ಪಂಜಾಬಿನ ಆರೋಗ್ಯ ಸಚಿವ ವಿಜಯ್ ಸಿಂಗ್ಲಾ 1% ಕಮಿಷನ್ ಪಡೆದಿದ್ದಾರೆ ಎಂಬ ಆರೋಪ ಕೇಳಿಬಂದಿದ್ದೇ ತಡ ಅಲ್ಲಿನ ಮುಖ್ಯಮಂತ್ರಿ ಮತ್ತು ಆಮ್ ಆದ್ಮಿ ಪಕ್ಷದ ನಾಯಕ ಭಗವಂತ್ ಮಾನ್ ತಮ್ಮ ಸಂಪುಟ ಸಹುದ್ಯೋಗಿಯನ್ನು ಕಿತ್ತುಹಾಕಿದ್ದರು. ಈಗ ಅಕ್ರಮ ಹಣ ಸಂಪಾದನೆ ಆರೋಪದ ಮೇರೆಗೆ ದೆಹಲಿಯ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಮೇಲೆ ಜಾರಿ ನಿರ್ದೇಶನಾಲಯದ ತನಿಖೆ ನಡೆಯುತ್ತಿದೆ. ಸತ್ಯೇಂದ್ರ ಜೈನ್ ಅವರಿಗೆ ಜಾಮೀನು ಸಿಗದೆ ಜೈಲಿನಲ್ಲಿದ್ದಾರೆ. ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತಮ್ಮ ಸಚಿವ ಸಂಪುಟ ಸಹೋದ್ಯೋಗಿ ಸತ್ಯೇಂದ್ರ ಜೈನ್ ಅವರನ್ನು ಕಿತ್ತುಹಾಕುವರೇ? ಆ ಮೂಲಕ ‘ಭ್ರಷ್ಟಾಚಾರವನ್ನು ಬಿಲ್ ಕುಲ್ ಸಹಿಸುವುದಿಲ್ಲ’ ಎಂದು ಆಗಾಗ ಹೇಳುವ ಕೇಜ್ರಿವಾಲ್ ತಮ್ಮದೇ ಮಾತಿಗೆ ಬುದ್ಧರಾಗಿರುವರೇ? ಎಂಬ ಪ್ರಶ್ನೆಗಳು ಹುಟ್ಟಿಕೊಂಡಿವೆ.
ಅರವಿಂದ ಕೇಜ್ರಿವಾಲ್ ಬಗ್ಗೆ ಇಂತಹ ಪ್ರಶ್ನೆಗಳು ಹುಟ್ಟಲು ಹಿನ್ನೆಲೆಯೂ ಇದೆ. ಅವರು ಭ್ರಷ್ಟಾಚಾರ ವಿರೋಧಿ ಆಂದೋಲನದ ಮೂಲಕವೇ ಸಾರ್ವಜನಿಕ ಜೀವನ ಪ್ರವೇಶಿಸಿದವರು. ಬಳಿಕ ಆರಂಭಿಸಿದ ಆಮ್ ಆದ್ಮಿ ಪಕ್ಷ ಕಟ್ಟಿ ರಾಜಕೀಯ ಆರಂಭಿಸಿದವರು. ಹೆಸರಿನಲ್ಲೇ ‘ಜನಸಾಮಾನ್ಯ’ ಎಂಬ ವಿಶೇಷಣವುಳ್ಳ ಪಕ್ಷದ ರಾಷ್ಟ್ರೀಯ ಸಂಚಾಲಕರಾಗಿ ಅರವಿಂದ್ ಕೇಜ್ರಿವಾಲ್ ಭ್ರಷ್ಟಾಚಾರದ ಬಗ್ಗೆ ಗಂಟೆಗಟ್ಟಲೆ ಭಾಷಣ ಮಾಡಿದ್ದಾರೆ. ದೆಹಲಿ ಮುಖ್ಯಮಂತ್ರಿಯಾಗಿ ದೆಹಲಿಯಲ್ಲಿ ಭ್ರಷ್ಟಾಚಾರ ನಿಗ್ರಹಿಸಿದ್ದೇನೆ. ಸೋರಿಕೆ ಆಗುತ್ತಿದ್ದ ಸಂಪನ್ಮೂಲವನ್ನು ತಡೆದು ಕಲ್ಯಾಣ ಕಾರ್ಯಕ್ರಮ ನೀಡಿದ್ದೇನೆ ಎಂದು ಬೀಗುತ್ತಾರೆ. ಇದೇ ಧಾಟಿಯಲ್ಲಿ ಮಾತನಾಡಿ ಪಂಜಾಬಿನಲ್ಲಿ ಅಧಿಕಾರ ಹಿಡಿದಿದ್ದಾರೆ. ಹಾಗಾಗಿ ಅದೇ ಪಂಜಾಬ್ ಮಾದರಿಯಲ್ಲಿ ಮೊದಲು ‘ಮನೆಯೊಳಗನ್ನು ಸ್ವಚ್ಛಗೊಳಿಸುವರೇ?’ ಎಂಬ ಪ್ರಶ್ನೆ ಮೂಡಿಬರುತ್ತಿದೆ.
