ಅಖಿಲ ಭಾರತ ವೀರಶೈವ ಮಹಾಸಭಾ (AIVM) ಧಾರ್ಮಿಕ ಮತಾಂತರದ ವಿರುದ್ಧ ಅಭಿಯಾನವನ್ನು ಪ್ರಾರಂಭಿಸಲು ನಿರ್ಧರಿಸಿದೆ. ಇದು ವೀರಶೈವ ಮಹಾಸಭಾದ ನಿರ್ಧಾರವೋ ಅಥವಾ ಕಾಂಗ್ರೆಸ್ ಮುಖಂಡ ಶಾಮನೂರು ಶಿವಶಂಕರಪ್ಪ ಮತ್ತು ಬಾಗಲಕೋಟೆಯ ಬಿಜೆಪಿ ಶಾಸಕ ವೀರಣ್ಣ ಚರಂತಿಮಠ ಅವರಂತಹ ಕೆಲವೇ ಕೆಲವರ ವೈಯಕ್ತಿಕ ನಿರ್ಧಾರವೋ ಗೊತ್ತಿಲ್ಲ. ಒಟ್ಟಿನಲ್ಲಿ ಇಲ್ಲಿ ಬಿಜೆಪಿ ಪ್ರಭಾವ ಕಾಣುತ್ತಿದೆ. ವೀರಶೈವ-ಲಿಂಗಾಯತರು ಮತಾಂತರವಾಗುತ್ತಿದ್ದಾರೆ ಎಂಬ ಶಾಮನೂರು ಭೀತಿಯೇ ಹಾಸ್ಯಾಸ್ಪದವಾಗಿದೆ ಮತ್ತು ಇದು ದಲಿತರ ಮೇಲಿನ ಹಲ್ಲೆಗೂ ಕಾರಣವಾಗಬಹುದು.
ನವೆಂಬರ್ 15 ರ ಪತ್ರದಲ್ಲಿ, ಕರ್ನಾಟಕದ ಕಾಂಗ್ರೆಸ್ನ ಅತ್ಯಂತ ಹಿರಿಯ ಶಾಸಕರಾದ ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅವರು ಧಾರ್ಮಿಕ ಮತಾಂತರಗಳನ್ನು “ಪರಿಶೀಲಿಸಿ” ಮತ್ತು ಇತರ ಧರ್ಮಗಳಿಗೆ ಮತಾಂತರಗೊಂಡವರು.
ಮೂಲಧರ್ಮಕ್ಕೆ ವಾಪಸ್ ಬರಲು ಸಹಾಯ ಮಾಡುವಂತೆ ಮಹಾಸಭಾದ ಎಲ್ಲಾ ರಾಜ್ಯ, ಜಿಲ್ಲೆ ಮತ್ತು ತಾಲೂಕು ಕಚೇರಿಗಳಿಗೆ ಪತ್ರ ಬರೆದಿದ್ದಾರೆ.
ಕರ್ನಾಟಕದಲ್ಲಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರವು ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಮುಂಬರುವ ವಿಧಾನಸಭೆ ಅಧಿವೇಶನದಲ್ಲಿ ಮತಾಂತರ ವಿರೋಧಿ ಮಸೂದೆಯನ್ನು ಮಂಡಿಸಲು ಸಿದ್ಧತೆ ನಡೆಸುತ್ತಿರುವ ಸಮಯದಲ್ಲಿ ವೀರಶೈವ ಮಹಾಸಭಾದ ಈ ಕ್ರಮವು ಬಂದಿದೆ.
ರಾಜ್ಯದ ಕೆಲವು ಭಾಗಗಳಲ್ಲಿ ವಿವಿಧ ಪ್ರಭಾವಗಳಿಂದ ನಮ್ಮ ಜನರು ಕ್ರಿಶ್ಚಿಯನ್ ಮತ್ತು ಇತರ ಧರ್ಮಗಳಿಗೆ ಮತಾಂತರ ಆಗುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ ಎಂದು ಶಾಮನೂರು ಶಿವಶಂಕರಪ್ಪ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.
