ಲೋಕಸಭಾ ಚುನಾವಣೆಗೆ (MP Election) ದಿನಗಣನೆ ಶುರುವಾಗಿದೆ. ರಾಜಕೀಯ ಪಕ್ಷಗಳು ಗೆಲುವಿನ ನಗೆ ಬೀರಲು ಎಲ್ಲಾ ರೀತಿಯ ಲೆಕ್ಕಚಾರಗಳನ್ನೂ ಹಾಕುತ್ತಿದ್ದಾರೆ.
ಈ ನಡುವೆ ಕಾಂಗ್ರೆಸ್ನಲ್ಲಿ ಸ್ವಹಿತಾಸಕ್ತಿಯ ಲೆಕ್ಕಾಚಾರಗಳೂ ಆರಂಭ ಆಗಿರುವ ಲಕ್ಷಗಳು ಕಾಣಿಸುತ್ತಿವೆ. ಸಿದ್ದರಾಮಯ್ಯ (siddaramaiah) ಹಾಗೂ ಡಿ.ಕೆ ಶಿವಕುಮಾರ್ (DK Shivakumar) ಮಾಧ್ಯಮಗಳ ಎದುರಲ್ಲಿ ಒಗ್ಗಟ್ಟಿನ ಪ್ರದರ್ಶನ ಮಾಡಿದರೂ ಪಕ್ಷದೊಳಗೆ ಇಬ್ಬರ ನಡುವೆ ನಾಯಕತ್ವಕ್ಕಾಗಿ ಪೈಪೋಟಿ ನಡೆಯುತ್ತಲೇ ಇದೆ. ಎರಡೂವರೆ ವರ್ಷದ ಅವಧಿಗೆ ಸಿಎಂ ಅವಧಿ ಎಂದು ಈ ಹಿಂದೆ ಶುರುವಾಗಿದ್ದ ಗುಸುಗುಸು ಪಿಸುಪಿಸು ಮಾತಿಗೆ ಶಕ್ತಿ ಬರಬೇಕಿದ್ದರೆ ಲೋಕಸಭಾ ಚುನಾವಣೆಯೇ ನಿರ್ಣಾಯಕ ಎನ್ನುವುದನ್ನು ಇಬ್ಬರೂ ಘಟಾನುಘಟಿ ನಾಯಕರು ಅರಿತಿದ್ದು, ಶಕ್ತಿ ಮೀರಿ ಶಕ್ತಿ ವೃದ್ಧಿಸಿಕೊಳ್ಳುವ ಎಲ್ಲಾ ಕಸರತ್ತನ್ನೂ ಮಾಡುತ್ತಿದ್ದಾರೆ.
ಸಿದ್ದರಾಮಯ್ಯ ಟೀಂ ಒಡೆದು ಹಾಕಲು ಬಂಡೆ ಸ್ಕೆಚ್
ಡಿ.ಕೆ ಶಿವಕುಮಾರ್, ಮುಂದಿನ ಮುಖ್ಯಮಂತ್ರಿ ಆಗಬೇಕಿದ್ದರೆ ಹಾಲಿ ಸಿಎಂ ಸಿದ್ದರಾಮಯ್ಯ ಅವರನ್ನು ದುರ್ಬಲಗೊಳಿಸಬೇಕಿದೆ. ರಾಜ್ಯ ಕಾಂಗ್ರೆಸ್ನಲ್ಲಿ ತನ್ನದೇ ಶಕ್ತಿ ಹಾಗು ತನ್ನದೇ ಆದ ಹಿಂಬಾಲಕ ಪಡೆಯನ್ನು ಹೊಂದಿರುವ ಸಿದ್ದರಾಮಯ್ಯ ಅಷ್ಟು ಸುಲಭಕ್ಕೆ ಅಧಿಕಾರ ಬಿಟ್ಟು ಕೊಡುತ್ತಾರೆ ಎಂದು ಹೇಳುವುದಕ್ಕೆ ಸಾಧ್ಯವಿಲ್ಲ. ಇದೇ ಕಾರಣದಿಂದ ಡಿಸಿಎಂ ಡಿ.ಕೆ ಶಿವಕುಮಾರ್ ಲೋಕಸಭಾ ಚುನಾವಣೆಯನ್ನೇ ಅಸ್ತ್ರವನ್ನಾಗಿಸಿಕೊಂಡು ಸಿದ್ದರಾಮಯ್ಯ ಅಂಡ್ ಗ್ಯಾಂಗ್ ವಿರುದ್ಧ ಬಲೆ ಹೆಣೆಯುತ್ತಿದ್ದಾರೆ. ಈ ಬಲೆಯಲ್ಲಿ ಸಿಕ್ಕಿ ಬಿದ್ದವರು ರಾಜ್ಯರಾಜಕಾರಣ ಬಿಟ್ಟು ದೆಹಲಿ ಸೇರುತ್ತಾರೆ. ಅಥವಾ ಸೋಲುಂಡ ನಾಯಕ ಎನ್ನುವ ಪಟ್ಟವನ್ನು ಕಟ್ಟಿಕೊಂಡು ಪಕ್ಷದಲ್ಲಿ ಪ್ರಾಬಲ್ಯ ಕಳೆದುಕೊಳ್ಳಲಿದ್ದಾರೆ.
ಡಿಸಿಎಂ ಡಿಕೆಶಿ ರಾಡಾರ್ ಒಳಗೆ ಯಾರೆಲ್ಲಾ ಇದ್ದಾರೆ..?
