ದರ್ಶನ್ ಅಂಡ್ ಗ್ಯಾಂಗ್ ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಬಂಧನವಾಗಿದ್ದು, ಕೆಲವರು ಜೈಲು ಸೇರಿದ್ದಾರೆ. ದರ್ಶನ್ ಸೇರಿದಂತೆ ಇನ್ನೂ ನಾಲ್ಕು ಮಂದಿ ಪೊಲೀಸ್ ಕಸ್ಟಡಿಯಲ್ಲಿದ್ದು, ಇಂದು ನ್ಯಾಯಾಂಗ ಬಂಧನಕ್ಕೆ ಹೋಗಲಿದ್ದಾರೆ. ಈ ನಡುವೆ ದರ್ಶನ್ ಬಿಡಿಸಲು ಸಿಎಂ ಸಿದ್ದರಾಮಯ್ಯ ಮೇಲೆ ಕೆಲವರು ಒತ್ತಡ ಹೇರಲು ಮುಂದಾಗಿದ್ದರು. ಆದರೆ ಸಿಎಂ ಸಿದ್ದರಾಮಯ್ಯ ದರ್ಶನ್ ಗ್ಯಾಂಗ್ ದುಷ್ಕೃತ್ಯ ನೋಡಿ ಇವರೇನು ಮನುಷ್ಯರ ರೀತಿ ವರ್ತಿಸಿದ್ದಾರಾ..? ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ ಅನ್ನೋ ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರ ಆಗಿದೆ.
ಸಿಎಂ ಸಿದ್ದರಾಮಯ್ಯ ಮಾಧ್ಯಮಗಳ ಜೊತೆಗೆ ಮಾತನಾಡಿ ನನ್ನ ಮೇಲೆ ಯಾರೂ ಒತ್ತಡ ಹೇರಿಲ್ಲ. ಒತ್ತಡ ಹೇರಿದರೂ ನಾನು ಮಣಿಯಲ್ಲ ಎಂದು ನೇರವಾಗಿ ಸ್ಪಷ್ಟಪಡಿಸಿದ್ದಾರೆ. ಅಲ್ಲಿಗೆ ಕೆಲವೊಬ್ಬರು ದರ್ಶನ್ ಪರ ಬ್ಯಾಟಿಂಗ್ ಮಾಡಿಲು ಮುಂದಾಗಿರುವುದು ಖಚಿತ ಆಗಿದೆ. ಅದರಲ್ಲಿ ಯಾರೆಲ್ಲಾ ನಾಯಕರು ಇದ್ದಾರೆ ಅನ್ನೋ ಬಗ್ಗೆ ಸಾಕಷ್ಟು ಚರ್ಚೆಗಳು ಶುರುವಾಗಿದೆ. ಈ ನಡುವೆ ಮದ್ದೂರು ಕಾಂಗ್ರೆಸ್ ಶಾಸಕ ಕದಲೂರು ಉದಯ್ ಗೌಡ ಬಹಿರಂಗವಾಗಿಯೇ ಬೆಂಬಲಿಸುವ ಮೂಲಕ ನಾನು ದರ್ಶನ್ ಬೆಂಬಲಿಗ ಎನ್ನುವುದನ್ನು ಬಯಲು ಮಾಡಿದ್ದಾರೆ.
ಚಾಮರಾಜಪೇಟೆ ಕಾಂಗ್ರೆಸ್ ಶಾಸಕ, ಸಚಿವ ಜಮೀರ್ ಅಹ್ಮದ್ ಖಾನ್ಗೆ ದರ್ಶನ್ ಜೊತೆಗೆ ನಿಕಟ ಸಂಪರ್ಕವಿದ್ದು, ಇದನ್ನು ಬಹಿರಂಗವಾಗಿಯೂ ದರ್ಶನ್ ಹಂಚಿಕೊಂಡಿದ್ದರು. ಇದೀಗ ದರ್ಶನ್ ಬಂಧನದ ಬಳಿಕ ಜಮೀರ್ ಸಿಎಂ ಸಿದ್ದರಾಮಯ್ಯ ಬಳಿಗೆ ಹೋಗಿ ಸಹಾಯ ಮಾಡುವಂತೆ ಕೋರಿದ್ದರು ಎನ್ನುವ ಗುಸುಗುಸು ಹರಿದಾಡ್ತಿದೆ. ಆದರೆ ಈ ವಿಚಾರದಲ್ಲಿ ನನ್ನ ಹತ್ತಿರವೂ ಬರಬೇಡ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ ಎನ್ನಲಾಗ್ತಿದೆ. ಆದರೆ ಜಮೀರ್ ಅಹ್ಮದ್ ಖಾನ್ ದರ್ಶನ್ನನ್ನು ಸಂಕಷ್ಟದಿಂದ ಪಾರು ಮಾಡುವ ಪ್ರಯತ್ನ ಮಾಡಿದ್ದಾರೆ ಎನ್ನಲಾಗ್ತಿದೆ.