“ಆರ್ಥಿಕ ತೊಂದರೆಗಳನ್ನು ಎದುರಿಸುತ್ತಿರುವವರು, ವೈಯಕ್ತಿಕ ಸಮಸ್ಯೆಗಳೊಂದಿಗೆ ಹೋರಾಡುತ್ತಿದ್ದಾರೆ … ದೂರದೃಷ್ಟಿಯ ಕೊರತೆಯಿರುವ ಮುಗ್ಧ ಜನರು ನಮ್ಮ ಶ್ರೇಷ್ಠ ಸಂಪ್ರದಾಯವನ್ನು ತ್ಯಜಿಸಲು ಮತ್ತು ಇತರ ಧಾರ್ಮಿಕ ನಂಬಿಕೆಗಳನ್ನು ಸ್ವೀಕರಿಸಲು ಕೆಲವರು ಪ್ರೋತ್ಸಾಹಿಸುತ್ತಿದ್ದಾರೆ” ಎಂದು ಅವರು ಹೇಳಿದ್ದಾರೆ.. “ನೀವು ನಿಮ್ಮ ಪ್ರದೇಶದಲ್ಲಿ ಮಠಗಳು, ಸ್ವಾಮಿಗಳೊಂದಿಗೆ ಸಂಪರ್ಕದಲ್ಲಿ ಇರಬೇಕು ಮತ್ತು ಅಂತಹ ಮತಾಂತರಗಳು ನಡೆಯದಂತೆ ನೋಡಿಕೊಳ್ಳಬೇಕು. ಮತಾಂತರಗೊಂಡ ಜನರನ್ನು ಮರಳಿ ನಮ್ಮ ಧರ್ಮಕ್ಕೆ ಕರೆತರಲು ನೀವು ಕಾರ್ಯಕ್ರಮಗಳನ್ನು ರೂಪಿಸಬೇಕು.
ಕರ್ನಾಟಕದಲ್ಲಿ ಅಲ್ಪಸಂಖ್ಯಾತರು, ವಿಶೇಷವಾಗಿ ಕ್ರಿಶ್ಚಿಯನ್ನರು ಹಿಂಸಾವಾದಿ ಹಿಂದೂತ್ವ ಸಂಘಟನೆಗಳ ಪುಂಡರಿಂದ ದಾಳಿಗೆ ಒಳಗಾಗುವ ಭಯವನ್ನು ವ್ಯಕ್ತಪಡಿಸಿರುವ ಸಮಯದಲ್ಲಿ ವೀರಶೈವ ಮಹಾಸಭಾದ ಈ ನಿರ್ಧಾರವು ಬಂದಿದೆ.
ಸೆಪ್ಟಂಬರ್ನಲ್ಲಿ ಬಿಜೆಪಿ ಶಾಸಕ ಗೂಳಿಹಟ್ಟಿ ಡಿ.ಶೇಖರ್ ವಿಧಾನಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ನಂತರ ಆಮಿಷದಿಂದ ಮತಾಂತರದ ವಿರುದ್ಧ ಈಗಾಗಲೇ ಅಸ್ತಿತ್ವದಲ್ಲಿರುವ ಕಾನೂನನ್ನು ಮತ್ತಷ್ಟು ಬಿಗಿಗೊಳಿಸುವ ಮಸೂದೆಯನ್ನು ಮಂಡಿಸಲು ನಿರ್ಧರಿಸಲಾಯಿತು. ನಂತರ ಶಾಸಕರು ಅಕ್ಟೋಬರ್ನಲ್ಲಿ, ಯಾವುದೇ ಬಲವಂತದ ಮತಾಂತರಗಳನ್ನು ಪರಿಶೀಲಿಸಲು ಶಾಸಕಾಂಗ ಸಮಿತಿಯ ಮೂಲಕ ರಾಜ್ಯದ ಎಲ್ಲಾ ಚರ್ಚ್ಗಳ ಸಮೀಕ್ಷೆಗೆ ಸೂಚಿಸಿದರು.
ಇದರ ವಿರುದ್ಧ ಪ್ರತಿಭಟನೆಗಳು ನಡೆದವು. ಕೋರ್ಟಿನಲ್ಲೂ ಅರ್ಜಿಗಳು ದಾಖಲಾದ ನಂತರ ಸಮೀಕ್ಷೆಯು ಪ್ರಾರಂಭವಾಗಲಿಲ್ಲ.