ಈ ಬಗ್ಗೆ ಅರವಿಂದ ಕೇಜ್ರಿವಾಲ್ ಮೌನ ಮುರಿದಿದ್ದಾರೆ. ‘ನಾನು ಈ ಪ್ರಕರಣವನ್ನು ವೈಯಕ್ತಿಕವಾಗಿ ಅಧ್ಯಯನ ಮಾಡಿದ್ದೇನೆ. ಇದೊಂದು ಸಂಪೂರ್ಣ ಸುಳ್ಳು ಪ್ರಕರಣ. ನಾವು ಭ್ರಷ್ಟಾಚಾರವನ್ನು ಸಹಿಸುವುದಿಲ್ಲ, ಭ್ರಷ್ಟಾಚಾರದಲ್ಲಿ ತೊಡಗುವುದಿಲ್ಲ. ನಮ್ಮದು ಪ್ರಾಮಾಣಿಕ ಸರ್ಕಾರ. ರಾಜಕೀಯ ಕಾರಣಗಳಿಂದ ಸತ್ಯೇಂದ್ರ ಜೈನ್ ಅವರನ್ನು ಗುರಿಯಾಗಿಸಿಕೊಳ್ಳಲಾಗಿದೆ’ ಎಂದು ಹೇಳಿದ್ದಾರೆ. ಜೊತೆಗೆ ‘ನ್ಯಾಯಾಂಗದ ಮೇಲೆ ನಂಬಿಕೆ ಇದೆ. ಬಂಧಿತ ಸಚಿವ ಸತ್ಯೇಂದ್ರ ಜೈನ್ “ಸತ್ಯದ ಮಾರ್ಗ” ಅನುಸರಿಸುತ್ತಾರೆ. ಸ್ವಚ್ಛವಾಗಿ ಹೊರಬರುತ್ತಾರೆ’ ಎಂದು ಕೂಡ ಹೇಳಿದ್ದಾರೆ.
ವಿಜಯ್ ಸಿಂಗ್ಲಾ ಬಂಧನದ ನಂತರ ರ್ಯಾಲಿ ಉದ್ದೇಶಿಸಿ ಭಾಷಣ ಮಾಡುತ್ತಿದ್ದ ಅರವಿಂದ ಕೇಜ್ರಿವಾಲ್ ಅವರು, ತನಿಖಾ ಏಜನ್ಸಿಗಳ ಬಗ್ಗೆ ನಂಬಿಕೆ ಇದೆ. ಪಂಜಾಬಿನ ಆಮ್ ಆದ್ಮಿ ಪಕ್ಷದ ಸರ್ಕಾರವು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತಿದೆ ಎಂದಿದ್ದರು. ದೆಹಲಿಯ ಸತ್ಯೇಂದ್ರ ಜೈನ್ ವಿಷಯದಲ್ಲಿ ಕೇಜ್ರಿವಾಲ್ ತಮ್ಮ ಸಚಿವರ ಮೇಲೆ ನಂಬಿಕೆ ಇಟ್ಟಿದ್ದಾರೆ. ತಮ್ಮ ಪಕ್ಷವು ಏಜೆನ್ಸಿಗಳಿಗಾಗಿ ಕಾಯುವುದಿಲ್ಲ, ಪ್ರಕರಣದಲ್ಲಿ ಅರ್ಹತೆ ಇದ್ದಲ್ಲಿ ಕ್ರಮ ತೆಗೆದುಕೊಳ್ಳುತ್ತಿದ್ದೆವು ಎಂದು ಹೇಳಿದ್ದಾರೆ.
