ಪ್ರಧಾನಿಯೊಬ್ಬರನ್ನು ಕಾಂಗ್ರೆಸ್ ಪ್ರಧಾನಿ ಅಥವಾ ಬಿಜೆಪಿ ಪ್ರಧಾನಿ ಅಥವಾ ಯಾವುದೇ ರಾಜಕೀಯ ಪಕ್ಷದ ಪ್ರಧಾನಿ ಎಂದು ಯಾರೂ ಹೇಳಲು ಸಾಧ್ಯವಿಲ್ಲ. ಸಂವಿಧಾನದ ಪ್ರಕಾರ ಒಮ್ಮೆ ಪ್ರಧಾನಿಯಾಗಿ ಆಯ್ಕೆಯಾದರೆ ಅವರು ನಮ್ಮ ದೇಶದ ಪ್ರಧಾನಿ. ಆ ಹುದ್ದೆಯ ಬಗ್ಗೆ ಪ್ರತಿಯೊಬ್ಬ ನಾಗರಿಕನಿಗೂ ಹೆಮ್ಮೆ ಇರಬೇಕು ಎಂದು ನ್ಯಾಯಮೂರ್ತಿ ಪಿ ವಿ ಕುಂಞ ಕೃಷ್ಣನ್ ಹೇಳಿದ್ದಾರೆ.
ಸರ್ಕಾರದ ನೀತಿಗಳಲ್ಲಿ ಮತ್ತು ಪ್ರಧಾನ ಮಂತ್ರಿಯ ರಾಜಕೀಯ ನಿಲುವುಗಳಲ್ಲಿ ಅವರು ಭಿನ್ನವಾಗಿರಬಹುದು. ಆದರೆ ನೈತಿಕತೆಯನ್ನು ಹೆಚ್ಚಿಸುವ ಸಂದೇಶವಿರುವ ಪ್ರಧಾನ ಮಂತ್ರಿಯ ಭಾವಚಿತ್ರದ ಲಸಿಕೆ ಪ್ರಮಾಣಪತ್ರವನ್ನು ಪಡೆಯಲು ನಾಗರಿಕರು, ವಿಶೇಷವಾಗಿ ಈ ಸಾಂಕ್ರಾಮಿಕ ಪರಿಸ್ಥಿತಿಯಲ್ಲಿ ನಾಚಿಕೆಪಡಬೇಕಾಗಿಲ್ಲ ಎಂದು ವಿವರಿಸಿದ್ದಾರೆ.
ಅರ್ಜಿದಾರರು 1 ಲಕ್ಷ ರೂ. ದಂಡವನ್ನು ಆರು ವಾರಗಳಲ್ಲಿ ಕೇರಳ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ (ಕೆಎಲ್ಎಸ್ಎ) ಠೇವಣಿ ಮಾಡಬೇಕಾಗುತ್ತದೆ. ಅವರು ದಂಡವನ್ನು ಸಕಾಲದಲ್ಲಿ ಠೇವಣಿ ಮಾಡಲು ವಿಫಲವಾದರೆ ಅವರ ಆಸ್ತಿಯನ್ನು ಮಾರಾಟ ಮಾಡುವ ಮೂಲಕ ಮೊತ್ತವನ್ನು ವಸೂಲಿ ಮಾಡಬೇಕು ಎಂದು ನ್ಯಾಯಾಲಯ ಹೇಳಿದೆ.
ಅರ್ಜಿಯ ಹಿಂದೆ ರಾಜಕೀಯ ಉದ್ದೇಶವಿದೆ ಎಂದು ತೋರುತ್ತದೆ. ಇದು ಮಹತ್ವದ ಅರ್ಜಿಯಲ್ಲ. ಅರ್ಜಿಯ ಹಿಂದಿನ ಉದ್ದೇಶ ಸಾರ್ವಜನಿಕ ಒಳಿತಿಗಾಗಿ ಅಲ್ಲ, ಪ್ರಚಾರಕ್ಕಾಗಿ. ಗಂಭೀರ ಪ್ರಕರಣಗಳು ನ್ಯಾಯಾಲಯದಲ್ಲಿ ಹೆಚ್ಚುತ್ತಿರುವಾಗ ಇಂಥ ಅನಗತ್ಯ ಅರ್ಜಿಗಳನ್ನು ಪ್ರೋತ್ಸಾಹಿಸಲು ಸಾಧ್ಯವಿಲ್ಲ ಎಂದು ನ್ಯಾಯಾಧೀಶರು ತಿಳಿಸಿದ್ದಾರೆ.

ಖಾಸಗಿ ಆಸ್ಪತ್ರೆಗಳಲ್ಲಿ ಜನರು ಲಸಿಕೆಗಾಗಿ ಹಣ ಪಾವತಿಸುತ್ತಾರೆ. ಹೀಗಿರುವಾಗ ಪ್ರಮಾಣ ಪತ್ರದಲ್ಲಿ ಪ್ರಧಾನಿ ಮೋದಿಯವರ ಚಿತ್ರ ಇರುವುದು ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಮಾಹಿತಿ ಹಕ್ಕು (ಆರ್ಟಿಐ) ಕಾರ್ಯಕರ್ತ ಪೀಟರ್ ಮೈಲಿಪರಂಪಿಲ್ ಅವರು ಅರ್ಜಿ ಸಲ್ಲಿಸಿದ್ದರು.
ವೈಯಕ್ತಿಕ ವಿವರ ಹೊಂದಿರುವ ಪ್ರಮಾಣಪತ್ರವು ʼಖಾಸಗಿ ದಾಖಲೆʼ ಎಂದು ಅವರು ವಾದಿಸಿದ್ದರು. ಆದ್ದರಿಂದ, ವ್ಯಕ್ತಿಯ ಗೌಪ್ಯತೆಯಲ್ಲಿ ಹಸ್ತಕ್ಷೇಪ ಮಾಡುವುದು ಸೂಕ್ತವಲ್ಲ ಎಂಬುದು ಅವರ ವಾದವಾಗಿತ್ತು.
ಪ್ರಧಾನಿಯ ಕುರಿತು ನಿಮಗೇಕೆ ನಾಚಿಕೆ? ಅವರು ಜನಾದೇಶದ ಮೂಲಕ ಅಧಿಕಾರಕ್ಕೆ ಬಂದವರು. ನಮಗೆ ವಿಭಿನ್ನ ರಾಜಕೀಯ ದೃಷ್ಟಿಕೋನಗಳು ಇರಬಹುದು, ಆದರೆ ಅವರು ಇನ್ನೂ ನಮ್ಮ ಪ್ರಧಾನಿ ಎಂದು ನ್ಯಾಯಾಲಯ ಸ್ಪಷ್ಟ ಪಡಿಸಿದೆ.






