
ಹಾಸನದಲ್ಲಿ ಮೈಸೂರು ಗಲಭೆ ಪ್ರಕರಣದ ಬಗ್ಗೆ ವಿಪಕ್ಷ ನಾಯಕ ಆರ್. ಅಶೋಕ್ ವಾಗ್ದಾಳಿ ಮಾಡಿದ್ದು, ಸರ್ಕಾರದ ಮಂತ್ರಿ ಮಂಡಲದಲ್ಲಿರುವ ಸಚಿವರು ಎರಡು ಭಾಗವಾಗಿದ್ದಾರೆ. ಒಂದು ಸಿದ್ದರಾಮಯ್ಯ ಬಣ, ಇನ್ನೊಂದು ಡಿ.ಕೆ.ಶಿವಕುಮಾರ್ ಬಣ. ಡಿ.ಕೆ.ಶಿವಕುಮಾರ್ ಒಂದು ದಾರಿ ಹಿಡುದ್ರೆ, ಸಿದ್ದರಾಮಯ್ಯ ಅವರು ಒಂದು ದಾರಿ ಹಿಡಿಯುತ್ತಿದ್ದಾರೆ. ಪೊಲೀಸ್ರ ಮೇಲೆ ಹಲ್ಲೆ ಮಾಡಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ಪೊಲೀಸರು ಮುಂಜಾಗ್ರತಾ ಕ್ರಮ ತೆಗೆದುಕೊಳ್ಳದಿದ್ದರೆ ಇಡೀ ಪೊಲೀಸ್ ಸ್ಟೇಷನ್ ಹೊತ್ತಿ ಉರಿಯುತ್ತಿತ್ತು. ಪೊಲೀಸರು ಎಚ್ಚರಿಕೆಯಿಂದ ಕ್ರಮ ತೆಗೆದುಕೊಂಡು ಯಾವುದೇ ಅನಾಹುತ ಆಗದಂತೆ ಕ್ರಮ ತೆಗೆದುಕೊಂಡಿದ್ದಾರೆ ಎಂದಿದ್ದಾರೆ.

ಕಾಂಗ್ರೆಸ್ನವರು ಮುಸ್ಲಿಮರು ಹಾಕಿರುವ ಭಿಕ್ಷೆಯಲ್ಲಿರುವವರು. ಭಿಕ್ಷೆ ಕೊಟ್ಟವರಿಗೆ ಋಣ ತೀರಿಸಲು ಮುಸ್ಲಿಮರ ಪರವಾಗಿ ನಿಂತಿದ್ದಾರೆ. ಅವನ್ಯಾವನೋ ಕಳ್ಳ ಯಾವ ರೀತಿ ಭಾಷಣ ಮಾಡಿದ್ದಾನೆ. ಬೆಂಕಿ ಹಚ್ಚಲು ಏನೇನು ಹೇಳಬೇಕು ಅಷ್ಟು ಹೇಳಿದ್ದಾರೆ. ಅವನನ್ನು ಇದುವರೆಗೂ ಬಂಧಿಸಿಲ್ಲ. ಎಲ್ಲಾ ಮಂತ್ರಿಗಳು ಪೊಲೀಸರಿಗೆ ಥೂ ಅನ್ನುವ ಪದ ಬಳಸುತ್ತಾರೆ. ಕಾಂಗ್ರೆಸ್ನವರ ಅಪ್ಪನ ಮನೆಯಿಂದ ಪೊಲೀಸರಿಗೆ ಸಂಬಳ ಕೊಡುತ್ತಿಲ್ಲ. ಅವರಿಗೆ ಸ್ಟಾರ್, ಬ್ಯಾಡ್ಜ್ನ್ನು ಕಾಂಗ್ರೆಸ್ನವರು ಅವರ ಅಪ್ಪನ ಮನೆಯಿಂದ ತಂದುಕೊಟ್ಟಿಲ್ಲ. ಜನಗಳ ಟ್ಯಾಕ್ಸ್ನಲ್ಲಿ ಕೊಟ್ಟಿರುವುದು ಎಂದು ಕಿಡಿಕಾರಿದ್ದಾರೆ.

ಪೊಲೀಸರನ್ನು ಹೀನಾಯವಾಗಿ, ಕೆಟ್ಟ ಪದ ಬಳಕೆ ಮಾಡಿ ಅವರ ಆತ್ಮಸ್ಥೈರ್ಯ ಕುಗ್ಗಿಸಿದ್ದಾರೆ. ಪೊಲೀಸರಿಗೆ ಈ ಸರ್ಕಾರದ ಮೇಲೆ ನಂಬಿಕೆ ಹೊರಟು ಹೋಗಿದೆ. ಇಡೀ ಘಟನೆ ಮುಚ್ಚಿ ಹಾಕಲು ಕಾಂಗ್ರೆಸ್ನವರು ಹುನ್ನಾರ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಕೇಸ್ನಲ್ಲಿ ಅಂತಿಮವಾಗಿ ಪೊಲೀಸರೇ ಅಪರಾಧಿಗಳಾಗುತ್ತಾರೆ. ಪೊಲೀಸರನ್ನೇ ಸಸ್ಪೆಂಡ್ ಮಾಡಬಹುದು, ಅಷ್ಟರಮಟ್ಟಿಗೆ ಮುಸ್ಲಿಮರನ್ನು ಓಲೈಸುತ್ತಿದ್ದಾರೆ. ಈ ಸರ್ಕಾರಕ್ಕೆ ನಾಚಿಕೆಯಾಗಬೇಕು, ಮಾನ, ಮರ್ಯಾದೆ ಇದೆಯೇ ಇವರಿಗೆ ಎಂದು ವಾಗ್ದಾಳಿ ಮಾಡಿದ್ದಾರೆ.

ಪೊಲೀಸ್ ಅಧಿಕಾರಿಗಳಿಗೆ ನೈತಿಕೆ ಬೆಂಬಲ ಕೊಡುವುದರ ಬದಲು ತೆಗಳುತ್ತಿದ್ದಾರೆ ಎಂದಿರುವ ಅಶೋಕ್, ಹಾದಿಬೀದಿಯಲ್ಲಿ ಹೋಗುವ ಜನ ಇನ್ಮುಂದೆ ಪೊಲೀಸರನ್ನು ಏಕವಚನದಲ್ಲಿ ಮಾತನಾಡಿಸುತ್ತಾರೆ. ಒಬ್ಬ ಮಂತ್ರಿನೇ ಏಕವಚನದಲ್ಲಿ ಮಾತನಾಡುತ್ತಾರೆ. ಇದು ಇಡೀ ರಾಜ್ಯದ ಪೊಲೀಸರು, ಹಿರಿಯ ಅಧಿಕಾರಿಗಳಿಗೆ ಮಾಡಿದ ಅವಮಾನ ಎಂದಿದ್ದಾರೆ. ಕೂಡಲೇ ಈ ಸರ್ಕಾರ ಪೊಲೀಸರ ಕ್ಷಮೆ ಕೇಳಬೇಕು ಎಂದಿರುವ ಅಶೋಕ್, ಇಲ್ಲವಾದರೆ ಜನ ನಿಮ್ಮನ್ನು ಎಲ್ಲಿಗೆ ಕಳುಹಿಸಬೇಕೋ ಅಲ್ಲಿಗೆ ಗಂಟು, ಮೂಟೆ ಕಟ್ಟಿ ಕಳುಹಿಸುತ್ತಾರೆ ಎಂದು ಟಾಂಟ್ ಕೊಟ್ಟಿದ್ದಾರೆ.