ಇನ್ನೊಂದೆಡೆ ಸತ್ಯೇಂದ್ರ ಜೈನ್ ಬಂಧನದ ನಂತರ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಟ್ವೀಟ್ ಮಾಡಿ ‘ಸತ್ಯೇಂದ್ರ ಜೈನ್ ವಿರುದ್ಧ ಎಂಟು ವರ್ಷಗಳ ಹಿಂದಿನ ಸುಳ್ಳು ಪ್ರಕರಣವನ್ನು ಬಳಸಲಾಗುತ್ತಿದೆ. ಅವರಿಗೆ ಜಾರಿ ನಿರ್ದೇಶನಾಲಯವು ಹಲವು ಬಾರಿ ಸಮನ್ಸ್ ನೀಡಿದೆ. ಕೆಲವು ವರ್ಷಗಳವರೆಗೆ ಯಾವುದೇ ಸಾಕ್ಷ್ಯಾಧಾರಗಳಿಲ್ಲದ ಕಾರಣ ಇಡಿ ಜೈನ್ ಅವರನ್ನು ಕರೆಸುವುದನ್ನು ನಿಲ್ಲಿಸಿತ್ತು. ಈಗ ಸತ್ಯೇಂದ್ರ ಜೈನ್ ಹಿಮಾಚಲ ಪ್ರದೇಶದ ಉಸ್ತುವಾರಿ ಆಗಿರುವುದರಿಂದ ಇಡಿ ಅವರನ್ನು ಗುರಿಯಾಗಿಸಿಕೊಂಡಿದೆ’ ಎಂದಿದ್ದಾರೆ.
ಅದೇ ಟ್ವೀಟ್ನಲ್ಲಿ, ‘ಹಿಮಾಚಲ ಪ್ರದೇಶವನ್ನು ಕಳೆದುಕೊಳ್ಳುವ ಭಯದಿಂದ ಬಿಜೆಪಿ ಸತ್ಯೇಂದ್ರ ಜೈನ್ ಅವರನ್ನು ಬಂಧಿಸಲಾಗಿದೆ. ಇದು ಜೈನ್ ಅವರು ಚುನಾವಣೆ ನಡೆಯುವ ರಾಜ್ಯಕ್ಕೆ ಭೇಟಿ ನೀಡದಂತೆ ನೋಡಿಕೊಳ್ಳುವ ಪ್ರಯತ್ನವಾಗಿದೆ. ಆದರೆ ಪ್ರಕರಣ ಸುಳ್ಳಾಗಿರುವುದರಿಂದ ಸಚಿವರು ಶೀಘ್ರವೇ ಮುಕ್ತರಾಗಲಿದ್ದಾರೆ’ ಎಂದು ತಿಳಿಸಿದ್ದಾರೆ. ಇದಲ್ಲದೆ ಆಮ್ ಆದ್ಮಿ ಪಕ್ಷದ ರಾಜ್ಯಸಭಾ ಸದಸ್ಯ ಸಂಜಯ್ ಸಿಂಗ್ ಅವರು ಪತ್ರಿಕಾಗೋಷ್ಠಿ ನಡೆಸಿ ಸತ್ಯೇಂದ್ರ ಜೈನ್ ಬಂಧನವನ್ನು ‘ರಾಜಕೀಯ ಪ್ರೇರಿತ’ ಎಂದು ಬಣ್ಣಿಸಿದ್ದಾರೆ.
