ರಾಜ್ಯ ವಿಧಾನಸಭೆ ಚುನಾವಣೆಗೆ ಆಡಳಿತಾರೂಢ ಬಿಜೆಪಿ ಭರ್ಜರಿಯಾಗಿ ತಯಾರಿ ಮಾಡಿಕೊಳ್ತಿದೆ. ಕಾಂಗ್ರೆಸ್ ಹಾಗು ಜೆಡಿಎಸ್ಗೆ ಟಾಂಗ್ ಕೊಡಲು ರಾಜ್ಯ ಬಿಜೆಪಿ ಕಚೇರಿಯಲ್ಲಿ ಮಹತ್ವದ ಕೋರ್ ಕಮಿಟಿ ಸಭೆ ನಡೆಸಲಾಗಿದೆ. ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಪಕ್ಷದ ಪ್ರಮುಖ ನಾಯಕರು ಪಾಲ್ಗೊಂಡಿದ್ದರು. ಚುನಾವಣೆ ಸಿದ್ಧತೆ ಹಾಗು ರಾಜ್ಯದ ನಾಲ್ಕು ದಿಕ್ಕುಗಳಿಂದ ನಡೆಯುವ ರಥಯಾತ್ರೆಯ ದಿನಾಂಕ ಮತ್ತು ಪಕ್ಷ ಹಾಗೂ ಸರ್ಕಾರದ ಮಟ್ಟದ ಸಮನ್ವಯತೆ, ಬಜೆಟ್ನಲ್ಲಿ ಇರಬೇಕಾದ ಪ್ರಮುಖ ಅಂಶಗಳ ಬಗ್ಗೆ ಚರ್ಚೆ ನಡೆಸಲಾಯ್ತು. ರಾಷ್ಟ್ರೀಯ ನಾಯಕರ ಪ್ರವಾಸದ ಬಗ್ಗೆಯೂ ಚರ್ಚೆ ನಡೆದಿದೆ. ಜೊತೆಗೆ ಬಿಜೆಪಿ ಯಾವ ಕ್ಷೇತ್ರದಲ್ಲಿ ಗೆಲುವು ಸಾಧಿಸಲಿದೆ. ಇನ್ನು ಬೇರೆ ಯಾವ ಕ್ಷೇತ್ರದಲ್ಲಿ ಗೆಲುವು ಸಾಧಿಸುವುದು ಕಷ್ಟ ಎನ್ನುವ ಜೊತೆಗೆ ಸ್ವಲ್ಪ ಹೆಚ್ಚು ಪರಿಶ್ರಮ ಹಾಕಿದರೆ ಗೆಲ್ಲುವ ಸಾಧ್ಯತೆಯಿದೆ ಅನ್ನೋ ಬಗ್ಗೆ ಕ್ಷೇತ್ರಗಳನ್ನು A,B,C,D ಎಂದು ವಿಂಗಡಣೆ ಮಾಡಲಾಗಿದೆ.
ರಾಜ್ಯದ ಪ್ರತಿಕ್ಷೇತ್ರಕ್ಕೂ ಕೇಸರಿ ಸೇನೆಯ ಯಾತ್ರೆ..!
ರಾಜ್ಯದಲ್ಲಿ ಆಡಳಿತ ವಿರೋಧದ ನಡುವೆಯೂ ಮತ್ತೆ ಅಧಿಕಾರಕ್ಕೆ ಬರುವ ಚಿಂತನೆಯಲ್ಲಿರುವ ಬಿಜೆಪಿ, ರಾಜ್ಯದ 224 ಕ್ಷೇತ್ರಗಳಲ್ಲೂ ವಿಜಯ ಸಂಕಲ್ಪ ಯಾತ್ರೆ ಮಾಡಲು ನಿರ್ಧಾರ ಮಾಡಿದೆ. ಕಾಂಗ್ರೆಸ್ಗೆ ಕೌಂಟರ್ ಕೊಡಲು ಕೇಸರಿ ಪಡೆ ಪ್ಲಾನ್ ಮಾಡಿದ್ದು, ದಾವಣಗೆರೆಯಲ್ಲಿ ನಡೆದಿದ್ದ ಕಾಂಗ್ರೆಸ್ ಸಿದ್ದರಾಮೋತ್ಸವಕ್ಕೆ ಕೌಂಟರ್ ಸಮಾವೇಶ ಹಮ್ಮಿಕೊಳ್ಳಲು ನಿರ್ಧಾರ ಮಾಡಲಾಗಿದೆ. ದಾವಣಗೆರೆಯಲ್ಲಿಯೇ ಬೃಹತ್ ಸಮಾವೇಶ ಮಾಡಲಿದ್ದು, ‘ಕೇಸರಿ ಮಹಾ ಸಂಗಮ’ ಹೆಸರಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗ್ತಿದೆ. ಮಾರ್ಚ್ 18, 19 ಅಥವಾ 20ರಂದು ಈ ಕಾರ್ಯಕ್ರಮ ನಡೆಯಲಿದೆ. ರಾಜ್ಯದ ನಾಲ್ಕು ಭಾಗಗಳಿಂದಲೂ ಆಗಮಿಸುವ ರಥಯಾತ್ರೆ ದಾವಣಗೆರೆಯಲ್ಲಿ ಸಂಗಮ ಆಗುವಂತೆ ಪ್ಲ್ಯಾನ್ ಮಾಡಿದ್ದು, ದಾವಣಗೆರೆಯ ಕೇಸರಿ ಮಹಾ ಸಂಗಮ ಕಾರ್ಯಕ್ರಮಕ್ಕೆ ರಾಷ್ಟ್ರೀಯ ನಾಯಕರನ್ನ ಕರೆಸಲು ನಿರ್ಧಾರ ಮಾಡಲಾಗಿದೆ. ಸದ್ಯಕ್ಕೆ ಬಿಜೆಪಿ ಲೆಕ್ಕಾಚಾರದ ಪ್ರಕಾರ ಮುಂದಿನ ಬಾರಿ ಅಧಿಕಾರಕ್ಕೆ ಬರುವುದು ಕಷ್ಟ ಎನ್ನುವುದನ್ನು ಬಿಜೆಪಿ ಸಭೆಯಲ್ಲಿ ಚರ್ಚೆ ಮಾಡಲಾಗಿದೆ.
A,B,C,D ಎಂದು ಕ್ಷೇತ್ರಗಳ ವರ್ಗೀಕರಣ..!
ರಾಜ್ಯದಲ್ಲಿರುವ 224 ಕ್ಷೇತ್ರಗಳಿಗೆ A,B,C,D ಎಂದು ಅಕ್ಷರಗಳನ್ನು ನೀಡಿದ್ದು, ಅದರಲ್ಲಿ ಗೆಲ್ಲುವ, ಸೋಲುವ ಹಾಗು ಗೆಲ್ಲು ಸಾಧ್ಯವೇ ಇಲ್ಲ ಎನ್ನುವ ಕ್ಷೇತ್ರಗಳನ್ನು ವಿಂಗಡಿಸಿದ್ದಾರೆ. A ನಲ್ಲಿ ಸುಮಾರು 60 ರಿಂದ 65 ಕ್ಷೇತ್ರಗಳು ಬಂದಿದ್ದು, ಈ ಕ್ಷೇತ್ರಗಳಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಗಳು ಗೆದ್ದೇ ಗೆಲ್ಲುತ್ತಾರೆ ಎನ್ನಲಾಗಿದೆ. ಇನ್ನು B ಗುಂಪಿನಲ್ಲಿ 25 ರಿಂದ 30 ಕ್ಷೇತ್ರಗಳು ಇದ್ದು, ಈ ಕ್ಷೇತ್ರದಲ್ಲಿ ಬಿಜೆಪಿ ನಾಯಕರು ಹೆಚ್ಚು ಶ್ರಮ ಹಾಕಬೇಕು. ಅಬ್ಬರದ ಪ್ರಚಾರ ಮಾಡಬೇಕು, ಆಗ ಮಾತ್ರ ಗೆಲ್ಲುವುದು ಸಾಧ್ಯ. ಒಂದು ವೇಳೆ ಕಾಂಗ್ರೆಸ್, ಜೆಡಿಎಸ್ ಮಣಿಸಲು ಸಾಧ್ಯವಾದ್ರೆ ಈ ಕ್ಷೇತ್ರಗಳು ಬಿಜೆಪಿ ಪಾಲಾಗಲಿವೆ. ಇನ್ನುಳಿದ C ಮತ್ತು D ವಿಭಾಗದ ಕ್ಷೇತ್ರಗಳು ಕಾಂಗ್ರೆಸ್ ಮತ್ತು ಜೆಡಿಎಸ್ ಅಭ್ಯರ್ಥಿಗಳು ಆಯ್ಕೆಯಾಗುವ ಕ್ಷೇತ್ರ ಗಳು. ಈ ಕ್ಷೇತ್ರಗಳಲ್ಲಿ ತಂತ್ರಗಾರಿಕೆ ಮಾಡಿ ಒಂದಿಷ್ಟು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದರೆ ಮಾತ್ರ ಬಿಜೆಪಿ ಅಧಿಕಾರಕ್ಕೆ ಬರಬಹುದು ಅನ್ನೋ ಲೆಕ್ಕಾಚಾರ ಮಾಡಲಾಗಿದೆ. ಅದೇ ಕಾರಣಕ್ಕಾಗಿ ಬಿಜೆಪಿ C ಮತ್ತು D ವಿಭಾಗದ ಕ್ಷೇತ್ರಗಳಲ್ಲಿ ಹೆಚ್ಚು ತಂತ್ರಗಾರಿಕೆ ಮಾಡಲು ಯೋಜನೆ ರೂಪಿಸುತ್ತಿದೆ.
