ಸಿಎಂ ಸಿದ್ದರಾಮಯ್ಯ ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದು, ಡಿ.ಕೆ ಶಿವಕುಮಾರ್ ವಿರುದ್ಧದ ಪ್ರಕರಣವನ್ನು ವಾಪಸ್ ಪಡೆದುಕೊಳ್ಳಲು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿದೆ. ಡಿಸಿಎಂ ಡಿ.ಕೆ ಶಿವಕುಮಾರ್ ವಿರುದ್ಧ ಸಿಬಿಐ ತನಿಖೆಗೆ ವಹಿಸಿರುವ ಪ್ರಕರಣವನ್ನು ಹಿಂಪಡೆಯುವುದಕ್ಕೆ ಕಾಂಗ್ರೆಸ್ ಸರ್ಕಾರ ನಿರ್ಧಾರ ಮಾಡಿದೆ. ಪ್ರಕರಣ ಹಿಂಪಡೆಯುವ ಬಗ್ಗೆ ಗೃಹ ಇಲಾಖೆಯಿಂದ ಪ್ರಸ್ತಾವನೆ ಸಲ್ಲಿಸಿ ಸಿಬಿಐ ತನಿಖೆಗೆ ವಹಿಸಿರುವ ಆದೇಶ ಹಿಂಪಡೆಯುವ ಕುರಿತು ಚರ್ಚೆ ಮಾಡಲಾಗಿದೆ. ಗೃಹ ಇಲಾಖೆಯಿಂದ ಸಚಿವ ಸಂಪುಟಕ್ಕೆ ಬಂದಿದ್ದ ಪ್ರಸ್ತಾವನೆಗೆ ಒಪ್ಪಿಗೆ ಕೊಡಲಾಗಿದೆ. ಪ್ರಕರಣ ಹಿಂಪಡೆದು ರಾಜ್ಯ ಪೊಲೀಸ್ ಇಲಾಖೆಗೆ ಅಥವಾ ಲೋಕಾಯುಕ್ತ ಪೊಲೀಸರ ತನಿಖೆಗೆ ಹಸ್ತಾಂತರಿಸಲು ಚಿಂತನೆ ಮಾಡಲಾಗಿದೆ.
ಸಂಪುಟದಲ್ಲಿ ಏನೇನು ಚರ್ಚೆ ಆಯ್ತು..? ಅಂತಿಮ ನಿರ್ಧಾರ ಏನು..?
ರಾಜ್ಯ ಗೃಹ ಇಲಾಖೆಯಿಂದ ಸಚಿವ ಸಂಪುಟದ ಅನುಮೋದನೆ ಕಡತ ರವಾನೆ ಮಾಡಿದ್ದು, ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಲಾಯ್ತು. ಕ್ಯಾಬಿನೆಟ್ ಸಭೆ ಬಳಿಕ ಮಾತನಾಡಿದ ಕಾನೂನು ಸಚಿವ ಹೆಚ್.ಕೆ ಪಾಟೀಲ್, ಡಿ.ಕೆ ಶಿವಕುಮಾರ್ ವಿರುದ್ಧದ ಸಿಬಿಐ ತನಿಖೆ ಬಗ್ಗೆ ಹಿಂದಿನ ಸರ್ಕಾರ ನಿರ್ಣಯ ಮಾಡಿತ್ತು. ಮುಖ್ಯಮಂತ್ರಿಗಳ ಮೌಖಿಕ ಆದೇಶ, ಕಾನೂನಾತ್ಮಕವಾಗಿ ಸ್ಪೀಕರ್ರಿಂದ ನಿರ್ಣಯ ಪಡೆದುಕೊಳ್ಳದೇ ಸಿಬಿಐ ತನಿಖೆ ಕೊಟ್ಟಿದ್ದರು. ಹಿಂದಿನ ಅಡ್ವಕೇಟ್ ಜನರಲ್ ಹಾಗೂ ನಮ್ಮ ಸರ್ಕಾರದ ಅಡ್ವಕೇಟ್ ಜನರಲ್, ಅವರ ಅಭಿಪ್ರಾಯವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಸ್ಪೀಕರ್ ಅವರಿಂದ ಪರವಾನಗಿ ಪಡೆಯದೆ ಕಾನೂನು ಬಾಹಿರವಾಗಿ ಬಿಜೆಪಿ ಸರ್ಕಾರ ತೆಗೆದುಕೊಂಡ ಕ್ರಮ ಕಾನೂನಿನಿಗೆ ವಿರುದ್ಧ ಎಂದು ಪರಿಗಣಿಸಲಾಗಿದೆ. ಇದರ ಬಗ್ಗೆ ಎರಡು ಮೂರು ದಿನಗಳಲ್ಲಿ ಆದೇಶ ಮಾಡ್ತೀವಿ. ಆದೇಶ ಶುಕ್ರವಾರವೋ.. ಶನಿವಾರವೋ ಹೊರ ಬೀಳಲಿದೆ. ಹಿಂದಿನ ಸರ್ಕಾರ ತೆಗೆದುಕೊಂಡಿರುವ ನಿರ್ಧಾರ ಕಾನೂನು ಬಾಹೀರ ಅಂತ ಸಂಪುಟದಲ್ಲಿ ನಿರ್ಣಯಿಸಿದ್ದೇವೆ ಎಂದಿದ್ದಾರೆ.
