ಚಾಮರಾಜನಗರ: ನಟ ದರ್ಶನ್ (Actor Darshan)ನ ಮತ್ತೊಂದು ಕರಾಳ ವ್ಯಾಘ್ರ ಮುಖ ಬಯಲಾಗಿದೆ.
ಕಳೆದ ಹತ್ತು ವರ್ಷಗಳ ಹಿಂದೆ ದರ್ಶನ್ ಬಳಿ ಕೆಲಸ ಮಾಡಿ ಕೆಲಸ ಕಳೆದುಕೊಂಡಿದ್ದ ವ್ಯಕ್ತಿ ಪರಿಹಾರ ಕೇಳಲು ಹೋಗಿದ್ದಾಗ ನಾಯಿ ಛೂ ಬಿಟ್ಟಿರುವ ಸಂಗತಿಯೊಂದು ಈಗ ಬೆಳಕಿಗೆ ಬಂದಿದೆ. ದರ್ಶನ್ ನ ವಿಕೃತಿ ಈಗ ಹೊರ ಬಂದಿದೆ. ಟಿ ನರಸೀಪುರ ಸಮೀಪದ ತೂಗುದೀಪ ಫಾರಂ ಹೌಸ್ನಲ್ಲಿ (Thoogudeepa Farm House) ಚಾಮರಾಜನಗರ ತಾಲೂಕಿನ ನಿಜಲಿಂಗನಪುರದ ಮಹೇಶ್ ಎಂಬ ವ್ಯಕ್ತಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು.
![](https://pratidhvani.com/wp-content/uploads/2024/06/1854385234_darshan-thoogudeepa-2-1024x576.jpg)
ಮಹೇಶ್ ಅವರು ಎತ್ತಿಗೆ ಲಾಳ ಕಟ್ಟಿಸಲು ಹೋದ ಸಂದರ್ಭದಲ್ಲಿ ಎತ್ತು ಮಹೇಶ್ ಅವರ ಕಣ್ಣಿಗೆ ತಿವಿದಿತ್ತು. ಕೊಂಬು ತಲೆಯಿಂದ ಹೊರಬಂದಿತ್ತು. ದರ್ಶನ್ ಕಡೆಯುವರು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿ ಮನೆಗೆ ಕಳುಹಿಸಿದ್ದರು. ಆದರೆ, ಆನಂತರ ಆ ಕುಟುಂಬದತ್ತ ತಿರುಗಿ ನೋಡಿರಲೇ ಇಲ್ಲ.
ಆದರೆ, ಮಹೇಶ್ ಹಾಗೂ ಕುಟುಂಬಸ್ಥರು ಪರಿಹಾರ ಕೇಳಲು ಫಾರಂ ಹೌಸ್ ಹತ್ತಿರ ಹೋದಾಗ ಸಾಕು ನಾಯಿ ಛೂ ಬಿಟ್ಟು ಪರಿಹಾರ ಕೇಳಲೂ ಹೋದವರಿಗೆ ಬೆದರಿಸಿದ್ದಾರೆ. ನಂತರ ಮೈಸೂರಿನ ಹೋಟೆಲಿಗೆಂದು ಮಾತುಕತೆಗೆ ಕರೆಯಿಸಿ ರೌಡಿಗಳಿಂದ ಬೆದರಿಕೆಯೊಡಿದ್ದರು ಎಂದು ಮಹೇಶ್ ಕುಟುಂಬಸ್ಥರು ಗಂಭೀರವಾಗಿ ಆರೋಪಿಸಿದ್ದಾರೆ.
ಈ ವಿಚಾರವನ್ನು ಹೊರಗಡೆ ಎಲ್ಲಿಯಾದರೂ ಹೇಳಿದರೆ ಪರಿಸ್ಥಿತಿ ನೆಟ್ಟಗಿರಲ್ಲ ಎಂದು ದರ್ಶನ್ ಗ್ಯಾಂಗ್ ಬೆದರಿಸಿದೆ. ಆದರೆ, ಮಹೇಶ್ ಕಳೆದ 10 ವರ್ಷಗಳಿಂದಲೂ ಹಾಸಿಗೆ ಹಿಡಿದಿದ್ದಾರೆ. ಹೊತ್ತಿನ ಊಟಕ್ಕೂ ಪರದಾಡುತ್ತಿದ್ದಾರೆ. ತಾಯಿ ಮತ್ತು ಹೆಂಡತಿಯಿಬ್ಬರೂ ಕೂಲಿ ಕೆಲಸ ಮಾಡಿಕೊಂಡು ಮಹೇಶ್ ಆರೈಕೆ ಮಾಡುತ್ತಿದ್ದಾರೆ. ಸದ್ಯ ಈ ಸಂಗತಿ ಹೊರ ಬಿದ್ದಿದ್ದು ಜನರು ಮಮ್ಮಲ ಮರಗುತ್ತಿದ್ದಾರೆ.