ಮಹಾಸಭಾ ನಾಯಕರು ಬದ್ಧರಲ್ಲ
ThePrint ನೊಂದಿಗೆ ಮಾತನಾಡುತ್ತಾ, ಮಹಾಸಭಾದ ಹಲವಾರು ಪದಾಧಿಕಾರಿಗಳು ವಿವಿಧ ಕಾರಣಗಳನ್ನು ಉಲ್ಲೇಖಿಸಿ ನಿರ್ಧಾರದಿಂದ ದೂರವನ್ನು ಕಾಯ್ದುಕೊಳ್ಳಲು ನಿರ್ಧರಿಸಿದರು.
ಎಂಎಲ್ಸಿ ಚುನಾವಣೆ ಕೆಲಸದಲ್ಲಿ ಬ್ಯುಸಿಯಾಗಿದ್ದೇನೆ. ಈ ಪತ್ರದ ಬಗ್ಗೆ ಪ್ರತಿಕ್ರಿಯಿಸುವಷ್ಟು ನನಗೆ ತಿಳಿದಿಲ್ಲ ಎಂದು ಮಹಾಸಭಾದ ಪ್ರಧಾನ ಕಾರ್ಯದರ್ಶಿ ಮತ್ತು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ತಿಳಿಸಿದ್ದಾರೆ.
ಮಹಾಸಭಾದ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿರುವ ನಿವೃತ್ತ ಐಪಿಎಸ್ ಅಧಿಕಾರಿ ಮತ್ತು ಬಿಜೆಪಿ ಸದಸ್ಯ ಶಂಕರ್ ಬಿದರಿ, “ಈ ಪತ್ರದ ಬಗ್ಗೆ ನಾನು ಇನ್ನೂ ಅಧ್ಯಕ್ಷರೊಂದಿಗೆ ಮಾತನಾಡಲು ಸಾಧ್ಯವಾಗಿಲ್ಲ. ಈ ಪತ್ರವನ್ನು ಯಾವಾಗ ಮತ್ತು ಏಕೆ ಬರೆಯಲಾಗಿದೆ ಎಂದು ನನಗೆ ತಿಳಿದಿಲ್ ಎಂದಿದ್ದಾರೆ..
ವೀರಶೈವ ಹಾಸಭಾದ ಮತ್ತೋರ್ವ ಉಪಾಧ್ಯಕ್ಷ ಪ್ರಭಾಕರ ಕೋರೆ ಮಾತನಾಡಿ, ದೇಶದಲ್ಲಿಲ್ಲ. ಈ ಬಗ್ಗೆ ಮಾಹಿತಿಯಿಲ್ಲʼ ಎಂದಿದ್ದಾರೆ.
ಮಹಾಸಭಾದ ಉಪಾಧ್ಯಕ್ಷರೂ ಆಗಿರುವ ಬಾಗಲಕೋಟೆಯ ಬಿಜೆಪಿ ಶಾಸಕ ವೀರಣ್ಣ ಚರಂತಿಮಠ ಅವರು ಶಾಮನೂರು ಶಿವಶಂಕರಪ್ಪ ಅವರ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ. ಆದರೆ ಇದು “ರಾಜಕೀಯ ವಿಷಯವಲ್ಲ” ಎಂದು ಪರಿಗಣಿಸಿದ್ದಾರೆ.
“ಉದ್ದೇಶಿತ ಮತಾಂತರ ವಿರೋಧಿ ಶಾಸನಕ್ಕೂ ಮಹಾಸಭಾದ ನಿರ್ಧಾರಕ್ಕೂ ಯಾವುದೇ ಸಂಬಂಧವಿಲ್ಲ. ಯಾವುದೇ ಮತಾಂತರವು ಕಾನೂನುಬಾಹಿರವಾಗಿದೆ, ಅಲ್ಲವೇ? ಎಂದು ಚರಂತಿಮಠ ಕೇಳಿದರು. ಈ ನಿರ್ಧಾರಕ್ಕೆ ಕಾರಣವೇನು ಎಂದು ಕೇಳಿದಾಗ, ಚರಂತಿಮಠ ಅವರು, ಕೆಲವು ಸಮಯದಿಂದ ಚರ್ಚೆಗಳು ನಡೆಯುತ್ತಿವೆ ಎಂದು ಹೇಳಿದರು.
