ಕೋವಿಡ್ ಹೆಚ್ಚಳದಿಂದಾಗಿ, ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿ ಗುರುವಾರದಿಂದ ಭಾನುವಾರದ ತನಕ ಒಟ್ಟು ನಾಲ್ಕು ದಿನ ಕಠಿಣ ಲಾಕ್ಡೌನ್ ಮಾಡಲಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಇಂದು ಸುದ್ದಿಗೋಷ್ಟಿ ನಡೆಸಿ ತಿಳಿಸಿದ್ದು, ಈ ವೇಳೆ ಈ ಅವಧಿಯಲ್ಲಿ ಎಲ್ಲಾ ಕೈಗಾರಿಕಾ ಚಟುವಟಿಕೆಗಳು, ಗಾಂಧಿ ಬಜಾರ್, ಸಗಟು ದಿನಸಿ ವ್ಯಾಪಾರ, ಎಪಿಎಂಸಿ ಸಂಪೂರ್ಣವಾಗಿ ಸ್ಥಬ್ತವಾಗಲಿದೆ ಎಂದಿದ್ದಾರೆ. ಇದಕ್ಕೆ ಶಿವಮೊಗ್ಗ ಜಿಲ್ಲಾ ರೈತಸಂಘ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಇಂದೊಂದು ಅವೈಜ್ಞಾನಿಕ ನಿರ್ಧಾರ, ಇದರಿಂದಾಗಿ ನಗರದ ಎಪಿಎಂಸಿ ಮಾರುಕಟ್ಟೆ ಕೂಡ ಸ್ಥಗಿತಗೊಳ್ಳುತ್ತದೆ.ಸತತವಾಗಿ ನಾಲ್ಕೈದು ದಿನಗಳ ಕಾಲ ಮಾರುಕಟ್ಟೆ ಮುಚ್ಚಿದರೇ ರೈತರು ಬೆಳೆದ ತರಕಾರಿ, ಹಣ್ಣು, ಹೂ ಇತ್ಯಾದಿಗಳನ್ನು ರೈತರು ಎಲ್ಲಿ ಮಾರಾಟ ಮಾಡಬೇಕು ಎಂದು ಜಿಲ್ಲಾ ರೈತ ಸಂಘ ಆಕ್ರೋಶ ವ್ಯಕ್ತಪಡಿಸಿದೆ.
ಶಿವಮೊಗ್ಗ ನಗರದ ಮಾರುಕಟ್ಟೆಗೆ ಕೇವಲ ಶಿವಮೊಗ್ಗ ಜಿಲ್ಲೆಯ ರೈತರಲ್ಲದೇ ಅಕ್ಕ ಪಕ್ಕದ ಜಿಲ್ಲೆಯ ರೈತರು ಸಹ ತರಕಾರಿ, ಹಣ್ಣು ಇತ್ಯಾದಿಗಳನ್ನು ರವಾನೆ ಮಾಡುತ್ತಾರೆ.ಶಿವಮೊಗ್ಗ ಮಾರುಕಟ್ಟೆಯಿಂದ ಕೂಡ ತರಕಾರಿ ಬೆಳೆಗಳು ಬೇರೆ ಜಿಲ್ಲೆಗಳಿಗೆ ರವಾನೆಯಾಗುತ್ತದೆ. ನಾಲ್ಕೈದು ದಿನ ಕಂಪ್ಲೀಟ್ ಲಾಕ್ ಡೌನ್ ಮಾಡಿದರೇ ಮಾರುಕಟ್ಟೆ ನೆಚ್ಚಿಕೊಂಡ ರೈತರ ಪಾಡಿನ ಬಗ್ಗೆ ಈ ಮಹಾನಾಯಕರುಗಳು ಕನಿಷ್ಟ ಯೋಚನೆಯನ್ನು ಮಾಡದಿರುವುದು ಸಚಿವರ ಅಪ್ರಬುದ್ದತೆಯನ್ನು ಪ್ರದರ್ಶಿಸುತ್ತದೆ ಎಂದು ಕೆ.ಎಸ್ ಈಶ್ವರಪ್ಪ ವಿರುದ್ಧ ಜಿಲ್ಲಾ ರೈತಸಂಘದ ಪ್ರಧಾನ ಕಾರ್ಯದರ್ಶಿ ಡಿ.ವಿ.ವೀರೇಶ್ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.
