ಬೆಂಗಳೂರು : ರಾಜ್ಯಾದ್ಯಂತ ಸಾರಿಗೆ ನೌಕರರು ಮುಷ್ಕರದಲ್ಲಿ ತೊಡಗಿದ್ದಾರೆ. ತಮ್ಮ ಪ್ರಮುಖ ಬೇಡಿಕೆಗಳ ಈಡೇರಿಸುವಂತೆ ಒತ್ತಾಯಿಸಿ ಬೆಂಗಳೂರು ಚಲೋ ಹೋರಾಟ ನಡೆಸುತ್ತಿದ್ದಾರೆ. ರಾಜ್ಯದ ನಾಲ್ಕು ನಿಗಮಗಳ ನೌಕರರು ನಗರದ ಫ್ರೀಡಂ ಪಾರ್ಕ್ನಲ್ಲಿ ಜಮಾಯಿಸಿ ಸರ್ಕಾರದ ನಡೆಯನ್ನು ಖಂಡಿಸುತ್ತಿದ್ದಾರೆ.

ಈ ನಡುವೆಯೇ ಹೋರಾಟದ ತೀವ್ರತೆ ಅರಿತ ಸರ್ಕಾರ ಕಳೆದ ರಾತ್ರಿಯಷ್ಟೇ ನೌಕರರ 26 ತಿಂಗಳ ಹಿಂಬಾಕಿ ವೇತನವನ್ನು ಬಿಡುಗಡೆ ಮಾಡುವ ಕುರಿತು ಅಧಿಕೃತ ಆದೇಶ ಹೊರಡಿಸಿದೆ. ಅಲ್ಲದೆ 2024 ಸಾರಿಗೆ ಸಿಬ್ಬಂದಿಗೆ 26 ತಿಂಗಳ ಹಿಂಬಾಕಿ ನೀಡಲು ಸರ್ಕಾರದ ನಿರ್ಧಾರವಾಗಿದ್ದು, ವೇತನ ಪರಿಷ್ಕರಣೆ ವಿಚಾರದಲ್ಲಿ 2025ರ ಮಾರ್ಚ್ 1 ರಿಂದ ವೇತನ ಹೆಚ್ಚಳಕ್ಕೆ ತೀರ್ಮಾನ ಮಾಡಿದೆ. ಇದಕ್ಕಾಗಿ 1271.92 ಕೋಟಿ ರೂಪಾಯಿ ಬಿಡುಗಡೆಗೆ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ.
ಇದನ್ನೂ ಓದಿ : ಆಸ್ಟ್ರೇಲಿಯಾ ಟೂರ್ಗೆ ಹೋದ ಕಾಂಗ್ರೆಸ್ ಶಾಸಕರು ಯಾರ್ಯಾರು? ರದ್ದು ಮಾಡಿದವರು ಯಾರು?
ಆದರೆ ಸರ್ಕಾರದ ಈ ತೀರ್ಮಾನಕ್ಕೆ ಸಾರಿಗೆ ನೌಕರರು ಒಪ್ಪುತ್ತಿಲ್ಲ, ಇದೊಂದು ಏಕಮುಖದ ತೀರ್ಮಾನವಾಗಿದೆ. ನಮಗೆ ಬರಬೇಕಾದ ಹಿಂಬಾಕಿ ವೇತನ ಎಲ್ಲವೂ ನೀಡಲಿ, ವೇತನ ಪರಿಷ್ಕರಣೆ ವಿಚಾರದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳುವವರೆಗೆ ನಾವು ಮುಷ್ಕರದಿಂದ ಹಿಂದೆ ಸರಿಯಲ್ಲ ಎಂದು ಸಾರಿಗೆ ಮುಖಂಡರು ತಿಳಿಸಿದ್ದಾರೆ. ನಾವು ಕಷ್ಟದಲ್ಲಿ ದುಡಿಯುವ ವರ್ಗದ ಜನರು. ನಮ್ಮ ದುಡಿಮೆಗೆ ತಕ್ಕ ಪ್ರತಿಫಲವನ್ನು ಕೇಳುತ್ತಿದ್ದೇವೆ. ಈ ವಿಚಾರದಲ್ಲಿ ಯಾವುದೇ ಕಾರಣಕ್ಕೂ ರಾಜಿ ಆಗುವ ಪ್ರಶ್ನೆಯಿಲ್ಲ ಎಂದು ಜಂಟಿ ಕ್ರಿಯಾ ಸಮಿತಿಯ ನಾಯಕರು ಹೇಳಿದ್ದಾರೆ.
ಇನ್ನೂ ಇದೇ ವಿಚಾರಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿ, ನೌಕರರು ಈ ಸರ್ಕಾರದ ನಿರ್ಧಾರಕ್ಕೆ ಸಂತೋಷ ಪಡಬೇಕು. 26 ತಿಂಗಳ ಹಿಂಬಾಕಿ ನೀಡಲು ನಿರ್ಧರಿಸಲಾಗಿದೆ. ಸರ್ಕಾರದ ಪರಿಸ್ಥಿತಿಯನ್ನು ನೌಕಕರು ಕೂಡ ಅರ್ಥಮಾಡಿಕೊಳ್ಳಬೇಕು. 38 ತಿಂಗಳು ಕೇಳಿದ್ದರು, 26 ತಿಂಗಳು ಕೊಟ್ಟಿದ್ದೇವೆ. ಸದ್ಯ ಅಷ್ಟು ಕೊಟ್ಟಿದ್ದಾರಲ್ಲ ಎಂದು ಸಂತೋಷಪಡಬೇಕು. ಸರ್ಕಾರದ ಪರಿಸ್ಥಿತಿ ಅರ್ಥಮಾಡಿಕೊಳ್ಳಿ. ದಯವಿಟ್ಟು ಸಾರಿಗೆ ನೌಕರರೆಲ್ಲ ಸಹಕಾರ ಮಾಡಬೇಕು ಎಂದು ಡಿಕೆ ಶಿವಕುಮಾರ್ ಮನವಿ ಮಾಡಿದ್ದಾರೆ.
ಆದರೆ ಸರ್ಕಾರದ ಮನವಿಗೆ ಬಗ್ಗದ ಸಾರಿಗೆ ಮುಖಂಡರು ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸುವ ಸಾಧ್ಯತೆ ಇದ್ದು, ಇಂದು ಸಂಜೆ ಫ್ರೀಡಂ ಪಾರ್ಕ್ನಲ್ಲಿ ನಡೆಯಲಿರುವ ಸುದ್ದಿಗೋಷ್ಠಿಯಲ್ಲಿ ಮುಂದಿನ ಹೋರಾಟ ಹಾಗೂ ರಾಜ್ಯಾದ್ಯಂತ ಬಸ್ ಬಂದ್ನ ಭವಿಷ್ಯ ನಿರ್ಧಾರವಾಗಲಿದೆ.