ಸಭೆಯಲ್ಲಿ ಗುಟ್ಟಾಗಿ ಚರ್ಚೆ ಮಾಡಿದ್ದು ಏನು..? ಯಾಕೆ..?
ಡಿ.ಕೆ ಶಿವಕುಮಾರ್ ವಿರುದ್ಧದ ಕೇಸನ್ನು ಸಿಬಿಐಗೆ ಹಸ್ತಾಂತರ ಮಾಡಿದ್ದ ಬಿಜೆಪಿ ಸರ್ಕಾರ ನಿರ್ಧಾರವನ್ನು ವಾಪಸ್ ಪಡೆಯುವ ಮುನ್ನ ಸಚಿವ ಸಂಪುಟದಲ್ಲಿ ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಕೊಟ್ಟ ಅಭಿಪ್ರಾಯ ಆಧರಿಸಿ ಆದೇಶ ಹಿಂಪಡೆಯುವ ನಿರ್ಧಾರ ಮಾಡಲಾಯ್ತು. ನವೆಂಬರ್ 21ರಂದು ಅಭಿಪ್ರಾಯ ನೀಡಿದ್ದ ಶಶಿಕಿರಣ್ ಶೆಟ್ಟಿ ಅವರ ಅಭಿಪ್ರಾಯವನ್ನು, 2019ರಲ್ಲಿ ರಾಜ್ಯದಲ್ಲಿ ಅಸ್ತಿತ್ವದಲ್ಲಿದ್ದ ಬಿಜೆಪಿ ಸರ್ಕಾರ ಹೊರಡಿಸಿದ್ದ ಆದೇಶಕ್ಕೆ ಕಾನೂನಾತ್ಮಕ ಅಂಶಗಳ ಕುರಿತು ಅಡ್ವೋಕೇಟ್ ಜನರಲ್ ಅವರ ಅಭಿಪ್ರಾಯ ಮಂಡಿಸಿದ್ದಾರೆ. ಇದೀಗ ಅಡ್ವೊಕೇಟ್ ಜನರಲ್ ವರದಿ ಆಧರಿಸಿ ಸಚಿವ ಸಂಪುಟ ನಿರ್ಧಾರ ತೆಗೆದುಕೊಂಡಿದೆ. ಡಿ.ಕೆ ಶಿವಕುಮಾರ್ ವಿರುದ್ಧದ ಪ್ರಕರಣವನ್ನು ಸಿಬಿಐ ತನಿಖೆಯಿಂದ ಹಿಂಪಡೆಯಲು ಸಂಪುಟ ಸದಸ್ಯರು ಸಹಮತ ವ್ಯಕ್ತಪಡಿಸಿದ್ದಾರೆ. ರಾಜಕೀಯ ಪ್ರೇರಿತ ಪ್ರಕರಣ ಅಂತ ಸಂಪುಟ ಸದಸ್ಯರು ಅಭಿಪ್ರಾಯ ಪಟ್ಟಿದ್ದಾರೆ. ಸಚಿವರ ಜೊತೆ ಅನೌಪಚಾರಿಕವಾಗಿ ಚರ್ಚೆ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, 30 ನಿಮಿಷಗಳಿಗೂ ಹೆಚ್ಚು ಸಮಯ ಚರ್ಚೆ ಮಾಡಿದ್ದಾರೆ. ಈ ವೇಳೆ ಸಚಿವರ ಆಪ್ತ ಸಹಾಯಕರನ್ನು ಹೊರಗೆ ಕಳುಹಿಸಿ ಮಾತುಕತೆ ನಡೆಸಿದ್ದಾರೆ ಮುಖ್ಯಮಂತ್ರಿ ಸಿದ್ದರಾಮಯ್ಯ.
