ಲೋಕಾಯುಕ್ತ ಮತ್ತು ಕ್ರಿಮಿನಲ್ ಮೊಕದ್ದಮ್ಮೆಗಳನ್ನು ಎದುರಿಸುತ್ತಿರೋ ಶಿಕ್ಷಣ ಇಲಾಖೆಯ ಗ್ರೂಪ್-ಎ ಕಿರಿಯ ಶ್ರೇಣಿಯ 23 ಶಿಕ್ಷಣಾಧಿಕಾರಿಗಳಿಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಿಂಬಡ್ತಿ ನೀಡಿದೆ.
ಹೌದು, ಈ ಕುರಿತು ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯಿಂದ ಆದೇಶ ಹೊರಡಿಸಿದ್ದು, ಗ್ರೂಪ್-ಬಿ ಮುಖ್ಯ ಶಿಕ್ಷಕರು ಹಾಗೂ ತತ್ಸಮಾನ ವೃಂದದ ಅಧಿಕಾರಿಗಳನ್ನು ಜೇಷ್ಠತೆ ಮತ್ತು ಅರ್ಹತೆ ಆಧಾರದ ಮೇಲೆ ನಾಗರೀಕ ಸೇವಾ ನಿಯಮದಡಿ (KCSR Rules) ಗ್ರೂಪ್-ಎ ಕಿರಿಯ ಶ್ರೇಣಿ ಶಿಕ್ಷಣಾಧಿಕಾರಿ ಹಾಗೂ ತತ್ಸಮಾನ ವೃಂದದಲ್ಲಿ ಸ್ವತಂತ್ರ ಪ್ರಭಾರಿಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಪ್ರಸ್ತುತ ಈ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ, ಕ್ರಿಮಿನಲ್ ಮೊಕದ್ದಮ್ಮೆಗಳು ಬಾಕಿ ಇರುವುದರಿಂದ ತಕ್ಷಣದಿಂದ ಜಾರಿಗೆ ಬರುವಂತೆ ಬಿಡುಗಡೆಗೊಳಿಸಬೇಕು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಆದೇಶಿಸಿದೆ.
ಇನ್ನೂ ಈ ಪ್ರಕರಣಗಳಲ್ಲಿ ಇಲಾಖೆ ನೋಟಿಸ್ಸಿಗೆ ಉತ್ತರ ನೀಡದ ಕೆಲವು ಅಧಿಕಾರಿಗಳಿದ್ದರೇ, ಉಳಿದವು ಕ್ರಿಮಿನಲ್ ಮೊಕದ್ದಮ್ಮೆ ಮತ್ತು ಲೋಕಾಯುಕ್ತ ವಿಚಾರಣೆಗಳಾಗಿವೆ. ಈ ಹಿನ್ನಲೆಯಲ್ಲಿ ಈ ಅಧಿಕಾರಿಗಳನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಿ ಆದೇಶಿಸಲಾಗಿದೆ. ಅಲ್ಲದೇ ಮುಂದಿನ ಸ್ಥಳ ನಿಯುಕ್ತಿಗಾಗಿ ಶಿಕ್ಷಣ ಇಲಾಖೆ ಆಯುಕ್ತರನ್ನು ಭೇಟಿಯಾಗಿ ವರದಿ ಮಾಡಿಕೊಳ್ಳುವಂತೆ ತಿಳಿಸಿದೆ.