ಸದ್ಯ ಬಿಜೆಪಿಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಅವರು ಎಂಥದ್ದೇ ತಪ್ಪು ಮಾಡಿದರೂ ಯಾರೂ ಸೊಲ್ಲೆತ್ತದ ಪರಿಸ್ಥಿತಿ ನಿರ್ಮಾಣವಾಗಿದೆ. ನರೇಂದ್ರ ಮೋದಿ ಸರ್ಕಾರದ ಬಗ್ಗೆ ಕೂಡ ‘ಸರ್ವಾಧಿಕಾರಿ ಧೋರಣೆಯ ಸರ್ಕಾರ’, ‘ಹಿಟ್ಲರ್ ಸರ್ಕಾರ’ ಎಂಬ ಮಾತುಗಳು ಕೇಳಿಬರುತ್ತಿವೆ. ಪ್ರತಿಪಕ್ಷದ ನಾಯಕರು ಮೋದಿ, ಕೇಂದ್ರ ಸರ್ಕಾರ ಅಥವಾ ಬಿಜೆಪಿಯ ಒಲವು-ನಿಲುವುಗಳ ಬಗ್ಗೆ ಟೀಕೆ ಮಾಡಿದರೆ ಅವರ ವಿರುದ್ಧ ಇಡಿ, ಸಿಬಿಐ, ಐಟಿಯಂತಹ ತನಿಖಾ ಸಂಸ್ಥೆಗಳನ್ನು ಛೂ ಬಿಟ್ಟು ದನಿ ಅಡಗಿಸಲಾಗುತ್ತದೆ. ಆದರೆ ಬಿಜೆಪಿಯ ರಾಜ್ಯಸಭಾ ಸಂಸದ ಸುಬ್ರಮಣಿಯನ್ ಸ್ವಾಮಿ ಮಾತ್ರ ಆಗಾಗ ನರೇಂದ್ರ ಮೋದಿ ಅವರಿಂದ ಹಿಡಿದು ಅವರ ಸಚಿವ ಸಂಪುಟ ಸದಸ್ಯರ ಕಾರ್ಯವೈಖರಿ ಬಗ್ಗೆ ನೇರವಾಗಿ ಆಕ್ಷೇಪವನ್ನು ವ್ಯಕ್ತಪಡಿಸುತ್ತಲೇ ಇದ್ದಾರೆ.
ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರ ರಾಜಕೀಯ ಕಡುವೈರಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಸುಬ್ರಮಣಿಯನ್ ಸ್ವಾಮಿ ಮನಸಾರೆ ಹೊಗಳಿದ್ದಾರೆ. ಮಮತಾ ಬ್ಯಾನರ್ಜಿ ಅವರನ್ನು ಮುತ್ಸದಿಗಳಾದ ಜಯಪ್ರಕಾಶ್ ನಾರಾಯಣ್, ಮೊರಾರ್ಜಿ ದೇಸಾಯಿ, ರಾಜೀವ್ ಗಾಂಧಿ, ಚಂದ್ರಶೇಖರ್ ಮತ್ತು ಪಿ.ವಿ. ನರಸಿಂಹರಾವ್ ಅವರಿಗೆ ಹೋಲಿಕೆ ಮಾಡಿದ್ದಾರೆ. ಯಾವಾಗಲೂ ‘ಬಂಡುಕೋರನ’ ಪಾತ್ರವನ್ನೇ ನಿರ್ವಹಿಸುವ ಸುಬ್ರಮಣಿಯನ್ ಸ್ವಾಮಿ ಯಾರನ್ನೂ ಹೊಗಳುವವರಲ್ಲ. ಟೀಕೆ ಮಾತ್ರ ಅವರ ವೈಖರಿ. ಆದರೆ ಅದಕ್ಕೆ ವ್ಯತಿರಿಕ್ತವಾಗಿ ಮಮತಾ ಬ್ಯಾನರ್ಜಿ ಅವರ ಬಗ್ಗೆ ಮೆಚ್ಚುಗೆಯ ಮಳೆ ಸುರಿಸಿರುವುದು ಅಚ್ಚರಿ ಉಂಟುಮಾಡಿದೆ.