ಬಿಜೆಪಿ ಲೆಕ್ಕಾಚಾರ ಪಕ್ಕಾ, ಕಾಂಗ್ರೆಸ್ ಹೇಳ್ತಿರೋದು ಇಷ್ಟೆ..!
ರಾಜ್ಯದಲ್ಲಿ ಅಧಿಕಾರ ಹಿಡಿಯುವ ಉಮೇದಿನಲ್ಲಿ ಇರುವ ಕಾಂಗ್ರೆಸ್ ಕೂಡ ಬಿಜೆಪಿಗೆ ಸಿಗೋದು ಕೇವಲ 60 ಸ್ಥಾನಗಳು ಮಾತ್ರ. ಇನ್ನುಳಿದ ಕ್ಷೇತ್ರದಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸಿ ಅಧಿಕಾರ ಹಿಡಿಯುತ್ತೇವೆ. ಜೆಡಿಎಸ್ ಒಂದಿಷ್ಟು ಕ್ಷೇತ್ರದಲ್ಲಿ ಗೆಲುವುದು ಸಾಧಿಸುತ್ತದೆ. ಈ ಬಾರಿ ಬಿಜೆಪಿ ಅಧಿಕಾರ ಕಳೆದುಕೊಳ್ಳಲಿದೆ. ನಾವು ರಾಜ್ಯದಲ್ಲಿ ಅಧಿಕಾರ ನಡೆಸುತ್ತೇವೆ ಎಂದು ರಾಜ್ಯಾದ್ಯಂತ ಪ್ರಚಾರ ಮಾಡುತ್ತಿದೆ. ಕಾಂಗ್ರೆಸ್ ಪ್ರಚಾರ ಒಂದು ಕಡೆ, ಬಿಜೆಪಿ ಸಭೆಯಲ್ಲಿ ಚರ್ಚೆ ಆಗಿರುವ ಮಾಹಿತಿ ಮತ್ತೊಂದು ಕಡೆ ಎಲ್ಲವೂ ತಾಳೆಯಾಗುತ್ತಿದೆ. ಬಿಜೆಪಿ ಹಾಗು ಕಾಂಗ್ರೆಸ್ ಲೆಕ್ಕಾಚಾರ ಒಂದೇ ಆಗಿದ್ದು, ಬಿಜೆಪಿ 60 ರಿಂದ 65 ಸ್ಥಾನಗಳಿಗೆ ನಿಂತು ಹೋದರೆ ಇನ್ನುಳಿದ 160 ಕ್ಷೇತ್ರಗಳಲ್ಲಿ ಕಾಂಗ್ರೆಸ್ 100ರ ಗಡಿ ದಾಟುವುದು ಸುಲಭ ಅನ್ನೋ ಮಾತುಗಳು ಕೇಳಿಬರುತ್ತಿವೆ. ಇನ್ನು 35 ರಿಂದ 40 ಸ್ಥಾನಗಳಲ್ಲಿ ಜೆಡಿಎಸ್ ಗೆದ್ದರೂ ಮೈತ್ರಿ ಸರ್ಕಾರ ಆಡಳಿತಕ್ಕೆ ಬರಲ್ಲ. ಕಾಂಗ್ರೆಸ್ ಏಕಾಂಗಿಯಾಗಿ ಅಧಿಕಾರ ಹಿಡಿಯಲಿದೆ. ಆದರೆ ಕಾಂಗ್ರೆಸ್ 100ರ ಆಸುಪಾಸಿನಲ್ಲಿ ನಿಂತು ಹೋಗಿ ಜೆಡಿಎಸ್ 50 ರಿಂದ 50 ಸ್ಥಾನಗಳನ್ನು ಗೆದ್ದು ಬೀಗಿದರೆ ಮತ್ತೆ ಕುಮಾರಸ್ವಾಮಿ ಆಡಳಿತ ರಾಜ್ಯದಲ್ಲಿ ನಡೆಯೋದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎನ್ನಬಹುದು.