
ಬೆಲೆ ಏರಿಕೆ ಖಂಡಿಸಿ ಕೇಂದ್ರ ಸರ್ಕಾರದ ವಿರುದ್ಧ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಡಿಸಿಎಂ ಡಿ.ಕೆ ಶಿವಕುಮಾರ್ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ವಿರುದ್ಧ ಗುಡುಗಿದ್ದಾರೆ. ಮಿಸ್ಟರ್ ಕುಮಾರಸ್ವಾಮಿ ನಿನ್ನ ಗೊಡ್ಡು ಬೆದರಿಕೆಗೆ, ಬಿಜೆಪಿ ಗೊಡ್ಡು ಬೆದರಿಕೆ ಹೆದರುವ ಮಗ ನಾನಲ್ಲ. ಅದೇನೋ ಟನ್ ಗಟ್ಟಲೆ ಆಸ್ತಿ ದಾಖಲೆಗಳಿವೆ ಅಂತಿದ್ದಲ್ಲ. ನಮ್ಮ ಹುಡುಗರನ್ನು ಕಳುಹಿಸಿಕೊಟ್ಟಿದ್ನಲ್ಲ, ಅದರಲ್ಲಿ ಕಳುಹಿಸಿಕೊಡಬೇಕಿತ್ತು..! ನಾವು ಏನೋ ನಮ್ಮ ಶ್ರಮದಿಂದ ಅಧಿಕಾರ ಹಿಡಿದಿದ್ದೇವೆ. ಬಿಜೆಪಿಯವ ಯಾವನೋ ಒಬ್ಬ ಚಂಗ್ಲೂ ಗವರ್ನರ್ಗೆ ದೂರು ಕೊಟ್ಟವ್ನೇ, ಅವನದ್ದು ಏನೇನು ಅಂತಾ ಈಗಾಗಲೇ ಎಲ್ಲವೂ ಬಹಿರಂಗ ಆಗಿದೆಯಲ್ಲ ಅಂತಾ ಹೆಸರು ಹೇಳದೆ ಬಿಜೆಪಿ ಶಾಸಕ ಮುನಿರತ್ನಗೂ ಟಾಂಗ್ ಕೊಟ್ಟಿದ್ದಾರೆ.
ಕುಮಾರಸ್ವಾಮಿ ಚರಿತ್ರೆಯನ್ನು ನಾನು ಇನ್ನೂ ಬಿಚ್ಚಿಟ್ಟಿಲ್ಲ, ನಿನ್ನದು, ನಿಮ್ಮ ಸಹೋದರ ಆಸ್ತಿ ಬಿಚ್ಚಿಡಬೇಕಾಗುತ್ತದೆ ಹುಷಾರ್ ಎಂದು ಇದೇ ವೇಳೆ ಡಿಸಿಎಂ ಡಿ.ಕೆ ಶಿವಕುಮಾರ್ ಎಚ್ಚರಿಕೆ ನೀಡಿದ್ದಾರೆ. ಇನ್ನು ಪ್ರತಿಭಟನೆಯಲ್ಲಿ ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಕೂಡ ಹಾಜರಿದ್ದು, ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿದ್ದಾರೆ. ರಾಜ್ಯ ಸರ್ಕಾರದ ಸಚಿವರುಗಳು ಪ್ರತಿಭಟನೆಯಲ್ಲಿ ಭಾಗಿಯಾಗಿ, ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆ ಮೊಳಗಿಸಿದ್ದಾರೆ. ಸಿಎಂ, ಡಿಸಿಎಂ ಸೇರಿದಂತೆ ಸಚಿವರು ಸಾಕಪ್ಪ ಸಾಕು ಬಿಜೆಪಿ ಸಾಕು ಪೋಸ್ಟರ್ ಹಿಡಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಲೆ ಏರಿಕೆ ಇಳಿಸಲೇಬೇಕೆಂದು ಆಗ್ರಹ ಮಾಡಿದ್ದಾರೆ.
ಸಚಿವ ಕೃಷ್ಣಬೈರೇಗೌಡ ಮಾತನಾಡಿ, ಬಿಜೆಪಿಯಿಂದ ಬಡವರು ಬಡವರಾಗ್ತಿದ್ದಾರೆ. ಶ್ರೀಮಂತರು ಕುಬೇರರಾಗ್ತಿದ್ದಾರೆ. ದಿನೇ ದಿನೇ ಶ್ರೀಮಂತರ ಸಂಖ್ಯೆ ಹೆಚ್ಚಾಗ್ತಿದೆ. ರಾಹುಲ್, ಸೋನಿಯಾ ಮೇಲೆ ಚಾರ್ಜ್ ಶೀಟ್ ಹಾಕಿದ್ದಾರೆ. ಸ್ವಿಸ್ ಬ್ಯಾಂಕ್ ಹಣ ತರ್ತೇವೆ ಅಂದ್ರು. ಎಲ್ಲಿ ನಿಮ್ಮ ಅಕೌಂಟಿಗೆ 15 ಲಕ್ಷ ಹಾಕಿದ್ರಾ..? ನೀರವ್ ಮೋದಿ, ಚೋಕ್ಸಿ ವಿದೇಶದಲ್ಲಿದ್ದಾರೆ. ಅವರ ಮೇಲೆ ಯಾವುದೇ ಕ್ರಮವಿಲ್ಲ. ನಮ್ಮ ಹೋರಾಟ ಬೆಂಗಳೂರಿಗೆ ಸೀಮಿತವಲ್ಲ. ನಮ್ಮ ಹೋರಾಟ ಜಿಲ್ಲೆ, ತಾಲೂಕು ತಲುಪಲಿದೆ. ಪ್ರತಿ ಹಳ್ಳಿಹಳ್ಳಿಗೆ ಹೋರಾಟ ಕೊಂಡೊಯ್ತೇವೆ ಎಂದು ಕೇಂದ್ರದ ವಿರುದ್ಧ ಕಿಡಿಕಾರಿದ್ದಾರೆ.
