ಬೆಡ್ ದಂಧೆ ವಿಚಾರ ಸಂಸದ ತೇಜಸ್ವಿ ಸೂರ್ಯ, ಶಾಸಕ ಸತೀಶ್ ರೆಡ್ಡಿ, ಎಲ್.ಎ.ರವಿ ಸುಬ್ರಹ್ಮಣ್ಯ ಹಾಗೂ ಉದಯ್ ಗರುಡಾಚಾರ್ ಅವರ ತಂಡವು ಬಿಬಿಎಂಪಿ ದಕ್ಷಿಣ ವಲಯದ ವಾರ್ ರೂಮ್ಗೆ ಭೇಟಿ ನೀಡಿ, ಬೆಡ್ ದಂಧೆಯನ್ನು ಬಯಲಿಗೆಳೆದಿದ್ದರು. ಆದ್ರೆ ಸ್ವತಃ ಅವರ ತಂಡದಲ್ಲಿಯೇ ಇವರು ಶಾಸಕ ಸತೀಶ್ ರೆಡ್ಡಿ ಕೂಡ ದಂಧೆಯಲಿ ಶಾಮೀಲಾಗಿದ್ದಾರೆಂಬ ಆರೋಪ ಕೇಳಿಬರುತ್ತಿದೆ. ಮತ್ತೊಂದೆಡೆ ಬೊಮ್ಮನಹಳ್ಳಿ ವಲಯದ ಕೋವಿಡ್ ವಾರ್ ರೂಂ ಬಳಿ ಅಧಿಕಾರಿಯ ಮೇಲೆ ಸತೀಶ್ ರೆಡ್ಡಿಯವರ ಆಪ್ತರಿಂದ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ. ಈ ಕೃತ್ಯ ಎಸಗಿದವರ ಮೇಲೆ ಪ್ರಕರಣ ದಾಖಲಿಸಿ, ಕೂಡಲೇ ಬಂಧಿಸಿ ತನಿಖೆ ನಡೆಸುವಂತೆ ಕೆಆರ್ಎಸ್ ಪಕ್ಷದ ರಾಜ್ಯಾಧ್ಯಕ್ಷ ರವಿಕೃಷ್ಣ ರೆಡ್ಡಿ ಒತ್ತಾಯಿಸಿದ್ದಾರೆ.
ಹೆಚ್ಎಸ್ಆರ್ ಬಡಾವಣೆಯಲ್ಲಿರುವ ಬೊಮ್ಮನಹಳ್ಳಿ ವಲಯದ ವಾರ್ ರೂಂಗೆ ನೋಡಲ್ ಅಧಿಕಾರಿ ರಾಜೇಂದ್ರ ಕುಮಾರ್ ಕಟಾರಿಯಾ ನೇತೃತ್ವದ ಹಿರಿಯ ಅಧಿಕಾರಿಗಳ ತಂಡವು ಕಳೆದ ವಾರ ಭೇಟಿ ಕೊಟ್ಟಿದ್ದ ಸಂದರ್ಭದಲ್ಲಿ ಅಲ್ಲಿ ಸಿಬ್ಬಂದಿಯಲ್ಲದ ಬಾಬು ಎನ್ನುವ ಶಾಸಕ ಸತೀಶ್ ರೆಡ್ಡಿಯವರ ಆಪ್ತ ವಾರ್ ರೂಂನಲ್ಲಿ ಇದ್ದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಅವರನ್ನು ಹೊರಗೆ ಕಳುಹಿಸಿದ್ದರು. ಅವರನ್ನು ಒಳಗೆ ಬಿಟ್ಟುಕೊಳ್ಳಬಾರದು ಎಂದು ಅಧಿಕಾರಿ ತಾಕೀತು ಮಾಡಲಾಗಿತ್ತು.

ಅದಾದ ಒಂದೆರಡು ದಿನದ ನಂತರ, ‘ಕೋವಿಡ್ ರೋಗಿಗಳಿಗೆ ಹಾಸಿಗೆ ಸಿಗುತ್ತಿಲ್ಲ’ ಎಂದು ಆರೋಪಿಸಿ ಶಾಸಕ ಸತೀಶ್ ರೆಡ್ಡಿ ನೇತೃತ್ವದಲ್ಲಿ ಬೆಂಬಲಿಗರು ವಾರ್ ರೂಂ ಬಳಿ ಪ್ರತಿಭಟನೆ ನಡೆಸಿ, ಅಲ್ಲಿದ್ದ ಅಧಿಕಾರಿಯೊಬ್ಬರನ್ನು (IAS ಅಧಿಕಾರಿ ಎನ್ನಲಾಗುತ್ತಿದೆ) ಎಳೆದಾಡಿ ಹಲ್ಲೆಗೂ ಮುಂದಾಗಿರುತ್ತಾರೆ. ಆ ಅಧಿಕಾರಿಗೆ ಪೊಲೀಸರು ರಕ್ಷಣೆ ಒದಗಿಸದೇ ಹೋಗಿದ್ದರೆ ಅವರ ಮೇಲೆ ಮಾರಣಾಂತಿಕ ಹಲ್ಲೆ ಆಗುತ್ತಿತ್ತು ಎಂದು ರೆವಿಕೃಷ್ಣ ರೆಡ್ಡಿ ಆರೋಪಿಸಿದ್ದಾರೆ. ಜೊತೆಗೆ ಈ ಸಂಬಂಧ ವಿಡಿಯೋವನ್ನು ಫೇಸ್ಬುಕ್ನಲ್ಲಿ ಹಂಚಿಕೊಂಡಿದ್ದಾರೆ.
ಒಂದು ಉತ್ತಮವಾದ, ಪಾರದರ್ಶಕವಾದ, ಅನುಚಿತ ಪ್ರಭಾವ ಬೀರಲಾಗದ ಹಾಸಿಗೆ ಹಂಚಿಕೆ ವ್ಯವಸ್ಥೆಯನ್ನು ಮಾಡಲಾಗದ ಸರ್ಕಾರ ಮತ್ತು ಅದನ್ನು ನಡೆಸುತ್ತಿರುವ ಆಡಳಿತಾರೂಢ ಪಕ್ಷದ ಶಾಸಕರು ಮತ್ತು ಸಂಸದರು, ಇತ್ತೀಚೆಗೆ ತುಂಬಾ ಕೀಳುಮಟ್ಟದ ಆರೋಪಗಳನ್ನು ಮಾಡಿ, ಜನರಲ್ಲಿ ಸಾಮರಸ್ಯವನ್ನು ಕೆಡಿಸುವ ಪಿತೂರಿಯನ್ನು ಮಾಡಿದ್ದರು. ಅದಕ್ಕೆ ಮಾಧ್ಯಮಗಳು ಸಹ ಹಿಂದೆಮುಂದೆ ನೋಡದೆ ಅಗತ್ಯಕ್ಕಿಂತ ಹೆಚ್ಚಿನ ಪ್ರಚಾರ ನೀಡಿದ್ದರು. ಈ ಮೇಲಿನ ವಿಡಿಯೋ ಆಧಾರದ ಮೇಲೆ ಪೊಲೀಸರು ಅದರಲ್ಲಿರುವ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಕಾರ್ಯಕರ್ತರ ಮೇಲೆ ಪ್ರಕರಣ ದಾಖಲಿಸಿ ಬಂಧಿಸಬೇಕೆಂದು ಒತ್ತಾಯಿಸಿದ್ದಾರೆ.