ಮತ್ತೊಬ್ಬ ಉಪಾಧ್ಯಕ್ಷ ಎ.ಎಸ್. ವೀರಣ್ಣ, ವೀರಶೈವ ಲಿಂಗಾಯತರನ್ನು ರಕ್ಷಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎನ್ನುತ್ತ, “ಇದು ತುಂಬಾ ಸರಳವಾಗಿದೆ. ಕ್ರಿಶ್ಚಿಯನ್ನರು ಮತ್ತು ಮುಸ್ಲಿಮರು ನಮ್ಮ ಜನರನ್ನು ಮತಾಂತರ ಮಾಡುತ್ತಿದ್ದಾರೆ ಮತ್ತು ಧಾರ್ಮಿಕ ನಂಬಿಕೆಗಳನ್ನು ಬದಲಾಯಿಸಲು ಅವರನ್ನು ಪ್ರೋತ್ಸಾಹಿಸುತ್ತಿದ್ದಾರೆ. ನಾವು ಅದನ್ನು ನಿಲ್ಲಿಸಲು ಬಯಸುತ್ತೇವೆ”ಎಂದಿದ್ದಾರೆ.
ವೀರಶೈವ ಮಹಾಸಭೆಯ ಈ ಕ್ರಮವನ್ನು ಪ್ರತ್ಯೇಕ ಲಿಂಗಾಯತ ಧಮಕ್ಕೆ ಒತ್ತಾಯಿಸುತ್ತಿರುವ ಜಾಗತಿಕ ಲಿಂಗಾಯತ ಮಹಾಸಭಾ ತೀಕ್ಷ್ಣವಾಗಿ ವಿರೋಧಿಸಿದೆ. ಲಿಂಗಾಯತರು ಹಿಂದೂ ಧರ್ಮಕ್ಕೆ ಸೇರಿದವರು ಎಂಬ ವೀರಶೈವ ಮಹಾಸಭಾದ ನಿಲುವನ್ನು ಜಾಗತಿಕ ಲಿಂಗಾಯತ ಮಹಾಸಭಾ ಮೊದಲಿನಿಂದಲೂ ಪ್ರಶ್ನಿಸಿದೆ.
ಎರಡು ಸಂಘಟನೆಗಳು ಕರ್ನಾಟಕದಲ್ಲಿ ಲಿಂಗಾಯತ ಸಮುದಾಯದೊಳಗಿನ ವಿಭಜನೆಯ ಪ್ರತಿನಿಧಿಗಳು. ವೀರಶೈವ ಮಹಾಸಭಾ 1.75 ಲಕ್ಷ ಸದಸ್ಯರನ್ನು ಹೊಂದಿರುವ ವೀರಶೈವ ಲಿಂಗಾಯತಗಳ ಪ್ರತಿನಿಧಿ ಎಂದು ಹೇಳಿಕೊಂಡರೆ, ಲಿಂಗಾಯತ ಮಹಾಸಭಾ, ʼವೀರಶೈವರು ಲಿಂಗಾಯತರ ಒಂದು ಉಪಪಂಗಡ ಎಂದು ವಾದಿಸುತ್ತದೆ.
ಲಿಂಗಾಯತ ಸಮುದಾಯಕ್ಕೆ ಜೈನ, ಸಿಖ್ ಮತ್ತು ಬೌದ್ಧ ಧರ್ಮದಂತಹ “ಪ್ರತ್ಯೇಕ ಧರ್ಮದ ಸ್ಥಾನಮಾನ” ನೀಡಬೇಕೆಂದು ಲಿಂಗಾಯತ ಮಹಾಸಭಾ ಒತ್ತಾಯಿಸುತ್ತದೆ, ಆದರೆ ವೀರಶೈವ ಮಹಾಸಭಾ ಈ ಕ್ರಮವನ್ನು ವಿರೋಧಿಸಿದೆ.