ಬುಧವಾರ ಮಮತಾ ಬ್ಯಾನರ್ಜಿ ಅವರನ್ನು ಭೇಟಿ ಮಾಡಿದ್ದ ಸುಬ್ರಮಣಿಯನ್ ಸ್ವಾಮಿ ಗುರುವಾರ ನರೇಂದ್ರ ಮೋದಿ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಮೋದಿ ನೇತೃತ್ವದ ಕೇಂದ್ರ ಸರ್ಕಾರ ಆಡಳಿತದ ಪ್ರತಿಯೊಂದು ವಿಷಯದಲ್ಲೂ ವಿಫಲವಾಗಿದೆ ಎಂದು ಹೇಳಿದ್ದಾರೆ. ಕರೋನಾ ಬರುವ ಮೊದಲಿಂದಲೂ ದೇಶದ ಆರ್ಥಿಕ ಪರಿಸ್ಥಿತಿ ಕೆಟ್ಟದ್ದಾಗಿತ್ತು. ಈ ಬಗ್ಗೆ ನಿರಂತರವಾಗಿ ಕೇಂದ್ರ ಸರ್ಕಾರದ ಕಿವಿ ಹಿಂಡುತ್ತಿದ್ದ ಸುಬ್ರಮಣಿಯನ್ ಸ್ವಾಮಿ ಈಗ ಮತ್ತೊಮ್ಮೆ ‘ದೇಶದ ಆರ್ಥಿಕತೆ ಸರಿ ಇಲ್ಲ’ ಎಂದಿದ್ದಾರೆ.
ಭಾರತ – ಪಾಕಿಸ್ತಾನ ಹಾಗೂ ಭಾರತ – ಚೀನಾ ವ್ಯವಹಾರಗಳ ಬಗ್ಗೆಯೂ ಸದಾ ರಚನಾತ್ಮಕ ಟೀಕೆ ಮಾಡಿಕೊಂಡು ಬಂದಿರುವ ಸುಬ್ರಮಣಿಯನ್ ಸ್ವಾಮಿ ಈಗ ಮತ್ತೊಮ್ಮೆ ‘ಗಡಿ ಭದ್ರತೆ ವಿಷಯದಲ್ಲಿ ಮೋದಿ ಸರಕಾರ ವಿಫಲವಾಗಿದೆ’ ಎಂದು ಕಡ್ಡಿ ಮುರಿದಂತೆ ಹೇಳಿದ್ದಾರೆ. ನೆರೆಯ ಅಫ್ಘಾನಿಸ್ತಾನ ಬಿಕ್ಕಟ್ಟಿನ ಬಗ್ಗೆ ಭಾರತ ಸರ್ಕಾರದ ನಿರ್ವಹಣೆಯನ್ನು ಸುಬ್ರಮಣಿಯನ್ ಸ್ವಾಮಿ ‘ಅಪಘಾತಕಾರಿ’ ಎಂದು ವ್ಯಾಖ್ಯಾನಿಸಿದ್ದಾರೆ. ಅದೇ ರೀತಿ ಭ್ರಷ್ಟಾಚಾರದ ಬಗ್ಗೆ ಎಗ್ಗಿಲ್ಲದೆ ಮಾತನಾಡುವ ಸುಬ್ರಮಣಿಯನ್ ಸ್ವಾಮಿ, ‘ಪೆಗಾಸಸ್ ಡೇಟಾ ಭದ್ರತಾ ಉಲ್ಲಂಘನೆ ಕೇಂದ್ರ ಸರ್ಕಾರದ ವೈಫಲ್ಯ’ ಎಂದು ಕಿಡಿ ಕಾರಿದ್ದಾರೆ.