ಹೈಕೋರ್ಟ್ ತಡೆಯಾಜ್ಞೆ ನೀಡದ ಪ್ರಕರಣದಲ್ಲಿ ಉರುಳಿಲ್ವಾ..?
2018 ರಲ್ಲಿ ಡಿಕೆಶಿ ವಿರುದ್ಧ ಎಫ್ಐಆರ್ ದಾಖಲಾಗಿತ್ತು. 2019ರಲ್ಲಿ ಪ್ರಕರಣವನ್ನು ಸಿಬಿಐಗೆ ನೀಡಲು ಅಂದಿನ ಸಿಎಂ ಯಡಿಯೂರಪ್ಪ ಅನುಮೋದನೆ ನೀಡಿದ್ದರು. 25-09-2019ರಲ್ಲಿ ಸಿಬಿಐ ತನಿಖೆಗೆ ವಹಿಸಲು ಅಂದಿನ ಸರ್ಕಾರ ಆದೇಶ ಮಾಡಿತ್ತು.
![](https://pratidhvani.com/wp-content/uploads/2023/11/oocp55t_siddaramaiah-shivakumar-_625x300_18_May_23-1024x630.jpg)
ಸರ್ಕಾರದ ಆದೇಶ ಪ್ರಶ್ನಿಸಿ ಹೈಕೋರ್ಟ್ನಲ್ಲಿ ಡಿ.ಕೆ ಶಿವಕುಮಾರ್ ರಿಟ್ ಅರ್ಜಿ ಸಲ್ಲಿಸಿದ್ದರು. ಆದರೆ ಏಪ್ರಿಲ್ 2023ರಲ್ಲಿ ರಿಟ್ ಅರ್ಜಿ ವಜಾಗೊಳಿಸಿತ್ತು ಕರ್ನಾಟಕ ಹೈಕೋರ್ಟ್. ಹೈಕೋರ್ಟ್ ಏಕಸದಸ್ಯ ಪೀಠದ ತೀರ್ಪಿನ ವಿರುದ್ಧ ಡಿ.ಕೆ ಶಿವಕುಮಾರ್ ಮೇಲ್ಮನವಿ ಹೋಗಿದ್ದಾರೆ. ಅತ್ತ ಸುಪ್ರೀಂಕೋರ್ಟ್ ಸೂಚನೆಯಂತೆ ಎರಡು ವಾರದಲ್ಲಿ ವಿಚಾರಣೆ ಪೂರ್ಣಗೊಳಿಸಲು ಹೈಕೋರ್ಟ್ ವಿಭಾಗೀಯ ಪೀಠ ವಿಚಾರಣೆ ಚುರುಕುಗೊಳಿಸಿದೆ. ಈ ಸಮಯದಲ್ಲಿ ಸರ್ಕಾರದ ಈ ನಿರ್ಧಾರ ಎಷ್ಟು ಸಮಂಜಸ ಅನ್ನೋ ಪ್ರಶ್ನೆ ಕಾಡುತ್ತಿದೆ. ಒಂದು ವೇಳೆ ಬಿಜೆಪಿ ಸರ್ಕಾರ ಕಾನೂನು ಬಾಹೀರವಾಗಿ ನಿರ್ಧಾರ ತೆಗೆದುಕೊಂಡಿದ್ದರೆ ಅದನ್ನು ಕೋರ್ಟ್ ಗಮನಕ್ಕೆ ತರಬಹುದಿತ್ತು ಅಲ್ಲವೇ..? ಡಿ.ಕೆ ಶಿವಕುಮಾರ್ ಅವರ ಒತ್ತಡಕ್ಕೆ ಮಣಿದು ಸಿದ್ದರಾಮಯ್ಯ ಈ ರೀತಿಯ ನಿರ್ಧಾರ ತೆಗೆದುಕೊಂಡರೆ..? ಈ ಎಲ್ಲಾ ಪ್ರಶ್ನೆಗಳಿಗೂ ಸಿದ್ದರಾಮಯ್ಯನೇ ಉತ್ತರ ಕೊಡಬೇಕಿದೆ.
ಕೃಷ್ಣಮಣಿ