ಸಚಿವ ಎಂಬಿ ಪಾಟೀಲ್ ಮಾತನಾಡಿ, ಹತ್ತು ವರ್ಷಗಳ ಯುಪಿಎ ಅವಧಿಯಲ್ಲಿ ಕ್ರೂಡ್ ಆಯಿಲ್ ಬೆಲೆ ಹೆಚ್ಚಿದ್ದಾಗ ನಮ್ಮಲ್ಲಿ ಪೆಟ್ರೋಲ್ ದರ 60 ರೂಪಾಯಿ ಇತ್ತು. ಎಲ್ಪಿಜಿ ದರ 400 ರೂಪಾಯಿ ಇತ್ತು. ಅಡಿಗೆ ಎಣ್ಣೆ 60 ರೂಪಾಯಿ ಇತ್ತು. 2014ರಲ್ಲಿ ಅಚ್ಚೇದಿನ್ ಬರುತ್ತೆ ಎಂದು ಅಧಿಕಾರಕ್ಕೆ ಬಂದ್ರು. ಕ್ರೂಡ್ ಆಯಿಲ್ ಬೆಲೆ ಕಡಿಮೆ ಇದ್ದರೂ ದರ ಏರಿಕೆ ಮಾಡಿದ್ದಾರೆ. ಕೇಂದ್ರ ಸರ್ಕಾರ ಬೆಲೆ ಏರಿಕೆ ಮಾಡಿದೆ. ಹೀಗಿದ್ದರೂ ರಾಜ್ಯದಲ್ಲಿ ಬಿಜೆಪಿಯವರು ಪ್ರತಿಭಟನೆ ಮಾಡ್ತಿದ್ದಾರೆ. ಜನರಿಗೆ ನಮ್ಮ ಸರ್ಕಾರ ಗ್ಯಾರಂಟಿ ಯೋಜನೆ ಮೂಲಕ ಒಳ್ಳೆದ್ ಮಾಡಿದ್ದೇವೆ. ತಾವೇ ಬೆಲೆ ಏರಿಕೆ ಮಾಡಿ ನಮ್ಮ ವಿರುದ್ಧ ಇವರು ಹೋರಾಟ ಮಾಡ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಸಚಿವ ಎಂಸಿ ಸುಧಾಕರ್ ಮಾತನಾಡಿ, 11 ವರ್ಷದ ಬಿಜೆಪಿ ಆಡಳಿತದಲ್ಲಿ ಬೆಲೆ ಏರಿಕೆ ಆಗ್ತಿದೆ. ಆದರೆ ಅದರ ಬಗ್ಗೆ ಬಿಜೆಪಿಯವರು ಮಾತಾಡ್ತಿಲ್ಲ. ಜನರ ಗಮನ ಬೇರೆಡೆ ಸೆಳೆಯಲು ಭಾವನಾತ್ಮಕ ವಿಚಾರ ಪ್ರಸ್ತಾಪಿಸುವ ಕೆಲಸವಾಗ್ತಿದೆ. ಬಡವರ ಜೀವನದ ಬಗ್ಗೆ ಮಾತಾಡ್ತಿಲ್ಲ. ಜನಾಕ್ರೋಶ ಯಾತ್ರೆ ಮಾಡ್ತಿದ್ದಾರೆ. ಬಡವರ ಬಗ್ಗೆ ಕಾಳಜಿ ಇದ್ರೆ, ನಿಮ್ಮ ಕೇಂದ್ರ ಸರ್ಕಾರದ ಬೆಲೆ ಏರಿಕೆ ನೀತಿ ವಿರುದ್ಧ ಹೋರಾಡಿ. ನಮ್ಮ ಸರ್ಕಾರವನ್ನ ಅಸ್ಥಿರ ಮಾಡುವ ಕೆಲಸ ಮಾಡ್ತಿದ್ದಾರೆ. ನಮ್ಮಲ್ಲೇ ಗೊಂದಲ ಸೃಷ್ಟಿಸುವ ಕೆಲಸ ಮಾಡ್ತಿದ್ದಾರೆ. ನಾವೂ ಭ್ರಷ್ಟ ಕೇಂದ್ರ ಸರ್ಕಾರದ ವಿರುದ್ಧ ಹೋರಾಡಬೇಕಿದೆ ಎಂದು ಕರೆ ಕೊಟ್ಟಿದ್ದಾರೆ.