ರಾಜ್ಯದಲ್ಲಿ ಸದ್ಯಕ್ಕೆ ಗ್ಯಾರಂಟಿ ಯೋಚನೆಗಳದ್ದೇ ಬಹುದೊಡ್ಡ ಚರ್ಚೆ ನಡೆಯುತ್ತಿದೆ. ಚುನಾವಣೆ ಪ್ರಚಾರ ಸಂದರ್ಭದಲ್ಲಿ 5 ಗ್ಯಾರಂಟಿ ಯೋಜನೆಗಳನ್ನ ಜಾರಿ ಮಾಡುವ ಭರವಸೆಯನ್ನು ನೀಡಿದ್ದ ಕಾಂಗ್ರೆಸ್ ಇದೀಗ ಸರ್ಕಾರ ರಚನೆಯ ನಂತರವೂ ನಾವು ನೀಡಿದ್ದ ಭರವಸೆಗೆ ಬದ್ಧರಾಗಿದ್ದೇವೆ ಅಂತ ಹೇಳಿಕೊಂಡಿದೆ. ಆದರೆ ಯೋಜನೆ ಜಾರಿಯ ಬಗ್ಗೆ ಇದುವರೆಗೂ ಸ್ಪಷ್ಟವಾದ ನಿಲುವನ್ನ ಕಾಂಗ್ರೆಸ್ ಸರ್ಕಾರ ತೆಗೆದುಕೊಂಡಿಲ್ಲ. ಹೀಗಾಗಿ ಸರ್ಕಾರದ ವಿರುದ್ಧ ವಿರೋಧ ಪಕ್ಷಗಳು ವ್ಯಾಪಕವಾದ ಟೀಕಾ ಪ್ರಹಾರವನ್ನ ನಡೆಸುತ್ತವೆ. ಅದರಲ್ಲೂ ವಿರೋಧ ಪಕ್ಷ ಬಿಜೆಪಿ, ಮತ್ತು ಅದರ ನಾಯಕರು ಕಾಂಗ್ರೆಸ್ ಸರ್ಕಾರ ಕೊಟ್ಟ ಮಾತಿಗೆ ತಪ್ಪುತ್ತಿದೆ. ಇವರು ಯಾವುದೇ ಯೋಜನೆಗಳನ್ನು ಜಾರಿಗೆ ತರುವ ಮನಸ್ಸಿನಲ್ಲಿ ಇಲ್ಲ ಎಂಬ ಹೇಳಿಕೆಗಳನ್ನ ನೀಡುತ್ತಿದ್ದಾರೆ.
ಇನ್ನು ಸಾರ್ವಜನಿಕರು ಕೂಡ ಗ್ಯಾರಂಟಿ ಯೋಜನೆಗಳನ್ನ ಯಾವಾಗ ಜಾರಿಗೆ ತರಲಿದ್ದೀರಿ ಅಂತ ಸರ್ಕಾರವನ್ನ ಪ್ರಶ್ನೆ ಮಾಡುತ್ತಿದ್ದಾರೆ ಹೀಗಾಗಿ ಒತ್ತಡದಲ್ಲಿರುವ ಸರ್ಕಾರ ಗ್ಯಾರಂಟಿ ಯೋಜನೆಗಳ ಜಾರಿಗೆ ಸಂಬಂಧ ಪಟ್ಟಂತೆ ಹಲವು ಚರ್ಚೆಗಳನ್ನ ಅಧಿಕಾರಿಗಳೊಂದಿಗೆ ನಡೆಸಿದೆ ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ತಮ ಸಚಿವರೊಂದಿಗೆ ಸಭೆಯನ್ನ ನಡೆಸಿದ್ದು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಗ್ಯಾರಂಟಿ ಯೋಜನೆಗಳ ಜಾರಿಗೆ ಸಂಬಂಧ ಪಟ್ಟಂತೆ ಅಧಿಕೃತವಾದ ಘೋಷಣೆಯನ್ನ ಮಾಡಲಿದ್ದೇವೆ ಅಂತ ಹೇಳಿದ್ದಾರೆ.
ಇನ್ನು ಇದರ ಬಗ್ಗೆ ಟ್ವಿಟ್ ಮಾಡಿರುವ ಡಿಸಿಎಂ ಡಿ.ಕೆ ಶಿವಕುಮಾರ್ ” ಕಾಂಗ್ರೆಸ್ ಪಕ್ಷದ 5 ಪ್ರಮುಖ ಗ್ಯಾರಂಟಿಗಳ ಕುರಿತು ಮಹತ್ವದ ಸಭೆ ನಡೆಸಲಾಗಿದ್ದು, ಇದಕ್ಕಾಗಿ ಒಂದು ವ್ಯವಸ್ಥೆ ಜಾರಿಗೆ ತರುವ ಸಂಬಂಧ ಚರ್ಚಿಸಲಾಗಿದೆ. ಆರ್ಥಿಕ ಇಲಾಖೆಗಳು ನಮಗೆ ಆಯ್ಕೆಗಳನ್ನು ನೀಡಿದ್ದು, ಈ ಬಗ್ಗೆ ಅಧ್ಯಯನ ನಡೆಸಲಾಗುತ್ತಿದೆ.
ಶುಕ್ರವಾರ ಕ್ಯಾಬಿನೆಟ್ ಸಭೆಯಲ್ಲಿ ವ್ಯಾಪಕ ಚರ್ಚೆ ನಡೆಸಲಾಗುವುದು. ಗ್ಯಾರಂಟಿಗಳನ್ನು ಜಾರಿಗೊಳಿಸಲು ಕಾಂಗ್ರೆಸ್ ಪಕ್ಷ ಬದ್ಧವಾಗಿದೆ. ಸಾರ್ವಜನಿಕರು ಯಾವುದೇ ಗಾಳಿಸುದ್ದಿಗಳಿಗೆ ಕಿವಿಕೊಡದಂತೆ ನಾನು ಮನವಿ ಮಾಡುತ್ತಿದ್ದೇನೆ” ಅಂತ ಹೇಳಿದ್ದಾರೆ . ಸದ್ಯದ ಮಟ್ಟಿಗೆ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಯಾವಾಗ ಜಾರಿಗೆ ತರಲಿದೆ ಎನ್ನುವ ಕುತೂಹಲ ಸಾರ್ವಜನಿಕರಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.