ಇದಕ್ಕೂ ಮೊದಲು ಸೆಪ್ಟೆಂಬರ್ 24ರಂದು ಸುಬ್ರಮಣಿಯನ್ ಸ್ವಾಮಿ ತಮ್ಮ ಟ್ವೀಟರ್ ಖಾತೆಯಲ್ಲಿ ಈ ಕೆಳಕಂಡಂತೆ ಮೋದಿ ಸರ್ಕಾರದ ಕಾರ್ಯವೈಖರಿಯನ್ನು ಬಣ್ಣಿಸಿದ್ದರು.
‘ಮೋದಿ ಸರ್ಕಾರದ ರಿಪೋರ್ಟ್ ಕಾರ್ಡ್:
ಆರ್ಥಿಕತೆ— ವಿಫಲವಾಗಿದೆ
ಗಡಿ ಭದ್ರತೆ—ವಿಫಲವಾಗಿದೆ
ವಿದೇಶಾಂಗ ನೀತಿ –ಅಫ್ಘಾನಿಸ್ತಾನ ಫಿಯಾಸ್ಕೋ
ರಾಷ್ಟ್ರೀಯ ಭದ್ರತೆ —ಪೆಗಾಸಸ್ NSO
ಆಂತರಿಕ ಭದ್ರತೆ—ಕಾಶ್ಮೀರ ಕತ್ತಲು
ಯಾರು ಹೊಣೆ?’
ಇದಾದ ಮೇಲೆ ನವೆಂಬರ್ 23 ರಂದು ಟ್ವೀಟ್ ಮಾಡಿ ದೇಶದ ಗಡಿ ವ್ಯವಹಾರದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದ ಸುಬ್ರಹ್ಮಣಿಯನ್ ಸ್ವಾನಿ ಅವರು, ‘ಚೀನಾ ನಮ್ಮ ಪರಮಾಣು ಅಸ್ತ್ರಕ್ಕೆ ಹೆದರದಿದ್ದರೆ ನಾವು ಅವರ ಅಣ್ವಸ್ತ್ರಗಳಿಗೆ ಏಕೆ ಹೆದರುತ್ತೇವೆ?’ ಎಂದು ಬಹಳ ಖಾರವಾಗಿ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದ್ದರು. ಈಗ ಮತ್ತೆ ಭಾರತ – ಚೀನಾ ಗಡಿ ಸಮಸ್ಯೆಯನ್ನು ಉಲ್ಲೇಖಿಸಿರುವ ಸುಬ್ರಮಣಿಯನ್ ಸ್ವಾಮಿ, ‘ಭಾರತವು ಎಂಇಎ ಮತ್ತು ಎನ್ಎಸ್ಎಯಲ್ಲಿ ಕೆಟ್ಟ ನಿಲುವನ್ನು ಹೊಂದಿದೆ. ಚೀನಾ ನಮ್ಮ ಪ್ರದೇಶವನ್ನು ಕಸಿದುಕೊಳ್ಳುತ್ತಿರುವಾಗ ನರೇಂದ್ರ ಮೋದಿ ಅವರ ಸರ್ಕಾರ ನಿದ್ದೆ ಮಾಡುತ್ತಿದೆ. ಭಾರತ ಮಾತೆಗೆ ಅನ್ಯಾಯ ಆಗುತ್ತಿರುವ ಹೊತ್ತಿನಲ್ಲಿ ಮೋದಿ ಮೌನವಾಗಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇಷ್ಟು ಮಾತ್ರವಲ್ಲದೆ ಟ್ವೀಟರ್ ಬಳಕೆದಾರರು ದೇಶದಲ್ಲಿ ನಿರಂತರವಾಗಿ ಆಗುತ್ತಿರುವ ಬೆಲೆ ಏರಿಕೆ ಬಗ್ಗೆ ಪ್ರಶ್ನೆ ಮಾಡಿದಾಗ ಸುಬ್ರಹ್ಮಣಿಯನ್ ಸ್ವಾಮಿ, ‘ಅವರಿಗೆ (ಪ್ರಧಾನಿ ನರೇಂದ್ರ ಮೋದಿ) ಅರ್ಥಶಾಸ್ತ್ರ ತಿಳಿದಿಲ್ಲ’ ಎಂದು ವ್ಯಂಗ್ಯ ಮಾಡಿದ್ದಾರೆ.