ಸಿಎಂ ಸಿದ್ದರಾಮಯ್ಯ ಬೆನ್ನೆಲುಬಾಗಿ ನಿಲ್ಲುವ ನಾಯಕರಾದ ಹೆಚ್.ಸಿ ಮಹದೇವಪ್ಪ, ಸತೀಶ್ ಜಾರಕೀಹೊಳಿ, ಕೆ.ಎನ್ ರಾಜಣ್ಣ, ಜಮೀರ್ ಅಹಮದ್ ಖಾನ್, ಕೆ.ಹೆಚ್ ಮುನಿಯಪ್ಪ, ಎಂ.ಬಿ ಪಾಟೀಲ್ ಸೇರಿದಂತೆ ಹಾಲಿ ಸಚಿವರಾಗಿರುವ ನಾಯಕರು ಡಿ.ಕೆ ಶಿವಕುಮಾರ್ ನೇರ ದೃಷ್ಟಿಯಲ್ಲಿದ್ದಾರೆ. ಇವರನ್ನು ರಾಜ್ಯರಾಜಕಾರಣದಿಂದ ರಾಷ್ಟ್ರರಾಜಕಾರಣಕ್ಕೆ ಕಳುಹಿಸುವುದು ಡಿಸಿಎಂ ಮುಂದಿರುವ ಲೆಕ್ಕಾಚಾರ. ಇದೇ ಕಾರಣಕ್ಕೆ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡುವಂತೆ ಸಚಿವರುಗಳಿಗೆ ಹೈಕಮಾಂಡ್ ನಾಯಕರ ಮೂಲಕ ಒತ್ತಡ ಹಾಕಿಸುವ ಕೆಲಸ ಮಾಡುತ್ತಿದ್ದಾರೆ. ಒಂದು ವೇಳೆ ಡಿ.ಕೆ ಶಿವಕುಮಾರ್ ಲೆಕ್ಕಾಚಾರ ಯಶಸ್ವಿ ಆದರೆ, ಮುಂದಿನ ದಿನಗಳಲ್ಲಿ ಡಿ.ಕೆ ಶಿವಕುಮಾರ್ ಮುಖ್ಯಮಂತ್ರಿ ಪಟ್ಟಕ್ಕೆ ಏರುವುದು ಖಚಿತ.
ಕಾಂಗ್ರೆಸ್ ಸೋಲುಂಡರೂ ಡಿಕೆಶಿಗೆ ಲಾಭವೇ ಆಗುತ್ತಾ..?
ಹಾಲಿ ಸಚಿವರಾಗಿರುವ ಎಲ್ಲಾ ನಾಯಕರು ಇದೀಗ ಸಂಸತ್ ಚುನಾವಣೆಯಲ್ಲಿ ಸ್ಪರ್ಧೆ ಮಾಡಬೇಕು ಎಂದಾದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ. ಒಂದು ವೇಳೆ ಚುನಾವಣೆಯಲ್ಲಿ ಗೆದ್ದರೆ ಡಿ.ಕೆ ಶಿವಕುಮಾರ್, ನಾನು ಟಿಕೆಟ್ ಕೊಟ್ಟು ಆಯ್ಕೆ ಮಾಡಿದ್ದು ಸರಿಯಾಗಿದೆ. ಬೇರೆಯವರಿಗೆ ಟಿಕೆಟ್ ಕೊಟ್ಟಿದ್ದರೆ ಗೆಲ್ಲುತ್ತಿರಲಿಲ್ಲ. ನಮಗೆ ಚುನಾವಣೆ ಗೆಲ್ಲುವುದು ಅಷ್ಟೇ ಮುಖ್ಯವೇ ಹೊರತು ಬೇರೇನೂ ಇಲ್ಲ ಎಂದು ಸಮರ್ಥನೆ ಮಾಡಿಕೊಳ್ಳಬಹುದು. ಅದೇ ರೀತಿ ಹಾಲಿ ಸಚಿವರು ಒಂದು ವೇಳೆ ಲೋಕಸಭಾ ಚುನಾವಣೆಯಲ್ಲಿ ಸೋಲುಂಡರೆ ರಾಜ್ಯದಲ್ಲಿ ಪ್ರಭಾವ ಕಳೆದುಕೊಳ್ಳಲಿದ್ದಾರೆ. ಸಿದ್ದರಾಮಯ್ಯ ಸಿಎಂ ಆಗಿರುವ ಕಾರಣಕ್ಕೆ ಮಂತ್ರಿಗಳನ್ನಾಗಿ ಮಾಡಿದ್ದರು. ರಾಜ್ಯದಲ್ಲಿ ಅವರ ಪ್ರಭಾವವಿಲ್ಲ. ಸ್ವತಃ ತಾವೇ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಾಗಲಿಲ್ಲ ಎಂದ ಮೇಲೆ ಅವರನ್ನು ಮಂತ್ರಿಗಳನ್ನಾಗಿ ಮಾಡಿ ಏನು ಪ್ರಯೋಜನ..? ಎನ್ನುವ ಪ್ರಶ್ನೆಯನ್ನು ಹೈಕಮಾಂಡ್ ನಾಯಕರ ಮುಂದಿಟ್ಟು ತಾನು ಪ್ರಭಾವಿ ಆಗುವ ಲೆಕ್ಕಾಚಾರ ಡಿಸಿಎಂ ಮುಂದಿದೆ ಎನ್ನುವುದು ರಾಜಕೀಯ ಲೆಕ್ಕಾಚಾರ ಬಲ್ಲ ಪರಿಣಿತರ ಮಾತು.
-ಕೃಷ್ಣಮಣಿ
#Karnataka #mpelection #election #congress #dkshivakumar