ಬಹಳ ಕುತೂಹಲಕಾರಿ ಸಂಗತಿ ಎಂದರೆ ಇದೇ ಜನವರಿ 23ರಂದೇ ಡಿಜಿಟಲ್ ಮೂಲಕ ಮತನಾಡಿದ್ದ ಅರವಿಂದ್ ಕೇಜ್ರಿವಾಲ್, ‘ನರೇಂದ್ರ ಮೋದಿ ಸರ್ಕಾರವು ಪಂಜಾಬ್ ಚುನಾವಣೆಗೆ ಮುನ್ನ ಸತ್ಯೇಂದ್ರ ಜೈನ್ ಅವರನ್ನು ಬಂಧಿಸಲು ಯೋಜಿಸುತ್ತಿದೆ. ನನಗೆ ಪಕ್ಷದ ಉನ್ನತ ನಾಯಕರು ಅಂತಹ ಸಾಧ್ಯತೆಯ ಬಗ್ಗೆ ಎಚ್ಚರವಹಿಸಿದ್ದಾರೆ. ಅಂತಹ ಯಾವುದೇ ಕ್ರಮಗಳನ್ನು ಎಎಪಿ ಸ್ವಾಗತಿಸುತ್ತದೆ ಮತ್ತು ಕೇಂದ್ರ ಸರ್ಕಾರವು ಜಾರಿ ನಿರ್ದೇಶನಾಲಯ (ಇಡಿ), ಕೇಂದ್ರೀಯ ತನಿಖಾ ದಳ (ಸಿಬಿಐ) ಇತ್ಯಾದಿಗಳನ್ನು ಕಳುಹಿಸಬಹುದು ಮತ್ತು ಅವರನ್ನು ಸೇರಿದಂತೆ ಯಾರನ್ನಾದರೂ ಬಂಧಿಸಬಹುದು’ ಎಂದು ಪ್ರತಿಪಾದಿಸಿದ್ದರು.
ಇವೆಲ್ಲದರ ನಡುವೆ ಅರವಿಂದ ಕೇಜ್ರಿವಾಲ್ ಅವರು ಸತ್ಯೇಂದ್ರ ಜೈನ್ ರಕ್ಷಣೆಗೆ ನಿಂತಿದ್ದಾರೆ ಎಂದು ಬಿಜೆಪಿ ಮತ್ತು ಕಾಂಗ್ರೆಸ್ ಹೇಳುತ್ತಿವೆ. ದೆಹಲಿ ಸಿಎಂ ತಮ್ಮ ಆರೋಗ್ಯ ಸಚಿವರನ್ನು 6 ವರ್ಷಗಳಿಂದ ರಕ್ಷಿಸಿದ್ದಾರೆ ಕೂಡಲೇ ಜೈನ್ ಅವರನ್ನು ವಜಾಗೊಳಿಸಬೇಕೆಂದು ಒತ್ತಡ ಹೇರುತ್ತಿವೆ. ಪಂಜಾಬ್ನ ಮಾಜಿ ಆರೋಗ್ಯ ಸಚಿವ ವಿಜಯ್ ಸಿಂಗ್ಲಾ ಅವರನ್ನು ವಜಾಗೊಳಿಸಿ ಬಂಧಿಸಿರುವುದನ್ನು ವಿರೋಧ ಪಕ್ಷಗಳು ಒತ್ತಿಹೇಳಿ ಜೈನ್ ಅವರಿಗೂ ಅದೇ ಚಿಕಿತ್ಸೆಯನ್ನು ನೀಡಬೇಕು ಎಂದು ವಾದಿಸುತ್ತಿವೆ. ಕಾಂಗ್ರೆಸ್ ಮತ್ತು ಬಿಜೆಪಿ ಒತ್ತಡ ಹೆಚ್ಚುತ್ತಿರುವುದು ಅರವಿಂದ ಕೇಜ್ರಿವಾಲ್ ಅವರನ್ನು ಅಗ್ನಿಪರೀಕ್ಷೆಗೆ ದೂಡಿವೆ.