ಚಿತ್ರರಂಗದಿಂದಲೇ ರಾಜಕೀಯ ರಂಗಕ್ಕೆ ಪ್ರವೇಶ ಪಡೆದಿರುವ ಮುನಿರತ್ನ ಕೂಡ ದರ್ಶನ್ ಜೊತೆಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ದರ್ಶನ್ ಸಂಕಷ್ಟಕ್ಕೆ ಸಿಲುಕಿದ ಬಳಿಕ ಶಾಸಕ ಮುನಿರತ್ನ ಕೂಡ ದರ್ಶನ್ ಅಂಡ್ ಗ್ಯಾಂಗ್ ಪರವಾಗಿ ಬ್ಯಾಟಿಂಗ್ ಮಾಡಿದ್ದಾರೆ ಎನ್ನಲಾಗ್ತಿದೆ. ಈ ಬಗ್ಗೆ ಎಲ್ಲಿಯೂ ಬಹಿರಂಗವಾಗಿ ಮಾತನಾಡದ ಮಾಜಿ ಸಚಿವ ಮುನಿರತ್ನ ಒಳಗೊಳಗೆ ಪ್ರಯತ್ನ ಮಾಡಿದ್ದಾರೆ ಎನ್ನಲಾಗ್ತಿದೆ. ಮುನಿರತ್ನ ಸಂಬಂಧಿಯೂ ಈ ಪ್ರಕರಣದಲ್ಲಿ ಆರೋಪಿ ಆಗಿದ್ದಾರೆ ಎನ್ನಲಾಗ್ತಿದ್ದು, ಪ್ರಯತ್ನ ಇನ್ನೂ ನಡೆಯುತ್ತಿದ್ದು, ಸಫಲ ಆಗಿಲ್ಲ ಎನ್ನುವಂತಾಗಿದೆ.
ಚಲುವರಾಯಸ್ವಾಮಿ, ಸಿದ್ದರಾಮಯ್ಯ ಸಂಪುಟದಲ್ಲಿ ಕೃಷಿ ಸಚಿವರಾಗಿದ್ದು, ಈ ಹಿಂದಿನ ಸರ್ಕಾರದಲ್ಲಿ ದರ್ಶನ್ ಕೃಷಿ ರಾಯಭಾರಿಯಾಗಿಯೂ ನೇಮಕ ಆಗಿದ್ದರು. ಇನ್ನು ಮಂಡ್ಯದಲ್ಲಿ ಲೋಕಸಭಾ ಚುನಾವಣೆ ಸಮಯದಲ್ಲಿ ಕಾಂಗ್ರೆಸ್ ಪರವಾಗಿ ಪ್ರಚಾರ ಮಾಡಿದ್ದರು. ಇನ್ನು ಚಲುವರಾಯಸ್ವಾಮಿ ಕೂಡ ಜಮೀರ್ ಅಹ್ಮದ್ ಖಾನ್ಗೆ ಆತ್ಮೀಯರಾಗಿದ್ದು, ಹೀಗಾಗಿ ದರ್ಶನ್ ಜೊತೆಗೆ ತುಸು ಹೆಚ್ಚಾಗಿಯೇ ಬಾಂಧ್ಯವ ಬೆಳೆದಿತ್ತು. ಈ ಸಲುಗೆ ಮೇಲೆ ಸಿದ್ದರಾಮಯ್ಯ ಮನವೊಲಿಕೆ ಕಸರತ್ತು ಮಾಡಿದ್ದಾರೆ ಎನ್ನುವುದು ಚರ್ಚೆ ಆಗ್ತಿದೆ.
ಇನ್ನು ಬಹಿರಂಗವಾಗಿ ಸುಮಲತಾ ಜೊತೆಗೆ ನಿಂತು ದರ್ಶನ್ ಪ್ರಚಾರ ಮಾಡಿ ಗೆಲ್ಲಿಸಿದ್ದರು. ಆ ಬಳಿಕ ಸುಮಲತಾ ಕೂಡ ದರ್ಶನ್ ಜೊತೆಗೆ ಉತ್ತಮ ಬಾಂಧವ್ಯ ಇರಿಸಿಕೊಂಡಿದ್ದರು. ಸುಮಲತಾ ಅವರನ್ನು ನನ್ನ ಅಮ್ಮ ಎಂದು ಬಹಿರಂಗವಾಗಿ ಹೇಳಿಕೊಂಡಿದ್ದರು. ಅಭಿ ನನ್ನ ಸ್ವಂತ ತಮ್ಮ ಎಂದಿದ್ದರು. ಪ್ರಕರಣ ಬೆಳಕಿಗೆ ಬಂದ ದಿನವೇ ಪೊಲೀಸ್ ಅಧಿಕಾರಿಗಳನ್ನು ಸಂಪರ್ಕ ಮಾಡಿದ್ದರು ಎನ್ನಲಾಗಿದೆ. ಆದರೆ ಮಾಜಿ ಸಂಸದೆ ಮಾತಿಗೆ ಪೊಲೀಸರು ಮಣಿಯುವ ಕೆಲಸ ಮಾಡಿಲ್ಲ ಅನ್ನೋದು ಡೀ ಗ್ಯಾಂಗ್ ಸುತ್ತಮುತ್ತ ಹರಿದಾಡುತ್ತಿರುವ ಒತ್ತಡ ತಂತ್ರಗಾರಿಕೆ ಮಾತುಗಳು.
ಕೃಷ್ಣಮಣಿ