ನರೇಂದ್ರ ಮೋದಿಯವರೇ, ಗಂಗೆಯಲ್ಲಿ ರಾಶಿರಾಶಿ ಹೆಣಗಳು ತೇಲುತ್ತಿವೆ, ಈ ಸಂಧರ್ಭದಲ್ಲಿ ನಿಮ್ಮ ಅನುಪಸ್ಥಿತಿ ಕಾಡುತ್ತಿದೆ. ಎಲ್ಲಿದ್ದೀರಿ? ಎಂದು ಒಕ್ಕೂಟ ವ್ಯವಸ್ಥೆಯ ಪ್ರಧಾನಿ ಮೋದಿಯವರನ್ನು ಕೆಆರ್ಎಸ್ ಪಕ್ಷದ ರಾಜ್ಯಾಧ್ಯಕ್ಷ ರವಿ ಕೃಷ್ಣಾ ರೆಡ್ಡಿ ಪ್ರಶ್ನಿಸಿದ್ದಾರೆ.
ಈ ಮಹಾವಿಪತ್ತಿನ ಸಂದರ್ಭದಲ್ಲಿ ನೀವಷ್ಟೆ ಅಲ್ಲ, ಇಡೀ ಕೇಂದ್ರ/ಒಕ್ಕೂಟ ಸರ್ಕಾರವೆ ನಾಪತ್ತೆಯಾಗಿದೆ ಎಂದು ಜನ ಭಾವಿಸಿದ್ದಾರೆ. ಹಾಗಾಗಿಯೇ ಸರ್ವೋಚ್ಚ ನ್ಯಾಯಾಲಯ ಇಂದು ಕೇಂದ್ರ ಸರ್ಕಾರಕ್ಕೆ ನಿರ್ದೇಶನಗಳನ್ನು ನೀಡಿ ಸೋಂಕನ್ನು ಮತ್ತು ಆರೋಗ್ಯ ತುರ್ತುಪರಿಸ್ಥಿತಿಯನ್ನು ನಿಭಾಯಿಸಲು ಪ್ರಯತ್ನಿಸುತ್ತಿದೆ. ಇಲ್ಲವಾದಲ್ಲಿ ದೇಶದ ಜನರಿಗೆ ಅಂದಂದಿನ ಮಾಹಿತಿ ನೀಡಿ ವಿಶ್ವಾಸ ತುಂಬಬೇಕಾದ ಕೇಂದ್ರದ ಆರೋಗ್ಯ ಸಚಿವರು ಮತ್ತು ನೀವು ಎಲ್ಲಿದ್ದೀರಿ? ಏನು ಮಾಡುತ್ತಿದ್ದೀರಿ? ಎಂದು ಅವರು ಕೇಳಿದ್ದಾರೆ.
ಅಮೆರಿಕದಲ್ಲಿ ಕೋವಿಡ್-19 ಸೋಂಕು ತಾರಕಕ್ಕೆ ಹೋಗುತ್ತಿದ್ದಾಗ ಅಲ್ಲಿಯ ರಾಷ್ಟ್ರಾಧ್ಯಕ್ಷ ಆಗಿದ್ದ ನಿಮ್ಮ ಆಪ್ತ ಸ್ನೇಹಿತ ಡೊನಾಲ್ಡ್ ಟ್ರಂಪ್ ಸಹ ಮಾಧ್ಯಮದ ಮುಂದೆ ಬಂದು ಒಂದಷ್ಟು ದಿನಗಳ ಕಾಲ ಪ್ರತಿದಿನ ಮಾಹಿತಿ ನೀಡುತ್ತಿದ್ದರು. ಇನ್ನು ನೀವೋ, ನೀವೇ ಹೇಳಿಕೊಂಡಂತೆ 56 ಇಂಚಿನ ಎದೆಯವರು! ಈ ಸಂದರ್ಭದಲ್ಲಿ ದೇಶಕ್ಕೆ ನಿಮ್ಮ ಪ್ರಾಮಾಣಿಕ ಮಾತು ಮತ್ತು ಪರಿಣಾಮಕಾರಿ ಕೆಲಸದ ಅಗತ್ಯ ಇದೆ. ಈಗ ಚುನಾವಣೆಗಳು ಇಲ್ಲದ ಮಾತ್ರಕ್ಕೆ ನೀವು ಮಾತನಾಡಬಾರದು ಎಂದಿಲ್ಲ. ದಯವಿಟ್ಟು ಕರ್ನಾಟಕವೂ ಸೇರಿದಂತೆ ಹಲವು ರಾಜ್ಯಗಳಿಗೆ ಭೇಟಿ ಕೊಡಿ. ಇಲ್ಲಿಯ ಪರಿಸ್ಥಿತಿ ಮತ್ತು ವ್ಯವಸ್ಥೆಗಳನ್ನು ಪರಿಶೀಲನೆ ಮಾಡಿ. ನೀವು ಬರುತ್ತೀರಿ ಎನ್ನುವ ಕಾರಣಕ್ಕಾದರೂ ದುರಾಡಳಿತ ಮತ್ತು ನಿರಾಡಳಿತದ ಮಧ್ಯೆ ಹೊಯ್ದಾಡುತ್ತಿರುವ ನಮ್ಮ ರಾಜ್ಯ ಸರ್ಕಾರ ಎಚ್ಚೆತ್ತುಕೊಳ್ಳುತ್ತದೆ ಎಂದು ಅವರು ಹೇಳಿದ್ದಾರೆ.