ನಿವೃತ್ತ ಐಎಎಸ್ ಅಧಿಕಾರಿ ಮತ್ತು ಲಿಂಗಾಯತ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಎಸ್.ಎಂ. ಜಾಮದಾರ್, “ಲಿಂಗಾಯತ ಸಮುದಾಯಗಳ ವಿಭಾಗಗಳು ಕ್ರಿಶ್ಚಿಯನ್ ಮತ್ತು ಇಸ್ಲಾಂಗೆ ಮತಾಂತರ ಆಗುತ್ತಿರುವ ಬಗ್ಗೆ ವೀರಶೈವ ಮಹಾಸಭಾ ಆಳವಾದ ಕಳವಳ ವ್ಯಕ್ತಪಡಿಸುತ್ತಿರುವುದು ಆಶ್ಚರ್ಯಕರವಾಗಿದೆ” ಎಂದು ಹೇಳಿದ್ದಾರೆ..
“ಅದೇ ವೀರಶೈವ ಮಹಾಸಭಾವು ಶೇಕಡ 60 ರಷ್ಟು ‘ಶೂದ್ರ’ ಲಿಂಗಾಯತರನ್ನು ಸಮುದಾಯಗಳಿಂದ ಹೊರಹಾಕಿತು, ಅವರನ್ನು ಲಿಂಗಾಯತರಲ್ಲ ಎಂದು ಪರಿಗಣಿಸಿತು. ವೀರಶೈವರು ಬಸವಣ್ಣನವರ ಬೋಧನೆಗಳಿಗೆ ವಿರುದ್ಧವಾದ ಸನಾತನ ವರ್ಣ ವ್ಯವಸ್ಥೆಯನ್ನು ಅನುಕರಿಸಿದರು ಚಮ್ಮಾರ, ಮಢಿವಾಳ ಸಮುದಾಯಗಳ ಜನರನ್ನು ಬಹಿಷ್ಕರಿಸಿದರುʼ ಎಂದು ಜಾಮದಾರ್ ಟೀಕಿಸಿದ್ದಾರೆ.
“1904 ರಲ್ಲಿ ವೀರಶೈವ ಮಹಾಸಭಾವನ್ನು ರಚಿಸಿದಾಗ, ಅವರ ಮೊದಲ ನಿರ್ಣಯವೆಂದರೆ ವೀರಶೈವರು ʼಲಿಂಗಾಯತರು ಅಲ್ಲ, ಹಿಂದೂಗಳʼ…. ಅವರು ವೇದಗಳು, ಆಗಮ, ಉಪನಿಷತ್ತುಗಳು ಇತ್ಯಾದಿಗಳನ್ನು ಅನುಸರಿಸುತ್ತಾರೆ, ಗೌರವಿಸುತ್ತಾರೆ ಮತ್ತು ಸ್ವೀಕರಿಸುತ್ತಾರೆʼ ಎಂದು ಅವರು ಹೇಳಿದರು. ಎಲ್ಲಾ ವೀರಶೈವ ಮಠಗಳಿಗೆ ಜಂಗಮರು ಮಾತ್ರ ಮುಖ್ಯಸ್ಥರಾಗಿ ಇರಬೇಕೆಂದು ಅವರು ನಿರ್ಧರಿಸಿದರು.
“ಜಾತಿರಹಿತ ಎಂದು ಭಾವಿಸಲಾದ ಲಿಂಗಾಯತ ಧರ್ಮಕ್ಕೆ ಜಾತಿ ವ್ಯವಸ್ಥೆಯನ್ನು ಅವರು ಮರಳಿ ತಂದದ್ದು ಹೀಗೆ.”ಎಂದು ಜಾಮದಾರ್ ಅಭಿಪ್ರಾಯ ಪಟ್ಟರು.
ಐತಿಹಾಸಿಕ ತಪ್ಪುಗಳಿಗಾಗಿ ವೀರಶೈವ ಮಹಾಸಭಾವು ಕೆಳಜಾತಿಗಳಿಗೆ ಸೇರಿದ ಲಿಂಗಾಯತರಲ್ಲಿ ಮೊದಲು ಕ್ಷಮೆಯಾಚಿಸಬೇಕು ಎಂದು ಜಾಮದಾರ್ ಒತ್ತಾಯಿಸಿದರು.
ಲಿಂಗಾಯತರು ಬಸವಣ್ಣ ಮತ್ತು ಅವರ ಅನುಯಾಯಿಗಳ ವಚನಗಳನ್ನು ಧಾರ್ಮಿಕ ಗ್ರಂಥಗಳೆಂದು ಪರಿಗಣಿಸಿದರೆ, ವೀರಶೈವರು ವೇದಗಳು, ಆಗಮ ಮತ್ತು ಸಿದ್ಧಾಂತ ಶಿಖಾಮಣಿಗಳನ್ನು ತಮ್ಮವೆಂದು ಪರಿಗಣಿಸುತ್ತಾರೆ.