ಸದ್ಯ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಪಶ್ಚಿಮ ಬಂಗಾಳದಾಚೆಗೂ ವಿಸ್ತರಿಸಿಕೊಳ್ಳಲು ಯತ್ನಿಸುತ್ತಿದ್ದು ತ್ರಿಪುರ, ಗೋವಾ, ಉತ್ತರ ಖಂಡಗಳಲ್ಲಿ ವಿಧಾನಸಭಾ ಚುನಾವಣೆಯನ್ನೂ ನಡೆಸುತ್ತಿದೆ. ಮಮತಾ ಬ್ಯಾನರ್ಜಿ ಅವರ ಈ ವಿಸ್ತರಣಾ ಕೈಂಕಾರ್ಯಕ್ಕೆ ಸಕಾರಾತ್ಮಕ ಪ್ರತಿಕ್ರಿಯೆಯೂ ವ್ಯಕ್ತವಾಗುತ್ತಿದೆ. ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಶಾಸಕರು ಟಿಎಂಸಿ ಸೇರಲು ಮುಗಿಬಿದ್ದಿದ್ದಾರೆ. ಮೇಘಾಲಯದಲ್ಲಿ ಒಂದೇ ಸಲ 12 ಜನ ಶಾಸಕರು ಕಾಂಗ್ರೆಸ್ ತೊರೆದು ಟಿಎಂಸಿ ಸೇರಿದ್ದಾರೆ. ದೇಶದ ಬೇರೆ ಬೇರೆ ಭಾಗಗಳಲ್ಲೂ ಮುಖ್ಯವಾದ ವ್ಯಕ್ತಿಗಳು ಟಿಎಂಸಿ ಸೇರುತ್ತಿದ್ದಾರೆ. ಈ ಬೆಳವಣಿಗೆಗಳ ಬೆನ್ನಲ್ಲೇ ಬಂಡಾಯಗಾರ ಸುಬ್ರಹ್ಮಣಿಯನ್ ಸ್ವಾಮಿ ದಿಢೀರನೆ ಮಮತಾ ಬ್ಯಾನರ್ಜಿ ಅವರನ್ನು ಭೇಟಿ ಮಾಡಿದ್ದಾರೆ. ಮಮತಾ ಬ್ಯಾನರ್ಜಿ ಅವರನ್ನು ಜಯಪ್ರಕಾಶ್ ನಾರಾಯಣ್, ಮೊರಾರ್ಜಿ ದೇಸಾಯಿ, ರಾಜೀವ್ ಗಾಂಧಿ, ಚಂದ್ರಶೇಖರ್ ಮತ್ತು ಪಿ.ವಿ. ನರಸಿಂಹರಾವ್ ಅವರಂತಹ ಮಹಾನ್ ನಾಯಕರಿಗೆ ಹೋಲಿಕೆ ಮಾಡಿದ್ದಾರೆ. ಜೊತೆಗೆ ಮರುದಿನವೇ ಮೋದಿ ಸರ್ಕಾರ ಆಮೂಲಾಗ್ರವಾಗಿ ವಿಫಲವಾಗಿದೆ ಎಂದು ಹೇಳಿದ್ದಾರೆ. ಆದುದರಿಂದ ಸುಬ್ರಹ್ಮಣಿಯನ್ ಸ್ವಾಮಿ ಕೂಡ ಟಿಎಂಸಿ ಸೇರುತ್ತಾರಾ ಎಂಬ ಅನುಮಾನ ಹುಟ್ಟಿಕೊಂಡಿದೆ. ರಾಜಕೀಯದಲ್ಲಿ ಯಾವಾಗ ಏನುಬೇಕಾದರೂ ಆಗಬಹುದು.