ತರಕಾರಿ ಬೆಳೆಗಳನ್ನು ನಾಲ್ಕೈದು ದಿನಗಳ ಕಾಲ ಸಂರಕ್ಷಿಸಿಡಲು ಗ್ರಾಮೀಣ ಪ್ರದೇಶಗಳಲ್ಲಿ ಸರ್ಕಾರ ಯಾವುದೇ ಶೈತ್ಯಾಗಾರಗಳನ್ನು,ಗೋಧಾಮುಗಳನ್ನಾಗಲೀ ಇದುವರೆವಿಗೂ ತೆರೆದಿಲ್ಲ,,ಈ ಸಂಧರ್ಭದಲ್ಲಿ ರೈತರ ಬೆಳೆ ರಕ್ಷಣೆ ಮಾಡುವವರ್ಯಾರು? ರೈತರಿಗಾಗುವ ನಷ್ಟವನ್ನು ಈಶ್ವರಪ್ಪನವರು ಮತ್ತು ಇತರರು ತುಂಬಿಕೊಡುತ್ತಾರಾ…?ಕಷ್ಟದಲ್ಲಿರುವ ಜನರಿಗೆ ಹಣ ನೀಡಲು ಸರ್ಕಾರದ ಬಳಿ ನೋಟು ಪ್ರಿಂಟಿಂಗ್ ಮೆಷಿನ್ ಇಲ್ಲ ಎಂದು ಹೇಳುವ ಈಶ್ವರಪ್ಪನವರು ಜನರು, ರೈತರನ್ನು ರಕ್ಷಣೆ ಮಾಡಲು ಯಾವ ಸೌಲಭ್ಯಗಳನ್ನು ಕೊಡುತ್ತಾರೆ..? ಎಂದು ಪ್ರಶ್ನಿಸಿದ್ದಾರೆ.
ಏನನ್ನೂ ಮಾಡುವುದಿಲ್ಲ ಎನ್ನುವುದಾದರೇ ಇದನ್ನು ಸರ್ಕಾರ ಎಂದು ಹೇಗೆ ಕರೆಯಬೇಕು?ಈ ದಿನ ನಿಮ್ಮ ಕ್ಷೇತ್ರದ ರೈತನೊಬ್ಬ ಬೆಳೆದ ಹೂ ಮಾರಾಟವಾಗದೇ ರಸ್ತೆಯಲ್ಲಿ ಹಾಕಿ ಹೋಗಿದ್ದಾರೆ. ಇದರಿಂದಾಗಿ ಆ ರೈತನಿಗೆ ದಿನವೊಂದಕ್ಕೆ ಸುಮಾರು ನಾಲ್ಕು ಸಾವಿರ ರೂಪಾಯಿ ನಷ್ಠವಾಗುತ್ತಿದೆ.ಇದನ್ನು ಭರಿಸುವ ಶಕ್ತಿ ಸರ್ಕಾರ ಮತ್ತು ಈಶ್ವರಪ್ಪನವರಿಗೆ ಇಲ್ಲವೆಂದಾದ ಮೇಲೆ ಅವೈಜ್ಞಾನಿಕವಾಗಿ ಮಾರುಕಟ್ಟೆ ಮುಚ್ಚುವ ನೈತಿಕ ಹಕ್ಕು ಇದೆಯೇ..? ಎಂದು ವಾಗ್ದಾಳಿ ನಡೆಸಿದ್ದಾರೆ.
ಕಷ್ಟದ ಸಮಯದಲ್ಲಿ ರೈತರ ನೆರವಿಗೆ ಬರಬೇಕಾದ ಸರ್ಕಾರ ಈ ರೀತಿಯ ಅವೈಜ್ಞಾನಿಕ ಕ್ರಮಗಳನ್ನು ಕೈಗೊಂಡು,ರೈತರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡುವ ನಿರ್ಧಾರವನ್ನು ತಕ್ಷಣವೇ ಹಿಂಪಡೆಯುವಂತೆ ಕೂಡಲೇ ಈಶ್ವರಪ್ಪನವರು ಮತ್ತು ಇತರರಿಗೆ ಸೂಚನೆ ನೀಡಿ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಜಿಲ್ಲಾ ರೈತಸಂಘದ ಪ್ರಧಾನ ಕಾರ್ಯದರ್ಶಿ ಡಿ.ವಿ.ವೀರೇಶ್ ಒತ್ತಾಯಿಸಿದ್ದಾರೆ.
ರೈತರ ಬದುಕಿನ ಬಗ್ಗೆ ಕನಿಷ್ಠ ಜ್ಞಾನ ಇಲ್ಲದ ನಿಮ್ಮ ಮಂತ್ರಿಗಳಿಗೆ ರೈತರ ಸಂಕಷ್ಟಗಳ ಬಗ್ಗೆ ಅರ್ಥಮಾಡಿಸಿ. ನಾಲ್ಕೈದು ದಿನಗಳ ಅವೈಜ್ಞಾನಿಕ ಮಾರುಕಟ್ಟೆ ಸ್ಥಗಿತ ಮಾಡದೇ ಸರ್ಕಾರ ರೈತರ ನೆರವಿಗೆ ಧಾವಿಸಬೇಕೆಂದು ಎಂದು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.