗಳ ಒತ್ತಡದಲ್ಲಿ ಮಾಡಿದಂತೆ ಕಾಣಿಸುತ್ತದೆ. ಯಾವುದೇ ಸಮುದಾಯಕ್ಕೆ ಅನ್ಯಾಯವಾಗಬಾರದು ಎಂದಿದ್ದಾರೆ.