ದರ್ಶನ್ ರಾಜಕೀಯ ಪ್ರವೇಶದ ಕುರಿತು ಅಭಿಮಾನಿಗಳ ಚರ್ಚೆ ಜೋರಾಗಿರುವ ನಡುವೆಯೇ, ಪವಿತ್ರಾ ಗೌಡ ಪರ ವಕೀಲ ಬಾಲನ್ ನೀಡಿರುವ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.ತಮಿಳುನಾಡಿನ ವಿಜಯ್ ಅವರ ರಾಜಕೀಯ ಘೋಷಣೆಗಳನ್ನು ಉಲ್ಲೇಖಿಸಿ ಮಾತನಾಡಿದ ಬಾಲನ್, “ದರ್ಶನ್ ಸಿಎಂ ಆದರೆ ನಾನು ಡಿಸಿಎಂ” ಎಂದು ವ್ಯಂಗ್ಯಭರಿತವಾಗಿ ಹೇಳಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ಇತ್ತೀಚಿನ ರಾಜಕೀಯದಲ್ಲಿ ಉಚಿತ ಭರವಸೆಗಳ ಮೂಲಕ ಜನರನ್ನು ಸೆಳೆಯುವ ಪ್ರವೃತ್ತಿಯನ್ನು ಟೀಕಿಸಿದರು. “ನನ್ನ ಬಳಿ ಈಗ ಲೋಕಲ್ ಕಾರಿದೆ, ಆದರೆ ರೋಲ್ಸ್ ರಾಯ್ಸ್ ಕಾರು ಬೇಕು. ಒಂದು ಕೋಟಿ ಮನೆ ಇದೆ, ಆದರೆ 120 ಕೋಟಿ ಮನೆ ಕಟ್ಟಿಸಬೇಕು. ಕ್ಯಾರವಾನ್ ಹತ್ತಿ ಭಾಷಣ ಮಾಡುವ ಆಸೆ ಇದೆ” ಎಂದು ಹಾಸ್ಯಾತ್ಮಕವಾಗಿ ಹೇಳಿದರು.
ಮುಂದುವರೆದು, “ಎಲ್ಲರಿಗೂ ಎಂಟು ಗ್ರಾಂ ಚಿನ್ನ, ಮದುವೆಗೆ ಎರಡು ಲಕ್ಷ ರೂ., ಬಸ್ ಮಾತ್ರವಲ್ಲ ರೈಲು ಮತ್ತು ವಿಮಾನವೂ ಫ್ರೀ” ಎಂದು ಹೇಳುವ ಮೂಲಕ ಉಚಿತ ಯೋಜನೆಗಳ ರಾಜಕೀಯದ ಮೇಲೆ ಟಾಂಗ್ ನೀಡಿದರು.

“ರೈಲಿನಿಂದ ಜೈಲಿನವರೆಗೂ ಫ್ರೀ” ಎಂಬ ಬಾಲನ್ ಹೇಳಿಕೆ ಕೂಡ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.ಇನ್ನೊಂದೆಡೆ, ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ನಟ ದರ್ಶನ್ ಸದ್ಯ ಸುಪ್ರೀಂಕೋರ್ಟ್ ಆದೇಶದ ಮೇರೆಗೆ ಜೈಲಿನಲ್ಲಿದ್ದು, ಅವರ ರಾಜಕೀಯ ಪ್ರವೇಶದ ಬಗ್ಗೆ ಅಭಿಮಾನಿಗಳಲ್ಲಿ ಚರ್ಚೆ ಮುಂದುವರಿದಿದೆ.






