ಬೆಂಗಳೂರು : ಭಾರತೀಯ ಕ್ರಿಕೆಟ್ ರಂಗದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿ ಸಾಧನೆ ಮಾಡಿದವರನ್ನು ಗುರುತಿಸಿ ಬಿಸಿಸಿಐ ಗೌರವಿಸಲು ಸಜ್ಜಾಗಿದೆ.
ಸಂಸ್ಥೆಯು ಕೊಡಮಾಡುವ ಅತ್ಯುನ್ನತ ಗೌರವವಾದ ಕರ್ನಲ್ ಸಿಕೆ ನಾಯ್ಡು ಜೀವಮಾನ ಸಾಧನೆ ಪ್ರಶಸ್ತಿಯನ್ನು ಭಾನುವಾರ ನಡೆಯಲಿರುವ ನಮನ್ ಪ್ರಶಸ್ತಿ ಸಮಾರಂಭದಲ್ಲಿ ಕ್ರಿಕೆಟ್ ರಂಗದಲ್ಲಿ ಸಾಧನೆ ಮಾಡಿದ ರೋಜರ್ ಬಿನ್ನಿ, ರಾಹುಲ್ ದ್ರಾವಿಡ್ ಮತ್ತು ಮಿಥಾಲಿ ರಾಜ್ ಅವರಿಗೆ ನೀಡಿ ಗೌರವಿಸಲು ಬಿಸಿಸಿಐ ಸಿದ್ಧತೆ ಮಾಡಿಕೊಂಡಿದೆ.
27 ಟೆಸ್ಟ್ ಮತ್ತು 72 ಏಕದಿನ ಪಂದ್ಯಗಳಲ್ಲಿ ತಮ್ಮ ಪ್ರತಿಭೆಯನ್ನು ತೋರಿರುವ ರೋಜರ್ ಬಿನ್ನಿ, 1983 ರಲ್ಲಿ ಭಾರತ ವಿಶ್ವಕಪ್ ಗೆದ್ದ ತಂಡದ ಭಾಗವಾಗಿದ್ದರು. ಭಾರತೀಯ ಕ್ರಿಕೆಟ್ನ ಭವಿಷ್ಯವನ್ನು ರೂಪಿಸಿದ್ಧ ಆ ಪಂದ್ಯಾವಳಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿ ಬಿನ್ನಿ ಹೊರಹೊಮ್ಮಿದ್ದರು.
ಇದನ್ನೂ ಓದಿ : ಕೆಎಸ್ಆರ್ಟಿಸಿ ಪ್ರಯಾಣಿಕರಿಗೆ ಗುಡ್ನ್ಯೂಸ್: ಹೊಸ ಸ್ಲಿಪರ್ ಕೋಚ್ ಬಸ್ ಗಳ ಆಗಮನ: ವೈಶಿಷ್ಟ್ಯವೇನು ?
1985 ರಲ್ಲಿ ವಿಶ್ವ ಕ್ರಿಕೆಟ್ ಚಾಂಪಿಯನ್ಶಿಪ್ ಗೆದ್ದ ಭಾರತ ಕ್ರಿಕೆಟ್ ತಂಡದಲ್ಲಿ ಗುರುತಿಸಿಕೊಂಡಿದ್ದರು. ಬಳಿಕ 2000ನೇ ಇಸವಿಯಲ್ಲಿ ವಿಶ್ವಕಪ್ ಗೆದ್ದ ಭಾರತದ ಅಂಡರ್ -19 ತಂಡದ ತರಬೇತುದಾರರಾಗಿ ಸೇವೆ ಸಲ್ಲಿಸಿದ್ದರು. ನಂತರ ರಾಷ್ಟ್ರೀಯ ಪುರುಷರ ತಂಡದ ಆಯ್ಕೆದಾರರಾಗಿಯೂ ಬಿನ್ನಿ ಕೆಲಸ ನಿರ್ವಹಿಸಿದ್ದರು. ಅಲ್ಲದೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI)ನ ಅಧ್ಯಕ್ಷರಾಗಿಯೂ ಜವಾಬ್ದಾರಿ ನಿಭಾಯಿಸಿದ್ದರು.
ಇನ್ನೂ ರಾಹುಲ್ ದ್ರಾವಿಡ್ 509 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಆಡಿದ್ದು, 24,000 ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. 400 ಕ್ಕೂ ಹೆಚ್ಚು ಕ್ಯಾಚ್ಗಳ ಕೀರ್ತಿಗೆ ಭಾಜನರಾಗಿದ್ದಾರೆ. ಕಳೆದ 2007 ರಲ್ಲಿ ಇಂಗ್ಲೆಂಡ್ನಲ್ಲಿ ಭಾರತವು ಐತಿಹಾಸಿಕ ಟೆಸ್ಟ್ ಸರಣಿ ಗೆಲುವಿಗೆ ನಾಯಕತ್ವ ವಹಿಸಿದ್ದರು. ಬಳಿಕ ಪುರುಷರ ಅಂಡರ್-19 ತಂಡ, ಭಾರತ ಎ ಹಾಗೂ 2024 ರ ಟಿ20 ವಿಶ್ವಕಪ್ ಗೆದ್ದ ರಾಷ್ಟ್ರೀಯ ಪುರುಷರ ತಂಡದ ತರಬೇತುದಾರರಾಗಿಯೂ ದ್ರಾವಿಡ್ ಕಾರ್ಯ ನಿರ್ವಹಿಸಿದ್ದರು.
ಇನ್ನೊಬ್ಬ ಮಹಿಳಾ ಆಟಗಾರ್ತಿ ಮಿಥಾಲಿ ರಾಜ್ ಭಾರತ ಪರ ಎಲ್ಲಾ ರೀತಿಯ ಸರಣಿಗಳೂ ಸೇರಿ 333 ಪಂದ್ಯಗಳಲ್ಲಿ ತಮ್ಮ ಪ್ರದರ್ಶನ ನೀಡಿದ್ದಾರೆ. 10,000 ಕ್ಕೂ ಹೆಚ್ಚು ರನ್ ಗಳಿಸಿದ ವಿಶ್ವದ ಮೊದಲ ಮಹಿಳಾ ಕ್ರಿಕೆಟ್ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅವರ ನಾಯಕತ್ವದಲ್ಲಿ ಭಾರತ ಎರಡು ವಿಶ್ವಕಪ್ ಫೈನಲ್ ತಲುಪಿತ್ತು ಎನ್ನುವುದು ಗಮನಾರ್ಹ ಸಂಗತಿ.
ಹೀಗಾಗಿ ಕ್ರಿಕೆಟ್ ಕ್ಷೇತ್ರದಲ್ಲಿ ಈ ಎಲ್ಲ ಆಟಗಾರರು ಮಾಡಿರುವ ಅಭೂತಪೂರ್ವ ಹಾಗೂ ಅವಿಸ್ಮರಣೀಯ ಸಾಧನೆಯನ್ನು ಪರಿಗಣಿಸಿ ಬಿಸಿಸಿಐ ಜೀವಮಾನ ಸಾಧನೆ ಪ್ರಶಸ್ತಿ ನೀಡುವುದಾಗಿ ಘೋಷಿಸಿದೆ. ಇದರಲ್ಲಿ ರೋಜರ್ ಬಿನ್ನಿ ಹಾಗೂ ರಾಹುಲ್ ದ್ರಾವಿಡ್ ಇಬ್ಬರೂ ಕರ್ನಾಟಕವರಾಗಿದ್ದು ವಿಶೇಷ.