ನೀವು ಸಂಸದರಾಗಿರುವ ಉತ್ತರಪ್ರದೇಶದ ವಾರಣಾಸಿಗೂ ಭೇಟಿ ಕೊಡಿ. ಅಲ್ಲಿ ಸೋಂಕಿಗೆ ಬಲಿಯಾದವರ ಹೆಣಗಳನ್ನು ಗಂಗಾ ನದಿಗೆ ಎಸೆಯಲಾಗುತ್ತಿದೆಯಂತೆ. ಅವು ಬಿಹಾರಕ್ಕೆ ಹೋಗಿ ತೇಲುತ್ತಿವೆ. ಉತ್ತರಪ್ರದೇಶ ಮತ್ತು ಬಿಹಾರದ ರಾಜ್ಯಗಳಲ್ಲಿ ಸೋಂಕು ಈಗ ಗ್ರಾಮೀಣ ಭಾಗಕ್ಕೂ ಹರಡಿದೆಯಂತೆ. ಮೊದಲೇ ಅವು ಅತಿಹಿಂದುಳಿದ ರಾಜ್ಯಗಳು. ಹಾಗೆಯೇ ನಮ್ಮ ದೇಶದ ಕಾಲುಭಾಗ ಜನಸಂಖ್ಯೆ ಅವೆರಡೇ ರಾಜ್ಯಗಳಲ್ಲಿ ಇದೆ. ನೀವು ಈಗ ಅಲ್ಲಿಗೆ ಖುದ್ದು ಭೇಟಿ ನೀಡದೆ ಇದ್ದರೆ ಊಹಿಸಲಾಗದಷ್ಟು ದುರಂತಗಳನ್ನು ದೇಶ ಕಾಣಲಿದೆ ಎಂದು ರೆಡ್ಡಿ ಅವರು ಎಚ್ಚರಿಸಿದ್ದಾರೆ.
ನೀವು ದಯವಿಟ್ಟು ಮಾತನಾಡಿ. ಸತ್ಯವಾದ ವಿಚಾರಗಳನ್ನು ಹಂಚಿಕೊಳ್ಳಿ. ವಿಜ್ಞಾನವನ್ನು ನಂಬಿ. ತಜ್ಞರ ಮಾತನ್ನು ಕೇಳಿ. ವೈಚಾರಿಕವಾಗಿ ಆಲೋಚಿಸಿ. ಇತರೆ ಪಕ್ಷಗಳ ಉತ್ತಮ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಿ. ಅಹಂ ಮತ್ತು ಏಕ ವ್ಯಕ್ತಿ ಪ್ರದರ್ಶನವನ್ನು ಬದಿಗಿಟ್ಟು ದೇಶಕ್ಕೆ ನಾಯಕತ್ವ ಕೊಡಲು ಪ್ರಯತ್ನಿಸಿ. ದೇಶವನ್ನು ಈ ಮಹಾವಿಪತ್ತಿನಿಂದ ಪಾರು ಮಾಡಲು ಕೇಂದ್ರ ಸರ್ಕಾರದ ಎಲ್ಲಾ ಸಂಪನ್ಮೂಲಗಳನ್ನು ಈ ಹೋರಾಟದಲ್ಲಿ ತೊಡಗಿಸಿ ಎಂದು ರವಿ ಕೃಷ್ಣಾ ರೆಡ್ಡಿ ಸಲಹೆ ನೀಡಿದ್ದಾರೆ.