ವೀರಶೈವರು ಮತ್ತು ಲಿಂಗಾಯತರ ನಡುವೆ ಅಸ್ಮಿತೆ/ಗುರುತಿನ ಬಗ್ಗೆ ದಶಕಗಳಿಂದ ಜಗಳ ನಡೆಯುತ್ತಿದೆ.
ಲಿಂಗಾಯತರಲ್ಲಿ 102 ಉಪಪಂಗಡಗಳಿದ್ದು, ವೀರಶೈವ ಸಮುದಾಯವು ಉಪಪಂಗಡಗಳಲ್ಲಿ ಒಂದಾಗಿದೆ ಎಂದು ಜಾಮದಾರ್ ತಿಳಿಸಿದ್ದಾರೆ.
2018 ರಲ್ಲಿ, ಕರ್ನಾಟಕ ವಿಧಾನಸಭಾ ಚುನಾವಣೆಗೆ ಸ್ವಲ್ಪ ಮೊದಲು, ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಲಿಂಗಾಯತರಿಗೆ ‘ಅಲ್ಪಸಂಖ್ಯಾತ ಧರ್ಮದ ಸ್ಥಾನಮಾನ ನೀಡಿದ್ದರು., ಆದರೆ ಅದನ್ನು ವೀರಶೈವ ಮಹಾಸಭಾ ವಿರೋಧಿಸಿತ್ತು. ಈ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ತಿರಸ್ಕರಿಸಿತ್ತು.
ಲಿಂಗಾಯತ ಸಮುದಾಯವನ್ನು ಹಿಂದೂ ಧರ್ಮದಿಂದ ಪ್ರತ್ಯೇಕವಾಗಿ ಪರಿಗಣಿಸಬೇಕೇ ಎಂಬ ಚರ್ಚೆಯು ಕೆರಳುತ್ತಿರುವಂತೆಯೇ, ಸಮುದಾಯದ ಉಪ ಪಂಗಡಗಳಲ್ಲಿ ಮೀಸಲಾತಿಗಾಗಿ ಕೂಗು ಕೂಡ ಕೇಳಿ ಬರುತ್ತಿದೆ.
ಈ ವರ್ಷದ ಫೆಬ್ರವರಿಯಲ್ಲಿ, ಸಂಖ್ಯಾತ್ಮಕವಾಗಿ ಪ್ರಭಾವಿಯಾದ ಪಂಚಮಸಾಲಿ ಲಿಂಗಾಯತರು ಮೀಸಲಾತಿಗಾಗಿ ಪ್ರತಿಭಟನೆ ನಡೆಸಿದ್ದರು.
ಶಾಮನೂರು ಹಿಂದೆ ಆರ್ಎಸ್ಎಸ್?
ಶಾಮನೂರು ಶಿವಶಂಕರಪ್ಪರು ಮತಾಂತರ ವಿರೋಧಿ ಅಭಿಯಾನ ನಡೆಸಬೇಕು ಎಂದು ಮಹಾಸಭಾದ
ಸದಸ್ಯರಿಗೆ ಕರೆ ನೀಡಿರುವುದು ಅಪಾಯಕಾರಿಯಾಗಿದೆ. ಇದು ದಲಿತ ಸಮುದಾಯದಿಂದ ಕ್ರಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡವರಿಗೆ ಮತ್ತು ಮತಾಂತರವಾಗಲು ಬಯಸಿದವರಿಗೆ ತೀವ್ರ ಅಪಾಯವನ್ನು ತಂದೊಡ್ಡಬಹುದು. ಮತಾಂತರ ನಿಷೇಧ ಕಾಯ್ದೆ ಬರುವ ಹೊತ್ತಿನಲ್ಲೇ ಶಾಮನೂರು ಶಿವಶಂಕರಪ್ಪ ನೀಡಿರುವ ಕರೆಯ ಹಿಂದೆ ಆರ್ಎಸ್ಎಸ್ ಅಥವಾ ಬಿಜೆಪಿ ಇರಬಹುದೇ?